Thursday, September 4, 2025

ಸಂಬಂಧಗಳು....

'ವ್ಹೈರೇ ನರ್ಸಿಮಾ, ಹೇ ಮಾಮ್ಮಾಕ ಸ್ಪೆಷಲ ಕೂಡ ದೀ, ಇವರ ಬಳಿ ಬಾಡಿಗೆ ತೆಗೋಳೋದು ಬೇಡಾ, ಇವರು ಯಾರು ಗೊತ್ತುಂಟಾ? ಪಳ್ಳಿ ಬೈಲೂರಿನ ನಮ್ಮ ತವರು ಮನೆಯ......ಳ ತಮ್ಮನ ಹೆಂಡತಿಯ ತಂಗಿ ಗಂಡನ ಬಾವ. ಇವರಿಗೆ ರಾತ್ರಿ ಊಟಕ್ಕೆ ಇಲ್ಲೇ ಬರಲು ಹೇಳಿದ್ದೇನೆ. ಏನಾದರೂ ತರಕಾರಿ ತಾ.' ನಮ್ಮ ಮಾಮಾಮಾ ಮಗ ನರ್ಸಿಮ್ಮಮಾಮನಿಗೆ ಆದೇಶಿಸಿದರು. 

ನರಸಿಂಹ ಮಾಮನಿಗೆ-ನರ್ಸಿಮ್ಮಮಾಮ-ಮೈಯೆಲ್ಲಾ ಉರಿಯಿತು.! ಆದರೆ ಬಂದ ಗಿರಾಕಿ ಎದುರಲ್ಲೇ ಇದ್ದಾರೆ. ಏನು ಹೇಳಬೇಕೆಂದು ತಿಳಿಯದೆ 'ಹ್ಞಾಂ ಹ್ಞಾಂ' ಎಂದರು. 

'ನೀನು ಬಂದ ಗಿರಾಕಿಗಳನ್ನೆಲ್ಲ ಕರೆದು ಕೂರಿಸಿ ಚರಪೆರೆ ಹರಟೂದೂ ಬೇಡ, ಅವರ ಸುಖಕಷ್ಟ ಮಾತಾಡೂದೂ ಬೇಡ! ನಿನ್ನ ನಾಲಿಗೆ ಅಗತ್ಯಕ್ಕಿಂತ ಜಾಸ್ತಿ ಉದ್ದವುಂಟು, ಬಂದವರೆಲ್ಲರ ಹತ್ರ ಅಧಿಕಪ್ರಸಂಗ ಮಾತಾಡುವ ಜಂಬರ ಏನುಂಟೀಗ? ಇಲ್ಲಿ ಬಾಡಿಗೆ ಜನ ಸಿಗೂದೇ ಕಷ್ಟ, ಇಡೀ ಪೇಟೆ ತಿರುಗಿ ಹುಡುಕಾಡಿ ಗಿರಾಕಿಗಳನ್ನು ಕರಕೊಂಡು ಬಂದರೆ ನೀನವರನ್ನು ಎದುರು ಕೂಡಿಸಿ ಚಂಗಾಯಿ ಮಾತಾಡೂದು, ಅವರ ಜನ್ಮ ಜಾತಕ ಹುಡುಕೋದು! ಇದೆಲ್ಲಾ ಯಾಕೆ ಮಾಡ್ತೀ? ಮೊದಲೇ ಈಗ ಭಾಳ ಮಂದಿಕಾಲ ನಡೀತಾ ಉಂಟು, ಅದರ ಮೇಲೆ ಬಾಡಿಗೆ ಬೇಡ ಅಂತ ಶಿಪಾರಸು! ಊಟಕ್ಕೆ ಬೇರೆ ಹೇಳಿದಾಳೆ!' ಸಂಜೆ ಹೊತ್ತು ನರ್ಸಿಮ್ಮ ಮಾಮ ತಾಯಿಯ ಮೇಲೆ ಗರಮ್ಮಾದರು!! 

'ಹೌದನಾ ನರ್ಸಿಮಾ! ನನಗೆ ಇದೆಲ್ಲ ತಲೆಗೇ ಹೋಗಲಿಲ್ಲ ಮಹರಾಯ, ಈಗ ಎಂತ ಮಾಡೂದು? ಆ ಜನಕ್ಕೆ ರಾತ್ರಿ ಊಟಕ್ಕೆ ಬೇರೆ ಹೇಳಿದ್ದೇನೆ!' ನಮ್ಮ ಅಜ್ಜಿ ಪರಿತಪಿಸಿದರು.

'ಈಗ ಹೇಳಿದ್ದು ಆಯಿತಲ್ಲ, ಇನ್ನು ಮೇಲೆ ಒಂಚೂರು ಜಾಗ್ರತೆಯಿಂದ ಇರು. ಇದು ನಮ್ಮ ಹೆಬ್ರಿಯಲ್ಲ, ಶಿಮೋಗ ಪೇಟೆ. ಕೈಯಲ್ಲಿ ಕಾಸಿದ್ದರೆ ಮಾತ್ರ ನಡೀತದೆ...' ಮಾಮ ತಾಯಿಯನ್ನು ಸಂತೈಸಿದರು.

ಅರುವತ್ತರ ದಶಕದಲ್ಲಿ ಶಿವಮೊಗ್ಗದ ಬೀ ಎಚ್ ರಸ್ತೆಯ ಜ್ಯೋತಿರ್ಭವನ ವಸತಿಗೃಹದ ನಿರ್ವಹಣೆಯನ್ನು ನಮ್ಮ ನರ್ಸಿಮ್ಮ ಮಾಮ ನೋಡಿಕೊಳ್ಳುತ್ತಿದ್ದರು. ಎಸ್ಸೆಲ್ಸಿ ಮುಗಿಸಿದ ನಂತರ ಏನು ಮಾಡುವುದು..? ಕಾಪಾಡಿ, ಸಾಣೆಕಲ್ಲು, ಹರಿಖಂಡಿಗೆ ಇತ್ಯಾದಿ ಗ್ರಾಮದ ಯುವಕರು ವೆಂಕಟರಮಣ ದೇವರಿಗೆ ಅಡ್ಡಬಿದ್ದು ಪರದೇಶಗಳಿಗೆ-ಹೈದರಾಬಾದು, ಮುಂಬಯಿ, ಗದಗ ಇತ್ಯಾದಿ - ಮನೆಯಲ್ಲಿ ತಿಳಿಸಿಯೋ ತಿಳಿಸದೆಯೋ ಗುಳೇ ಹೋಗುತ್ತಿದ್ದರು. ನನ್ನ ತಿಳಿವಳಿಕೆ ಪ್ರಕಾರ ಅನೇಕರನ್ನು ಪರಮಾತ್ಮ ಬಿಟ್ಟು ಹಾಕಿಲ್ಲ. ಕಷ್ಟವೋ ಸುಖವೋ ಹೆಚ್ಚಿನವರು ತಮ್ಮ ಬದುಕನ್ನು ಕಟ್ಟಿಕೊಂಡು ಸುಖವಾಗಿದ್ದಾರೆ...

ನಮ್ಮ ನರ್ಸಿಮ ಮಾಮ ಸಹ ಎಸ್ಸೆಲ್ಸಿ ನಂತರ ಮುಂಬಯಿ ಪಯಣದ ಸ್ಕೆಚ್ಚು ಹಾಕುತ್ತಿದ್ದರು. ಹೆಬ್ರಿ ಅನಂತಪದ್ಮನಾಭ ದೇವರ ಶರಣು ಹೋಗಿ ಮುಂದಿನ ದಾರಿ ತೋರು ದೇವಾ ಎಂದು ಬೇಡಿಕೊಳ್ಳುತ್ತಿರುವ ಕಾಲದಲ್ಲಿ ಶಿವಮೊಗ್ಗದ ಜ್ಯೋತಿರ್ಭವನದ ವ್ಯವಸ್ಥೆ ನೋಡಿಕೊಳ್ಳುವ ಜಬಾದಾರಿ ಸಿಕ್ಕಿತು. ವಸತಿಗೃಹದಲ್ಲಿ ಸುಮಾರು ಎಂಟು-ಹತ್ತು ಕೋಣೆಗಳಿದ್ದು ನಗರಕ್ಕೆ ಇತರೇ ಊರುಗಳಿಂದ ಬರುವ ವ್ಯಾಪಾರಸ್ಥರು, ಯಾತ್ರಿಗಳು ಮತ್ತಿತರರಿಗೆ ರೂಮುಗಳನ್ನು ಬಾಡಿಗೆಗೆ ನೀಡುವುದು, ಬಂದ ಬಾಡಿಗೆಯಲ್ಲಿ ತಿಂಗಳಾ ರೂ.200/- ಧನಿಗಳಿಗೆ ನೀಡುವುದು - ಇದು ಕಂತ್ರಾಟು. ಅದು ಮಂದಿಯ ಕಾಲ. ಶಿವಮೊಗ್ಗ ಜಿಲ್ಲಾಕೇಂದ್ರವಾದರೂ ಇವರ ವಸತಿಗೃಹಕ್ಕೆ ಬರುವ ಬಾಡಿಗೆದಾರರು ವಿರಳ. ಧನಿಗಳಿಗೆ ನೀಡಿ ಇತರ ಖರ್ಚು ವೆಚ್ಚಗಳನ್ನು ಹೊಂದಿಸುವಾಗ ಹರಹರ! ಆಗುತ್ತಿತ್ತು, ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲ ಎಂಬಂತೆ. ಇಂಥಾ ಸಮಯದಲ್ಲಿ ಬಂದ ಗ್ರಾಹಕನ ಬಳಿ ಹರಟೆಗೆ ಕೂತು ಆತನ ಜಾತಕ ಜಾಲಾಡಿ ಸಂಬಂಧ ಸ್ಥಾಪಿಸಿದ್ದು ನರಸಿಮ್ಮ ಮಾಮನನ್ನು ಕೆರಳಿಸಿತ್ತು.....

