Thursday, July 9, 2020

ಇಂದಿನ ದಿನ ಸುದಿನ


     ಇಂದಿನ ದಿನ ಸುದಿನ......

     ಹೆಬ್ರಿ ಕೇಶವ ನಾಯಕನಿಗೆ ದೇವರು ಹಾಗೂ ಕೆ ಕೆ ಪೈಯವರು ದಯತೋರಿಸಿದ್ದರ ಫಲವಾಗಿ ಸಿಂಡಿಕೇಟಿನಲ್ಲಿ ನೌಕರಿ ಲಭ್ಯವಾಯಿತು. ಸಾವಿರದಾ ಒಂಭೈನೂರ ಎಪ್ಪತ್ತನೇ ಇಸವಿಯ ಮಧ್ಯಭಾಗದಲ್ಲಿ ಕ್ಲೆರಿಕಲ್ ಟೆಸ್ಟ್ ನಡೆದು ಪಾಸಾಗಿ ಮುಂದೆ ಎರಡು ತಿಂಗಳ ಟ್ರೈನಿಂಗು ಎಟೆಂಡ್ ಮಾಡಿ ಊರಲ್ಲಿ ಆರ್ಡರ್ ಗಾಗಿ ಕಾಯುತ್ತಿದ್ದೆ. ಕಲಿತದ್ದು ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಕೋರ್ಸು. ಆದರೆ ಎಲ್ಲದಕ್ಕೂ ಕಾಲ, ಯೋಗ ಕೂಡಿ ಬರಬೇಕು, ದೇವರ ಕೃಪೆಯಾಗಬೇಕು ಎಂದು ಹಿರಿಯರು ಹೇಳಿರುತ್ತಿದ್ದು, ಆ ಯೋಗ ಮತ್ತು ದೇವರ ಕೃಪೆಗಾಗಿ ಕಾತರದಿಂದ ಕಾಯುತ್ತಿದ್ದೆ. ನಮ್ಮ ಬಾಬು-ವೆಂಕಟೇಶ ಕಮ್ತಿಯ ಯೋಗ ಚೆನ್ನಾಗಿತ್ತು. ನನಗಿಂತ ಬೇಗ ದೇವರ ಕೃಪಾಕಟಾಕ್ಷ ಅವನ ಮೇಲೆ ಬಿತ್ತು. ನಾನು ಅವನಿಗಿಂತ ಮೂರು ದಿನಕ್ಕೆ ಸೀನಿಯರ್, ನನಗೆ ಅವನಿಗಿಂತ ಮಾರ್ಕು ಜಾಸ್ತಿ. ಹಾಗಿದ್ದಾಗ ದೇವರ ಫೈಲಲ್ಲಿ ಅವನ ನಂಬ್ರ ಹೇಗೆ ಮೊದಲು ಬಂತು!!?? ಇರಲಿ, ಕಲಿತ ವಿದ್ಯೆಯ ದಿಕ್ಕಿನಲ್ಲೇ ಅವನಿಗೆ ಉದ್ಯೋಗ ಲಭ್ಯವಾದದ್ದು ಖುಷಿಯ ವಿಚಾರ, ನಾನು ಕಾಯುತ್ತಲೇ ಇದ್ದೆ...

