Saturday, July 4, 2020

ಭಕ್ತಿಯ ಒಂದು ಪರಿ.


     ಕುರುಡನಿಗೆ ಅವನು ಸೋಲಲಿಲ್ಲ...

     ಮಠದ ಬಾಗಿಲಲ್ಲಿ ಅಂಧನೊಬ್ಬ ನಿಂತಿದ್ದ. ಬಟ್ಟೆಗಳು ಹಳತಾಗಿ ಅಲ್ಲಲ್ಲಿ ಹರಿದಿದ್ದವು. ಗಡ್ಡ ಕ್ಷೌರವಿಲ್ಲದ ಮುಖ, ಊಟವೂ ಆಗಿದ್ದಿರಲಿಕ್ಕಿಲ್ಲ ಎಂದು ಮಠದ ಅಧಿಕಾರಿಗಳು ಆತನನ್ನು ಕರೆದು ಊಟ ನೀಡಿದರು. ಸ್ವಾಮಿಗಳ ಬಳಿ ತನ್ನದೊಂದು ಬಿನ್ನಹ ಇದೆ ಎಂದು ಅರಿಕೆ ಮಾಡಿಕೊಂಡಂತೆ ಗುರುಗಳ ಭೇಟಿಯ ಅವಕಾಶ ನೀಡಲಾಯಿತು.

     "ನಾನು ಕಾರ್ಕಳ ತಾಲೂಕಿನ ಹೆಬ್ರಿಯಿಂದ ಬರುತ್ತಿದ್ದೇನೆ. ಊರಲ್ಲಿ ಜೀವನ ನಡೆಸಲು ಬಹಳ ಕಷ್ಟವಾಗಿದೆ. ವ್ಯಾಪಾರದಲ್ಲೂ ತುಂಬ ಲಾಸ್ ಆಗಿದೆ. ಆದ್ದರಿಂದ ಮಠದ ವತಿಯಿಂದ ಏನಾದರೂ ಆರ್ಥಿಕ ಸಹಾಯ ಸಿಕ್ಕಿದರೆ ಸಣ್ಣಪುಟ್ಟ ವ್ಯಾಪಾರ ಸುರು ಮಾಡಿ ಮಠದ ಹೆಸರು ಹೇಳಿ ಒಂದು ಬಡ ಕುಟುಂಬ ಬದುಕು ಸಾಗಿಸುತ್ತದೆ." ಬಂದ ಯಾತ್ರಿಕ ಬಿನ್ನಹ ಮಾಡಿಕೊಂಡರು.

     "ಇಲ್ಲಿ ಮಠದಲ್ಲಿ ವ್ಯಾಪಾರ ವಹಿವಾಟು ಮಾಡಲಿಕ್ಕೆಲ್ಲ ಹಣ ಸಿಗೂದಿಲ್ಲ, ಶ್ರೀದೇವರಲ್ಲಿ ಭಕ್ತಿ ವಿಶ್ವಾಸ ಇಡಿ. ದೇವರು ಕೈ ಬಿಡುವುದಿಲ್ಲ." ಆ ಸಂದರ್ಭದಲ್ಲಿ ಗುರುಗಳ ಮನಸ್ಸು ಹೇಗಿತ್ತೋ ಏನೋ, ಬಂದಂತಾ ಯಾಚಕನ ನಿರೀಕ್ಷೆ, ಆಸೆ ಹುಸಿಯಾಯಿತು.

     "ದೇವರಲ್ಲಿ ಭಕ್ತಿ, ವಿಶ್ವಾಸ ಎಲ್ಲ ಇದೆ. ಆದರೆ ಈಗ ಅರ್ಜಂಟಿಗೆ ಮಠದ ಮೇಲೆ ಬಹಳ ಆಸೆ ಇಟ್ಟುಕೊಂಡು ಬಂದಿದ್ದೇನೆ. ಗುರುಗಳು ಕೃಪೆ ಮಾಡಬೇಕು." ಪುನಃ ವಿನಂತಿ ಮಾಡಿಕೊಂಡರು. ಅವರ ವೇಷ ಭೂಷೆ, ದೈನ್ಯತೆ ಇತ್ಯಾದಿಗಳನ್ನು ನೋಡಿ ಗುರುಗಳಿಗೆ ಕನಿಕರವಾದರೂ ಈ ಕುರುಡ ಏನು ತಾನೇ ವ್ಯಾಪಾರ ಮಾಡಿಯಾನು? ಎಂದೆಣಿಸಿದರೋ ಏನೋ ಇವರ ಬಿನ್ನಹಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. 'ದೇವರ ಮೇಲೆ ಭರವಸೆ ಇಡು, ಎಲ್ಲ ಸರಿಹೋಗುತ್ತದೆ ನಮ್ಮ ಆಶೀರ್ವಾದವಿದೆ.' ಎಂದು ಹರಸಿದರು. ಕುರುಡ ಯಾಚಕ ನಿರಾಸೆಗೊಂಡ.