ಇದು ನರ್ಸಿಮ್ಮಮಾಮನವರ ವ್ಯವಹಾರ ತಾಪತ್ರಯಗಳ ಕಥನವಲ್ಲ. ನಮ್ಮ ಗೌಡ ಸಾರಸ್ವತ ಸಮಾಜವು ಯಾವ ತೆರದಲ್ಲಿ ಒಂದೇ ಸೂತ್ರದಲ್ಲಿ ಬಂಧಿತವಾಗಿದೆ ಎಂಬುದಾಗಿದೆ. ಇಂದಿನ ಗಡಿಬಿಡಿಯ ತರಾತುರಿಯ ಹಪಾಹಪಿಯ ದಿನಗಳಲ್ಲಿ ಸಂಬಂಧಗಳು ಸಂಕೀರ್ಣವಾಗುತ್ತಿದ್ದು ಕುಟುಂಬ ವ್ಯವಸ್ಥೆಯು ಕೊಂಚಮಟ್ಟಿಗೆ ಶಿಥಿಲವಾಗಿದೆಯೆನ್ನಬಹುದು. ತಾನು - ತನ್ನ ಮಕ್ಕಳು - ತನ್ನ ಮನೆ ಇಲ್ಲಿಗೆ ಮುಗಿಯಿತು ಎಂಬಂತಾ ಕಾಲವಿದು. ಆದರೂ ನಾವು ಜಿ ಎಸ್ ಬಿ ಯವರು ನಿಜಾರ್ಥದಲ್ಲಿ ವಿವರಿಸುವುದಾದರೆ ಇಂದಿನ ದಿನಗಳಲ್ಲೂ ಒಂದೇ ಸೂತ್ರದಿಂದ ಬಂಧಿತರಾಗಿದ್ದೇವೆ....‌

ದಿಲ್ಲಿಯ ಓಲ್ಡ್ ರಾಜಿಂದರ್ ನಗರದ ವಾಟರ್ ಟ್ಯಾಂಕ್ ನ ಕೆಳಗೆ ನಿಂತು 'ಹಲೋ, ಆಮ್ಮಿ ಗಾಂವಾ ತುಕೂನು ದಿಲ್ಲಿ ಭೊಂವಚೇ ಆಯ್ಯಿಲೀಂ, ಹೇ ರಾತ್ತೀ ಖೈಂ ವಚ್ಚೆ ಮ್ಹೊಣು ಕsಳನಾ' (ಹಲೋ, ನಾವು ಊರಿನಿಂದ ದಿಲ್ಲಿ ಟ್ರಿಪ್ ಎಂದು ಬಂದಿದ್ದೇವೆ, ಈ ರಾತ್ರಿ ಎಲ್ಲಿ ಹೇಗೆ ಕಳೆಯೂದೆಂದು ಗೊತ್ತಾಗುತ್ತಿಲ್ಲ) ಎಂದು ಆವಾಜು ಹಾಕಿದರೆ ಹತ್ತು ಮನೆಗಳ ಬಾಗಿಲುಗಳು ತೆರೆಯುತ್ತವೆ, 'ಆಮ್ಮೆಥೈಂ ಯೆಯ್ಯಾ - ಆಮ್ಮೆಥೈಂ ಯೆಯ್ಯಾ' (ನಮ್ಮಲ್ಲಿ ಬನ್ನಿ ನಮ್ಮಲ್ಲಿ ಬನ್ನಿ ) ಎಂದು ಎಂಟು ಹತ್ತು ಬಾಗಿಲುಗಳು ತೆರೆಯುತ್ತವೆ, ಆಹ್ವಾನ ನೀಡುತ್ತವೆ. ಹೊಸ ಗುರುತು, ಮುಂದೆ ಮಾತುಕತೆ ಪಂಚಾತಿಕೆ ಎಲ್ಲವೂ ನಡೀತಾ ನಡೀತಾ ಕೊನೆಯಲ್ಲಿ ಯಾವುದೋ ಒಂದು ಕೊಂಡಿಯು ಸಿಕ್ಕಿ ಹಾಕಿಕೊಳ್ಳುತ್ತದೆ. 'ಅರೆ ಮಾರಾಯತೀ ಆಮ್ಗೆಲೇ ರಾಮ್ ಬಾಪ್ಪಾಲೇ ಜಾಂವ್ಯಾಂ ತರಪೇನ ಹಾನ್ನಿ ಆಮ್ ಕಾ ಲಾಗ್ಗೀ ಲೆಕ್ತಾತೀ..'(ಅರೇ ಮಹರಾಯಿತೀ, ನಮ್ಮ ರಾಮ ಚಿಕ್ಕಪ್ಪನ ಅಳಿಯನ ಕಡೆಯಿಂದ ಇವರು ಭಾಳಾ ಹತ್ತಿರದವರು....') ಎಂಬಲ್ಲಿ ಕೊನೆಗೊಳ್ಳುತ್ತದೆ...!

1985ರಲ್ಲಿ ಡೀ ಟೀ ಸೀ ಬಸ್ಸಲ್ಲಿ ಆಫೀಸಿಗೆ ಹೋಗುತ್ತಿದ್ದೆ. ಹತ್ತಿರ ಕೂತ ಹಿರಿಯ ಪಯಣಿಗರೊಡನೆ ಸಲ್ಲಾಪ ಸುರುವಾಯಿತು...

'ಯೂ ಆರ್ ಫ್ರಂ ಸದರನ್ ಇಂಡಿಯಾ?'

'ಯಸ್ ಸರ್'

'ಕರ್ನಾಟಕಾ?'

'ಯಸ್ ಸರ್'

'ಮಂಗಳೂರು?'

'ಯಸ್ ಸರ್'

'ದೊರಕೊ ಕೀ?'.  (ಕೊಂಕಣಿ!?)

'ಯಸ್ ಸರ್'

'ಆನಿಕೈ ಕಸಲರೇ ಯಸ್ ಸರ್ ಯಸ್ಸರ್ ಕರತ ಆಸ್ಸ! ಖಂಚ ಗಾಂವು?' (ಇನ್ನೂ ಇನ್ನೂ ಯಸ್ ಸರ್ ಯಸ್ ಸರ್ ಎಂದೇಕೆ ಹರಟುತ್ತಿದ್ದೀ! ಯಾವೂರು?)

'ಹೆಬ್ರಿ'

'ಅರೇ ಹೆಬ್ರಿ! ಪಾಂಡ್ರಂಗ ನಾಯ್ಕು ಗೊತ್ತಾಸ್ ಕೀ?' (ಅರೇ ಹೆಬ್ರಿ! ಪಾಂಡುರಂಗ ನಾಯಕರು ಗೊತ್ತಾ?)

'ವ್ಹಯಿ'.  (ಹೌದು)

'ಪಾಂಡುರಂಗ ಮಾಮ್ಮಾಲೇ ಬಾಯಲೇಲೇ...........(ಪಾಂಡುರಂಗ ಮಾಮನವರ ಹೆಂಡತಿಯ.......)

ನನ್ನ ಬ್ರಾಂಚಿನ ಸ್ಟಾಪ್ ಹತ್ತಿರ ಬಂತು. 'ಮೆಗೆಲೆ‌ ಸ್ಟಾಪ ಆಯಿಲೆ ಮಾಮ್ಮಾ, ತೂಂವೆ ಮೆಳ್ಳಲೇ ಭಾರೀ ಖೂಷಿ ಜಾಲ್ಲಿ, ಆನೇಕ ಪಟಿ ಮೆಳಯಾಂ' (ನನ್ನ ಸ್ಟಾಪು ಬಂತು ಇವರೇ, ನೀವು ಸಿಕ್ಕಿದ್ದು ಬಹಳ ಖುಷಿಯಾಯಿತು, ಇನ್ನೊಮ್ಮೆ ಸಿಗುವ...) ಬಸ್ ಇಳಿದು ಆಫೀಸು ತಲಪಿದೆ. ಇನ್ನೈದು ನಿಮಿಷ ನನ್ನ ಪಯಣ ಮುಂದರೆದಿದ್ದರೆ ನನ್ನ - ಅವರ ಸಂಬಂಧ ತನ್ಮೂಲಕ ಬಾಂಧವ್ಯ ಖಂಡಿತವಾಗಿಯೂ ಸ್ಥಾಪಿತವಾಗುತ್ತಿತ್ತು, ನನಗೆ ಖಚಿತವಿದೆ.

ನನ್ನ ಮೆನೇಜರುಗಳಲ್ಲಿ ಎಲ್ಲರೂ ಆತ್ಮೀಯರೇ. ಅವರಲ್ಲಿ ಮಾನ್ಯ ವೈ ಕೇ ಪೈಯವರು ಒಂದು ಮುಷ್ಟಿ ಜಾಸ್ತಿ ಪ್ರಿಯರು. ನೌಕರಿಯ ಸಂಬಂಧಗಳ ನಂತರ ಗೆಳೆತನ ಆತ್ಮೀಯವಾಗಿ ಧೃಡಗೊಂಡಿತು. ನನ್ನ ಮನೆ ಅವರ ಮನೆಗೆ ಹೋಗುವ ದಾರಿಯಲ್ಲೇ ಇತ್ತು. ವಾರಕ್ಕೆ ಮೂರು ನಾಲ್ಕು ಬಾರಿ ಅವರೊಡನೆ ಪಯಣವಿತ್ತು. ಬಹಳ ಮಧುರವಾದ, ಪ್ರಿಯವಾದ ಮಾತುಗಳು. ತುಂಬ ಸಂಯಮದ ವ್ಯವಹಾರ. ಗೆಳೆಯರೊಡನೆ, ಗ್ರಾಹಕರೊಡನೆ ಯಾವ ತೆರದಲ್ಲಿ ನಡಕೊಳ್ಳಬೇಕು ಎಂಬುದನ್ನು ಅವರ ಬಳಿ ಕಲಿಯಬೇಕು. ವೃತ್ತಿಯ ಓಟದಲ್ಲಿ ಅವರ - ನನ್ನ ಟ್ರಾಕುಗಳು ಬೇರೆ ಬೇರೆಯಾದರೂ ನಡುನಡುವೆ ಸಂಧಿಸುತ್ತಿದ್ದವು. 

ನಿವೃತ್ತಿಯ ಬಳಿಕ ಅವರು ಬೆಂಗಳೂರು ಶಹರದಲ್ಲಿ ನೆಲಸಿದ್ದು ಪುನಃ ದೋಸ್ತಿ ಬೇಂಕು ಭಾಷೆಯಲ್ಲಿ ಹೇಳುವಂತೆ 'ರಿನ್ಯೂವಲ್' ಆಯಿತು. ಕೊರೋನಾ ಬಳಿಕ ಹೆಬ್ರಿಯಲ್ಲಿ ನಮ್ಮ ವಾಸ. ಹದಿನೈದು ದಿನಗಳಿಗೊಮ್ಮೆ ಒಂದೋ ನಾನು ಫೋನು ಮಾಡೂದು ಇಲ್ಲವೇ ಅವರಿಂದ ಕಾಲ್ ಬರೂದು ನಡಕೊಂಡು ಬಂದಿದೆ. ಮೊದಲು ಮೆನೆಜರ್ - ಆಫೀಸರ್ ಆಗಿದ್ದೆವು. ಬೆಂಗಳೂರಿನ ಅವರ ಮನೆಗೆ ಹೋದಾಗ ಅವರ ಪತ್ನಿ ಶಾರದಮಾಯಿ ತರ್ಪೆಯಿಂದ ಅವರು ನಮ್ಮ ಬಹು‌ ಹತ್ತಿರದ ಸಂಬಂಧಿಗಳೆಂಬುದು ತಿಳಿದು ಸಂತಸವಾಯಿತು. 'ನೀನು ಆಗಾಗ ಬರುತ್ತ ಇರಬೇಕು ಮಹರಾಯ! ನಿನ್ನ ಬಳಿ ಮಾತಾಡಲು ತುಂಬ ಖುಷಿ ಆಗುತ್ತದೆ' ಪ್ರೀತಿಯ ನೂಲಲ್ಲಿ ಬಿಗಿಯಾಗಿ ಬಂಧಿಸಿ ಇಟ್ಟಿದ್ದಾರೆ. ಬೆಂಗಳೂರಿಗೆ ಬಂದಾಗ ಯಾವಾಗ ಅವರಲ್ಲಿ ಹೋದೇನು ಎಂಬ ತಹತಹ ನನ್ನಲ್ಲಿ ಉಂಟಾಗುತ್ತದೆ, ಅದು ಅವರಿಗೆ ಗೊತ್ತಿಲ್ಲ! ಗೆಳೆತನವೆಂದರೆ ಹಾಗೇನೇ.....