     ಎಪ್ಪತ್ತೊಂದನೇ ಇಸವಿಯ ಫೆಬ್ರವರಿಯ ಒಂದು ದಿನ ಪೋಸ್ಟು ತರಲು ಪೋಸ್ಟಾಫೀಸಿಗೆ ಹೋಗಿದ್ದೆ. ದಿನಕ್ಕೆ ಕಮ್ಮಿಯೆಂದರೆ ಎಂಟು-ಹತ್ತು ಪತ್ರಗಳಾದರೂ ನಮ್ಮ ಅಂಗಡಿಯ ಹೆಸರಲ್ಲಿ ಇರುತ್ತಿದ್ದವು-ಕೊಂಚಾಡಿ ಅಪ್ಪಯ್ಯ ಶಾನುಭಾಗ್, ಪಂಚಮಾಲ್ ವಾಸು ಮಾಮ, ರೇಟು ಲಿಸ್ಟು ಇತ್ಯಾದಿ ಇತ್ತಾದಿ... ಹಾಗಾಗಿ "ವಸರೇ ಪೋಸ್ಟ್ ಹಾಡಿ" ಎಂದು ಚಿಕ್ಕಪ್ಪ ಓಡಿಸುತ್ತಿದ್ದರು. ನಮಗೂ ಸಂಜೀವ ಮಾಮರ ಮನೆಯಲ್ಲಿನ ಅಂಚೆಕಛೇರಿಗೆ ಹೋಗೂದೆಂದರೆ ಭಾರೀ ಖುಷಿ. ಯಾವುದಾದರೂ ಅಪರೂಪದ ಸ್ಟಾಂಪು ಇದ್ದರೆ ಅವುಗಳನ್ನು ತೆಗೆದಿಟ್ಟು ನಮಗೆ ಕೊಡುತ್ತಿದ್ದರು. ಆ ಸ್ಟಾಂಪುಗಳ ಆಸೆಯಿಂದಾಗಿ ಹೆಚ್ಚಾಗಿ ಪೋಸ್ಟು ತರಲು ಕೇಶವ ನಾಯಕನೇ ಓಡುತ್ತಿದ್ದ...

     ಸಂಜೀವ ಮಾಮರ ಪೋಸ್ಟು ಆಫೀಸಿನ ಕಾರ್ಯವೈಖರಿಯು ನೋಡಲು ಬಲು ಚಂದ. ಸಂಜೀವ ಮಾಮ ಪೋಸ್ಟುಮಾಸ್ಟರು, ಹಸನ್ ಸಾಹೇಬ ಪೋಸ್ಟ್ ಮೇನ್-ಸೆಂಟ್ರಲ್ ಗೋರ್ಮೆಂಟ್ ಎಂಪ್ಲೋಯೀ!- ಮತ್ತು ಇ ಡಿ ಡಿ ಏ ಮರ್ತಪ್ಪ ಇವರೆಲ್ಲ ಸ್ಟಾಫು.. ಮೇಲ್ ಬಸ್ಸಿನಲ್ಲಿ ಬರುವ ಪೋಸ್ಟ್ ಬೇಗನ್ನು ತಂದು ಸಂಜೀವ ಮಾಮರ ಸಮಕ್ಷಮ ಸೀಲು ಒಡೆದು ವಿಂಗಡಿಸಬೇಕು.
    