     ಊರಲ್ಲಿ ವ್ಯಾಪಾರದಲ್ಲಿ ಭಾರೀ ಲುಕ್ಸಾನು ಆಗಿ ಮುಂದಿನ ದಿಕ್ಕು ತೋಚದಂತಹ ಪರಿಸ್ಥಿತಿ ಉಂಟಾದಾಗ ನಮ್ಮ ಅಜ್ಜ ದಾಮೋದರ ಮಲ್ಯ-ದಾಮ್ಮಲ್ಲೋ- ಏಕಾಏಕಿ ಯಾರಿಗೂ ಹೇಳದೆ ಊರು ಬಿಟ್ಟು ದೇಶಾಂತರ ಹೋಗಿ ಕೊನೆಗೆ ಕೊಚ್ಚಿಯನ್ನು ತಲಪಿ ಮಠದ ಬಾಗಿಲು ತಟ್ಟಿದ್ದರು. ಮೇಲೆ ತಿಳಿಸಿದ ಕುರುಡ ಅವರೇ-ಕುರುಡು ಮಲ್ಯರು. ಮಠದಲ್ಲಿ ಉಳಕೊಂಡಿದ್ದರು. ಮೊದಲೇ ಕುರುಡರು, ಈಗ ಯಾವುದೇ ಪರಿಹಾರ ತೋಚದೇ ಮನಸ್ಸಲ್ಲೂ ಅಂಧಕಾರ ತುಂಬಿಕೊಂಡಿತು. ಗುರುಗಳಿಂದ, ಮಠದಿಂದ ಯಾವುದೇ ಉತ್ತೇಜನ ಸಿಕ್ಕಿರಲಿಲ್ಲ. ಕೇವಲ ಆಶೀರ್ವಾದಗಳು ಲಭ್ಯವಾಗಿದ್ದವು. ಮನಸ್ಸು ಖಿನ್ನವಾಗಿತ್ತು. ಅದೇ ಸಮಯದಲ್ಲಿ ಊರಿಂದ ಬಂದವರೊಬ್ಬರು ಇವರು ಕೊಚ್ಚಿಯಲ್ಲಿರುವ ಖಬರನ್ನು  ಊರಲ್ಲಿ ತಿಳಿಸಿ ಉಪಕರಿಸಿದ ಕಾರಣ ವಾಪಸು ಮನೆ ತಲಪಿದರು. 'ದೇವರು ದೊಡ್ಡವನು, ನಂಬಿದವರ ಕೈಯ್ಯನ್ನು ಖಂಡಿತಾ ಹಿಡಿದೆತ್ತಿ ಉದ್ಧರಿಸುತ್ತಾನೆ ಎಂದು ಮಕ್ಕಳು ಬಂಧುಗಳು ಸಮಾಧಾನಪಡಿಸಿದರು. ಇವರೂ ಅಂತೆಯೇ ಒಪ್ಪಿಕೊಂಡರು. ಮಠದ ಮೇಲಿನ ಬೇಸರವನ್ನೂ ಮರೆತರು. ಭಗವಂತ ಎಂದಿಗೂ ತಮ್ಮ ಅಂದರೆ ಸಂಕಷ್ಟದಲ್ಲಿರುವ ಭಕ್ತರನ್ನು ಬಿಟ್ಟುಹಾಕುವುದಿಲ್ಲ ಎಂದವರ ಧೃಡನಂಬಿಕೆ...                                                                                                                 ....೦೦0೦೦....