ನನ್ನ ಹಳೆಯ ಫೈಲುಗಳನ್ನು ಮಗುಚಿ ಗುಡ್ಡೆ ಹಾಕಿ ಓದುತ್ತಿರುವಾಗ ಮಂಗಳೂರು ಕೇ ಪೀ ಟೀ ಯ ಸೆಂಡ್ ಆಫ್ ಫೋಟೋ ಸಿಕ್ಕಿತು. ಅನೇಕ ನಾಸ್ಟಾಲ್ಜಿಕ್ ನೆನಪುಗಳು ಸಿನಿಮಾ ರೀಲುಗಳಂತೆ ಹರಿದು ಬಂದವು. ಅಂತೆಯೇ ಒಂದು ಪ್ರಬಂಧವನ್ನು ಶೇರ್ ಮಾಡಿದ್ದೆ. ಈ ಪ್ರಬಂಧದ ಸವಿಯಾದ ಫಲಶ್ರುತಿಯಾಗಿ ಕಾರ್ಕಳದ ವಿದ್ಯಾರ್ಥಿ ಗೆಳೆಯ ಸುರೇಶ ಕಾಮತರು ತಮ್ಮ ಐವತ್ತಾರು ವರ್ಷಗಳ ಗೆಳೆತನವನ್ನು ನವೀಕರಿಸಿಕೊಂಡರು! ಸುಮಾರು ಒಂದು ತಾಸಿನ ತನಕ ಫೋನ್ ಸಂಭಾಷಣೆ ನಡೆಯಿತು, ನನ್ನ ಸಂಭ್ರಮವನ್ನು ಅವರೂ, ಅವರ ತವಕ, ಉತ್ಸುಕತೆ ಹಾಗೂ ಸಂಭ್ರಮವನ್ನು ನಾನೂ ಅನುಭವಿಸಿದೆವು. ಮೊನ್ನೆ ಪುನಃ ಮಾತಾಡುವಾಗ ಪ್ರಿಯ ವೈ ಕೆ ಪೈ ಮಾಮನವರ ವಿಚಾರ ಬಂತು. ಕಾಮತರು ಪೈಯವರಿಗೆ ಸಂಬಂಧಿ. ಪೈಯವರು ನಮಗೆ ಸಂಬಂಧಿ. ಆಯ್ತಲ್ಲಾ ಈಗ ನಾನು - ಕಾಮತರು ಗೆಳೆಯರು ಮಾತ್ರವಲ್ಲ ಸಂಬಂಧಿಗಳು ಕೂಡಾ!...

ಹೇಳಿದೆನಲ್ಲ ಈ ದೊರಕೆಗಳು ಒಬ್ಬರಿಗೊಬ್ಬರು ಪೈಕಿಗಳೇ..! ಸ್ವಲ್ಪ ಕೆದಕಬೇಕು, ಹುಡುಕಬೇಕು, ಪರಸ್ಪರ ಮಾತನಾಡುತ್ತ ಇರಬೇಕು ಅಥವಾ ನನ್ನಂತೆ ಊದ್ದ ನಾಲಗೆಯವನಾಗಿರಬೇಕು....

Wednesday, September 3, 2025

ತಾಜಾ ಬೆಣ್ಣಿ...

ಹುಬ್ಬಳ್ಳಿ....

ಒಮ್ಮೆ ಮಧ್ಯಾಹ್ನ ಮೂರೂವರೆಗೆ ನನ್ನ ಕುರ್ಚಿಯಿಂದ ಮೆಲ್ಲನೇ ಎದ್ದು ನಿಂತೆ.....

'ನಾಯಕರು ಬಂದ್ರು, ನಾಯಕರು ಬಂದ್ರು' ಎಂದು ಕಿಸಿಪಿಸೀ ಹರಟುತ್ತಿದ್ದ ಲಲನಾಮಣಿಗಳು ತಮ್ಮ ತಮ್ಮ ಸೀಟುಗಳಲ್ಲಿ ನೆಟ್ಟಗೆ ಕೂತು ಸುಖಾಸುಮ್ಮನೆ ಲೆಜ್ಜರುಗಳ ಫೋಲಿಯೋ ಮಗುಚತೊಡಗಿದರು. ಒಬ್ಬಳ ಹಿಂದೆ ನಿಂತೆ, 'ಏನು ಸರ್!' ಎಂಬಂತೆ ಮುಖಭಾವ ಮೂಡಿತು...

'ಐನೂರು ಗ್ರಾಮು ತಾಜಾ ಬೆಣ್ಣೀ  ತಂದೀನೀ, ಯಾರ ಬೆನ್ನಿಗೆ ಹಚ್ಚೂಣು ಅಂದ್ಕೋತ ಹಂಗೇ ಬಂದೆ' .....

'ನೀವು ಬೆಣ್ಣೀ ಹಚ್ಚೂಣು ಬೇಡಾ, ನಾಟಕಾ ಆಡೂದೂ ಬೇಡಾ, ಏನ್ ಕೆಲಸಾ ಐತೀ ಹೇಳ್ರಲಾ...'

'ಬೆಣ್ಣೀ ತಾಜಾ ಮತ್ತ ಚಲೋ ಐತೀ, ಹಚ್ಚಿದ್ರ ಜಾರವಲ್ದು, ನೀವೇ ಸೂಕ್ತ ಅದೀರೀ,......'

'ಇಲ್ಲ್ ಕೊಡ್ರೀ ಸರ, ಅದೇನ್ ಮಹಾ ಕೆಲಸಾ!! ಏನ್ ನಾಟ್ಕಾ ಮಾಡಾಕ ಹತ್ತೀರಿ ಅಂತೀನಿ. ಸುಮ್ಮಕ ಇಂತಾ ಕೆಲಸ ಅದ ಅಂತ ಹೇಳಾಕ ಬದಲು ಬೆಣ್ಣೀ ಅಂತೆ ಬೆಣ್ಣೀ!!'  ನಗುತ್ತಾ ಕೊಟ್ಟ ಕೆಲಸ ಮಾಡಿದಳಾಕೆ. 

😄😄😄😄😄


Thursday, November 14, 2024

ಕೆಮರಾ ಆಸೆ

1972--ಒಂದೊಂದೇ ಮೆಟ್ಟಿಲು ಹತ್ತಿ ಐಡಿಯಲ್ ಸ್ಟೂಡಿಯೋ ಒಳಗೆ ಹೋಗಿ ನಿಂತೆ. ಮನಸ್ಸಿನಲ್ಲಿ ಮುಜುಗರ ಫೀಲ್ ಆಗುತ್ತಿತ್ತು. ಸ್ಟೂಡಿಯೋ ಯಜಮಾನರಾದ ನಾಯಕ್ ಮಾಮ ನನ್ನ ಆತ್ಮೀಯರು, ಹಾಗೂ ಸಜ್ಜನ ಮಿತ್ರರು. 

"ಕಿತ್ತೆ ಆಯಿಲೋ?"   (ಏನು ಬಂದದ್ದು?)

"ಒಂದು ಕೆಮರ ಬೇಕಿತ್ತು."

"ಏಕೆ? ಹಾರುತ್ತಿರುವ ಕೊಕ್ಕರೆ- ಕಾಗೆ, ಓಡುತ್ತಿರುವ ಮೋಡಗಳ ಫೋಟೋ ಹೊಡೀಲಿಕ್ಕಾ?"

"ಹೌದು, ನಿಮಗೆ ಹೇಗೆ ಗೊತ್ತು?"

ನಿನ್ನ ಅಣ್ಣ ಸುಬ್ರಾಯ ನಾಯಕರು ಬಂದು ಕಾಗೆ-ಕೋಳಿಗಳ ಫಿಲ್ಮ್ ಕ್ಲೀನ್ ಮಾಡಿಸಿ ಡೆವಲಪ್ ಮಾಡಿ ಹೋಗಿದ್ದಾರೆ. ಈಗ ನಿನಗೆ ಉಮೇದು ಹುಟ್ಟಿದೆ, ಅಲ್ಲದೇ G S ಶೆಣೈಯವರ ಆರ್ಟ್ ಗ್ಯಾಲರಿ ಮತ್ತು ಇಲಸ್ಟ್ರೇಟೆಡ್ ವೀಕ್ಲಿಯಲ್ಲಿನ ಫೋಟೋ ಎಲ್ಲ ನೋಡಿ  ಭಾರೀ ಹುರುಪಿನಿಂದ ಬಂದಿದ್ದೀ. ಕೆಮರಾ ಸುಮ್ಮನೆ ಬರೂದಿಲ್ಲ. ಕೆಮರಾ ಆದ ಮೇಲೆ ರೀಲು ಹಾಕಬೇಕು, ಫಿಲ್ಮ್ ಕ್ಲೀನ್ ಮಾಡಿ ಡೆವಲಪ್ ಮಾಡಬೇಕು. ಮೇಲಾಗಿ ನೀನು ಹೊಡೆಯುವ ಕಾಗೆ ಕೋಳಿಗಳು ನೀನು ಹೇಳುವ ಹಾಗೆ ಕೇಳುವ ಗ್ಯಾರಂಟಿ ಇಲ್ಲ.

"ಮೇಲಾಗಿ ನಿನಗೆ ಸಂಬಳ ಇನ್ನೂರೈವತ್ತರ ಒಳಗೆ. ನಿನ್ನ ಖರ್ಚು ತಾಪತ್ರಯ ಕಳೆದು ನಿನ್ನ ಶೋಕಿಗೆಂದು ಕೆಮರ ತೆಕೊಂಡ್ರೆ ಭಾರಿ ಕಷ್ಟ ಉಂಟು. ನಿನಗೆ ಯಾವ ರೀತಿಯ ಫೋಟೋ ಬೇಕು ಹೇಳು. ನೀನು ಆಶೆ ಪಟ್ಟ ಹಾಗೆ, ಇಲ್ಲವೇ ಅದಕ್ಕಿಂತ ಬೆಟರ್, ಪಟ ತೆಗೆದು ಡೆವಲಪ್ ಮಾಡಿ ಕೊಡ್ತೇನೆ. ಆಗ್ತದಾ ನೋಡು."

