Wednesday, July 15, 2020

ಪ್ರೀತಿ, ಪ್ರೇಮ, ಮುದ್ದು ಮತ್ತು ದೊಡ್ಡಮ್ಮ


     ಹಿಂದಿನ - ಸುಮಾರು ಎಪ್ಪತ್ತು ವರ್ಷಗಳಿಗಿಂತಲೂ ಹಿಂದೆ - ಕಾಲದಲ್ಲಿ ಹೆಣ್ಣು ಮಕ್ಕಳ ಮದುವೆಗಳನ್ನು ಹದಿಹರೆಯದಲ್ಲೇ ಮಾಡಿ ಪೂರಯಿಸಿ ತಂದೆ ತಾಯಿಗಳು ಧನ್ಯರಾಗುತ್ತಿದ್ದರು! 'ಅಬ್ಬಾ ಒಂದು ಹೊರೆ ಕಳಚಿತು' ಎಂಬ ಬಿಸಿಯಾದ ನಿಟ್ಟುಸಿರೂ ಬಿಡುತ್ತಿದ್ದರು! ಇರಲಿ, ಇಲ್ಲಿ ಈ ಬಾಲ್ಯವಿವಾಹದ ಕುರಿತ ಚರ್ಚೆಯಲ್ಲ.

     ನಮ್ಮ ದೊಡ್ಡಮ್ಮ-ಆಕೆ ಪುಣ್ಯವಂತೆ-ಇದೇ ಸಂಪ್ರದಾಯ - ಕ್ರಮದಂತೆ  ತನ್ನ ಹದಿಹರೆಯದಲ್ಲೇ ಮದುವೆಯಾಗಿ ಬಂದಳು. ನನ್ನ ಬಳಿ ಅನೇಕ ಸಲ ಹೇಳಿಕೊಂಡಿದ್ದಳು. 'ಅಲ್ಲ ಮಾರಾಯ! ಶಾಲೆಗೆ ಹೋಗಿ ಆಟ ಆಡಿಕೊಂಡು ಇದ್ದವಳಿಗೆ ಲಗ್ನ ಗಂಟು ಹಾಕಿ ಕಳಿಸಿಬಿಡೂದಾ? ನಂಗೆ ಎಂತ ಅಂತ ಗೊತ್ತಿಲ್ಲ , ಇಲ್ಲಿ ಕಳಿಸಿ ಬಿಟ್ರು, ಹುಡೂಗಿ ನಾನು! ಮಂಕು ಅಂದ್ರೆ ಮಂಕು! ಆದರೆ ತಲೆಯಲ್ಲಿ ಬುದ್ಧಿವಾದ ಎಲ್ಲ ತುಂಬಿ ತುಂಬಿ ಕಳಿಸಿದ್ರು ನೋಡು! ನಾನೂ ಸಹ ಹಿರಿಯರು ಹೇಳಿದ ಹಾಗೆ ನಡಕೊಳ್ತಿದ್ದೆ!!' ಮನಸ್ಸು ಆಹ್ಲಾದಕರವಾಗಿದ್ದಾಗ ಆಕೆ ತನ್ನ ರಸಮಯ ನೆನಪಿನ ಪಿಠಾರೆಯನ್ನು ಓಪನ್ ಮಾಡುತ್ತಿದ್ದಳು.

     ನನಗೆ ನೆನಪಿರುವಂತೆ ಆಕೆ ತನ್ನ ಹದಿನೈದನೇ ವಯಸ್ಸಿಗೆ ಮದುವೆಯಾಗಿ ಹೆಬ್ರಿಗೆ ಬಂದಳು. ಆಕೆಯೇ ಹೇಳಿದಂತೆ ಮಂಕು ಅಂದ್ರೆ ಮಂಕು. ಬಂದ ಎರಡು ದಿನಗಳಲ್ಲಿ ಅತ್ತೆಗೆ-ನಮ್ಮ ಅಜ್ಜಿಗೆ - ಇವಳ ಬಂಡವಾಳ ಗೊತ್ತಾಯ್ತು. ನಮ್ಮ ಅಜ್ಜಿಯನ್ನು ನಾನು ನೋಡಿಲ್ಲ, ಆಕೆ ಸಾಕ್ಷಾತ್ ದೇವತಾ ಸ್ತ್ರೀ. ಈ ಪೆದ್ದು ಹುಡುಗಿಯನ್ನು ಹೇಗೆ ಸುಧಾರಿಸೂದು ಎಂದು ಅತ್ತೆಯ ಚಿಂತೆ.