     ಒಡಿಶಾದ ಮಹಾಕಾವ್ಯ ಗೀತಗೋವಿಂದ. ಅದನ್ನು ರಚಿಸಿದವರು ಶ್ರೀಕೃಷ್ಣನ ಪರಮಭಕ್ತ ಜಯದೇವ. ಪರಮಾತ್ಮನೇ ಈ ಕಾವ್ಯವನ್ನು ತಮ್ಮಿಂದ  ಬರೆಸುತ್ತಿದ್ದಾನೆ ಎಂದು ಅವರ ಪೂರಾ ನಂಬಿಕೆ. ಕಾವ್ಯರಚನೆ ಪ್ರಗತಿಯಲ್ಲಿತ್ತು.. ಒಂದೆಡೆ ರಾಧೆಯು ಪ್ರೇಮಸಲ್ಲಾಪದ ಸಮಯದಲ್ಲಿ ಹುಸಿಮುನಿಸಿನಿಂದ ತನ್ನ ಪ್ರಿಯತಮ ಕೃಷ್ಣನ ಗಲ್ಲಕ್ಕೆ ಏಟು ಕೊಡುವ ಸನ್ನಿವೇಶ ಬಂದಿತು. ಕವಿಯೋ ಶ್ರೀಕೃಷ್ಣನ ಪರಮಭಕ್ತ. ತಾನು ಭಜಿಸುವ ದೇವನಿಗೆ ಹೊಡೆಸುವುದೇ? ಛೆ!ಛೇ! ಮನಸ್ಸು ಸಂದಿಗ್ಧದಲ್ಲಿ ಬಿತ್ತು. ಇಡೀ ದಿನ ಯೋಚನೆಯಲ್ಲಿ ಬಿದ್ದ ಕವಿಯು ತಾನು ಬರೆದ ಸಾಲುಗಳನ್ನು ಕಾಟುಹೊಡೆದು ಮಲಗಿದರು. ಅವರಿಗೆ ಸರಿಯಾದ ನಿದ್ದೆಯೂ ಬರಲಿಲ್ಲ.

     ಮರುದಿನ ಬೆಳಗ್ಗೆ ಎಂದಿನಂತೆ ಎದ್ದು ನದೀತೀರಕ್ಕೆ ಪದ್ಧತಿಯಂತೆ ಹೊರಟರು. ಮನೆಯಲ್ಲಿ ಪತ್ನಿಯು ಕೆಲಸಕಾರ್ಯಗಳಲ್ಲಿ ನಿರತಳಾಗಿದ್ದಳು. ಕೊಂಚ ಸಮಯದಲ್ಲೇ ಕವಿಗಳು ವಾಪಸು ಬಂದರು. 

     "ಇದೇನು ಇವತ್ತು ಬೇಗನೆ ಬಂದಿರಿ?" ಪತ್ನಿ ಕೇಳಿದಳು.

     "ನಿನ್ನೆ ಬರೆದ ಕಾವ್ಯ ಅಪೂರ್ಣವಾಗಿತ್ತು. ಅದನ್ನು ಪೂರ್ತಿ ಮಾಡೊಣವೆಂದು ಬೇಗನೆ ವಾಪಸು ಬಂದೆ." ಕವಿಗಳು ಉತ್ತರಿಸಿ ಬೆಳಗಿನ ಫಲಾಹಾರಗಳನ್ನು ಸ್ವೀಕರಿಸಿ ಕೋಣೆಗೆ ಹೋಗಿ ಬರಹದಲ್ಲಿ ತಲ್ಲೀನರಾದರು. ಕೊಂಚ ಹೊತ್ತಿನಲ್ಲಿ ಹೊರಬಂದು 'ಒಂದು ತುರ್ತು ಕೆಲಸ ನೆನಪಾಯಿತು. ಅದನ್ನು ಮುಗಿಸಿ ಬರುತ್ತೇನೆ.' ಎಂದು ಹೊರಹೊರಟರು. ಮಡದಿ ತನ್ನ ಗೃಹಕೃತ್ಯಗಳಲ್ಲಿ ನಿರತಳಾದಳು. 

     ಸ್ವಲ್ಪ ಸಮಯದಲ್ಲಿ ಬಾಗಿಲು ತಟ್ಟಿದ ಶಬ್ದವಾಯಿತು. ಹೊರಗಿನಿಂದ ಬಂದ ಕವಿಗಳು 'ಬೇಗನೇ ಊಟ ಹಾಕು ತುಂಬಾ ಬರೆಯಲಿಕ್ಕಿದೆ.' ಎಂದು ಅವಸರಿಸಿದರು.