ನಾಯಕ್ ಮಾಮರು ಲೋಕವನ್ನು ಕಂಡವರು. ಮತ್ತು ಮೊದಲೇ ಹೇಳಿದಂತೆ ನನ್ನ ಹಿತೈಷಿಗಳು. ಆದರೆ ನನ್ನ ಮನಸ್ಸಿನ ಲೆಕ್ಕ ಬೇರೆಯದನ್ನೇ ಹೇಳುತ್ತಿತ್ತು. "ಹಾಗೆ ಮಾಡಿದ್ರೆ ಅದು ನಾನು ತೆಗೆದ ಹಾಗೆ ಆಗೂದಿಲ್ಲ. ಮತ್ತು ಆ ಪಟಗಳಲ್ಲಿ ನನಗೆ ಮೋಕೆ ಹುಟ್ಟೂದಿಲ್ಲ."

"ನಿನ್ನ ಮಾತು ಸಮ. ಆದರೆ ಆಲೋಚನೆ ಮಾಡಿ ನೋಡು. ನೀನು ನನಗೆ ತಮ್ಮನ ಹಾಗೆ ಮತ್ತು ದೋಸ್ತಿ. ಅದಕ್ಕಾಗಿ ನಾನು ಹೇಳಿದ್ದು. ಕೆಮರಾ ಮಾರಿದ್ರೆ ನನಗೆ ಲಾಭವೇ. ಆದ್ರೆ ನಿನಗೆ ಗೊತ್ತಿರಲಿ ಅಂತ ನನ್ನ ಅಭಿಪ್ರಾಯ."

"ಸ್ವಲ್ಪ ದಿನ ಬಿಟ್ಟು ಬರುತ್ತೇನೆ." ಮೆಲ್ಲನೆ ಅಲ್ಲಿಂದ ಕಾಲುಕಿತ್ತೆ. ನಂತರ ಅಲ್ಲಿ ಹೋಗಲಿಲ್ಲ. ಆದರೆ ಆಶೆ ಮಾತ್ರ ಮನಸ್ಸಿಂದ ಹೋಗಲಿಲ್ಲ. ಒಂದು ಒಳ್ಳೆಯ ಕೆಮರಾ ತೆಕೊಳ್ಳಬೇಕು ಒಂದಲ್ಲ ಒಂದು ದಿನ ಎಂಬ ಖಯಾಲು ಮನದ ಚಿಕ್ಕ ಕೋಣೆಯಲ್ಲಿ ಉಳಕೊಂಡಿತು.

ಎಪ್ಪತ್ತನೇ ದಶಕದ ವರೆಗಿನ ದಿನಗಳಲ್ಲಿ ಹೆಚ್ಚಿನವರು ಬಡಕುಟುಂಬಕ್ಕೆ ಸೇರಿದವರು. ತಕ್ಕಮಟ್ಟಿನ ಜೀವನಯಾಪನೆ ಮಾಡುವುದೇ ಒಂದು ದೊಡ್ಡ ಸರ್ಕಸ್ ಆಗಿರುವ ಸಮಯ. ಎರಡು ಹೊತ್ತು ಮಕ್ಕಳ ಹೊಟ್ಟೆ ತುಂಬ  ಊಟ ಉಣಿಸಲು ಪರದಾಡುವ ಕುಟುಂಬಗಳ ರೇಷಿಯೋ ಅಧಿಕ. ಅಂತಿರುವ ಸಮಯದಲ್ಲಿ ನಾನು ಕೆಮರಾ ಖರೀದಿಗೆ ಹೊರಟಿರುವುದು ನನ್ನ ದೃಷ್ಟಿಯಲ್ಲೇ ಅಹಂಕಾರದ ಪರಮಾವಧಿ. ಆದರೂ ಮನುಷ್ಯ ಆಶೆಯ ಏಣಿ ಹುಟ್ಟಿಸಿಕೊಂಡು ಅದರ ಮೆಟ್ಟಿಲುಗಳನ್ನು ಏರುವ ಹವಣಿಕೆಯಲ್ಲಿರುವುದು ಸಹಜವೇ. ನನ್ನ ಏಣಿಯ ಮೊದಲ ಮೆಟ್ಟಿಲು ಹೈಸ್ಕೂಲು ಕಲಿಯುವಾಗ ಬಣ್ಣ  ಬಣ್ಣದ ಚಪ್ಪಲಿಯದ್ದಾಗಿದ್ದರೆ ಎರಡನೇದ್ದು ಈ ಕೆಮರಾ ಖರೀದಿ. 'ಅದೆಲ್ಲ ನಮ್ಮಂತವರಿಗೆ ಹೇಳಿಸಿದ್ದಲ್ಲ, ಊರಲ್ಲಿ ಮರ್ಯಾದೆಯಿಂದ ದಿನ ದೂಡುವುದೇ ಕಷ್ಟವಾಗಿರುವಾಗ ಇಂಥದ್ದೆಲ್ಲ ನಿಮ್ಮ ಮಂಡೆಯಲ್ಲಿ ಹೊಕ್ಕಿದ್ದಾದರೂ ಹೇಗೆ?' ನಮ್ಮ ಹಿರಿಯ ಹಿತೈಷಿಗಳೊಬ್ಬರ ಆಶೀರ್ವಚನವೂ ಆಯಿತು. 

1984ರ ಸಮಯದಲ್ಲಿ ನಮ್ಮ ಪ್ರಕಾಶ ಮನೆಯವರೆಲ್ಲರ ಫೋಟೋ ತೆಗೆದ. ಅವುಗಳಲ್ಲಿ ಇನ್ನೂ ಕೆಲವೊಂದು ಚಿತ್ರಗಳು ಮನಸ್ಸಿಗೆ ತಂಪನ್ನೆರೆಯುತ್ತಿವೆ. ಆಗ ಮತ್ತೊಮ್ಮೆ ಆಸೆಯ ಕಿಡಿ ಸಣ್ಣಗೆ ಹೊತ್ತಿ ನಂದಿತು.

1985- ಡಿಸೆಂಬರ್ ಮಂಥ್ ದಿಲ್ಲಿಯಲ್ಲಿ ಅತಿಶಯವಾದ ಚಳಿ. ಸೂರ್ಯನಿಗೆ ಬೆಳಗಾಗುವುದು ತಡ, ನಾವು ಏಳುವುದೂ ತಡ. ಒಂದು ಮುಂಜಾನೆ ಬಹುಶಃ ಐದೂವರೆ ಇರಬಹುದು, ಬಾಗಿಲು ತಟ್ಟಿದ ಶಬ್ದವಾಯಿತು. 'ಕೌನ್ ಹೈ ಭಾಯ್' ಎಂದು ಎದ್ದು ಬಾಗಿಲು ತೆರೆದರೆ ಕತ್ತಲೆಯಲ್ಲಿ ಫಕ್ಕನೆ ಏನೂ ತಿಳಿಯಲಿಲ್ಲ, ಎದುರು ನಿಂತ ಜನ ಸಹ ಮಾತಾಡುತ್ತಿಲ್ಲ!

"ಅರೆ! ಪಾಂಡುರಂಗ! ನೀನೆಲ್ಲಿಂದ ಪ್ರತ್ಯಕ್ಷನಾದೆ ಮಹರಾಯ! ಬಾ ಬಾ" ಒಳಗೆ ಕರೆದೆ.

ಕೋರ್ಪೋರೇಷನ್ ಬೇಂಕಿನ ಚಂಡೀಗಡ ಬ್ರಾಂಚಿನಲ್ಲಿ ಅಸಿಸ್ಟೆಂಟ್ ಮೆನೆಜರ್-ಮುಂದಿನ ದಿನಗಳಲ್ಲಿ ಅದೇ ಶಹರದಲ್ಲಿ ಅಸಿಸ್ಟೆಂಟ್ ಜನರಲ್ ಮೆನೆಜರ್ ಆಗಿದ್ದವನು- ದಿಲ್ಲಿಗೆ ಕರ್ತವ್ಯ ನಿಮಿತ್ತ ಬಂದವನು ಸಿನಿಮಾಗಳಲ್ಲಿ ದೇವರು ಪ್ರತ್ಯಕ್ಷನಾದಂತೆ ಪ್ರತ್ಯಕ್ಷನಾದ. ಎಲ್ಲರಿಗೂ ಬಹಳ ಖುಷಿಯಾಯಿತು. ಆತ ಒಳ್ಳೆಯ ಮಾತುಗಾರ, ಆಕರ್ಷಕ ವ್ಯಕ್ತಿತ್ವ, ಹಸನ್ಮುಖಿ-ಒಬ್ಬ ಒಳ್ಳೆಯ ವ್ಯಕ್ತಿಯಲ್ಲಿರಬೇಕಾದ ಎಲ್ಲ ಗುಣಗಳೂ ಆತನಲ್ಲಿದ್ದವು. ಬೇಂಕು-ಮನೆ, ಮನೆ-ಬೇಂಕು ಎಂದು ದಿಲ್ಲಿ ಶಹರದಲ್ಲಿದ್ದರೂ ನಾನು ಕಾಡಿನಲ್ಲಿದ್ದ ಹಾಗಿದ್ದೆ. ಪಾಂಡುರಂಗ ಬಂದ ನಂತರ ಬಹಳ ಸುಧಾರಣೆಯಾಯಿತು. ಚಂಡೀಗಡ ತಿರುಗಾಡಲು ಬನ್ನಿ ಎಂದು ಆಮಂತ್ರಿಸಿದ.

ಒಂದು ಸಂಜೆ ಹಾಗೆಯೇ ತಿರುಗಾಡುತ್ತ ಗೆಳೆಯ ಯಾಜಿಯವರಲ್ಲಿ ಹೋದೆ. ಯಥಾಪ್ರಕಾರ ಕಾಫೀ ತಿಂಡಿ ಆಯಿತು. ಬೇಂಕಿನ ಆಗುಹೋಗುಗಳ, ರಾಜಕೀಯದ, ಮಕ್ಕಳ ತುಂಟಾಟಗಳ ಕುರಿತು ಮಾತು ನಡೆಯಿತು. ಸಂಜೆ ಕಳೆದು ರಾತ್ರಿ ಆಗುತ್ತ ಬಂತು.

"ನಾಯಕರೇ, ವಿಶೇಷ ವಿಚಾರವೇನಾದರೂ ಉಂಟಾ? ರಾತ್ರಿಯಾಗುತ್ತ ಬಂತು."

"ವಿಶೇಷ ಅಂತ ಏನೂ ಅಲ್ಲ, ನಿಮ್ಮದು ಎಲ್ಲಾದರೂ ಹೊರಗೆ ಪ್ರಯಾಣ ಹೋಗುವ ಪ್ರೋಗ್ರಾಮು ಉಂಟಾ?"

