Sunday, July 5, 2020

ಓಂ ಶ್ರೀ ಗುರುಭ್ಯೋ ನಮಃ ...

      ಮಾನನೀಯ ಜಿನರಾಜ ಪಂಡಿತರು.

     ಎಪ್ಪತ್ತರ ದಶಕವಿರಬೇಕು, ನಾವು ಹೆಬ್ರಿಯ ಪೈಯವರ ಮನೆಯ ಔಟ್ ಹೌಸ್ ನಲ್ಲಿ ಬಾಡಿಗೆಗೆ ಇದ್ದೆವು. ಅವರ ದೊಡ್ಡ ಮನೆಯ ಹಿಂಬಾಗದ ಟ್ವಿನ್ ಹೌಸು. ನಾನು ಅದನ್ನು ಟ್ವಿನ್ ಹೌಸು ಎಂದು ಗೌರವ ಕೊಡೂದು ಅಷ್ಟೇ. ಈಗ ಜನಜನಿತ ವಾಗಿರುವಂತೆ ವನ್ ಬೀ.ಎಚ್. ಕೇ. ಮನೆಗಳು! ಒಂದು ಭಾಗದಲ್ಲಿ ನಮ್ಮ ಜಿನರಾಜ ಮಾಸ್ಟ್ರು ಇನ್ನೊಂದರಲ್ಲಿ ನಾವು.

     ಮಾನ್ಯ ಜಿನರಾಜರು ಇಡೀ ಊರಿಗೇ ಕನ್ನಡಪಂಡಿತರು. ಬಹು ವಿದ್ವಾನರು. ಹೈಸ್ಕೂಲಲ್ಲಿ ಅಧ್ಯಾಪಕ ಹಾಗೂ ವಿದ್ಯಾರ್ಥಿ ವೃಂದಗಳಿಗೆ ಆಪ್ತರು ಗೌರವಾನ್ವಿತರು. ಊರ ಜನರು ಯಾರೂ ಅವರ ಹೆಸರು ಎತ್ತಿ ಸಂಬೋಧಿಸುತ್ತಿರಲಿಲ್ಲ, ಕನ್ನಡಪಂಡಿತರೇ, ಪಂಡಿತರೇ ಅಥವಾ ಗುರುಗಳೇ ಎಂದು ಮರ್ಯಾದೆ ಕೊಟ್ಟು ಮಾತನಾಡಿಸುತ್ತಿದ್ದರು. ಅವರೂ ಸಹ ಪ್ರತಿಯೊಬ್ಬರ ಬಳಿ ಬಹಳ ಪ್ರೀತಿಯಿಂದ ವ್ಯವಹರಿಸುತ್ತಿದ್ದರು. ಮುಂದೆ ಜೀವನದಲ್ಲಿ ನಾನೂ ಸಹ ಅವರ ಹಾಗೆ ಕನ್ನಡ, ಹಿಂದಿ ಮತ್ತು ಸಂಸ್ಕೃತಗಳ ದೋssಡ್ಡ ಮಹಾಪಂಡಿತನಾಗಬೇಕು ಎಂಬ ಆಕಾಂಕ್ಷೆಗಳನ್ನಿಟ್ಟುಕೊಂಡಿದ್ದೆ. ನನ್ನ ಹಾಗೇ ಇತರ ಅನೇಕರು ಅವರನ್ನು ಪ್ರೀತಿ ಭಕ್ತಿಗಳಿಂದ ಆರಾಧಿಸುತ್ತಿದ್ದೆವು. ನಾನು ಅವರ ಪ್ರಿಯ ಶಿಷ್ಯಂದಿರುಗಳ ಗುಂಪಲ್ಲಿ ಒಬ್ಬನಾಗಿದ್ದೆ.

