ದೋಸ್ತಿ ಹಾಗೂ ವ್ಯವಹಾರಗಳಲ್ಲಿ ಸಹನೆ * ಅಸಹನೆ
01: ದಿಲ್ಲಿಯ ಕರೋಲ್ ಬಾಗ್ ಏರಿಯಾದಲ್ಲಿ ನಮ್ಮ ಬ್ರಾಂಚು-'ರಾಣೀ ಝಾನ್ಸೀ ರೋಡ್ ಬ್ರಾಂಚ್'- ಬಹಳ ಫೇಮಸ್ಸು. ಪ್ರತಿಯೊಬ್ಬ ಸ್ಟಾಫೂ ಒಬ್ಬನಿಗಿಂತ ಒಬ್ಬ ಮಾಹೇರು! ಯಾವುದರಲ್ಲಿ! ಅಧಿಕ ಪ್ರಸಂಗ ಹರಕತ್ತುಗಳಲ್ಲಿ.. ಇವರ ಕೂಟಕ್ಕೆ ಗುಪ್ತಾ ಲೀಡರು. ಚಾತುರ್ಕಾಯಿ-ಬುದ್ಧಿವಂತಿಕೆ-ಮಾತು! ಇತರರ ಲೇವಡಿ ಮಾಡುವವರ ಟ್ರೇನಿಂಗ್ ಸ್ಕೂಲಿಗೆ ಈತ ಪ್ರಿನ್ಸಿಪಾಲು! ಎಲ್ಲರ ಬಳಿಯೂ ಮಾತನಾಡುವಾಗ ಒಂದಲ್ಲ ಒಂದು ಚಾಟೂಕ್ತಿ, ಸಣ್ಣ ವ್ಯಂಗ್ಯ ಇವೆಲ್ಲ ಇದ್ದದ್ದೇ. ಅನೇಕ ಸಲ ಸಣ್ಣಪುಟ್ಟ ರಸಕಸಿಗಳೂ ಆದದ್ದಿದೆ. ಇಂತಹ ಗ್ರೂಪಲ್ಲಿ ನಾನೊಬ್ಬ ಸಜ್ಜನ! ಸೇರಿಕೊಂಡೆ. ಎಲ್ಲಾ ಪ್ರಸಂಗಗಳಲ್ಲೂ ಕುಟುಕು ಮಾತಾಡಿ ನಗುವ ಪ್ರವೃತ್ತಿ ನನ್ನದಿರಲಿಲ್ಲ. ಒಂದೆರಡು ಬಾರಿ ಆಕ್ಷೇಪಿಸಿದ್ದೂ ಆಗಿತ್ತು. "ಜಿ಼ಂದಗೀ ಮೇ ಮಜೇ಼ ಸೇ ರೆಹನಾ ಭೇಣ್....ದ್" ಎಂದು ತೇಲಿಸಿಬಿಟ್ಟಿದ್ದ....
"ಗುಪ್ತಾಜೀ, ಮೆನೆಜರ್ ಸಾಬ್ ನೇ ಏಕ್ ಸ್ಟೇಟ್ ಮೆಂಟ್ ಮಂಗ್ವಾಯಾ ಥಾ, ಹೋಗಯಾ ಕ್ಯಾ? ಪೂಛ್ ರಹೇ ಹೈಂ" ಅವನ ಟೇಬಲ್ ಬಳಿ ಹೋಗಿ ಕೇಳಿದೆ.
"ತೂ ಕ್ಯಾ ಯಹಾಂ ಕಾ ಗವರ್ನರ್ ಲಗತಾ ಹೈ? ಬಡಾ ಆಯಾ ಸ್ಟೇಟ್ ಮೆಂಟ್ ಪೂಛನೇ..." ತೆಗೆದ ಮಾತಿಗೆ ಘಟ್ಟಿಯಾಗಿ ವದರಿದ, ಎಡಗೈ ತನ್ನ ಮೀಸೆಯನ್ನು ತಿರುವುತ್ತಿತ್ತು. ಇಡೀ ಬ್ರಾಂಚು ಅವನ ಬೊಬ್ಬೆಗೆ ಚಕಿತವಾಯಿತು, ಸ್ತಬ್ಧವಾಯಿತು. ಪಿನ್ ಡ್ರಾಪ್ ಸೈಲೆನ್ಸ್!!.