"ಇಲ್ಲ, ಏಕೆ?"

"ನಮ್ಮದೊಂದು ಚಂಡೀಗಡ ಟ್ರಿಪ್ಪು ಇದೆ. ನಿಮ್ಮ ಕೆಮರ ಕೊಟ್ಟರೆ ಸ್ವಲ್ಪ ಫೋಟೋ ತೆಗೆದುಕೊಳ್ಳುವ ಎನ್ನುವ ವಿಚಾರ ಇದೆ." ಕೇಳುವಾಗ ಮನಸ್ಸು ಬಹಳವೇ ಮುದುಡಿತು.

"ಏನು ನಾಯಕರೆ, ಒಂದು ಕೆಮರಾ ಕೇಳಲಿಕ್ಕೆ ಸಂಜೆ ಐದೂವರೆಯಿಂದ ಇಷ್ಟು ಹೊತ್ತು ಕಾದದ್ದಾ? ದೋಸ್ತಿ ಬಳಿ ನೀವು ಇಷ್ಟು ದಾಕ್ಷಿಣ್ಯ ಮಾಡಿದ್ರೆ ಹೇಗೆ! ಮೊನ್ನೆ  ಮೊನ್ನೆ ನಾವೆಲ್ಲಾ ಫ್ಯಾಮಿಲಿ ಸಹಿತ ಕಾಶಿ ಹರಿದ್ವಾರ ಎಲ್ಲಾ ತಿರುಗಿ ಬಂದಾಗಿದೆ. ನಿಮ್ಮ ಎಲ್ಲಾ ಟ್ರಿಪ್ ಆದ ಮೇಲೆ ವಾಪಸ್ ಕೊಡಿ." ಒಳಗಿನಿಂದ ಕೆಮರಾ ತಂದು ಕೊಟ್ಟರು.

"ನಮ್ಮದಲ್ಲದ ಐಟಮ್ ತಕ್ಕೊಳ್ಳಲು ತುಂಬ ಕಷ್ಟ ಆಗುತ್ತದೆ ಯಾಜಿಯವರೇ" ಎಂದು ಮನೆಗೆ ಬಂದೆ.

"ನಿಮ್ಮ ಪ್ರಾಣಸ್ನೇಹಿತ ನಾಯಕರ ಹತ್ರ ಕೆಮರ ಉಂಟಲ್ಲ, ಹಾಗಿರುವಾಗ ಯಾಜಿಯವರ ಬಳಿ ಯಾಕೆ ಹೋದದ್ದು?" ಮನೆಯಲ್ಲಿ ಪ್ರಶ್ನೆ ಬಂತು.

ಅಮೆರಿಕದಿಂದ ಅವರ ಭಾವ ಹೊಸತ್ತು ಕೆಮರ ಕಳಿಸಿದ್ದರು. ಅದನ್ನು ಅವರೇ ಸರಿಯಾಗಿ ಉಪಯೋಗಿಸಿರಲಿಕ್ಕಿಲ್ಲ. ನಾನು ಕೇಳಿದರೆ ಹಿಂದೆ ಮುಂದೆ ನೋಡದೇ ತಗೆದುಕೊಟ್ಟಾರು. ಆದರೆ ಅದು ಅವರಿಗೆ ಸ್ಪೆಶಲ್ ಗಿಫ್ಟ್ ಆಗಿರುವಾಗ ನಾನು ಕೇಳುವುದು ಎಷ್ಟು ಸಮಂಜಸವಾದೀತು ಎಂದು ಅವರಲ್ಲಿ ಹೋಗಲಿಲ್ಲ.

ಸ್ವಂತದ ಕೆಮರಾ ಆಗಲಿಲ್ಲ. ಮನಸ್ಸು ಕೊರೆಯತೊಡಗಿತು. 

"ನಾಯಕ್ ಸಾಬ್, ಹರ ಬಾತ್ ಪರ್ ಪೈಸೋಂ ಕಾ ಹಿಸಾಬ್ ನ ಲಗಾವೋ. ಏನಾದರೂ ಖರೀದಿ ಮಾಡಬೇಕಿದ್ದರೆ, ಆಚೆ ಈಚೆ, ಅವರ ಇವರ ಬಳಿ ಅದು ಇದು ಸಲಹೆಗಳನ್ನು ಕೇಳಹೋಗಬೇಡಿ. ಸೀದಾ ಹೋಗಿ ಪರ್ಚೇಸ್ ಮಾಡಿಬಿಡಿ." ಪಿಗ್ಮಿ ಕಲೆಕ್ಟರ್ ದೋಸ್ತಿಯೊಬ್ಬ ಸಲಹೆ ಕೊಟ್ಟ.

"ಅದೂ ಸಹ ಸರೀನೇ. ನನಗೊಂದು ಒಳ್ಳೇ ಕ್ವಾಲಿಟಿಯ ಕೆಮರಾ ತಂದುಕೊಡು ಮಹರಾಯ.!!" 

ಕೊನೆಗೂ ಉತ್ತಮವಾದ ಕೆಮರವೊಂದು ಮನೆಗೆ ಬಂತು. 

ಕಾಗೆ, ಕೋಳಿ ಮತ್ತು ಕೊಕ್ಕರೆಗಳ ಫೋಟೋ ಸೆಷನ್ನಿಗೆ ಇನ್ನೂ ಸಮಯ ಒದಗಿ ಬಂದಿಲ್ಲ. ಗುಬ್ಬಿಗಳದ್ದಂತೂ ಸಂತಾನವೇ ಸಂಕಷ್ಟದಲ್ಲಿದೆ.

ಅತ್ಯಂತ ದುಃಖದ ಸಂಗತಿಯೆಂದರೆ, ಸಮಸ್ತರ ಪ್ರಿಯನಾದ, ಸಮಾಜದಲ್ಲಿ ಇನ್ನೂ ಅನೇಕ ಕೆಲಸಕಾರ್ಯಗಳನ್ನು ಮಾಡಲಿಕ್ಕಿದ್ದ ಬಂಧು ಪಾಂಡುರಂಗ ನಮ್ಮನ್ನು ಅರ್ಧ ದಾರಿಯಲ್ಲೇ ಬಿಟ್ಟು ವಾಪಸು ಬಾರದಂತಹ ಜಾಗಕ್ಕೆ ಪಯಣಿಸಿದ. ಈ ಪ್ರಬಂಧ ಅವನಿಗೆ ಸಮರ್ಪಿತ.

Monday, September 9, 2024

ಎಂಭತ್ತನಾಲಕ್ಕರ ಬ್ಯಾಚು...

 

ಗುರುಗಳು ಕ್ಲಾಸುರೂಮನ್ನು ಪ್ರವೇಶಿಸಿದರು,

"ನಮಸ್ತೇ ಸರ್‍" ವಿದ್ಯಾರ್ಥಿಗಳು ಎದ್ದು ಒಕ್ಕೊರಳಲ್ಲಿ ವಂದಿಸಿದರು.

"ನಮಸ್ತೇ, ಎಲ್ಲರೂ ಕೂತುಕೊಳ್ಳಿ, ಎಲ್ಲ ಸ್ಟೂಡೆಂಟ್ಸ್ ಬಂದಿದ್ದೀರಾ? ಅದು ಯಾರಂವ ಓಡಿ ಬರತಾ ಇದ್ದಾನೆ! ಕರುಣಾಕರನಾ? ಛೇ! ಇವನ ಕೈಯ್ಯಲ್ಲಿ ಆಗೂದಿಲ್ಲಪ್ಪ! ಒಂದು ದಿನ ಆದರೂ ಸಮಯಕ್ಕೆ ಸರಿಯಾಗಿ ಬಂದದ್ದುಂಟಾ! ಆಯಿತು ಮಾರಾಯಾ, ಬಾ ಕೂತುಕೋ. ಎಲ್ಲರೂ ಬೆಳಗ್ಗೆ ಬೇಗನೇ ಎದ್ದು ಸರಿಯಾಗಿ ಹಲ್ಲುಜ್ಜಿ ಮುಖ ತೊಳೆದು ಸ್ನಾನ ಮಾಡಿ ಬಂದಿದ್ದೀರಾ?


ಅಥವಾ ಸಂಜೆ ನೋಡುವ ಅಂತ ಬಾಕಿ ಇಟ್ಟಿದ್ದೀರಾ, ಓಕೇ, ಓಕೇ. ಎಲ್ಲಿ ಕೈ ನೋಡುವಾ, ಯಾರೆಲ್ಲಾ ಉಗುರು ಕತ್ತರಿಸದೇ ಬಂದಿದಾರೆ?

"ಹ್ಞಾ ಯಾರವಳು ಕಿಸಿಪಿಸಿ ಮಾತಾಡೂದು? ರೇಖಾನಾ!, ಇವಳಿಗೆ ಯಾವಾಗ ಬುದ್ಧಿ ಬರೂದು!? ದೇವರೇ ಬಲ್ಲ!......"

ಹೆಬ್ರಿ ಹೈಸ್ಕೂಲಿಗೆ - ಈಗ ಪದವಿಪೂರ್ವ ಕಾಲೇಜಾದರೂ ನನಗದು ಪ್ರೀತಿಯ ಹೈಸ್ಕೂಲೇ – ‘ನಮ್ಮ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ರೂಮು ಶುರುವಾಗುತ್ತಿದೆ. ನಾಡಿದು ಅದರ ಓಪನಿಂಗ್ ಇದೆ. ನೀವು ದಯವಿಟ್ಟು ಬರಬೇಕು’ ಎಂದು ಉಪ ಪ್ರಾಂಶುಪಾಲ ಆತ್ಮೀಯರಾದ ದಿವಾಕರರು ಒತ್ತಾಯಿಸಿ ಆಮಂತ್ರಿಸಿದಂತೆ ಹೋದಾಗ ಸಂಭ್ರಮದ ವಾತಾವರಣವಿತ್ತು. ಅವರ ಕಛೇರಿಯಲ್ಲಿ ಜನವೋ ಜನ. ಶ್ರೀಯುತರಾದ ರಘುರಾಮ ಸೋಮಯಾಜಿಯವರು ಮತ್ತಿತರ ಗಣ್ಯ ವ್ಯಕ್ತಿಗಳು ಆಸೀನರಾಗಿದ್ದರು.”ಬನ್ನಿ ನಾಯಕರೆ, ನೀವು ಬಂದದ್ದು ಭಾಳ ಖುಷಿ ಆಯಿತು. ಕೂತುಕೊಳ್ಳಿಅವರ ಸ್ವಾಗತ....