     ವಿಂಗಡಿಸುವುದು ಹಸನ್ ಸಾಹೇಬನ ಕೆಲಸ. ವಿಂಗಡಿಸಿದ ಪೋಸ್ಟಿನ ಮೇಲೆ ಅ ದಿನದ ಸೀಲು ಗುದ್ದುವ ಸ್ಟೈಲೇ ಬೇರೆ, ಅದೇ ಒಂದು ಚಂದ!! ತಾನು ಸೆಂಟ್ರಲ್ ಗೋರ್ಮೆಂಟು ಎಂಪ್ಲೋಯೀ ಎಂಬ ಧಿಮಾಕು ಹಸನ್ ಸಾಹೇಬನದ್ದು. ಈ ಸೆಂಟ್ರಲ್ ಗವರ್ನಮೆಂಟ್ ಜಾಬ್ ಒಂದು ದೊಡ್ಡ ಕುಂಬಳಕಾಯಿ ಅಂತ ನಾವು ಮಕ್ಕಳು ನಂಬಿ ಅವನಿಗೆ ಸಣ್ಣಗೆ ಹೆದರಿ ಮರ್ಯಾದೆ ಕೊಡುತ್ತಿದ್ದೆವು. ಅವನು ಸೀಲು ಗುದ್ದುವ ತನ್ಮಯತೆ, ಗತ್ತು ಆಹಾ ಅದರ ಚಂದವೇ ಚಂದ! ಅದರ ಸೌಂಡು ನಮಗೆ ಸಂಗೀತದಂತೆ ಕೇಳುತ್ತಿತ್ತು. ಅದರ ಮುಂದೆ ಆರ್ ಡಿ ಬರ್ಮನ್ನರ ಡ್ರಮ್ ಬೀಟ್ಸ್ ಸಹ ಏನೂ ಅಲ್ಲ, ಅವನು ಸೀಲು ಗುದ್ದುವಾಗ ಪೋಸ್ಟಾಫೀಸಿನಲ್ಲಿ ಲೈಬ್ರೇರಿಯ ಮೌನವಿರುತ್ತಿತ್ತು. ಮಧ್ಯೆ ಮಧ್ಯೆ ಯಾರಾದರೂ ಪೋಕರಿಹುಡುಗರು ಕೀಟಲೆ ಮಾಡಿದರೆ ಅವರನ್ನು ಹೊರಕಳಿಸಲಾಗುತ್ತಿತ್ತು. ಆದ್ದರಿಂದ ನಾವು ಹುಡುಗರು ಆದಷ್ಟು ಶಿಸ್ತನ್ನು ಮೇಂಟೈನ್ ಮಾಡುತ್ತಿದ್ದೆವು. ಸೀಲು ಗುದ್ದಿ ತಯಾರಾದ ಪತ್ರಗಳು ಶಿಸ್ತಾಗಿ ಜೋಡಿಸಲ್ಪಟ್ಟು ಪೋಸ್ಟುಮಾಸ್ಟರ ಟೇಬಲ್ ಮೇಲೆ ಭಕ್ತಿಯಿಂದ ಇಡಲ್ಪಡುತ್ತಿದ್ದವು. ನಾವು ಮೊದಲೇ ನಿರ್ಧರಿಸಿದ, ನಿಗದಿತಗೊಂಡ ಸರತಿ ಕ್ರಮದಲ್ಲಿ ನಿಲ್ಲುತ್ತಿದ್ದೆವು. ಮೊದಲು ಸಿಂಡಿಕೇಟು ಬೇಂಕು, ಸೀ ಏ ಬೇಂಕು, ಹೈಸ್ಕೂಲುಗಳಿಗೆ ಪ್ರಾಶಸ್ತ್ಯ. ನಂತರ ಶ್ರೀನಿವಾಸ ಮುಕುಂದ ನಾಯಕ್ ಎಂಡ್ ಬ್ರದರ್, ಪಾಂಡರಂಗ ರಮಣ ನಾಯಕ್, ನರಸಿಂಹ ನಾಗಪ್ಪ ಶೆಣೈ, ಭಟ್ ಬ್ರದರ್ಸ್, ಹರಿದಾಸ ಪೈ....ಹೀಗೆ ರೇಂಕಿಂಗ್ ಇರುತ್ತಿದ್ದವು. ಬಂದ ಪೋಸ್ಟುಗಳ ಬಟವಾಡೆಯೂ ತನ್ನದೇ ಆದ ಗಾಂಭೀರ್ಯದಿಂದ ಆಗುತ್ತಿತ್ತು.

     ಆದಿನ ಶ್ರೀನಿವಾಸ ಮುಕುಂದ ನಾಯಕ್ ಎಂಡ್ ಬ್ರದರ್ ವಿಳಾಸಕ್ಕೆ ಬಂದ ಒಂಭತ್ತು ಪತ್ರಗಳನ್ನು ಪಡಕೊಂಡು ಹೊರಡುವಾಗ "ಕೇಶವ ನಾಯಕ ಸ್ವಲ್ಪ ತಾಳು" ಎಂದು ಸಂಜೀವಮಾಮರು ಆದೇಶಿಸಿದರು. ಏನಪ್ಪಾ ಎಂದುಕೊಂಡು ನಿಂತೆ. ಅಲ್ಲಿ ಬಂದ ಎಲ್ಲರ ಪತ್ರಗಳ ಬಟವಾಡೆ ಆದ ಬಳಿಕ "ಎಚ್ ಕೇಶವ ನಾಯಕ್ ಸನ್ ಆಫ್ ಎಚ್ ದೇವಣ್ಣ ನಾಯಕ್, ಹೆಬ್ರಿ, ತಗೋ" ಎಂದು ಒಂದು ಪತ್ರವನ್ನು ಪ್ರೀತಿಯಿಂದ ಸವರಿ ನನಗೆ ಕೊಟ್ಟರು. "ದೇವರು ನಿನಗೆ ಒಳ್ಳೇದು ಮಾಡಲಿ" ಎಂದು ಹರಸಿದರು. ಪತ್ರ ತೆರೆದು ನೋಡಿದೆ. ಸಿಂಡಿಕೇಟ್ ಬೇಂಕ್ ಮಣಿಪಾಲದ ಕೇಂದ್ರ ಕಛೇರಿಯ ಪ್ರಿಮೈಸಸ್ ಡಿಪಾರ್ಟ್ ಮೆಂಟಿನಲ್ಲಿ ಕ್ಲರ್ಕ್ ಕೆಲಸ ನೀಡಿ, ಪತ್ರ ಸಿಕ್ಕಿದ ಏಳು ದಿನಗಳ ಒಳಗೆ ಹಾಜರಾಗಬೇಕು ಎಂಬ ಆದೇಶ ಹೊತ್ತ ಪತ್ರವಾಗಿತ್ತು.