"ಮೇ ಯಹಾಂ ಕಾ ಗವರ್ನರ್ ಲಗತಾ ಹೂಂ, ತೂ ಉಸಕಾ ಚಪರಾಸೀ ಲಗತಾ ಹೈ ಕ್ಯಾ?" ಅವನಿಗಿಂತ ಒಂದು ಮುಷ್ಟಿ ಹೆಚ್ಚು ಗರಮ್ ಹಾಗೂ ಸಿಟ್ಟಿನಲ್ಲಿ ನಾನೂ ವದರಿದೆ. ನನಗೆ ಆ ದಿನ ಕೊಂಚ ಕಿರಿಕಿರಿಯೂ ಇತ್ತು.
"ಹೋ" ಎಂದು ಬ್ರಾಂಚಲ್ಲಿ ಬೊಬ್ಬೆ ಎದ್ದಿತು. 'ನಾಯಕ್ ಸಾಬ್ ಗುಸ್ಸೇ ಸೇ ಲಾಲ್ ಪೀಲಾ ಹೋಗಯೇ, ಮಜಾ಼ ಆಗಯಾ" ಎಲ್ಲರೂ ಗದ್ದಲ ಮಾಡಹತ್ತಿದರು.
"ಕ್ಯಾ ಬೋಲಾ ಭೇಂ...." ಎಂದು ಕುರ್ಚಿಯಿಂದ ಎದ್ದ ಗುಪ್ತಾ...
"ಜ್ಯಾದಾ ಶಾಣ್ ಪತ್ತೀ ದಿಖಾನಾ ಜರೂರೀ ನ್ಹಂಹೀ ಅಪನೇ ಓಕಾದ್ ಮೈ ರಹೋ." ಎಂದು ಹೇಳಿ ನನ್ನ ಟೇಬಲ್ಲಿಗೆ ಬಂದು ಕೂತೆ. ಮನಸ್ಸು ಬಹುವಾಗಿ ವ್ಯಗ್ರಗೊಂಡಿತ್ತು.
ದಿಲ್ಲಿಯಲ್ಲಿ ಒಂದು ನಿಯಮವಿತ್ತು. ಯಾವುದೇ ಜಗಳ ಕೂಗಾಟಗಳಿರಲಿ ಹೆಚ್ಚೆಂದರೆ 2 - 3 ಘಂಟೆ. ನಂತರ ಸರಿಹೋಗುತ್ತಿತ್ತು. ಆದರೆ ನಮ್ಮಿಬ್ಬರ ಜಗಳ ಮಾತ್ರ ಸೀರಿಯಸ್ ಆಯಿತು. ಈ ಪಾಪದ ನಾಯಕ ತನಗೆ ಎದುರು ಮಾತಾಡಿದನಲ್ಲಾ ಎಂಬ ಖತಿ ಜಾಸ್ತಿಯಾಯಿತವನಿಗೆ. ನನ್ನ ಬಳಿ ಮಾತು ಬಿಟ್ಟ. ಒಳ್ಳೇದೇ ಆಯಿತು, ಸ್ವಲ್ಪ ಬುದ್ಧಿ ಬರಲಿ ಎಂದು ನಾನೂ ಮೌನ ವಹಿಸಿದೆ. ನನಗೆ ಆತನ ಸಡಿಲ ಮಾತುಗಳ ಕಿರಿಕಿರಿ ತಪ್ಪಿತು. ಸುಮಾರು ಒಂದು ವಾರವಾಯಿತು. ನನ್ನ ಬಳಿ ಮಾತು ಬಿಟ್ಟದ್ದಲ್ಲದೇ ಇತರ ಸ್ಟಾಫಿನ ಬಳಿ ಒಂದೆರಡು ದಿನ ಏನೇನೋ ವೀರಾವೇಷ ಆಡಿದ ಕಾರಣ ಹೆಚ್ಚಿನವರು ಆತನ ಹತ್ತಿರ ಮಾತು ಬಿಟ್ಟರು. 