     ನಮ್ಮ ದೊಡ್ಡಮ್ಮನ ತವರು ಶೃಂಗೇರಿಯ ಹೆಸರಾಂತ ಮನೆತನ. ಸಂಪ್ರದಾಯಸ್ಥ ಮತ್ತು ದೈವಭೀರು ಮಂದಿ. ಊರಿನ ಆಢ್ಯ ವ್ಯಾಪಾರಸ್ಥ ಕುಟುಂಬ. ಮನೆಯ ಮಗಳು ಒಳ್ಳೆಯ ಘರಾಣೆಯಲ್ಲೇ ಲಗ್ನವಾಗಿ ಹೋಗಿದ್ದಾಳೆ ಎಂಬ ಸಂತೋಷವೂ ಇತ್ತು. ದೊಡ್ಡಮ್ಮ ಸಹ ಮನೆಯಲ್ಲಿ ಒಳ್ಳೆಯ ಸುಸಂಸ್ಕೃತ ನಡೆನುಡಿಗಳನ್ನು ಕಲಿತು ಬಂದವಳು, ಆದರೇನು ಮಾಡೂದು? ಸ್ವಲ್ಪ ಪೆದ್ದು. ಹುಡೂಗಿ ತಾನೇ! ಗುರುಹಿರಿಯರಿಗೆ, ಗಂಡನಿಗೆ ತಗ್ಗಿ ಬಗ್ಗಿ ನಡೆಯಬೇಕು, ಎದುರುತ್ತರ ಕೊಡಬಾರದು, ಮಾತಾಡು ದಿದ್ದರೂ ಆದಷ್ಟು ವಿನಯದಿಂದ ಮೆಲ್ಲಗೇ ಆಡಬೇಕು....... ಇತ್ಯಾದಿ ಸದ್ಗೃಹಿಣಿ ಪತಿವೃತಾ ಸ್ತ್ರೀಗೆ ಅನ್ವಯವಾಗುವ ಎಲ್ಲ ಪಾಠಗಳನ್ನು ಬಾಯಿಪಾಠ ಮಾಡಿಕೊಂಡು ಬಂದಿದ್ದಳು.

     "ಅಲ್ಲ ಮಾರಾಯ! ಪತಿಯೇ ಪರಮೇಶ್ವರ ಅಂದರೆ ಗಂಡನೇ ದೇವರು, ದಿನಾ ಅವರ ಕಾಲು ತೊಳೆದು ನೀರು ಕುಡೀಬೇಕು ಅಂತ ನನಗೆ ಹೇಳಿದ್ರು. ನಾನು ಹೇಳಿಕೊಟ್ಟ ಹಾಗೆ ಸುಮಾರು ತಿಂಗಳೊಂದೆರಡು ತಿಂಗಳಿರಬಹುದು, ಬೆಳಗ್ಗೆ ಇವರ ಕಾಲು ತೊಳೆದು ನೀರು ಕುಡಿತಿದ್ದೆ. ನಂತರ ಅತ್ತೆಯವರಿಗೆ ಈ ಸಂಗತಿ ಗೊತ್ತಾಯಿತು. ಅದು ಹಾಗಲ್ಲ ಮಗಾ, ಕಾಲು ತೊಳೆದು ನೀರು ಕುಡಿಯೂದು ಅಂದರೆ ಅದೊಂದು ಹೇಳುವ ಕ್ರಮ, ಗಂಡನ ಮೇಲೆ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಬೇಕು. ನಾಳೆಯಿಂದ ನೀರು ಕುಡಿಯೂದು ಕೈದು ಮಾಡು ಅಂತ ನಿಲ್ಸಿದ್ರು ನೋಡು, ಹಿ ಹ್ಹಿ ಹ್ಹಿ' ಎಂದು ನಕ್ಕಿದ್ದಳು.😂😂