     "ಈಗ ತಾನೇ ಊಟ ತಿಂಡಿ ಸಾಂಗವಾಗಿ ಮುಗಿಸಿ ಹೊರಗೆ ಹೋದವರು ಪುನಃ ಊಟವೆಂದರೆ ಹೇಗೆ?" ಪತ್ನಿಗೆ ಆಶ್ಚರ್ಯ!

     "ನಾನು ಈಗ ತಾನೆ ಊಟ ಮಾಡಿದೆನೇ? ಸುಳ್ಳೇಕೆ ಹೇಳುವಿ? ನಾನು ಈಗಷ್ಟೇ ನದೀತೀರದಿಂದ ಬರುತ್ತಿದ್ದೇನೆ!"

     "ನಿಮ್ಮ ಬಳಿ ನಾನೇಕೆ ಸುಳ್ಳು ಹೇಳಲೀ! ನೀವು ಆಗಲೇ ಬಂದು ಊಟತಿಂಡಿ ಮುಗಿಸಿ ಕಾವ್ಯರಚನೆ ಮಾಡಲಿಕ್ಕಿದೆ. ಮಧ್ಯೆ ತೊಂದರೆ ಮಾಡಬೇಡವೆಂದು ಹೇಳಿ ಕೆಲಸ ಮುಗಿಸಿ ಪೇಟೆಗೆ ಹೋದವರಲ್ಲವೇ?"

     ಕವಿಗಳಿಗೆ ಆಶ್ಚರ್ಯವಾಯಿತು. ಏನೋ ಹೊಳೆದು ಒಳಗೆ ಹೋಗಿ ನೋಡಿದರು. ತಾನು ಹಿಂದಿನ ದಿನ ಅನುಮಾನದಿಂದ ಕಾಟುಹೊಡೆದಿದ್ದ ಸಾಲುಗಳನ್ನು ಪುನಃ ಬರೆಯಲಾಗಿತ್ತು. "ಇದನ್ನು ಯಾರು ಬರೆದರು?"
  
     "ನೀವೇ ತಾನೆ ಬೆಳಗ್ಗೆ ಬಂದು ಬರೆದದ್ದು." ಪತ್ನಿಯಿಂದ ಜವಾಬು ಬಂತು. 

     ಕವಿಗಳು ಭಾವಪರವಶರಾದರು "ದೇವೀ, ನೀನು ಭಾಗ್ಯವಂತಳು. ಬೆಳಗ್ಗೆ ಬಂದವನು ನಾನಲ್ಲ, ಸಾಕ್ಷಾತ್ ಭಗವಂತನು. ನಿನ್ನ ಭಾಗ್ಯ ಪುಣ್ಯ ವಿಶೇಷಗಳಿಂದಾಗಿ ನಿನಗೆ ಕೈಯಾರೆ ಅವನ ಸೇವೆ ಮಾಡುವ ಪುಣ್ಯಾವಕಾಶ ಲಭಿಸಿತು. ಅದಿರಲಿ ಈಗ ಅವನು ಎಲ್ಲಿ ಹೋದ?" ಪರಿಪರಿಯಾಗಿ ಪತ್ನಿಯನ್ನು ಪ್ರಶಂಸಿಸಿದರು ಕವಿವರ್ಯರು.
 
     ಭಗವಂತನು ಭಕ್ತಾಧೀನ. ಇದು ಒಡಿಶಾದ ಜನಪ್ರಿಯ ಕತೆ. ನಮ್ಮ ಅಮ್ಮ ನನಗೆ ಮನಮುಟ್ಟುವಂತೆ ಪ್ರೀತಿಯಿಂದ ವರ್ಣಿಸಿದ ಕತೆ.

                                ....00೦00....