'ರೆಹತೆ ರೆಹತೇ ನಾಯಕ್ ಜೈಸೆ ಭಲೇ ಆದ್ಮೀ ಸೇ ಪಂಗಾ ಲೇ ಬೈಠಾ ಹೈ, ಉಲ್ಲೂ ಕ ಪಠ್ಠಾ' ಎಂದು ಅನೇಕರಿಗೆ ಬೇಸರವಿತ್ತು. ನಾಲ್ಕನೇ ದಿನದಿಂದ ಪೂರ್ತಿ ಮೌನವಾಗಿಬಿಟ್ಟ. ತಾನಾಯಿತು ತನ್ನ ಕೆಲಸವಾಯಿತು. ಊಟದ ಸಮಯ ಜತೆಯಾಗಿರುತ್ತಿದ್ದ, ಅದನ್ನೂ ನಿಲ್ಲಿಸಿ ತನ್ನ ಟೇಬಲ್ಲಿನಲ್ಲೇ ಉಣತೊಡಗಿದ. ಯಾವಾಗಲೂ ಮೀಸೆಯ ಮೇಲೇ ಕೈಯಿರುತ್ತಿತ್ತು, ಈಗದು ನಿಂತು ಹೋಯಿತು.
ಎಂಟನೇ ದಿನ ಆತನ ಟೇಬಲ್ ಬಳಿ ಹೋದೆ. "ಭಾಯಿ ಗುಪ್ತಾ, ಜಿಂದಗೀ ಭರ್ ಐಸೇ ಹೀ ಮುಹ್ ಮೋಡಕೇ ರಹೋಗೆ ಕ್ಯಾ? ಗಲೇ ನ್ಹಂಹೀ ಲಗಾವೋಗೇ?"
"ಅರೇ ನಾಯಕ್, ಯಾರ್ ಮೇರೇ ಬಡೇ ಭಾಯೀ, ಮುಝೆ ಮಾಫ್ ಕರೋ ಯಾರ್...." ಗೋಳೋ ಎಂದು ಅಳುತ್ತಾ ಖುರ್ಚಿಯಿಂದೆದ್ದು ಅಪ್ಪಿಕೊಂಡ. "ಮೇರೀ ಮತ್ ಮಾರೀ ಗಯಿ ಥೀ, ಆಪ್ ಸೇ ಝಗಡಾ ಕರಕೆ ಆಠ್ ದಿನ್ ಸೇ ಪಾಗಲ್ ಸಾ ಹುವಾ ಹೂಂ" ತಬ್ಬಿಕೊಂಡೇ ಇದ್ದ.
"ಲೇಕಿನ್ ತೇರಾ ಅಹಮ್ ಕಾ ಕೀಡಾ ತೋ ಮರಾ ನಂಹಿ ನಾ, ಹಾಥ್ ಬಡಾಕರ್ ಮೇಂ ಹೀ ಆಯಾ, ಎನಿಹೌ ಛೋಡೋ ಇನ್ ಬಾತೋಂ ಕೋ." ನಂತರದ ದಿನಗಳಲ್ಲಿ ಅವನ ವರ್ತನೆ ತುಂಬ ಸುಧಾರಣೆ ಹೊಂದಿತು.......
ನಾವೇಕೆ ಸಿಟ್ಟುಗೊಳ್ಳುತ್ತೇವೆ? ನಾವೇ ಬುದ್ಧಿವಂತರು, ಇತರರು ನಮ್ಮ ಮಾತು ಕೇಳಲೇ ಬೇಕು ಎಂಬಿತ್ಯಾದಿ ಹಠ ಏಕೆ ನಮ್ಮಲ್ಲಿ ಹುಟ್ಟುತ್ತದೆ? ಅದು ಒಂದು ದೌರ್ಬಲ್ಯವೇ ರೋಗವೇ?.....