     ಒಂದು ನೆನಪು:

     ಯಾವ ತರಗತಿಯಲ್ಲೆಂದು ನೆನಪಿಲ್ಲ, ಅರ್ಧವಾರ್ಷಿಕ ಪರೀಕ್ಷೆಯ ಕನ್ನಡ ಸಬ್ಜಕ್ಟಲ್ಲಿ ಒಂದು ಪ್ರಬಂಧ ಬರೆಯುವ ಪ್ರಶ್ನೆಯಿತ್ತು. ಪೇಪರು ತಿದ್ದುವ ಮಾರ್ಕು ಕೊಡುವ ವಿಚಾರದಲ್ಲಿ ಪಂಡಿತರು ಬಹಳ ಕಟ್ಟುನಿಟ್ಟು. ಎಷ್ಟು ಶೃದ್ಧೆಯಿಂದ ಪಾಠಗಳನ್ನು ಪ್ರತಿಯೊಬ್ಬರಿಗೂ (ಹೆಡ್ಡಾನುಹೆಡ್ಡನಿಗೂ) ಕೂಡ ಮನದಟ್ಟಾಗುವಂತೆ ಹೇಳಿಕೊಡುತ್ತಿದ್ದರೋ, ತಿದ್ದಿ ಮಾರ್ಕು ನೀಡುವಾಗ ಅಷ್ಟೇ ಕಟ್ಟುನಿಟ್ಟು. ವಾಕ್ಯಗಳು ವ್ಯಾಕರಣಬದ್ಧ ಆಗಿರಬೇಕು, ಸರಿಯಾದ ಜಾಗಗಳಲ್ಲಿ ಅಲ್ಪವಿರಾಮ (ಕೊಮಾ), ಅರ್ಧವಿರಾಮ, ಪೂರ್ಣವಿರಾಮ, ಆಶ್ಚರ್ಯಜನಕ ಚಿಹ್ನೆ ಇತ್ಯಾದಿ ಇತ್ಯಾದಿಗಳನ್ನು ಹಾಕಬೇಕು. ಕೊಟ್ಟ ವಿಷಯದ ಕುರಿತು ಹೆಗ್ಗುರುತುಗಳನ್ನು ಹಾಕಿಕೊಂಡು ಅನುಕ್ರಮವಾಗಿ ಅವುಗಳನ್ನು ಬೇರೆ ಬೇರೆ ಪ್ಯಾರಾಗಳಲ್ಲಿ ಬರೆಯಬೇಕು. ಮತ್ತು ಕೊನೆಯಲ್ಲಿ ಎಲ್ಲವನ್ನು ಕ್ರೋಢೀಕರಿಸಿ ಪ್ರಬಂಧವನ್ನು ಪೂರ್ಣಗೊಳಿಸಬೇಕು.....‌.. ಎಂದು ಹೇಳಿ ಹೇಳಿ ಮನದಟ್ಟು ಮಾಡುತ್ತಿದ್ದರು.

     'ಈ ಜಿನರಾಜ ಪಂಡಿತರ ಹತ್ರ ಆಗುದಿಲ್ಲ ಮಾರಾಯ! ಪ್ರಬಂಧ ಬರಿಯೂದಕ್ಕೇ ಬರೂದಿಲ್ಲ, ಅದರ ಮೇಲೆ ಅಲ್ಪವಿರಾಮ, ಅರ್ಧವಿರಾಮ ಪೂರ್ಣವಿರಾಮ... ರಾಮ ರಾಮ! ಇನ್ನೆಂತದು ಇಲ್ವಾ?' ಎಂದು ನಮ್ಮ ದೋಸ್ತಿ  ....ಪ್ಪ ಹೆಗ್ಡೆಯ ಮಂಡೆಬಿಸಿ.