     ಮನೆಯ ಕೆಲಸಕಾರ್ಯಗಳ ಜಬಾದಾರಿ ಅತ್ತೆಯದು, ಅವರಿಗೆ ಸಹಕಾರ ಇವಳದು. "ಒಂದು ದಿನ ಅಂಬಡೆ ಗೊಜ್ಜು ಮಾಡಲು ಅಮಟೆಕಾಯಿ ನಾಲ್ಕನ್ನು ಕಡೆಯಲು ಹೇಳಿದ್ರು ಅಂತ ಕೂತೆ ನೋಡು, ಕಡೆಯುವ ಕಲ್ಲಲ್ಲಿ ಅವು ನಿಲ್ತಾವಾ! ಗಡ ಬಡಾ ಕಟಾ ಪಟಾ ಅಂತಾ ಕಾಯಿಗಳು ಕಡೆಯುವ ಕಲ್ಲಿಂದ ಉದುರುದುರಿ ಹೊರಬೀಳೂದು ನಾನು ಪುನಾ ಅವನ್ನು ಹೆಕ್ಕಿ ಕಡೆಯಲು ಉರುಡಾಟ ಮಾಡೂದು! ಏನು ಮಾಡಿದರೂ ಅಮಟೇಕಾಯಿ ನಂಯಾ ಆಗೂದಿಲ್ಲ, ನನಗೆ ಕೇಳಲು ಹೆದರಿಕೆ. 'ಕಸ್ಸನೆ ಪುತಾ! ಆಂಬಾಡೋ ವಾಟ್ಟೀ ಮ್ಹಳೇರೀ ಬದ್ದs ವಾಟ್ಟಿತಾ ಆಸ್ಸಕೀ?' ಅತ್ತೆ ಕೇಳಿದಾಗ ಮೆಲ್ಲನೇ ಹೌದು ಅಂದೆ. 'ಹೇ ದೇವಾ! ಹೇ ಚೆಲ್ಯೇಲೆ ಜಾವ್ಚೇ ನ್ಹಂಯೀ! ಆಂಬಾಡೋ ವಾಟ್ಟೀ ಮ್ಹಳೇರೀ ಧಾಡ್ಡೋನು ಸೋಲ ಕಾಣು ಸೋಯಿ ಮಿರ್ಸಾಂಗ ಒಟ್ಟು ವಾಟ್ಟೂಚೇ, ಆಸ್ಸೊಂ ಹೆಕಡೇ ಯೋ ಹಾಂವ ಕರತಾಂ' ನನಗೆ ಆಗ ಗೊತ್ತಾದದ್ದು ನೋಡು ಅಂಬಡೇ ಗೊರಟು ನಂಯ ಆಗೂದಿಲ್ಲ ಅಂತ." ಪುನಃ ತನ್ನ ಬುದ್ಧಿವಂತಿಕೆಯ! ಎಪಿಸೋಡು ಹೇಳಿ ಕಿಸಿಕಿಸಿ ನಕ್ಕಳು.😊😀😁😂

     "ಆನೇಕ ಪಟೀ ಕಸ್ಸಲೆಂ ಜಾಲ್ಲೆಂ ಗೊತ್ತಸ್ವೇ.... ಯಾವುದೋ ಗೊಜ್ಜು ಮಾಡಲಿಕ್ಕಿತ್ತು, 'ವೈಗೋ ಹಾಂವ ನ್ಹಾವ್ಚೆ ವತ್ತಾ, ತೇ ಗೊಜ್ಜಾ ಏಕು ಲೊಸಣೇ ಕಾಂದೊ ಉಡಯಿ, ರೂಚೇಕ, ಇತೇಂ' ಅತ್ತೆಯೇನೋ ಹೇಳಿ ಹೋದರು ನನಗೆ ಸಮಸ್ಯೆಗೇ ಬಿತ್ತು. ಬೆಳ್ಳುಳ್ಳಿ ಗಡ್ಡೆ ಎಷ್ಟು ದೊಡ್ಡದು ಅಂತ ಹೇಳಲಿಲ್ಲ ಮತ್ತು ಎಷ್ಟು ದೂರ ನಿಂತು ಬಿಸಾಡಬೇಕು ಅದೂ ಹೇಳಲಿಲ್ಲ. ಆದರೂ ಅಜಮಾಯಿಷು ನೋಡಿಕೊಂಡು ಒಂದು ಬೆಳ್ಳುಳ್ಳಿ ಗಡ್ಡೆಯನ್ನು ಗೊಜ್ಜು ಮಾಡಿಟ್ಟ ಪಾತ್ರೆಯಲ್ಲಿ ಬಿಸಾಡಿದೆ.