02: ಆದ್ಯತಾ ರಂಗದ ಕೆಟಗರಿಯಲ್ಲಿ ಬೇಂಕುಗಳು ನೀಡುವ ಸಾಲಗಳಿಗೆ DICGC ಯವರಿಂದ ಭದ್ರತೆ ಇತ್ತು. ಸಿಕ್ಕಾಪಟ್ಟೆ ಕಟ್ಟುಬಾಕಿಯಾದ, ವಾಪಸು ಬರುವ ಯಾವುದೇ ಸಾಧ್ಯತೆಗಳಿಲ್ಲದ ಇಂಥಾ ಸಾಲಗಳಿಗೆ ಈ ಕೊರ್ಪೋರೇಷನ್ನಿನಿಂದ ಗ್ಯಾರಂಟಿ ಲಭ್ಯವಿತ್ತು. ನನಗೆ ನೆನಪಿರುವಂತೆ 1976 ರ ಸಮಯ, ಅನ್ಯಾನ್ಯ ಕಾರಣಗಳಿಂದ ಕಟ್ಟುಬಾಕಿಯಾಗಿ - ಬೇಕೆಂತಲೇ ಓವರ್ ಡ್ಯೂ ಮಾಡಿಕೊಂಡ ಸಾಲ ಹೊರತುಪಡಿಸಿ - ಎಲ್ಲಾ ರಿಕವರಿ ಕ್ರಮಗಳ ನಂತರವೂ ವಸೂಲಾಗದ ಇಂತಹ ಸಾಲಗಳ ಬಾಬ್ತು ನಮ್ಮ ನಮ್ಮ ಬ್ರಾಂಚುಗಳ ಕ್ಲೇಮು ಕಳಿಸಬೇಕಿತ್ತು. ಎಲ್ಲಾ ಶಾಖೆಗಳ ಕ್ಲೈಮುಗಳನ್ನು ಸಂಬಂಧಪಟ್ಟ ರೀಜನಲ್ ಆಫೀಸುಗಳು ಕ್ರೋಢೀಕರಿಸಿ ಕೊರ್ಪೋರೇಷನ್ನಿಗೆ ಕಳಿಸಬೇಕಿತ್ತು. ಈ ಕ್ಲೇಮ್ ತರಿಸಿಕೊಳ್ಳುವ ಪ್ರೊಸೀಜರು ಮಾತ್ರ ಬರೀ ಕಿರಿಕಿರಿಯದ್ದಾಗಿತ್ತು. ದಿನಕ್ಕೊಂದು ಸರ್ಕುಲರ್, ಹಿಂದಿನ ಸರ್ಕುಲರ್ ಮೇಲಿನ ಪ್ರಶ್ನೆಗಳ ಸಮಜಾಯಿಷಿಗೆ ಇನ್ನಷ್ಟು ಸರ್ಕುಲರುಗಳು, ಕಳಿಸಿಕೊಟ್ಟ ಫಾರ್ಮೆಟ್ಟು ತಪ್ಪಾಗಿದೆ, ಮೂರು ಕಾಪಿ ಅಲ್ಲ ಆರು ಕಾಪಿ ಕಳಿಸಿ... ಒಂದೇ ಎರಡೇ !!!
ಹೆಬ್ರಿ ಬ್ರಾಂಚಿನ ಮೆನೆಜರು ಶೆಣೈಮಾಮರು. ಬಹಳ ಒಳ್ಳೆಯ ಮನುಷ್ಯ, ಸದಾ ಚಟುವಟಿಕೆಯಿಂದ, ನಿರರ್ಗಳ ಮಾತಾಡುತ್ತ, ನಗುತ್ತ ಇರುತ್ತಿದ್ದರು. ಸ್ವಲ್ಪ ಗಡಿಬಿಡಿ ಸ್ವಭಾವ. ಅಲ್ಲದೇ ಸುರುಕ್ಕೆಂದು ಸಿಟ್ಟು ಏರುತ್ತಿತ್ತು, ಪುಸುಕ್ಕೆಂದು ಇಳಿಯುತ್ತಿತ್ತು. ನನ್ನ ಹಾಗೂ ಅವರ ಭೂತ ಒಂದೇ ಇದ್ದಿತ್ತೋ ಏನೋ, ನನಗೂ ಅವರಿಗೂ ಪದೇ ಪದೇ ಮಾತಿನ ಚಕಮಕಿ ನಡೆಯುತ್ತಿತ್ತು. ...