     ಇರಲಿ, ತಿದ್ದಿದ ಪೇಪರುಗಳನ್ನು ಕೊಡುವಾಗ "ಒಬ್ಬನ ಉತ್ತರಪತ್ರಿಕೆಯಿಂದ ಪ್ರಬಂಧವನ್ನು ಈಗ ಓದಿ ಹೇಳುತ್ತೇನೆ, ಗಮನವಿಟ್ಟು ಕೇಳಿ" ಎಂದು ಓದತೊಡಗಿದರು. ಪರೀಕ್ಷೆ ಮುಗಿದು ತುಂಬ ದಿನಗಳಾಗಿದ್ದವು. ಅವರು ತನ್ಮಯತೆಯಿಂದ ಓದುತ್ತ ಇದ್ದಂತೆ ನಾನೇ ಬರೆದ ಪ್ರಬಂಧ ಎಂದು ಸಂಶಯ ಬರಲಾರಂಭವಾಯಿತು. "ನಾನು ಕಲಿಸಿದ್ದಕ್ಕೆ ಇಂದು ನನಗೆ ತೃಪ್ತಿ ಆಯಿತು, ಇಷ್ಟು ಚೆನ್ನಾಗಿ ವಿಷಯ ಮಂಡನೆ ಮಾಡಿ ಕ್ರಮಬದ್ಧವಾಗಿ ಪ್ರಬಂಧ ಬರೆದ ವಿದ್ಯಾರ್ಥಿ ಎದ್ದು ನಿಲ್ಲಬೇಕು." ಎಂದು ಆದೇಶಿಸಿದರು. ಕ್ಲಾಸಲ್ಲಿ ನನಗಿಂತ ಬುದ್ಧಿವಂತ ಗೆಳೆಯರೂ ಇದ್ದರು, ಪರೀಕ್ಷೆ ನಡೆದು ತುಂಬ ದಿನಗಳಾಗಿವೆ, ನನ್ನದೇ ಪೇಪರು, ಆದರೆ ಪೂರ್ತಿ ಧೈರ್ಯವಿಲ್ಲ! ಹಾಗಾಗಿ ಸ್ವಲ್ಪ ತಳಮಳದಲ್ಲಿದ್ದೆ. "ಕೇಶವ ನಾಯಕ್ ಎದ್ದು ನಿಲ್ಲು." ಗುರುಗಳು ಪ್ರೀತಿಯಿಂದ ಕರೆದು ಪೇಪರು ಕೊಟ್ಟರು. ಇಂದಿಗೂ ಅವರ ಆ ಅಭಿಮಾನದ ಭಾವ ಮನದ ಗೋಡೆಯಲ್ಲಿ ಅಚ್ಚೊತ್ತಿದೆ.

     ಇದು ನನ್ನ ಹೆಗ್ಗಳಿಕೆ ಪ್ರದರ್ಶಿಸಲು ಪ್ರಯತ್ನಿಸಿದ್ದಲ್ಲ. ನನ್ನ ಶಾಲಾ ಪರ್ವ ಮುಗಿದು ಜೀವನದಲ್ಲಿ ಯಾವ ಯಾವುದೋ ನಾಟಕಗಳಲ್ಲಿ ನನ್ನ ಪಾತ್ರವಿತ್ತು, ಆದರೆ ಅವರು ಕೊನೆಯ ವರೆಗೂ ನನ್ನ ಮೇಲೆ ಪ್ರೀತಿ ಪ್ರೇಮವನ್ನಿರಿಸಿದ್ದರು. ನಾನದನ್ನು ಮರೆಯಲಾಗುವುದಿಲ್ಲ.

     ಅವರ ಪತ್ನಿ ಸಹ ಶಿಕ್ಷಕಿ. ಮೂರು ಮಕ್ಕಳು- ಮಾಲ ಕಿರಣ ಮತ್ತು ಕಿಶೋರ.... ಮೇಲೆ ಹೇಳಿದಂತೆ ಎಪ್ಪತ್ತರ ದಶಕದ ಸಮಯದಲ್ಲಿ ಕಿಶೋರ ಸಣ್ಣವ ನಮ್ಮ ಪನ್ನಿಯ ಪ್ರಾಯವಿರಬೇಕು. ತಂಟಲಮಾರಿ ಅಂದ್ರೆ ತಂಟಲಮಾರಿ. "ಇವನ ಹತ್ರ ಆಗೂದಿಲ್ಲಪ್ಪ , ಒಂದು ಮೂಗುದಾರ ಇದ್ರೆ ನಿಮ್ಮ ಅಂಗಡಿಯಿಂದ ತಂದುಕೊಡಿ ಮುಕ್ತಮ್ಮ..." ಎಂದು ವಿಜಯಮ್ಮ ಟೀಚರು ಅಲವತ್ತುಕೊಳ್ಳೂದು "ಇರಲಿ ವಿಜಯಮ್ಮ, ಮಕ್ಕಳು ಆಡದೆ ನಾವು ನೀವು ಆಡೂದಾ! ಮಕ್ಕಳು ತಂಟೆ ಮಾಡಿದರೆ ಅದೇ ಒಂದು ಖುಷಿ," ನಮ್ಮಮ್ಮ ಸಮಾಧಾನ ಹೇಳೂದು ಇದು ನಿತ್ಯದ ಕಾಯಕ.

