Friday, July 3, 2020

ನಾಸ್ಟಾಲ್ಜಿಯಾ .....

ಜಿ. ನರಸಿಂಹ ನಾಯಕರು
 
     ನಾವೆಲ್ಲ ಅರುವತ್ತು ಎಪ್ಪತ್ತರ ದಶಕಗಳ ಮಂದಿ. ಅರುವತ್ತು ಹದಿಹರೆಯದ ದಶಕವಾದರೆ ಎಪ್ಪತ್ತರದ್ದು ಯವ್ವನದ ಕಾಲ. ನನ್ನದು ಆಗ ಕೊಂಚ ದಾಕ್ಷಿಣ್ಯದ ಸ್ವಭಾವ. ಊರೂ ಸಣ್ಣದು. ಹೆಬ್ರಿ ಗ್ರಾಮವೆಂದರೆ ಗ್ರಾಮವೇ!! ಕುಗ್ರಾಮವಲ್ಲದಿದ್ದರೂ ಪೇಟೆಯ ದರ್ಜೆಗೇರಿರಲಿಲ್ಲ. ಆಗಿನ ಕಾಲವೂ ಕಷ್ಟದ್ದಾಗಿತ್ತು. ಎಲ್ಲರಿಗೂ ಹೊಟ್ಟೆಪಾಡಿನದ್ದೇ ಚಿಂತೆ. ಮೇಲಾಗಿ ನಾವು ಏಳು ಮಂದಿ ಗೋಣಗಳು ಒಬ್ಬಳು ತಂಗಿ. ನಾಲ್ಕು ಜನರೆದುರು ಮುಖಕ್ಕೆ ಮುಖ ಕೊಟ್ಟು ಅಥವಾ ಕಣ್ಣಲ್ಲಿ ಕಣ್ಣಿಟ್ಟು ಮಾತುಕತೆ ವ್ಯವಹಾರ ನಡೆಸುವ ಚಾಕಚಕ್ಯತೆ ನನ್ನಲ್ಲಿ ಬಂದಿರಲಿಲ್ಲ ನಾನು ಸ್ವಲ್ಪ ಮೊದ್ದು ಸ್ವಭಾವದಂವ ಎಂಬುದನ್ನು ತಿಳಿಸುವುದಕ್ಕೆ ಇಷ್ಟೆಲ್ಲ ವಿವರಣೆ. ಇರಲಿ....

     ಇಂತಿರುವ ಸಮಯದಲ್ಲಿ ನನಗೆ ದೇವರು ಹಾಗೂ ಮಾನ್ಯ ಕೆ.ಕೆ.ಪೈಯವರ ಕೃಪೆಯಿಂದಾಗಿ ಸಿಂಡಿಕೇಟಿನಲ್ಲಿ ಜಾಬು ಆಯಿತು. ಊರವರಿಗೆಲ್ಲ ಭಾರಿ ಖುಷಿ. 'ದೇವೂ ಪುತ್ತಾಕ ಸಿಂಡಿಕೇಟಾ ಕಾಮ್ ಜಾಲ್ಲೆಂ ಖೈಂ. ಆಸ್ಸೋಂ, ಬರೇಂ ಜಾಲ್ಲೆ.' ಎಂದು ಹಿರಿಯರಾದಿಯಾಗಿ ಎಲ್ಲರಿಗೂ ಸಂತೋಷ. ಪ್ರಿಮೈಸಸ್ ಡಿಪಾರ್ಟಮೆಂಟಲ್ಲಿ ಫರ್ನಿಚರ್ ಸೆಕ್ಷನಲ್ಲಿ ಕೂಡು ಎಂದರು, ಹೋಗಿ ಕೂತೆ. ಏನು ಮಾಡೂದೆಂದು ತಿಳೀಲಿಲ್ಲ , ಪ್ರತಿಯೊಬ್ಬರೂ ತಮ್ಮತಮ್ಮ ಕೆಲಸದಲ್ಲಿ ಮಗ್ನರು. ಎದುರು ಕುಳಿತಿದ್ದ ಇಕನಾಮಿಕ್ಸ್ ಡಿಪಾರ್ಟಮೆಂಟಿನ ಟೈಪಿಸ್ಟ್ ನನ್ನ ಪರಿಚಯ ಕೇಳಿದರು. ಏನೋ ಗುಣುಗುಣು ಗೊಣಗಿದೆ. ನನ್ನ ಗೊಣಗಾಟ ಅವರಿಗೆ ಸಮ್ಮತವಾಗಲಿಲ್ಲವೋ ಏನೋ 'ಏಕ ನಿಮ್ಮಿಲೇರೀ ಆನ್ಯೇಕ ಉಲ್ಲೈತಾ' ಎಂದು ಮುಖ ತಿರುಗಿಸಿ ತಮ್ಮ ಕೆಲಸ ಮುಂದುವರೆಸಿದರು. ಪಕ್ಕದ ಸೀಟಿನಲ್ಲಿನ ಲಲನಾಮಣಿ ಕಿಸಕ್ಕೆಂದು ನಕ್ಕಳು. ನನಗೆ ಕೊಂಚ ಮುಜುಗರವಾಯಿತು. 
 