ಅನೇಕ ಪ್ರಯತ್ನಗಳು, ಐದಾರು ಸಲ ರೀಜನಲ್ ಆಫೀಸು ಭೇಟಿ ಮತ್ತು ಲೆಕ್ಕವಿಲ್ಲದಷ್ಟು ಫೋನ್ ಕಾಲ್ ಗಳು ನಡೆದವು. 'ಈ ಸೀ ಜಿ ಸೀ ಕ್ಲೇಮಿನ ಸುದ್ದಿಯೇ ಬೇಡವಿತ್ತು ಮಾರಾಯ!! ಎಂಥಾ ಪಿರಿಪಿರಿ! ನಮ್ಮದೇ ದುಡ್ಡು ನಮಗೆ ಕೊಡೂದು, ಎಷ್ಟು ಕಷ್ಟ ಕೊಡ್ತಾರೆ ನೋಡು!' ನಾನೂ 'ಹೂಂ' ಗುಟ್ಟಿದೆ. ಆದರೆ ಒಂದು ಹೊಸಾ ನಿಯಮ ವ್ಯವಸ್ಥೆ ಶುರುವಾದರೆ ಅದು ಸರಿಯಾಗಿ ನೆಲೆಗೊಳ್ಳಬೇಕಾದರೆ ಸಾಕಷ್ಟು ಸಮಯ ತಕ್ಕೊಳ್ಳುತ್ತದೆ. ಆಗ ತಾನೇ ಋಣ ವಿಭಾಗದಲ್ಲಿ ಕೂತ ನನಗೆ ಇದರ ಅನುಭವವಿತ್ತು. 'ಅಡ್ವಾನ್ಸಸ್' ಸೆಕ್ಷನ್ ನ ಕೆಲಸಗಳ ವ್ಯಾಪ್ತಿ ವಿಸ್ತಾರ, ನನಗರ್ಥವಾಗಲು ಎರಡು ವರ್ಷ ತಗಲಿತ್ತು. ಇರಲಿ.....
ಒಂದು ದಿನ-ಬುಧವಾರವಿರಬೇಕು-ರೀಜನಲ್ ಆಫೀಸಿನಿಂದ ಕ್ರೆಡಿಟ್ ವೋಚರ್-ನಾವು ಕ್ರೆಡಿಟ್ ಐಬಿಏ ಅನ್ನುತ್ತೇವೆ- ಬಂತು. ಐದೋ ಹತ್ತೋ ಸಾಲಗಳ ಕ್ಲೇಮ್ ಮಾನ್ಯ ಆದ ಬಗ್ಗೆ ಇತ್ತದು. 'ಬಂತೋ ಬಂತು ಬಂತು.' ಮೆನೆಜರರ ಸಂತಸಕ್ಕೆ ಪಾರವೇ ಇರಲಿಲ್ಲ. ಬ್ರಾಂಚಿನಲ್ಲಿ ಕುಣಿಯೂದೊಂದು ಬಾಕಿ. ಕ್ಯಾಷಿನಲ್ಲಿದ್ದ ಪ್ರಭು ಎದ್ದು ಓಡಿ ಬಂದರು. ಎಂಥದು ಬಂದದ್ದು?..
'ಎಷ್ಟು ಟೈಮು ಆಯ್ತು ಮಾರಾಯಾ? ಅದು ಸರಿಯಿಲ್ಲ, ಇದು ಸರಿಯಿಲ್ಲ, ಅಲ್ಲಿ ದಸ್ಕತ್ತು ಹಾಕಿಲ್ಲ, ಇಲ್ಲಿ ಎಕೌಂಟು ಸ್ಟೇಟ್ ಮೆಂಟು ಕೊಟ್ಟಿಲ್ಲ ಅಬಬಬಬ! ಒಂದಾ ಎರಡಾ!! ಇರಲಿ ಒಂದು ಬ್ಯಾಚು ಸಾಲದ್ದು ದುಡ್ಡು ಬಂತಲ್ಲಾ!! ದೇವರೆ ದೇವರೇ...' ಅವರ ಖುಷಿಗೇ ಎಲ್ಲೆಯೇ ಇರಲಿಲ್ಲ..