ಹೊರಗೆ ಸುಮಾರು ಮುವ್ವತ್ತು ಮೀರಿ ಆಗಂತುಕರು ಭಾರೀ ಹುಮ್ಮಸ್ಸು ಹಾಗೂ ಸಂತಸದಿಂದ ಒಬ್ಬರನ್ನೊಬ್ಬರು ಕರೆಯುತ್ತ, ಹಸ್ತಲಾಘವ ನೀಡುತ್ತ ಹಬ್ಬದ ಮೂಡಿನಲ್ಲಿದ್ದರು. ಅನೇಕ ಮಹಿಳಾಮಣಿಗಳಂತೂ ಸೋಮಯಾಜಿಯವರ ಬಳಿ ಉತ್ಸಾಹ, ಭಕ್ತಿ, ಪ್ರೀತಿ ವಿಶ್ವಾಸಗಳಿಂದ ಬಂದು ಬಂದು ಮಾತನಾಡಿಸಿ ಹೋಗುತ್ತಿದ್ದರು. ಏನಿದು ಹರ್ಷೋಲ್ಲಾಸದ ಕಾರಣ? …….

ನಮ್ಮ ಹೈಸ್ಕೂಲು - ಈಗಿನ ಕಟ್ಟಡ - ಸಾವಿರದಾ ಓಂಭೈನೂರಾ ಅರುವತ್ತೊಂದರಲ್ಲಿ ಸ್ಥಾಪಿತವಾಯಿತು. ಸುಮಾರು ಅರುವತ್ತೆರಡು ಮಳೆಗಾಲ ಮುಗಿದವು. ಸಹಜವಾಗಿ ಬಿಲ್ಡಿಂಗು ಶಿಥಿಲವಾಗಿತ್ತು. ಇತ್ತೀಚೆ ಊರಿನ ಕೆಲವು ಸಹೃದಯೀ ಯುವ ಉದ್ಯಮಿಗಳಿಗೆತಾವು ಹೈಸ್ಕೂಲಿನಲ್ಲಿ ಕಲಿತು ಜೀವನದಲ್ಲಿ ಉತ್ಕರ್ಷ ಮತ್ತು ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆದು ಒಳ್ಳೆಯ ಬದುಕು ಬಾಳುತ್ತಿದ್ದೇವೆ. ಇದಕ್ಕಾಗಿ ಏನಾದರೂ ಮಾಡಬೇಕು, ನಮ್ಮ ಪಾಲಿನ ಕಿಂಚಿತ್ ಸೇವೆ ಸಲ್ಲಿಸಿ ಋಣ ಸಂದಾಯ ಮಾಡಬೇಕು.’ ಎಂಬ ಆಸಕ್ತಿ ಆಲೋಚನೆ ಹುಟ್ಟಿತು. ತಕ್ಷಣ ವಿಳಂಬ ಮಾಡದೇ ಕಾರ್ಯೋನ್ಮುಖರಾದರು. ಹಳೇ ವಿದ್ಯಾರ್ಥಿಗಳೆಲ್ಲ ಕೂಡಿ ಮೀಟಿಂಗ್ ಮಾಡಿ ಟ್ರಸ್ಟ್ ರಚನೆಯೂ ಆಯಿತು. ಊರು ಊರುಗಳಲ್ಲಿ, ದೇಶ ವಿದೇಶಗಳಲ್ಲಿ ನೆಲಸಿರುವ ಹೆಚ್ಚಿನ ಸಂಖ್ಯೆಯ ಹಳೇವಿದ್ಯಾರ್ಥಿಗಳು ಸಂತೋಷದಿಂದ ಸದಸ್ಯರಾದರು. ಟ್ರಸ್ಟಿನ ಸದಸ್ಯರಲ್ಲಿ ನಾನೂ ಒಬ್ಬ ಮೆಂಬರು. 

ಇದೇ ಬೇಸಿಗೆಯ ಒಂದು ದಿನ ಹಾಗೇ ಒಂದು ರೌಂಡು ಹೈಸ್ಕೂಲಿನತ್ತ ತಿರುಗಾಡಿ ಬರುವ ಎಂದು ಹೋದೆ. ಮಕ್ಕಳ ರಜಾ ದಿನಗಳು, ನೋಡಿದಾಗ ಆಶ್ಚರ್ಯವಾಯಿತು, ಅರ್ಧಾಂಶಕ್ಕಿಂತಲೂ ಹೆಚ್ಚಿನ ಕೊಠಡಿಗಳ ರಿಪೇರಿ ಕೆಲಸ ಪ್ರಗತಿಯಲ್ಲಿತ್ತು. ಆಫೀಸು ರೂಮಲ್ಲಿ ಒಬ್ಬಿಬ್ಬರು ಸ್ಟಾಫು ಇದ್ದರು. ಶಾಲೆಯ ಹೆಚ್ಚಿನ ದಾರಂದ, ಬಾಗಿಲು,ಕಿಟಿಕಿ, ಮಾಡು, ಹಂಚುಗಳು ಎಲ್ಲವೂ ಹೊಸ ರೂಪ ಪಡೆಯುತ್ತಿದ್ದವು, ಉದ್ಯಮಿ ರಾಜೇಶ ನಾಯಕರ ಉಮೇದಿನಿಂದ ಕಾಮಗಾರಿ ನಡೆಯುತ್ತಿದೆ, ಸ್ಕೂಲು ರೀಓಪನಿಂಗ್ ಮೊದಲೇ ಕೆಲಸ ಮುಗಿಸಬೇಕೆಂಬ ಇರಾದೆ ಇದೆ ಎಂಬ ಮಾಹಿತಿ ಸಿಕ್ಕಿತು. ಹುಡುಗನಿಗೆ ಉತ್ಸಾಹ ತುಂಬ ಇದೆ, ಪ್ರತೀ ನಿತ್ಯವೆಂಬಂತೆ ಬಂದು ಖುದ್ದು ನಿಂತು ಪ್ರಗತಿ ಪರಿಶೀಲನೆ ಮಾಡಿ ಹೋಗುತ್ತಾರೆ ಎಂದು ಅರಿತು ಭಾರೀ ಹೆಮ್ಮೆ ಎನಿಸಿತು. ನಾನೂ ಸಹ ಇದೆ ಸಂಸ್ಥೆಯಲ್ಲಿ ಕಲಿತವ, ಪ್ರೌಢಶಾಲೆಯ ಮೇಲೆ ನನಗೆ ಅತಿ ಎಂಬಂತೆ ಭಕ್ತಿಭಾವವಿದೆ, ನನಗೇಕೆ ಇಂತಹ ಯೋಚನೆ, ಯೋಜನೆ ಆಲೋಚನೆಗಳು ಹುಟ್ಟಲಿಲ್ಲ!! ನನ್ನಿಂದ ಆಗ್ತದೋ ಹೋಗ್ತದೋ ಅದು ಬೇರೆ ವಿಚಾರ, ಕನಿಷ್ಠ ಪಕ್ಷ ನಿಟ್ಟಿನಲ್ಲಿ ಯೋಚಿಸಲೂ ಇಲ್ಲವಲ್ಲ ಎಂಬ ಖತಿ ಹುಟ್ಟಿತು. ಇರಲಿ ಅದೀಗ ಪ್ರಸ್ತುತವಲ್ಲ....

ಇನ್ನೊಂದೆಡೆ ಇದೇ ತೆರನ ಉತ್ಸಾಹೀ ಹಳೇ ವಿದ್ಯಾರ್ಥಿಗಳು - 1984-85 ಬ್ಯಾಚಿನವರು - ತಮ್ಮದೇ ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡರು. ಕಲಿತ ಶಾಲೆಗಾಗಿ ಏನಾದರೂ ಮಾಡಬೇಕೆಂಬ ಹುರುಪು. ಹುರುಪಿನ ಫಲಶ್ರುತಿಯೇ ಇಂದು ಉದ್ಘಾಟನೆಗೊಂಡ ಡಿಜಿಟಲ್ ಕ್ಲಾಸ್ ರೂಮು. ಡಿಜಿಟಲ್ ಕ್ಲಾಸು, ಅಂತೆಯೇ ಹಳೇ ಲಡ್ಡಾದ ಬೆಂಚು ಡೆಸ್ಕುಗಳ ಬದಲಿಗೆ ಹೊಸಾ ಡೆಸ್ಕು ಬೆಂಚುಗಳು.! ವ್ಹಾ ರೆ ವ್ಹಾ! ನನಗೇ ಬಹಳ ಖುಷಿಯಾಯಿತು, ಇನ್ನು ಇದನ್ನು ಸಾಧಿಸಿದ 84 ರ ಬ್ಯಾಚಿನವರಿಗೆ ಎಷ್ಟು ಸಂತಸವಾಗಿರಬೇಕು.! ಎಲ್ಲರೂ ರೋಮಾಂಚಿತರಾಗಿದ್ದರು. ಒಂದೆಡೆ ಶಾಲೆಗಾಗಿ ಕೆಲಸ ಮಾಡಿದ ಸಂತೃಪ್ತಿ ಅದರೊಟ್ಟಿಗೆ ಪೂರಾ ನಲವತ್ತು ವರ್ಷಗಳ ಬಳಿಕ ಒಟ್ಟು ಮೇಳೈಸಿದ ಗೆಳೆಯ ಗೆಳತಿಯರ ಮಿಲನದ ಸಂಭ್ರಮ! ಒಬ್ಬರು ಮುಂಬಯಿಯಿಂದ ಬಂದರೆ, ಮತ್ತೊಬ್ಬ ದುಬೈಯಿಂದ, ಆದರೆ ಕಬ್ಬಿನಾಲೆಯಿಂದ ವೆಂಕಪ್ಪ ಹೆಬ್ಬಾರರ ಮಗಳು ನಯನ ಇನ್ನೂ ಬಂದಿಲ್ಲವಲ್ಲ!!  ಅಗೋ ಬಂದ್ರು ಬಂದೇ ಬಿಟ್ಟರು, ಇನ್ನು ಶುರು ಮಾಡಿ. ಏನು ಇಷ್ಟು ತಡ ಮಾರಾಯಿತಿ!!