       ಹನ್ನೊಂದರ ಸಮಯಕ್ಕೆ ಶ್ರೀ ನಾರಾಯಣ ಗಡಿಯಾರ್  'ನನ್ನ ಗುರುತ ಆಗ್ತದೋ, ಸರೀ ನೋಡು.' ಎಂದು ಹತ್ತಿರ ಕೂತರು.

     'ಹೌದು, ಕೇ ಪೀ ಟಿ ಮಂಗಳೂರಲ್ಲಿ ನೀವು ನನ್ನ ಸೀನಿಯರ್ ಆಗಿದ್ದಿರಿ. ನೀವು ಫೈನಲ್ ಈಯರ್, ನಾನು ಫಸ್ಟ್ ಈಯರ್ ಸ್ಟೂಡೆಂಟ್ ಆಗಿದ್ದೆ.'

      ಕರೆಕ್ಟ್, ಈಗ ನೋಡು, ಕೆಲವು ಫೈಲು ಇಟ್ಟಿರುತ್ತೇನೆ, ಬ್ರಾಂಚುಗಳಿಂದ ತಮಗೆ ಬೇಕಾಗಿರುವ ಫರ್ನಿಚರ್-ಟೇಬಲ್, ಖುರ್ಚಿ ಮುಂತಾದವುಗಳ- ಬೇಡಿಕೆ ನಮಗೆ ಕಳಿಸ್ತಾರೆ. ನಾವು ಅವರಿಗೆ ಸಾಂಕ್ಷನ್ ಬರೆದು ಕಳಿಸಬೇಕು..... ನೀನು ಇವತ್ತು ಈ ಫೈಲು ಗಳನ್ನು ಓದು, ಮೆಲ್ಲ ಮೆಲ್ಲ ಅರ್ಥ ಆಗ್ತದೆ. ವೆಲ್ ಕಮ್ ಟು ಸಿಂಡಿಕೇಟ್ ಫೇಮಿಲಿ'. ನನಗೆ ಕೊಂಚ ಉಮೇದು ಬಂತು. ಫೈಲು ಗಳನ್ನು ಬಿಡಿಸಿ ಓದಲಾರಂಭಿಸಿದೆ, ಏನೂ ಅರ್ಥ ಆಗಲಿಲ್ಲ. ಇರಲಿ ಎಂದು ಓದುತ್ತಾ ಕೂತೆ. ಹನ್ನೊಂದೂಮುಕ್ಕಾಲರ ಹೊತ್ತಿಗೆ 'ಬಾ ಮಹರಾಯ, ಒಂದೊಂದು ಚಾ ಹಾಕಿ ಬರುವ' ಎಂದು ಕೇಂಟೀನಿಗೆ ಕರಕೊಂಡು ಹೋದರು.

     ನಾನು ಖುರ್ಚಿಯಲ್ಲಿ ಕೂತು ಫೈಲು ಓದುವದು, ಸಂಜೆ ಆರೂಕಾಲರ ಸೀ ಎಮ್ ಟಿ ಯಲ್ಲಿ ಹೆಬ್ರಿಗೆ ಮರಳುವುದು. ನನ್ನ ಸೆಕ್ಷನ್ನಿನ ಗೆಳೆಯ, ಆಫೀಸರ್ ಮತ್ತು ಗಡಿಯಾರ ಮೂರು ಜನರ ಬಳಿ ಮಾತಾಡುವುದು ಅದೂ ಅವರು ಮಾತಾಡಿಸಿದರೆ ಮಾತ್ರ , ಅಷ್ಟೇ, ಇದು ದಿನಚರಿ. 'ನಮ್ಮ ಆಫೀಸಿಗೆ ಒಂದು ಮಗು ಬಂದಿದೆ, ಮೂಗಲ್ಲಿ ಬೆರಳು ಹಾಕಿದರೆ ಕಚ್ಚಲಿಕ್ಕೆ ಸಹ ಬರೂದಿಲ್ಲ,' ಪಕ್ಕದ ಟೈಪಿಣಿಯರು ನಗುತ್ತಿದ್ದರು.