'ಆ ಕ್ರೆಡಿಟ್ ಐ ಬಿ ಏ ಕೊಡಿ, ಅದಕ್ಕೇನೋ ಪ್ರೊಸೀಜರ್ ಉಂಟು, ಅದರ ಪ್ರಕಾರ ಎಂಟ್ರೀ ಮಾಡಬೇಕು.' ನಾನು ಕೂತಲ್ಲಿಂದ ಎದ್ದು ಅವರ ಟೇಬಲ್ ಬಳಿ ಹೋದೆ.
'ಪ್ರೊಸೀಜರ್ ಎಂತದು? ದುಡ್ಡು ಬಂದಿದೆ, ಸಾಲಕ್ಕೆ ಜಮಾ ಮಾಡೂದು, ಇಗೊಳ್ಳಿ ಇವರೇ ಈ ಎಮೌಂಟು ಸಾಲಕ್ಕೆ ಕ್ರೆಡಿಟ್ ಕೊಟ್ಟು ಕೂಡಲೇ ಚೆಕಿಂಗಿಗೆ ನನ್ಹತ್ತಿರಾನೇ ಕಳಿಸಿ.' ಅವರಿಗೆ ನಾನು ಎದ್ದು ಮಧ್ಯ ಪ್ರವೇಶಿಸಿದ್ದು ಸರಿಕಾಣಲಿಲ್ಲವೋ ಏನೋ, ವೋಚರನ್ನು ಇನ್ನೊಬ್ಬ ಕ್ಲಾರ್ಕ್ ಬಳಿ ಕೊಟ್ಟರು.
'ಹೆಡ್ಡಾಫೀಸು ಸರ್ಕುಲರ್ ಹೇಗೆ ಹೇಳ್ತದೋ ಹಾಗೆ ಮಾಡಬೇಕು, ನೀವು ಹೇಳಿದಿರಿ ಅಂತ ಸಾಲಕ್ಕೆ ಕ್ರೆಡಿಟ್ ಮಾಡಿಬಿಡುದಾ?'
'ಹೆಡ್ಡಾಫೀಸು ಸರ್ಕುಲರ್ ನೀನೊಬ್ಬ ಮಾತ್ರ ಓದೂದಲ್ಲ, ಹೆಡ್ಡಾಫೀಸಿನಲ್ಲಿ ನನಗೂ ತುಂಬ ಗುರ್ತ ಇದ್ದಾರೆ. ಅದೇನಾದ್ರೂ ನಾನು ನೋಡ್ಕೊಳ್ತೇನೆ, ನಿನಗೆ ಮಂಡೆಬಿಸಿ ಬೇಡ.' ಬಿಸಿಯಾದದ್ದು ಅವರಿಗೇ. ನಾನು ಮೊದಲೇ ಹೇಳಿದ್ದೇನೆ- ಸುರಕ್ಕನೇ ಏರುತ್ತದೆ ಅಂತ.
ಆದರೆ ಆ ದಿನ ನನ್ನದೂ ಮಂಡೆ ಏಕೋ ಬಿಸಿ ಇತ್ತು. 'ಹೆಡ್ಡಾಫೀಸಿನವರ ಸುದ್ದಿ ತೆಗೆದದ್ದು ನಾನಲ್ಲ, ನೀವೇ. ಪ್ರೊಸೀಜರ್ ಸ್ವಲ್ಪ ಓದಲು ಟೈಮ್ ಕೊಡಿ ಅಂತ ನಾನು ಕೇಳಿದ್ದು ಅಷ್ಟೇ. ಅಷ್ಟಕ್ಕೆಲ್ಲ ಹೆಡ್ಡಾಫೀಸು, ದೋಸ್ತಿ, ಗುರ್ತ ಅಂತೆಲ್ಲ ಹೇಳಿದರೆ ಯಾರೂ ಹೆದರೂದಿಲ್ಲ, ಹೆಡ್ಡಾಫೀಸಿನಲ್ಲಿ ನನಗೂ ಮಸ್ತು ಮಂದಿ ದೋಸ್ತಿ ಇದ್ದಾರೆ....' ನನ್ನದು ಕೊಂಚ ಅಧಿಕಪ್ರಸಂಗದ ಮಾತಾಯಿತು.