     ಚೋಖಾಮೇಳಾ ಪರಿಶಿಷ್ಟ ವರ್ಗಕ್ಕೆ ಸೇರಿದವನು. ಪಾಂಡುರಂಗನ ಪರಮಭಕ್ತ. ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಪುರಂದರ ವಿಠಲನ ದರ್ಶನ ಭಾಗ್ಯ ಲಭಿಸೀತೇ ಎಂಬ ಹಂಬಲದಲ್ಲಿದ್ದವನು. ಆತನ ಬಹುದಿನಗಳ ಬಯಕೆಯಂತೆ ಸಂತರ ಟೋಳಿಯೊಂದರ ಒಟ್ಟಿಗೆ ಪಂಢರಾಪುರಕ್ಕೆ ಯಾತ್ರೆ ಹೋಗುವ ಸದವಕಾಶ ಲಭಿಸಿತು. ಪಂಢರಾಪುರ ವಿಟಲನ ದರುಶನದಿಂದ ತನ್ನ ಇಂದಿನ ಹಾಗೂ ಜನ್ಮಜನ್ಮಾಂತರದ ಕರ್ಮಗಳೆಲ್ಲ ತೀರ್ಮಾನವಾದವು ಎಂದು ಪರಮಾನಂದ ಹೊಂದಿ ನಾಮಸ್ಮರಣೆ ಯಲ್ಲಿ ತಲ್ಲೀನನಾಗಿ ಇಹದ ಪರಿವೆಯನ್ನೇ ಮರೆತಿದ್ದನು. ಮಠದ ಮುಖ್ಯ ಆಚಾರ್ಯರು ಬಂದಾಗ ಈತ ತನ್ನದೇ ಆದ ಭಾವ ಸಮಾಧಿಯಲ್ಲಿದ್ದನು. ಅರೇ! ದೇವರ ಪವಿತ್ರ ಸನ್ನಿಧಿಯಲ್ಲಿ ಒಬ್ಬ ಹೊಲೆಯ ಹೊಕ್ಕಿದ್ದಾನೆ! ಇವನ ಮದವೆಷ್ಟು! ಆಚಾರ್ಯರಿಗೆ ಬಂತು ಎಲ್ಲಿಲ್ಲದ ಕ್ರೋಧ. ಚೋಖಾಮೇಳಾನನ್ನು ಝಾಡಿಸಿ ಎಬ್ಬಿಸಿ ದವಡೆಗೆ ಬಲವಾಗಿ ಬಾರಿಸಿ ಬೈದು ಭಂಗಿಸಿ ಹೊರ ನೂಕಿದರು. ಮತ್ತು ಇಡೀ ದೇವಳವನ್ನು ಪುನಃ ಶುದ್ಧವಾಗಿ ತೊಳೆದು ಕ್ರಮವಾಗಿ ಹೊಸತಾಗಿ ಪೂಜಾವಿಧಿಗಳನ್ನು ನೆರವೇರಿಸಿ ಕ್ಷಮಾಪಣಾವಿಧಿ ಸಹ ನಡೆಸಿ ಮನೆಗೆ ಹೋದರು.

     ಮರುದಿನ ಯಥಾಪ್ರಕಾರ ದೇವಳದ ಬಾಗಿಲು ತೆರೆದು ದೇವರ ಅಭ್ಯಂಜನ ಅಲಂಕಾರ ಮುಂತಾದ ವಿಧಿಗಳನ್ನು ನೆರವೇರಿಸುವಾಗ ಅವರಿಗೆ ಮೂರ್ತಿಯ ಮುಖದಲ್ಲಿ ಏನೋ ವ್ಯತ್ಯಾಸ ಕಂಡುಬಂತು. ದಿಟ್ಟಿಸಿ ನೋಡುವಾಗ ದೇವರ ಎಡಬದಿಯ ಗಲ್ಲವು ಊದಿಕೊಂಡಿತ್ತು. ಆಚಾರ್ಯರಿಗೆ ಅದನ್ನು ನೋಡಿ ಆಘಾತವಾಯಿತು. ಅವರೂ ಜ್ಞಾನಿಗಳೇ. ಆದರೆ ವರ್ಷಾನುಗಟ್ಟಳೆಯ ಸಂಪ್ರದಾಯಗಳಿಗೆ ಜೋತುಬಿದ್ದವರಾದ್ದರಿಂದ ಹಿಂದಿನ ದಿನ ಹಾಗೆ ವರ್ತಿಸಿದ್ದರು. 
     