     ಹದಿನೈದು ದಿನಗಳ ಬಳಿಕ ಅಂದರೆ ಮಾರ್ಚ್ 1971ರ ತಿಂಗಳಲ್ಲಿ ಸಣ್ಣ ಬಿರುಗಾಳಿ ಬೀಸಿತು. ಡಿಪಾರ್ಟಮೆಂಟಿಗೆ ಹೊಸಬ ರೊಬ್ಬರ ಸೇರ್ಪಡೆಯಾಯಿತು. G.ನರಸಿಂಹ ನಾಯಕ್. ನನಗಿಂತ 4 ವರ್ಷ ದೊಡ್ಡವರು. ಕೆಲಸಕ್ಕೆ ರಿಪೋರ್ಟು ಮಾಡಿದ ಅರ್ಧಘಂಟೆಯೊಳಗಾಗಿ ಎಲ್ಲರ ಬಳಿ ಹೋಗಿ ಪರಿಚಯ ಹೇಳಿಕೊಂಡು ಮಾತನಾಡಿಸಿ ದೋಸ್ತಿ ಸ್ಥಾಪನೆ ಮಾಡಿ ಆಯಿತು. ನನ್ನ ಬಳಿಯೂ ಬಂದು ಮಾತನಾಡಿಸಿ ಹೋದರು.

       ನಾಯಕರದು ಅತ್ಯಂತ ಸರಳ ಪ್ರೀತಿಭರಿತ ಆಕರ್ಷಕ ಸ್ವಭಾವ. ಕುಷಾಲು ಮಾತುಗಳು ಸ್ವಲ್ಪ ಜಾಸ್ತಿ. ನನಗೆ ಅವರ ಸಾಂಗತ್ಯ ಬಹಳವೇ ಹಿಡಿಸಿತು. 'ಏನು ಮಹರಾಯ ಗುಮ್ಮನ ಹಾಗೆ ಕೂತಿರ್ತಿ? ಅವರಿವರ ಬಳಿ ಮಾತಾಡಲು ಕಲಿ. Be open and friendly....' 

     ಗೆಳೆಯರ ಲೈನಿನಲ್ಲಿ ನಾಯಕರು ಎದೂರು ಇರುವವರು. ನಮ್ಮದು ಆಗ ಯವ್ವನದ ದಿನಗಳು. ವಯಸ್ಸಿಗೆ ಸರಿಯಾದ ಹುಚ್ಚು ಬಿಚ್ಚು ಮನಸ್ಸುಗಳಿದ್ದವು. ಮೇರೆಗಳಿಲ್ಲದ ಮಾತುಗಳು ಅಂತೆಯೇ ಕಪಟಗಳಿಲ್ಲದ ಪ್ರೀತಿ, ಗೆಳೆತನ ನಾಯಕರಿಂದ ಕಲೀಬೇಕು. ಅವರ ಮಾತುಗಾರಿಕೆ, ಸ್ನೇಹಿತರನ್ನು ಗಳಿಸಿಕೊಳ್ಳುವ ಪರಿ, ನಗುಮುಖದ ವ್ಯವಹಾರ ಮುಂತಾದವುಗಳಿಗೆ ಪೂರಕವಾದ ಸೆಕ್ಷನ್ನೇ ಅವರಿಗೆ ಸಿಕ್ಕಿತು. 'ಹೆಡ್ ಆಫೀಸು ಮೇಂಟೈನೆನ್ಸ್.' ಎಷ್ಟೇ ಕುಸಾಲು ಬಿಸಾಲು ಇದ್ದರೂ ಕೆಲಸದಲ್ಲಿ ಶೃದ್ಧೆ ಇದ್ದುದರಿಂದ ಜನ ಎಲ್ಲಾ ಮಂದಿಯ ಡಾರ್ಲಿಂಗ್ ಆಗಿದ್ದರು. 
 
     ಛೇರ್ಮನ್ ಪೈಯವರು ಡ್ಯೂಟಿ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟು. ತಾವೇ ಸ್ವತಃ ವಿರಾಮವಿಲ್ಲದೇ ದುಡಿಯುತ್ತಿದ್ದರು, ಹಾಗಾಗಿ ಹೆಡ್ ಆಫೀಸಿನ ಸ್ಟಾಫ್ ಗಳಲ್ಲಿ ಆಲಸ್ಯವನ್ನು ಸಹಿಸುತ್ತಿರಲಿಲ್ಲ. ಅನವಶ್ಯಕ ತಪ್ಪು ತೊಂದರೆಗಳಾದರೆ ಮುಖ ಮೂತಿ ನೋಡದೇ ನೀರಿಳಿಸಿಬಿಡುತ್ತಿದ್ದರು.