     ಆ ಸಮಯದಲ್ಲಿ ಹೆಬ್ರಿ ಸಣ್ಣ ಊರಾಗಿತ್ತು. ಬಹುತೇಕ ಮಂದಿ ಬಡವರಾಗಿದ್ದರು. ಆದರೆ ಯಾರೂ ಪ್ರೀತಿಯಲ್ಲಿ ಸಣ್ಣವ ರಾಗಿರಲಿಲ್ಲ, ಹೃದಯವಂತಿಕೆಯಲ್ಲಿ ಎಲ್ಲರೂ ಶ್ರೀಮಂತರಾಗಿದ್ದರು. ಯಾರಿಗೋ ಕಷ್ಟವೊದಗಿತು ಅಂದರೆ ನಾಲ್ಕು ಜನ ಹೋಗಿ ಸಾಂತ್ವನ ಹೇಳಿ ಬರುತ್ತಿದ್ದರು. ಅವರ ಕಷ್ಟ ಪರಿಹಾರ ಮಾಡುತ್ತಿದ್ದರು ಎಂದೇನೂ ಅಲ್ಲ. ಆದರೂ ಪರರ ಕಷ್ಟಕ್ಕೆ ಸ್ಪಂದಿಸು ತ್ತಿದ್ದರು. ಒಬ್ಬನಿಗೆ ವ್ಯಾಪಾರದಲ್ಲಿ ನಾಲಕ್ಕು ರುಪಾಯಿ ಲಾಭವಾಯ್ತು ಅಂದರೆ ಉಳಿದ ವರ್ತಕರಿಗೆ ಆನಂದವಾಗುತ್ತಿತ್ತೇ ವಿನಃ ಮತ್ಸರವಿರುತ್ತಿದ್ದಿಲ್ಲ. ತನಗೂ ವ್ಯವಹಾರದಲ್ಲಿ ವೃದ್ಧಿಯಾಗಲೀ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರೇ ವಿನಃ ಹೊಟ್ಟೆಕಿಚ್ಚು ಪಡುತ್ತಿರಲಿಲ್ಲ. ಇದು ನಮ್ಮ ಊರಿನ ಸ್ಪೆಷಾಲಿಟಿ. ಈ ಬಾಂಧವ್ಯವನ್ನು ಇಂದಿಗೂ ಕಾಯ್ದುಕೊಂಡು ಬಂದಿದ್ದೇವೆ.

     "ಸಾನ್ ದೇವೂಲೆ ಪುತ್ತಾಕ ಕಾಮ ದಾಲ್ಲೆ ಖೈಂ" ಶುಭಸುದ್ದಿ ಅರ್ಧ ಘಂಟೆಯೊಳಗೆ ಊರೆಲ್ಲ ಹಬ್ಬಿತು. ಎಲ್ಲರಿಗೂ ಸಂತಸ. "ಆಗಲಿ, ದೇವರು ದೇವರಾಯರ ಮೇಲೆ ಕಣ್ಣು ತೆರೆದ, ಇನ್ನು ಅವರ ಒಳ್ಳೆಯ ಕಾಲ ಸುರುವಾಯ್ತು." ಅನೇಕರು ಖುಷಿಗೊಂಡರು. ನನಗೂ ತಂದೆಯವರಿಗೂ ಅಭಿನಂದನೆಗಳಾದವು.