     "ಮಧ್ಯಾಹ್ನ ಗಂಡಸರು ಊಟಕ್ಕೆ ಬಂದವರು, ಯಾವುದೇ ಕಮಕ್ ಕಿಮಕ್ ಅನ್ನದೇ ಬಾಯಿ ಮುಚ್ಚಿಕೊಂಡು ತಿಂದು ಹೋದರು! ಆದರೆ ದೇವು ಮಾತ್ರ (ನಮ್ಮ ತಂದೆ) ಒಂದು ರೀತಿ ಮುಖ ಮಾಡಿದ, ಅವನೂ ಏನೂ ಹೇಳಲಿಲ್ಲ. ಕೊನೆಗೆ ಅತ್ತೆಯವರಿಗೆ ಬಡಿಸುವಾಗ ಆ ಇಡೀ ಬೆಳ್ಳುಳ್ಳಿ ಗಡ್ಡೆ ಅವರಿಗೇ ಸಿಗಬೇಕೆ! ಒಂದು ಸಲ ನನ್ನ ಮುಖ ನೋಡಿದರು, ಏನೂ ಹೇಳಲಿಲ್ಲ ಆದರೆ ಅವರ ಮೌನವು ನೂರೆಂಟು ಮಾತುಗಳನ್ನು ಹೇಳಿದವು!" ಮುಂದಿನ ದಿನಗಳಲ್ಲಿ ಅವರೆಷ್ಟು ವಿಧಗಳಲ್ಲಿ ನನ್ನನ್ನು ಪ್ರೀತಿ ಪ್ರೇಮಗಳಿಂದ ತಿದ್ದಿದರು! ಅವರ ಸೇವೆ ಹೆಚ್ಚು ಮಾಡುವ ಯೋಗ ನನ್ನದಾಗಲಿಲ್ಲ......''

     ಮೇಲಿನವು ನಮ್ಮ ದೊಡ್ಡಮ್ಮನ ಮುಗ್ಧತೆಯ ಉದಾಹರಣೆ. ಸ್ವಲ್ಪ ನಗು ಬರುತ್ತದೆ, ಆದರೆ ನಮ್ಮ ದೊಡ್ಡಮ್ಮನಂತಹ ಮಹಿಳಾಮಣಿ, ಗೌರವಾನ್ವಿತ ಪತಿವೃತಾ ಸ್ತ್ರೀಯರು ನಾಡಲ್ಲಿ ಬಹು ವಿರಳವಾಗಿ ಸಿಗುತ್ತಾರೆ! ಹಿರಿಯರ ಮೇಲೆ ಭಕ್ತಿ ಗೌರವ, ಕಿರಿಯರಲ್ಲಿ ಪ್ರೀತಿ, ಓರಗಿತ್ತಿಯವರಲ್ಲಿ ಪ್ರೇಮ ವಾತ್ಸಲ್ಯ ಇವೆಲ್ಲವನ್ನು ಅವರಿಂದ ಕಲಿಯಬೇಕು.

      ಆಕೆ ಮತ್ತು ಅಂದಿನ ಹಿರಿಯರು ಶಾಲಾ ಶಿಕ್ಷಣ ಹೆಚ್ಚು ಹೊಂದಿರದಿದ್ದರೂ ಅವರ ಜ್ಞಾನ ಇಂದಿನ ಶಿಕ್ಷಿತ! ಜನಾಂಗಕ್ಕಿಂತ ಎಷ್ಟೋ ಪಾಲು ಹೆಚ್ಚಿನದು. ನನಗೆ ಅನೇಕ ವೇಳೆ ದೊಡ್ಡಮ್ಮನೊಡನೆ ಮಾತುಕತೆಗಳಿಗಿಂತ ಅವಳ ಸಾನ್ನಿಧ್ಯದ ಮೌನವೇ ಹೆಚ್ಚು ಪ್ರಿಯವಾಗುತ್ತಿತ್ತು ........

No comments:

Post a Comment