'ಹೋ' ಅವರ ಸಿಟ್ಟು ತಾರಕಕ್ಕೇರಿತು. 'ನಿಮ್ಮ ಎಂಟ್ರೀ ಆಯಿತಾ? ಹೇಳಿದಷ್ಟು ಕೆಲಸ ಮಾಡಲು ಏನು ಧಾಡಿ ನಿಮಗೆ?' ಲೇಡೀ ಸ್ಟಾಫ್ ಮೇಲೆ ಹರಿಹಾಯ್ದರು. ಆಕೆಗೆ ಕಕ್ಕಾಬಿಕ್ಕಿಯಾಯಿತು.
'ಅವರು ಹೇಳಿದರೂ ಅಂತ ರಾಂಗ್ ಸ್ಲಿಪ್ಪು ಮಾಡಿ ಎಂಟ್ರೀ ಮಾಡಿದ್ರೇ ನೀನೇ ಜಬಾದಾರಿ, ಮತ್ತೆ ನನ್ನ ಹತ್ರ ಎಂತದೂ ಕೇಳಬೇಡ.' ನಾನೂ ಗರಮ್ಮಾಗಿ ಡೈಲಾಗು ಹೊಡೆದು ಊಟದ ಸಮಯವೆಂದು ಮನೆಗೆ ಹೊರಟೆ. ಊಟ ಆದ ಮೇಲೆ ಹೊಟ್ಟೆ ತುಂಬಿದ ನಂತರ ಮನವೂ ತಂಪಾಯಿತು. 'ಅರೇ ನಾನು ಏನು ಮಾತಾಡಿ ಬಂದೆ! ಮೆನೇಜರು ತಿಂದ ಉಪ್ಪಿನಷ್ಟು ನಾನು ಅನ್ನ ಉಣ್ಣಲಿಲ್ಲ, ಅಲ್ಲದೇ ವಯಸ್ಸಿನಲ್ಲಿ, ಲೋಕಾನುಭವಗಳಲ್ಲಿ ನನಗಿಂತ ಎಷ್ಟೋ ಹಿರಿಯರು! ಮೇಲಾಗಿ ಬಹಳ ಒಳ್ಳೆಯವರು, ನನ್ನ ಮೇಲಂತೂ ಅವರಿಗೆ ವಿಶೇಷ ಅಭಿಮಾನವಿತ್ತು! ಮೆನೆಜರು ಅಂದಾಕ್ಷಣ ಬೇಂಕಿನ ಎಲ್ಲಾ ರೂಲ್ಸು ರೆಗುಲೇಷನ್ಸು ಬಾಯಿಪಾಠ ಗೊತ್ತಿರಲೇ ಬೇಕೆಂಬ ಕಾನೂನೇನೂ ಇಲ್ಲ. ಛೇ! ಈಗ ಅವರಿಗೆ ಮುಖ ತೋರಿಸುವುದು ಹೇಗೆ?' ಚಿಂತೆ ಹತ್ತಿತು.
ಮೆಲ್ಲನೇ ಮೆಟ್ಟಿಲು ಹತ್ತಿ ಬ್ರಾಂಚಿನ ಒಳ ಹೋದೆ. ಐದು ನಿಮಿಷ ಲೇಟು ಬೇರೆ. 'ಶೆಣೈ ಮಾಮು, ಹಾಂವೆ ತಾವಳಿ ಉಲ್ಲಯಿಲೇ ಮಸ್ತ ಚsಡ ಜಾಲ್ಲೆ, ಮೆಗೆಲೇ ಚೂಕಿ ಜಾಲ್ಲಿ, ಬೇಜಾರು ಕೊರೂಂ ನಜ್ಜ, ಆನಿ ಮುಕಾರೀ ಅಶ್ಶಿಂ ಉಲ್ಲಯಿನಾ....' ಇಷ್ಟು ಹೇಳುವಾಗ ಬಾಯಿ ಕಟ್ಟಿ ಹೋಯಿತು, ಇನ್ನೇನು ಕಣ್ಣಿಂದ ಒಂದು ಮಣಿ ನೀರು ಬೀಳುತ್ತದೋ ಎನ್ನುವಾಗ ಮುಖ ತಿರುಗಿಸಿ ಸುಧಾರಿಸಿಕೊಂಡೆ.