ಬೆಳಗ್ಗೆ ಶಾಸ್ತ್ರೋಕ್ತವಾಗಿ ಗಣಹೋಮವನ್ನು ವರಂಗದ ಉದ್ಯಮಿ ಶ್ರೀ ಅನಂತ ಮಲ್ಯಾ ಅವರು ನಡೆಸಿಕೊಟ್ಟರು. ಅವರೂ ಸಹ  84 ರ ಬ್ಯಾಚ್ ಮೆಂಬರು. ಎಲ್ಲಾ ಸಹಪಾಠಿಗಳ ಆಗಮನಾ ನಂತರ ರಿಬ್ಬನ್ ಕಟಿಂಗ್ ಮೂಲಕ ಡಿಜಿಟಲ್ ಕ್ಲಾಸ್ ರೂಮ್ ಉದ್ಘಾಟನೆ ನಡೆಯಿತು. ನಂತರ ಕಾಲೇಜಿನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ.  84 ರ ಬ್ಯಾಚಿನಲ್ಲಿ ಹೆಚ್ಚಿನವರು ಅಧ್ಯಾಪಕ ವೃತ್ತಿಯವರೋ ಎಂಬ ಭಾಸವಾಯಿತು. ಸಭಾ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆಯಿತು, ಅದರ ಕುರಿತು ನನ್ನ ಯಾವುದೇ ಹೆಚ್ಚಿನ ವ್ಯಾಖ್ಯಾನವಿಲ್ಲ. ಆದರೆ ಸ್ವಾಗತ ಭಾಷಣ ಮಾಡಿದ ರೇಖಾ ಮೇಡಮ್ ಮಾತುಗಳೋ ಮನಸೂರೆಗೊಂಡವು. ಯಾವುದೇ ಗೇರು ಬ್ರೇಕುಗಳಿಲ್ಲದ ಸುಲಲಿತ ಸರಾಗ ಹಾಗೂ ಆಕರ್ಷಕ ಮಾತುಗಳು ಮುದ ನೀಡಿದವು. ಕ್ಲಾಸಿನಲ್ಲಿ ತನ್ನ ಮಾತುಗಾರಿಕೆಯಿಂದ ಬಹಳ ಫೇಮಸ್ ಆಗಿದ್ದ ರೇಖಾ ಮೇಡಮ್  ವ್ಯಕ್ತಿತ್ವವೂ ಅವರ ಮಾತುಗಳಂತೆ ಅತ್ಯಂತ ಆಕರ್ಷಕ. ಗಣಿತದ ಕ್ಲಾಸನ್ನು ತರಗತಿಯ ಹೊರಗೇ ಕಲಿತ ಆಕೆಗೆ ಮುಂದಿನ ದಿನಗಳಲ್ಲಿ ತಾನು ಗಣಿತದ ಟೀಚರ್ಆಗುವೆನು ಎಂಬ ಕಲ್ಪನೆ ಇರಲಿಲ್ಲ. ಈಗಂತೂ ಅವರು ತಾನು ಸರ್ವಿಸ್ ಮಾಡುತ್ತಿರುವ ಶಾಲೆಯ ಪ್ರಿನ್ಸಿಪಲ್. ಸೋಮಯಾಜಿ ಸರ್ಮೇಲೆ ತಿಳಿಸಿದ ಕಿಸಿಪಿಸಿ ಮಾತಾಡುತ್ತಿದ್ದ ರೇಖಾ ಟೀಚರ್ಇವರೇ....

ಶಾಲಾ ಜೀವನದ ನೆನಪುಗಳ ಮೆಲುಕಾಟ, ಅಪರೂಪದ ಫಾಸ್ಟ್ ಫ್ರೆಂಡ್ ಗಳ ಪುನಃ ಭೇಟಿ, ತಾವು ಕಲಿತ ಶಾಲೆ, ಕೂತು ಓದಿದ ಬೇಂಚು, ಲೆಕ್ಕದ ಕ್ಲಾಸಲ್ಲಿ ಕೈವಾರದ ಕಡ್ಡಿಯಿಂದ ತೂತು ಮಾಡಿದ ಡೆಸ್ಕ್‌ …  ಒಂದೇ ಎರಡೇ ಅನೇಕ ನೆನಪುಗಳಿವೆ. ಅದರ ರೋಮಾಂಚನವೇ ಬೇರೆ, ಅನುಭವಿಸಬೇಕು, ಧನ್ಯರಾಗಬೇಕು.......

08-09-2024

Monday, July 29, 2024

ಸ್ನೇಹದ ಮಾಧುರ್ಯ

ಹುಬ್ಬಳ್ಳಿ - ಹೂಬಳ್ಳಿ....


"ನಾಯಕ್ ಸರ್ ಮೆನೇಜರ್ ಕರೀತಾರ."

ಕೇಬಿನ್ನಲ್ಲಿ ಬೆಳಗಾಮ್ ನಿಂದ I T ಅಧಿಕಾರಿ ಬಂದಿದ್ದರು. ಬ್ರಾಂಚುಗಳಲ್ಲಿ A L P M ಬಳಕೆ ಲಾಗೂ ಮಾಡಿಸುವರೆ ಆದೇಶ ಹಿಡಕೊಂಡು ಬಂದಿದ್ದರು. ಸೂಕ್ತ ಮಾಹಿತಿ, ಟ್ರೇನಿಂಗ್ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಪ್ರಾತ್ಯಕ್ಷಿಕೆ ಸಮಯದಲ್ಲಿ ಉತ್ಸುಕ ಸಹೋದ್ಯೋಗಿಗಳೂ ಭಾಗವಹಿಸಿದರು. "ನಾಯಕರೆ ಆದಷ್ಟು ಬೇಗನೆ ನೀವು ಕಂಪ್ಯೂಟರ್ ಫೀಡ್ ಮಾಡಿಸಿ ಲೈವ್ ಮಾಡಬೇಕು." ವಿನಂತಿಸಿದರು.

"ಗೆಳೆಯರೇ, ನಿಮಗೆಲ್ಲ ತಿಳಿದಿರುವಂತೆ ಬ್ರಾಂಚಿನಲ್ಲಿ ಕಂಪ್ಯೂಟರ್ ಗಳು ಬಂದಿದಾವೆ. ಸೇವಿಂಗ್ಸ್ ಬ್ಯಾಂಕ್ ಹಾಗೂ ಕರಂಟ್ ಅಕೌಂಟ್ ಗಳನ್ನು ಫೀಡ್ ಮಾಡಿ ಲೈವ್ ಮಾಡಬೇಕು ಎಂಬ ಹುಕುಮು ಇದೆ, ಕಂಪ್ಯೂಟರ್ ನಲ್ಲಿ ಖಾತೆಗಳ ವಿವರಗಳನ್ನು ಫೀಡ್ ಮಾಡಲು, ಕಂಪ್ಯೂಟರ್ ನ ಕೆಲಸ ಕಲಿಯಲು ಲೀಜರ್ ಟೈಮಲ್ಲಿ ಬಂದು ಕಲಿಯಬಹುದು, ನನ್ನ ಅಸಿಸ್ಟೆನ್ಸ್ ಯಾವಾಗಲೂ ಇದೆ. ಪ್ರತಿಯೋರ್ವನಿಗೂ ಅವಕಾಶ ಹಾಗೂ ಸ್ವಾಗತವಿದೆ. 

ನಾನು ಊಹಿಸಿಕೊಂಡಂತೆ ಮಹಿಳಾಮಣಿಗಳಿಂದ ಹೆಚ್ಚಿನ ಸಹಕಾರವಿತ್ತು. 'ಸರ್, ನನಗೆ ಒಂದೆರಡು ದಿನ ಎಕೌಂಟ್ ಮಾಹಿತಿ ಫೀಡ್ ಮಾಡೂದನ್ನು ಹೇಳಿಕೊಡಬೇಕು ಪ್ಲೀಸ್.' 

"ನಿಮಗೆ ಎಷ್ಟು ಗೊತ್ತಿದೋ ನನಗೂ ಅಷ್ಟೇ ಗೊತ್ತಿರೋದು, ಬನ್ನಿ ಕಂಪ್ಯೂಟರ್ ಎದುರು ಕೂತು 'ಓಂ ಶ್ರೀ ಗಣೇಶ' ಮಾಡಿಬಿಡಿ." 

ಹೆಚ್ಚಿನವರು ತುಂಬ ಉಮೇದಿನಿಂದ ಮುಂದೆ ಬಂದರು. 

"ನಾಯಕರೇ ಕೆಲಸದ ಚುರುಕು ಸಾಲದು ಅಂತ ಅನಿಸುತ್ತದೆ." ಮೆನೆಜರರ ಆತಂಕ.....

"ವಿದ್ಯಾ ಮೇಡಮ್ ಹೇಗಿದ್ದೀರಿ? ಯಜಮಾನರು ಮಕ್ಕಳು ಸೌಖ್ಯವೇ?"

"ಏನು! ರಾಯರಿಗೆ ಇವತ್ತು ನನ್ನ ಮೇಲೆ ಭಾರಿ ಕಕ್ಕುಲಾತಿ ಹುಟ್ಟಿದೆ!"

"ನಮ್ಮ ಸ್ಟಾಫ್ ನವರ ಯೋಗಕ್ಷೇಮ ನೋಡ್ಕೋ ಬೇಕು ತಾನೇ!  ನೀವೆಲ್ಲ ಬೇಕಾದವರು, ನಿಮ್ಮ ಖುಷಿ ನನ್ನ ಪ್ರಯೋರಿಟಿ. ಅದಕ್ಕೇ ಆಗಾಗ ಬಂದು ಸುಖ ಕಷ್ಟ ವಿಚಾರಿಸುತ್ತ ಇರೂದು."

"ಸಾಹೇಬರು ಬಲೆ ಬೀಸಿದ್ದಾರೆ, ಖದೀಮರಿದ್ದಾರೆ,  ಜಾಗ್ರತೆಯಾಗಿರು." ಗೆಳತಿಯ ಸಲಹೆ.....

                                   00೦00

ಬೇಂಕಿನಿಂದ ನಿವೃತ್ತನಾದ ಬಳಿಕ ನಮ್ಮದು ಬೆಂಗಳೂರು ವಾಸ. ಮಕ್ಕಳ ದೇಖಬಾಲ್ ನೋಡಲು ಅಪ್ಪ ಅಮ್ಮ ತಮ್ಮೊಟ್ಟಿಗೆ ಇದ್ದಾರೆ ಎಂದು ಮಗ ಸೊಸೆ ಎಂದುಕೊಂಡಿದ್ದಾರೆ. ಆದರೆ ಮುಖ್ಯವಾಗಿ ನಮಗೆ ಮೊಮ್ಮಕ್ಕಳ ಸಹವಾಸದ ಸೆಳೆತ - ಮೋಹ ವೆಂದರೂ ಸೈ- ಎಳೆಯುತ್ತಿತ್ತು. ಆ ಕಾರಣ ಬೆಂಗಳೂರು ವಾಸ. ಒಂದು ದಿನ ಮೊಬೈಲ್ ಗುಣುಗುಣಿಸಿತು. 

"ಹರಿ ಓಂ"

"ನಮಸ್ಕಾರ, ನಾನು ವಿದ್ಯಾ." ಮಧುರವಾದ ಕರೆ.....

"ನಮಸ್ಕಾರ ನಮಸ್ಕಾರ, ಬಹಳ ದಿನಗಳ ನಂತರ ನೆನಪಾಯಿತು,! ಏನು ಸಮಾಚಾರ?"

ಮಗನ ಮದುವೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲು ವಿದ್ಯಾಧರಿಯ ಕರೆಯಿತ್ತು......