     ಈಗ ಜ್ಞಾನೋದಯವಾಯಿತು.'ವಿಠಲಾ, ವಿಠಲಾ ನಿನ್ನ ಮಹಿಮೆ ಅಪಾರ. ಅದನ್ನು ಅರಿಯದೇ ಮೂರ್ಖನಾದೆನಲ್ಲಾ . . .  ಎಲ್ಲೆಲ್ಲೂ ನೀನಿರುವೆ, ಆದರೆ ನಿನ್ನೆ ನಿನ್ನನ್ನು ಅರಿಯದೇ, ಗುರುತಿಸದೇ ಪತಿತನಾದೆನೇ! ದೇವ ದೇವಾ ಎಲ್ಲಿರುವೆ?' ಎಂದು ವಿಲಪಿಸುತ್ತಾ ಇಡೀ ಪಂಢರಾಪುರವನ್ನು ಹುಡುಕಿ ಕೊನೆಗೆ ಊರ ಹೊರಗೆ ವಿಠಲನ ಧ್ಯಾನದಲ್ಲಿ ಮಗ್ನನಾಗಿದ್ದ ಚೋಖಾಮೇಳಾನ ಪಾದಗಳಿಗೆ ಬಿದ್ದು ಕ್ಷಮಾಪಣೆಗಳನ್ನು ಕೇಳಿ ಆತನಿಂದ ಬೋಧನೆಗಳನ್ನು ಕೇಳಿ ಧನ್ಯರಾದರು...

     ಇದೂ ಸಹ ನಮ್ಮಮ್ಮ ಹೇಳಿದ ಕತೆಯೆಂಬ ನೆನಪು.

                                  ....00೦00....

     ಇವೆಲ್ಲ ಏಕೆ ನೆನಪಾಗುತ್ತವೆ?

     ದಿನನಿತ್ಯವೂ 'ಉದಯಕಾಲದೊಳೆದ್ದು ಗಡಗಡ ನಡುಗುತ' ಎಂಬ ಪುರಂದರದಾಸರ ಭಜನೆಯಂತೆ ದೇವರ ಪೂಜೆಯನ್ನು ಕಾಟಾಚಾರವೆಂಬಂತೆ ಅಥವಾ ತಾನೊಬ್ಬ ಮಹಾ ತಿಳಿದವನು, ಮಹಾಭಕ್ತ ಎಂದು ಲೋಕಕ್ಕೆ ತಿಳಿಯಬೇಕೆಂದು ಮಾಡುವ ಡಂಬಾಚಾರಗಳಿಗೆ ಯಾವುದೇ ಮಹತ್ವವಿಲ್ಲ, ಬದಲಿಗೆ ಸರಳ ಹಾಗೂ ಶುದ್ಧ ಭಕ್ತಿಗೆ ಭಗವಂತನು ಖಂಡಿತವಾಗಿ ಒಲಿಯುತ್ತಾನೆ ಎಂದು ತಿಳಿಸಲು ಇಂಥಾ ಕತೆಗಳನ್ನು ಹೇಳಲಾಗಿದೆ....

     ಸೀತಾನದಿಯಲ್ಲಿ ಒಂದು ಮುಳಿಮಾಡಿನಲ್ಲಿ ಹೋಟ್ಲು ತೆರೆದರು ನಮ್ಮ ಅಜ್ಜ. ಬಡವರೇ ಇರುವ ಬಡ ಊರಲ್ಲಿ ಈ ಹೊಸದಾಗಿ ಬಂದ ಬಡವರು ಬಡ ಹೋಟೆಲೊಂದನ್ನು ತೆರೆದರು. ಏನು ವ್ಯಾಪಾರವಾದೀತು! ಆದರೂ ಆಗಬಹುದಾದ ಚೂರುಪಾರು ವ್ಯವಹಾರವನ್ನು ನಂಬಿ ಬಂದಿದ್ದರು. ಕುರುಕುಟು ಜೀವನ ನಡೆಯುತ್ತಿತ್ತು, ಆರಕ್ಕೆ ಏರಲಿಲ್ಲ ಮೂರಕ್ಕೆ ಬೀಳಲಿಲ್ಲ ಎಂಬ ಗಾದೆಯಿದೆ. ಇವರು ಮಾತ್ರ ಆರಕ್ಕೆ ಏಳದಿದ್ದರೂ ಮೂರರಿಂದ ಕೆಳಕ್ಕೆ ಬಿದ್ದದ್ದೇ ಜಾಸ್ತಿ...
 