     ಮೂರುಘಂಟೆಯ ಹೊತ್ತಿಗೆ ನರಸಿಂಹ ಶೆಣೈಯವರು ಕರೆದರು. "ಹೌದನಾ ನಿನಗೆ ಸಿಂಡಿಕೇಟಿನಲ್ಲಿ ಜೋಬ್ ಆಯ್ತಂತಲ್ಲಾ. ಸುದ್ದಿ ಕೇಳಿದೆ, ಒಳ್ಳೇದಾಯ್ತು."

     "ಹೌದು."

     "ಯಾವಾಗ ಜೊಯಿನ್ ಆಗುತ್ತೀ?"

     "ಒಂದು ವಾರದೊಳಗೆ ಜೊಯಿನ್ ಆಗಬೇಕು ಅಂತ ಆರ್ಡರ್ ಉಂಟು. ಒಳ್ಳೇ ದಿನ ನೋಡಿ ರಿಪೋರ್ಟ್ ಮಾಡು ಅಂತ ಹೇಳಿದ್ದಾರೆ."

     "ಇನ್ನೂ ಒಳ್ಳೇ ದಿನ ಎಂತ ನೋಡೂದು? ನಿನಗೆ ಆರ್ಡರ್ ಬಂದ ದಿನವೇ ಒಳ್ಳೇದು. ಇದಕ್ಕಿಂತ ಒಳ್ಳೇ ದಿನ ಉಂಟಾ? ಆದ್ರಿಂದ ನೀನು ನಾಳೆಯೇ ಮಣಿಪಾಲಕ್ಕೆ ಹೋಗಿ ಕೆಲಸಕ್ಕೆ ಸೇರು. ನಿನ್ನ ಹತ್ತಿರ ಸರಿಯಾದ ಪ್ಯಾಂಟು ಷರ್ಟು ಉಂಟಾ? ಇಲ್ಲದಿದ್ದರೆ ಒಂದು ಜತೆ ಡ್ರೆಸ್ಸು ಹೊಲಿಸಿಕೋ. ನನ್ನ ಮಾತು ಕೇಳು. ಇವತ್ತು ಹೇಗೂ ಮಧ್ಯಾಹ್ನ ಆಯಿತು, ಆದ್ದರಿಂದ ನಾಳೆಯೇ ಜೊಯಿನ್ ಆಗು. ಈಗ ಸಿಕ್ಕಾಪಟ್ಟೆ ಎಪೊಯಿಂಟ್ ಮೆಂಟ್ ಆಗುತ್ತಾ ಉಂಟು. ಬೇಗ ಸೇರಿದಷ್ಟು ನಿನಗೇ ಒಳ್ಳೇದು. ಅಷ್ಟರಮಟ್ಟಿಗೆ ನಿನಗೆ ಸೀನಿಯಾರಿಟಿ ಸಿಗುತ್ತದೆ."

     "ಆಯ್ತು, ನೀವು ಹೇಳಿದ ಮಾತು ಸಮ. ನಾಳೆಯೇ ಕೆಲಸಕ್ಕೆ ಸೇರ್ತೇನೆ. ನಿಮ್ಮ ಆಶೀರ್ವಾದ ಬೇಕು."

     "ನಮ್ಮ ಎಲ್ಲರ ಆಶೀರ್ವಾದ ಉಂಟು. ಈಗ ನೀನು ನಾಳೆ ಮಣಿಪಾಲಕ್ಕೆ ಹೋಗುವ ವ್ಯವಸ್ಥೆ ಮಾಡು, ನಡಿ."

     ಶೆಣೈಯವರು ಆದಿನ ಹುರಿದುಂಬಿಸಿದುದರಿಂದ ನಾನು ಅದೇ ಮರುದಿನ ಬೇಂಕಿಗೆ ಹೋಗಿ ಸೇರಿದೆ. 'ಇಂದಿನ ದಿನ ಸುದಿನ ನಾಳೆಗೆ ಎಂದರೆ ಅದು ಕಠಿಣ.' ಎಂಬ ಗಾದೆಯನ್ನೂ ಅವರು ಉದಾಹರಿಸಿದ್ದರು....