     'ಏನು ನಾಯಕರು ಸ್ವಲ್ಪ ಚಪ್ಪೆ ಇದ್ದೀರಿ ಇವತ್ತು?'

     'ಅಲ್ಲ ಮಹರಾಯ ಛೆಯರ್ ಮೇನ್ ರಿಗೆ ಆರಾಮವಿಲ್ಲವೊ ಅಂತ ಯೋಚನೆಯಾಗಿದೆ?'

     'ಏಕೆ?'

     'ಟೂರ್ ಮುಗಿಸಿ ಬಂದು ನಾಲ್ಕು ದಿನ ಆಗಿವೆ. ಇನ್ನೂ ನನಗೆ ಕಾಲ್ ಬಂದಿಲ್ಲ!!'

     ಅಷ್ಟರಲ್ಲಿ ಛೇರ್ಮನ್ ರ ಅಟೆಂಡರ್ ಗಡಬಡಿಸಿ ಬಂದು 'ನಾಯಕರೆ ನಾಯಕರೇ ಛೇರ್ಮನ್ ಕರೀತಾರೆ, ಬೇಗ ಬನ್ನಿ, ಕಂಡಾಪಟ್ಟೆ ಸಿಟ್ಟಾಗಿದ್ದಾರೆ, ಕೆಂಪಕೆಂಪು ಆಗಿದ್ದಾರೆ!! ನಡೀರಿ ನಡೀರಿ.'
 
     'ಅಯ್ಯಬ್ಬ! ಈಗ ಸರಿಯಾಯಿತು ನೋಡು, ನೀನು ಹೋಗು ಮಾರಾಯ! ನಾನು ಬರ್ತೇನೆ.....' ಮೇಲೆ ಮೂರನೇ ಮಾಳಿಗೆಗೆ ಹೋಗಿ ಚೆನ್ನಾಗಿ (ನಾಲ್ಕು ದಿನಗಳ ಕೋಟಾ) ಉಗಿಸಿಕೊಂಡು ಬಂದು ಕೂತರು. 'ನಿನ್ನೆಯಿಂದ ಮೋಷನ್ನೇ ಸರಿಯಾಗಿರಲಿಲ್ಲ , ಈಗ ಸರಿಯಾಯ್ತು ನೋಡು!!'......ಹೆಡ್ಡಾಫೀಸಿನಲ್ಲಿ ನಮ್ಮ ಡ್ಯೂಟಿಯ ಸ್ಟೈಲೇ ಹಾಗೆ.
 
     ಮುಂದಿನ ದಿನಗಳಲ್ಲಿ ಜಾಬ್ ರೊಟೇಷನ್ ನಲ್ಲಿ ಅವರ ಡ್ಯೂಟಿ ನನ್ನ ಪಾಲಿಗೆ ಬಂತು. ಆಗ ಮಾನ್ಯ ಪೈಯವರು ಕೆಲಸ ಮಾಡುವ ಪರಿ, ಕಟ್ಟುನಿಟ್ಟು ಮತ್ತು ಶೃದ್ಧೆಯಿಂದ ನಿಭಾಯಿಸುವ ಸ್ಟೈಲು. ಇವೆಲ್ಲವನ್ನು ಹತ್ತಿರದಿಂದ ನೋಡಿದ್ದೇನೆ..!! ಅಷ್ಟು ಸ್ಟ್ರಿಕ್ಟ್ ಹಾಗೂ ದಕ್ಷ ಆಡಳಿತಗಾರರಾಗಿದ್ದರೂ ಬೇಂಕಿನ ಹಾಗೂ ತನ್ನ ಸಿಬಂದಿ ಸಹಯೋಗಿಗಳ ಮೇಲಿನ ಅವರ ಪ್ರೀತಿ ಸಂಬಂಧಗಳನ್ನು ವರ್ಣಿಸಲು ಶಬ್ದ ಸಾಲದು.

     ನನ್ನ ಮತ್ತು ನಾಯಕರ ಸುಮಾರು ನಲವತ್ತೈದು ವರ್ಷಗಳಿಗಿಂತಲೂ ಮಿಕ್ಕಿದ ಸ್ನೇಹ ದೋಸ್ತಿ ಸಂಬಂಧ. ಇವತ್ತಿಗೂ ನಿತ್ಯ ನೂತನ........

1 comment:

  1. ಅನ್ನಾ... ಫರ್ಸ್ಟ್ ಬ್ಲಾಗ್... ಲಾಯ್ಕ ಬರೈಲ... ಚುಟುಕಾಗಿ ಅಸ್ಸೋ 👍👌 ದೀಗ ಎಕ್ಸಪ್ಲನೇಶನ್ ನಕ್ಕ...

    ReplyDelete