     ಜೋರು ಮಳೆಗಾಲದ ಸಮಯ. ಅರುವತ್ತು-ಎಪ್ಪತ್ತು ವರುಷಗಳ ಹಿಂದಿನ ಮಳೆಯ ಆರ್ಭಟ ವೈಭವಗಳನ್ನು ವಿವರಿಸಲು ನನ್ನ ಜ್ಞಾನ ಸಾಲದು. ಧಾರಾಕಾರ ಮಳೆ ಮೂರುದಿನಗಳಿಂದ ಸುರಿಯುತ್ತಿತ್ತು. ಇಡೀ ಸೀತಾನದಿ ನಿರ್ಜನವಾಗಿತ್ತು. ಇನ್ನು ವ್ಯಾಪಾರವೆಲ್ಲಿಯದು! ನಮ್ಮ ಅಜ್ಜಿಯವರು ತನ್ನ ಕಷ್ಟಕ್ಕೆ ಮಣಮಣಿಸದಿದ್ದರೂ ಮನೆಯಲ್ಲಿ ನಿಟ್ಟುಪವಾಸದ ಪರಿಸ್ಥಿತಿ ನಿರ್ಮಾಣವಾಗಿದ್ದುದರಿಂದ ಒಳಗಿನಿಂದ ಪಿರಿಪಿರಿ ಮಾಡುತ್ತಲಿದ್ದರು. ಅಜ್ಜ ಹೊರಗೆ ಜಗಲಿಯ ಮೇಲೆ ಮಲಗಿದ್ದರು. ಹೆಂಡತಿಯ ಗೊಣಗಾಟ ಜಾಸ್ತಿಯಾಯಿತು. 

     "ನೀನು ಇನ್ನು ಮಾತಾಡಬೇಡ, ಅವನಿಗೆ ಹನ್ನೆರಡು ಘಂಟೆಯ ಟೈಮು ಕೊಟ್ಟಿದ್ದೇನೆ. ನೋಡುವ, ನಾನೂ ಕಾಯ್ತಾ ಇದ್ದೇನೆ. ನೀನು ಸ್ವಲ್ಪ ಸುಮ್ಮನೆ ಇರು ಮಾರಾಯಿತಿ."

     "ನೀವು ಯಾರಿಗೆ ಹೇಳಿದ್ದೀರಿ? ಇಷ್ಟೊತ್ತಿಗೆ ಅವರು ಬರಬೇಕಿತ್ತಲ್ಲವೇ?"

     "ನಿನಗೆ ಅರ್ಜಂಟು, ತಾಳು ಹನ್ನೆರಡು ಘಂಟೆಯ ವಾಯಿದೆ ಕೊಟ್ಟಿದ್ದೇನೆ. ನನಗೆ ಧೈರ್ಯ ಉಂಟು, ಅಂವ ವಾಯಿದೆ ತಪ್ಪೂದಿಲ್ಲ."

     "ಎಂತದೋ ಏನೋ, ಯಾರೋ ಏನೋ, ವಾಯಿದೆ ಕೊಟ್ಟು ಕಾಯ್ತಾ ಇದ್ದಾರೆ! ನಮ್ಮ ಹಣೇಬರ ನಮ್ಮದು, ಯಾರೂ ಕೇಳುವವರಿಲ್ಲ...." ಅಜ್ಜಿಯ ಮಣಮಣ ಮುಂದುವರೆಯಿತು. ಅಜ್ಜ ಮಾತಾಡಲಿಲ್ಲ.....

     "ಮಲ್ಲೆರೇ, ಚಾ ಉಂಡೇ?" ಇಬ್ಬರು ರೈತರು-ಪೂಜಾರಿಗಳು- ಬಂದು ವಿಚಾರಿಸಿದರು.

     "ಚಾ ಉಂಟು, ಆದರೆ ಒಂದು ಸಣ್ಣ ಸಮಸ್ಯೆ ಆಗಿದೆ. ಬೆಳಗ್ಗೆ ಹಾಲು ಬರಲಿಲ್ಲವಲ್ಲ ಮಾರಾಯರೇ" ನಮ್ಮ ಗೋವಿಂದಮಾಮ ಒಂದು ಡೈಲಾಗು ಬಿಟ್ಟರು. 
     