     "ಮಾಮ ಮಾಮ ನಾನೊಂದು ಡಾನ್ಸ್ ಮಾಡೂದಾ?" ಮಗಳು ಮಾಲ ಬಂದು ಕುಣಿಯತೊಡಗಿದಳು. ನಾನು ಆಲಿಸ್ಟೇರ್ ಮೇಕ್ಲೀನನ ಯಾವುದೋ ಒಂದು ಥ್ರಿಲ್ಲರ್ ಓದುತ್ತಿದ್ದೆ, ಆದಿತ್ಯವಾರ ರಜಾದಿನ, ಮಧ್ಯಾಹ್ನದ ವಿಶ್ರಾಂತಿ ಸಮಯ, ಇವಳಿಗೆ ಡಾನ್ಸು ಮಾಡುವ ಉಮೇದು. "ಆಯ್ತು ಮಾರಾಯಿತಿ, ಚಂದ ಡಾನ್ಸು ಮಾಡಬೇಕು ಆಯ್ತಾ?"

     "ಚಂದ ಇದ್ದರೆ ನೀವು ಚಪ್ಪಾಳೆ ತಟ್ಟಬೇಕು ಮತ್ತೇ" ಅವಳ ತಾಕೀತು. ಪುಸ್ತಕ ಮಡಿಸಿಟ್ಟು ಅವಳತ್ತ ಗಮನ ಕೊಟ್ಟೆ, ಒಳಗಿನಿಂದ ತಾಯಿ ವಿಜಯಮ್ಮ ಇವಳಿಗೆ ತಿಳಿಯದಂತೆ ನೃತ್ಯ ನೋಡಿ ಖುಷಿ ಪಡುತ್ತಿದ್ದರು. ಒಂದರ ಹಿಂದೆ ಒಂದರಂತೆ ಸುಮಾರು ಅರ್ಧ ಘಂಟೆಯ ತನಕ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು.

     "ಮಾಮನಿಗ ತೊಂದರೆ ಕೊಡಬೇಡ, ಆಗಲಿಂದ ಕುಣೀತಾ ಇದ್ದೀ, ಸಾಕು ಮಾಡಮ್ಮ" ತಾಯಿ ಬಂದು ಕರೆದರು. "ಇವಳಿಗೆ ಪ್ರೈಜ್ ಡಿಸ್ಟ್ರಿಬ್ಯುಷನ್ ಪ್ರೋಗ್ರಾಮು ಮಾಡಬೇಕಲ್ಲ, ಎಷ್ಟು ಚಂದ ಡಾನ್ಸು ಮಾಡ್ತಾಳೆ!" ಎರಡು ಶಹಭಾಷ್ ಮಾತು ಆಡಿದೆ. ಮಾಲಳಿಗೆ ಬಹಳವೇ ಖುಷಿಯಾಯಿತು.

     ಕಾಲಚಕ್ರ ಉರುಳುತ್ತ ಇದೆ. ಜೀವನದ ಯಾತ್ರೆಯಲ್ಲಿ ನಮ್ಮ ರೈಲು ಬೇರೆ ಬೇರೆ ನಿಲ್ದಾಣಗಳನ್ನು ದಾಟಿ ಬಂದಿದೆ. ಅವರದ್ದೂ ಡೆಸ್ಟಿನೇಶನ್ನು ಬೇರೆ ಎಲ್ಲೋ ಇದೆ. ನೆನಪಿನ ಬಟನ್ನು ಒತ್ತಿದಾಗ ಒಂದೊಂದು ಎಪಿಸೋಡು ಓಪನ್ ಆಗುತ್ತದೆ.

     ಒಂದು ಬಟನ್ನು ಇವತ್ತು ಒತ್ತಿದ್ದೇನೆ.

No comments:

Post a Comment