     "ಗಾದೆಯ ಮಾತು ಸುಳ್ಳಲ್ಲ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಇನ್ನೊಂದು ಗಾದೆ ಇದೆ. ಮೇಲಿನ ಗಾದೆಗೆ ಸಂಬಂಧಿಸಿ ಒಂದು ಚಂದದ ಕತೆ ಉಂಟು...." ಖಾಯಿಲೆ ಬಿದ್ದು ರೆಸ್ಟು ಪಡೆಯುತ್ತಿರುವ ಸಮಯದಲ್ಲಿ ಅಮ್ಮ ಹೇಳಿದ ಕತೆ....

     'ಶ್ರೀರಾಮಚಂದ್ರ ರಾವಣಾಸುರನನ್ನು ಸಂಹರಿಸಿ ವಿಭೀಷಣಾದಿ ವಾನರಸೇನೆಯೊಡಗೂಡಿ ಅಯೋಧ್ಯೆಗೆ ಮರಳಿ ರಾಜ್ಯಭಾರವನ್ನು ಕೈಗೆತ್ತಿಕೊಳ್ಳುತ್ತಾನೆ. ಒಂದು ಶುಭದಿನದ ಶುಭಮುಹೂರ್ತದಲ್ಲಿ ಶ್ರೀರಾಮನ ಪಟ್ಟಾಭಿಷೇಕವಾಗಬೇಕಾಗಿದೆ. ಆ ಪ್ರಯುಕ್ತ ಮಹಾ ಮಹಾ ಪಂಡಿತೋತ್ತಮರಲ್ಲಿ ಶುಭಮುಹೂರ್ತ ನಿರ್ಧರಿಸಲು ಕೋರಲಾಯಿತು. ಸರಿ, ಪ್ರಭು ರಾಮಚಂದ್ರನ ಪಟ್ಟಾಭಿಷೇಕ ಎಂದರೆ ಸುಮ್ಮನಾಯಿತೇ! ಪಂಡಿತೋತ್ತಮರೆಲ್ಲ ಸೇರಿ, ಕೂಡಿ ಕಳೆದು ಏನು ಮಾಡಿದರೂ ಒಂದು ಶುಭಗಳಿಗೆಯನ್ನು ನಿರ್ಧರಿಸಲಾರದಾದರು. ಯಾವ ಘಳಿಗೆ ಸೂಚಿಸಿದರೂ ಒಂದಲ್ಲ ಒಂದು ಅಡ್ಡಿ, ಅಶುಭ, ವಿಘ್ನಗಳು ಕಾಣಲಾರಂಭಿಸಿದವು. ಪಂಡಿತರು ಒಮ್ಮತಕ್ಕೆ ಬರಲಾರದಾದರು. ಜನರೆಲ್ಲ ಚಿಂತಿತರಾದರು. ಏನು ಮಾಡಲಿ? ಯಾರಲ್ಲಿ ಕೇಳಲೀ? ಲಾಸ್ಟಿಗೆ ಯಾವುದೇ ಚ್ಯುತಿ ನ್ಯೂನತೆಗಳಿಲ್ಲದ ಮುಹೂರ್ತವನ್ನು ಸೂಚಿಸಿದವರಿಗೆ ಸೂಕ್ತ ಬಹುಮಾನ ಉಂಟು ಎಂಬ ಘೋಷಣೆಯನ್ನು ಸಾರಲಾಯಿತು. ಆ ಸಮಯದಲ್ಲಿ ಒಬ್ಬ ಕೊಂಕಣಿ-ಗೌಡ ಸಾರಸ್ವತ ಬ್ರಾಹ್ಮಣ-ಜಿ ಎಸ್ ಬಿ- ಅಲ್ಲಿಗೆ ಬಂದಿದ್ದವನು 'ನೀವೆಲ್ಲ ಏಕೆ ಚಿಂತಿತರಾಗಿದ್ದೀರಿ? ಏನು ಸಮಸ್ಯೆ?' ಎಂದು ವಿಚಾರಿಸಲಾಗಿ "ಇಂತಿಂತಾ ಪ್ರೋಬ್ಲೆಮ್ ಬಂದಿದೆ ಮಹರಾಯ! ರಾಮನ ಪಟ್ಟಾಭಿಷೇಕ ಮಾಡಬೇಕಾಗಿದೆ, ಶುಭಮುಹೂರ್ತ ಯಾವುದೆಂದು ಇನ್ನೂ ನಿಘಂಟಾಗಲಿಲ್ಲ. ನಿನ್ನ ಬಳಿ ಪರಿಹಾರವೇನಾದರೂ ಇದ್ದರೆ ಹೇಳು, ಬಹಳ ಉಪಕಾರವಾಗುತ್ತದೆ." ಎಂಬ ಬಿನ್ನಹ ಬಂತು.