     ನಿಜವಾದರೂ ಒಳಗೆ ಹಾಲಲ್ಲ, ಏನೂ ಇರಲಿಲ್ಲ. ಆದರೆ ಬಂದ ಗಿರಾಕಿಯ ಬಳಿ ನಾಸ್ತಿ ಏಕಾಡಬೇಕು ಅವರ ವಿಚಾರ.
ಬಂದವರು ಒಮ್ಮೆ ಸುತ್ತಲೂ ಅವಲೋಕಿಸಿದರು. ಕೂಡಲೇ ಎದ್ದರು. "ಈಗ ಬರ್ತೇವೆ, ಸಾಹುಕಾರರೇ." ಎಂದು ಹೊರಟರು.

     "ನಿಲ್ಲಿ, ನಿಲ್ಲಿ." ಗೋವಿಂದಮಾಮ ತಡೆದರು. ಬಂದ ಗಿರಾಕಿ ತಪ್ಪಿ ಹೋದಾರೋ ಎಂದು ಅವರ ಆತಂಕ.

     "ರಾಬರೇ, ಗಡಿಬಿಡಿ ಕೋರ್ನೂಕಾ." ಅಜ್ಜ ಹೇಳಿದರು.

     "ಛೇ! ಬಂದ ಗಿರಾಕಿ ಹೋಯಿತು."

     "ಹನ್ನೆರಡು ಘಂಟೆಯ ಟೈಮು ಕೊಟ್ಟಿದ್ದೇನೆ ನಾನು. ಟೈಮಾಗುತ್ತ ಬಂತು. ಅವನು ಇವತ್ತು ಗೆಲ್ತಾನೋ ಸೋಲುತ್ತಾನೋ ನಾನೂ ನೋಡೇ ಬಿಡ್ತೇನೆ." ಅಜ್ಜ ಸವಾಲು ಹಾಕಿದರು.....

     "ಯಾರೋ ಓಡುತ್ತಾ ಬರುತ್ತಾ ಇದ್ದಾರೆ." ಮಾಮ ಹೊರಗೆ ನೋಡುತ್ತ ಹೇಳಿದರು.

     "ನಾನು ಹೇಳ್ಲಿಲ್ವಾ, ಹನ್ನೆರಡು ಆಗುತ್ತ ಬಂತು, ಅದಕ್ಕೇ ಓಡಿಸ್ತಾ ಇದ್ದಾನೆ. ಇಲ್ಲದಿದ್ದರೆ ಮರ್ಯಾದೆ ಹೋಗುತ್ತದೆ. ಹೋಗಿ ಹೋಗಿ ಈ ಕುರುಡನ ಹತ್ತಿರ ಸೋಲಲು ಅವನು ತಯಾರಿಲ್ಲ." ಅಜ್ಜ ನಕ್ಕರು.

     ಅಷ್ಟರಲ್ಲಿ ಆ ಇಬ್ಬರು ರೈತರು ಒಂದು ಮುಡಿ ಅಕ್ಕಿ, ಸ್ವಲ್ಪ ತರಕಾರಿ, ಹಾಲು ಹಿಡಕೊಂಡು ಗಡಬಡಿಸಿ ಹೋಟೆಲಿಗೆ ಬಂದಿಳಿಸಿದರು. "ಸಾಹುಕಾರ್‍ರೇ, ನಿಮಗೆ ಇಷ್ಟು ಕಷ್ಟ ಉಂಟು, ಒಂದು ಮಾತು ಹೇಳಲಿಕ್ಕಿಲ್ವಾ? ನಾವೆಲ್ಲ ಇಲ್ಲವಾ. ಊರುಮಂದಿ ಅಂತ ಇರೂದ್ಯಾಕೆ. ಪರಸ್ಪರ ಕಷ್ಟಸುಖಕ್ಕೆ ಆಗದಿದ್ದರೆ ನಾವೆಲ್ಲ ಇದ್ದು ಏನು ಫಲ! ಇಗಳಿ, ಕಿಂಚಿತ್ತು ಅಕ್ಕಿ ಬೇಳೆ ತಂದಿದ್ದೇವೆ. ಆಯ್ತಲ್ಲ ಇನ್ನು ನಮಗೂ ಗರಮ್ ಚಾ ಮಾಡಿಕೊಡಿ ಕಾಂಬ."

     ಕುರುಡನಿಗೆ-ಅಜ್ಜನಿಗೆ-ಅವನು ಸೋಲಲಿಲ್ಲ.

No comments:

Post a Comment