'ಅರೇ, ನೀನು ಹೇಳಿದ್ದೇ ಕರೆಕ್ಟು ಮಾರಾಯಾ, ನಿನ್ನದೆಂತದೂ ಮಿಸ್ಟೀಕು ಇಲ್ಲ, ನಂದೇ ತಪ್ಪು, ಇದಕ್ಕೆಲ್ಲ ಮಾಫಿ ಗೀಫಿ ಎಂತದು! ಸರಿಯಾಗಿ ನೋಡಿ ಎಂಟ್ರೀ ಮಾಡಲು ಹೇಳಿದ್ದೇನೆ. ಅವಳು ಬೇಡ, ನೀನೇ ಆ ಎಕೌಂಟಿಂಗ್ ಮಾಡು.' ಶೆಣೈಮಾಮು ಎದ್ದು ಬೆನ್ನು ತಟ್ಟಿದರು. ಕೋಪತಾಪಗಳೆಲ್ಲಾ ಯಾವಾಗಲೋ ಠಂಡಾ ಆಗಿದ್ದವು.
'ಆದರೆ ನಾನು ಮಾತಾಡಿದ್ದು ಭಾರೀ ತಪ್ಪು, ಎಲ್ಲರೆದುರು ದೊಡ್ಡ ಬುದ್ಧಿವಂತನ ಹಾಗೆ ನಿಮಗೆ ಏನೇನೋ ಹೇಳಿದೆ. ನೀವು ಬೇಜಾರು ಮಾ....'
'ಬೇಜಾರೂ ಇಲ್ಲ ಈಜಾರೂ ಇಲ್ಲ..... ಎಲ್ಲಾ ಸರೀ ಉಂಟು, ನಾನು ಊಟ ಮಾಡಿ ಬರ್ತೇನೆ, ಜೋರು ಹಸಿವೆಯಾಗಿದೆ...' ಪಟಪಟನೆ ಮೆಟ್ಟಿಲಿಳಿದು ಊಟಕ್ಕೆ ನಡೆದೇಬಿಟ್ಟರು.
ದೊಡ್ಡ ಯುದ್ಧ ನಡೆಯಬಹುದು ಎಂದು ಹೆದರಿದ ನನಗೆ ಅಯ್ಯಮ್ಮ ಆಯಿತು. ಶೆಣೈಮಾಮನವರ ವ್ಯಕ್ತಿತ್ವವೇ ಹಾಗೇ. ಕೂಡಲೇ ಮನ್ನಿಸಿ ಬಿಡುತ್ತಿದ್ದರು. ಪೋಸ್ಟುಮಾಸ್ಟರ್ ಸಂಜೀವಮಾಮನವರು - ನಮ್ಮ ತಂದೆಯವರ ಫ್ರೆಂಡು - ಹಿರಿಯರು ಆಗಾಗ ಸಲಹೆ, ಹಿತವಚನ ನೀಡುತ್ತಿದ್ದರು.. 'ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀ. ಮುಂದೆ ಪ್ರೊಮೋಷನ್ನು ಸಿಕ್ಕಿ ಮೆನೆಜರೂ ಆಗಬಹುದು. ಬುದ್ಧಿ ನಾಲಿಗೆಗಳ ಮೇಲೆ ಹಿಡಿತವಿಟ್ಟು ಡ್ಯೂಟಿ ಮಾಡಲು ಕಲಿ.....
ಅವರ-ಸಂಜೀವಮಾಮನ-ಮಾತುಗಳನ್ನು ಆದಷ್ಟು ಮಟ್ಟಿಗೆ ಪಾಲಿಸಿಕೊಂಡು ಬಂದಿರುತ್ತೇನೆ..🙏🙏
No comments:
Post a Comment