     "ಹೌದೇ! ಶ್ರೀ ರಾಮಚಂದ್ರನ ಪಟ್ಟಾಭಿಷೇಕದ ಶುಭಮುಹೂರ್ತವೇ, ಈಗಲೇ, ಇದೇ ಉತ್ತಮ ಘಳಿಗೆ. ಪಟ್ಟಾಭಿಷೇಕವನ್ನು ನೆರವೇರಿಸಿಬಿಡಿ. ತಡಮಾಡಬೇಡಿ. ಕಾರ್ಯಕ್ರಮಗಳನ್ನು ಸುರು ಮಾಡಿಬಿಡಿ." ಎಂದು ಆ ಪೈಮಾಮ-ಕಿಣಿಮಾಮ-ಮಾಲ್ಲೋ-ನಾಯಕಮಾಮು-ಶೆಣೈಮಾಮು-ಯಾರೋ ಒಬ್ಬ ಮಾಮ ಆದೇಶಿಸಿದರು.

     "ನೀವು ಯಾವ ಗ್ರಂಥದ ಆಧಾರದಿಂದ ಶುಭಘಳಿಗೆಯನ್ನು ನಿರ್ಧರಿಸಿದಿರಿ?" ಪಂಡಿತರಿಗೆ ಸಂಶಯ.

     "ನೀವು ಮೊದಲು ಪಟ್ಟಾಭಿಷೇಕವನ್ನು ಆರಂಭ ಮಾಡಿ.  ಶುಭಘಳಿಗೆ ಮೀರಿ ಹೋಗುತ್ತಿದೆ. ಉಳಿದ ವಿಚಾರ ಆ ಮೇಲೆ." ಇವರು ಅವಸರಿಸಿದರು.

     ನಂತರ ಪುರುಸತ್ತಾದಾಗ ಇವರು ವಿವರಿಸಿದರು "ನೋಡಿ, ಶ್ರೀರಾಮಚಂದ್ರ ಯಾರು? ಸ್ವಯಂ ದೇವರು, ದೇವರ ಕಾರ್ಯಗಳಿಗೆ ಎಲ್ಲಾ ಕಾಲವೂ ಶುಭಘಳಿಗೆಯೇ. ಅದಕ್ಕೆ ನಾವು ಗ್ರಂಥಗಳ ಪುಟ ತಿರುಗಿಸಬೇಕಿಲ್ಲ. ಪ್ರೇರಣೆ ಆದಾಗ ಸುರುಮಾಡೂದೇ. ಒಳ್ಳೇ ಘಳಿಗೆ ಹುಡುಕಬೇಕಾದದ್ದು ಮನುಷ್ಯಮಾತ್ರದವನ ಕಾರ್ಯಕ್ರಮಗಳಿಗೆ, ತಿಳಿಯಿತೇ?"

     ಶ್ರೀ ರಾಮಚಂದ್ರನ ಪಟ್ಟಾಭಿಷೇಕಕ್ಕೂ ಹೆಬ್ರಿ ಕೇಶವ ನಾಯಕನ ಜಾಯಿನಿಂಗ್ ರಿಪೋರ್ಟಿಗೂ ಯಾವುದೇ ತಾಳೆಯಿಲ್ಲ. ಆದರೆ 'ಇಂದಿನ ದಿನ ಸುದಿನ ನಾಳೆಗೆ ಎಂದರೆ ಅದು ಕಠಿಣ....'

1 comment:

  1. 👍very nicely narrated.word Hebri brings a big smile on my face..as you said..all are like extended family...my parents used to be least worried about my whereabouts even if I don't return home by 8:30 in the night...

    ReplyDelete