ಮದುವೆ ಅಟೆಂಡ್ ಮಾಡಲು ಆಗಲಿಲ್ಲ, ನಮ್ಮಲ್ಲೂ ಅದೇ ದಿನ ಮದುವೆ ಫಂಕ್ಷನ್ ಇತ್ತು. ಆದರೆ ಅದೆಷ್ಟು ಮಧುರ ನೆನಪುಗಳು ಸಮುದ್ರದ ಅಲೆಗಳು ಒಂದರ ಹಿಂದೆ ಒಂದರಂತೆ ದಡಕ್ಕಪ್ಪಳಿಸಿದ ತೆರದಲ್ಲಿ ಅಲೆಯಲೆಯಾಗಿ ಮರುಕಳಿಸಿದವು.....!

ಹುಬ್ಬಳ್ಳಿ ಶಹರದ ಸುಪರ್ ಮಾರ್ಕೆಟ್ ಬ್ರಾಂಚಿಗೆ ಕೊಲ್ಲೂರಿನಿಂದ ವರ್ಗಾವಣೆಯಾಗಿ ಸೇರಿದೆನೋ, ಅಂದಿನಿಂದ ನಮ್ಮ ಒಳ್ಳೆಯ ದಿನಗಳು ಪುನಃ ಶುರುವಾದವೆಂದು ನನ್ನ ಖಚಿತ ನಂಬಿಗೆ. ಮಕ್ಕಳಿಬ್ಬರ ಶಿಕ್ಷಣದ ಮುಖ್ಯ ಘಟ್ಟ, ಅದಕ್ಕೆ ಸರಿಯಾಗಿ ಉತ್ತಮ ಶಿಕ್ಷಣ ವ್ಯವಸ್ಥೆ, ಒಳ್ಳೆಯ ಓನರ್ ಹಾಗೂ ಮನೆ, ಮುಖ್ಯವಾಗಿ ಸಹೃದಯಿ ಮೆನೇಜರ್ ಮತ್ತು ಸಹೋದ್ಯೋಗಿಗಳು, ಗ್ರಾಹಕರೂ ಸಹ ಸ್ನೇಹಜೀವಿಗಳು. ಇನ್ನೇನು ಬೇಕು!!

'ಪೆನ್ ಶನ್ ಸೆಕ್ಷನ್ ನೋಡ್ಕೊಳ್ಳಿ ಸರ' ಎಂದರು ಮೆನೇಜರ್ ಸಾಹೇಬರು. ಆಫೀಸರಿಗೆ ಮೆನೇಜರರು ಸರ್ ಎಂದುದು ಕೇಳಿ ನನಗೆ ಆಶ್ಚರ್ಯವೂ ಮುಜುಗರವೂ ಆದವು. ಅದೊಂದು ಮಾತನಾಡುವ ಧಾಟಿ, ಆ ಮೇಲೆ ತಿಳಿಯಿತು.

ಹೆಸರು ಮಾತ್ರ ಪೆನ್ಶನ್ ಡಿಪಾರ್ಟ್ಮೆಂಟ್., ಸೇವಿಂಗ್ಸ್, ಕರೆಂಟ್, ಲೋನ್ಸ್ , ನಗದು ಮತ್ತು ಬಿಲ್ಸ್ ಬಿಟ್ಟು ಬ್ರಾಂಚಿನ ಉಳಿದ ಸಕಲ - (everything under the blue sky) -  ಕೆಲಸಗಳಿಗೆ ನಾನು ಸಾಹೇಬ!! 

ಬ್ರಾಂಚಿನ ಸಕಲ ಸಹೋದ್ಯೋಗಿಗಳೊಡನೆ ಘನವಾದ ಇಂಟರಾಕ್ಷನ್ ಇರಿಸಿಕೊಳ್ಳಲು ಇದು ಅನುಕೂಲವಾಯಿತು.

ಲಂಚ್ ಅವರ್ ನಲ್ಲಿ ನನ್ನ ಟೇಬಲ್ ನ ಹಿಂದುಗಡೆ ಮೂವರು ಗೆಳತಿಯರ ಊಟ -ವಿದ್ಯಾಧರಿ, ಸಬಿತಾ ಮತ್ತು ವಿಜಯಲಕ್ಷ್ಮಿ. ಮೂರನೇಯವರು ಈ ಕೂಟದ ಛೀಫು. ಅದೂ ಇದೂ ಮಾತಾಡುತ್ತಾ ತಾವು ತಂದ ಸಣ್ಣ ಸಣ್ಣ ಕರಡಿಗೆಯಂತಹ ಊಟದ ಡಬ್ಬಿಯಿಂದ ಏನು ತಿನ್ನುತ್ತಿದ್ದರೋ!! ಇಡೀ ಬ್ರಾಂಚಿನವರ ಲಂಚು ಮುಗಿದು ಶೇಟು ಸಿಗರೇಟು ಮುಗಿಸಿ ಬಂದರೂ ಇವರ ಊಟ-ಮಾತು ಮುಗಿಯುತ್ತಿರಲಿಲ್ಲ. ಅವರೆದುರು ನನ್ನ ಮೂರಂಕಣದ ಊಟದ ಬುತ್ತಿಯನ್ನು ತೆರೆಯಲು ಕೆಲಕಾಲ ನನಗೆ ಮುಜುಗರವಾಗುತ್ತಿತ್ತು....

ಇಡೀ ಬ್ರಾಂಚಿನಲ್ಲಿ ನನಗೆ ವಿದ್ಯಾಧರಿಯಷ್ಟು ಸ್ನೇಹಮಯಿ, ಶಾಲೀನ ಮಾತುಗಳ ಹಾಗೂ ಹಸನ್ಮುಖಿ ಭಾವದ ದೋಸ್ತ್ ಕಂಡು ಬರಲಿಲ್ಲ. ಹಾಗಾಗಿ ನನಗೆ ಅವರಲ್ಲಿ ಒಂದು ಮುಷ್ಟಿ ಜಾಸ್ತಿ ವಿಶ್ವಾಸ. ಅವರೊಡನೆ ನನ್ನ ಇಂಡಲ್ಜನ್ಸ್ ಕೊಂಚ ಹೆಚ್ಚೇ ಇತ್ತೇನೋ ಎಂಬ ಭಾವ ಬರುತ್ತಿದೆ. 

ಬೆಳಿಗ್ಗೆ ಆಫೀಸಿಗೆ ಬರುವಾಗ ಸಾಮಾನ್ಯವಾಗಿ ಕರೆನ್ಸಿ ಚೆಸ್ಟಿನ ಟೀ ಆರ್ ಕಿಣಿಯರು ಜತೆಯಾಗುತ್ತಿದ್ದರು. ಆದರೆ ಸಂಜೆಯ ಟೈಮಲ್ಲಿ ಸ್ಕೂಟರಿನ ಹಿಂದಿನ ಸೀಟು ವಿದ್ಯಾಧರಿಯ ಹೆಸರಿಗೆ ರಿಜಿಸ್ತ್ರಿ ಆಗಿತ್ತು. ನನ್ನ ಮನೆಯ ದಾರಿಯಲ್ಲಿ ಅವರ ಮನೆ ಇತ್ತು.

'ಬನ್ನಿ ಸರ್, ಕಾಫಿ ಮಾಡ್ತೇನೆ..' 

ಸ್ಕೂಟರ್ ಪಾರ್ಕ್ ಮಾಡಿದೆ. ಮನೆಗೆ ಸ್ವಾಗತ ಹಾಗೂ ಕಾಫಿ ಪರಿಮಳ ಚನ್ನಾಗಿತ್ತು.ಮೇಡಮ್ ಗೆ ಇಬ್ಬರು ಮಕ್ಕಳು, ಅಕ್ಕ ಮತ್ತು ತಮ್ಮ. ಮರುದಿನ ಪುನಃ ಕಾಫಿಯ ಆಮಂತ್ರಣ.. 

''ನೋಡಿ ವಿದ್ಯಾ ನಿಮ್ಮ ಯಜಮಾನರು ಡ್ಯೂಟಿಯಿಂದ ಬಂದಿಲ್ಲ ತಾನೇ, ನಾನು ಹೊರಡುತ್ತೇನೆ."

"ಸರಿ, ಹಾಗಾದರೆ ನಾನು ಇಲ್ಲೇ ಇಳೀತೇನೆ." ಮನೆಯಿಂದ ಅರ್ಧ ಫರ್ಲಾಂಗ್ ಹಿಂದೆ ಇಳಿದರು. ನಾನು ಮುಂದೆ ಸಾಗಿದೆ...

ಒಂದು ಶನಿವಾರ ಮಧ್ಯಾಹ್ನ ಸ್ಕೂಟರು ನಿಗದಿತ ಸ್ಥಳದಲ್ಲಿ ನಿಲ್ಲದೇ ಸೀದಾ ಮುಂದೆ ಓಡಿತು, 'ನಿಲ್ಲಿಸಿ ಮಹರಾಯರೇ' ಎಂದರೂ ಕೇಳದೇ ಸ್ಕೂಟರು ನಮ್ಮ ಮನೆಯ ಮುಂದೆ ನಿಂತಿತು.

ಮನೆಯಲ್ಲಿ ಯಜಮಾನಿ ಒಡನೆ ತುಂಬ ಸಮಯ ಸಲ್ಲಾಪ ನಡೆದ ನಂತರ ವಾಪಸು ಬಿಟ್ಟು ಬಂದೆ...

"ನಮ್ಮಲ್ಲಿ ಭೀಮನ ಅಮವಾಸ್ಯೆ ವೃತಕಥೆ ಉಂಟು, ನೀವು ಅತ್ತಿಗೆಯವರನ್ನು ಕರಕೊಂಡು ಬರಬೇಕು." ವಿದ್ಯಾಧರಿಯ ಆಮಂತ್ರಣ ಬಂತು. 

"ಅದೇನು ವೃತ?"

"ಗಂಡನಿಗೆ ದೀರ್ಘಾಯುಷ್ಯ ಸಿಗಲಿ ಎಂದು ಪತಿವ್ರತಾ ಸ್ತ್ರೀಯರು ಈ ವೃತಾಚರಣೆ ಮಾಡುತ್ತಾರೆ. ನಾನೂ ಈ ವೃತ ಆಚರಿಸುತ್ತೇನೆ. ನೀವು ಬನ್ನಿ ಸರ್." ಅದರಂತೆ ಸಂಜೆಯ ಹೊತ್ತು ಅವರಲ್ಲಿ ಹೋದೆವು. ಪೂಜಾವಿಧಿ ನಗೆ ಹೊಸದು.......

ನಾಲ್ಕು ವರ್ಷಗಳ ಸುಪರ್ ಮಾರ್ಕೆಟ್ ಬ್ರಾಂಚ್ ಸರ್ವೀಸಲ್ಲಿ ವಿದ್ಯಾ ನನ್ನ ಸೆಕ್ಷನ್ ನಲ್ಲಿ ಡ್ಯೂಟಿ ಮಾಡಿಲ್ಲ. ಆದರೆ ಅನಿವಾರ್ಯ, ಅಗತ್ಯ ಸಂದರ್ಭಗಳಲ್ಲಿ ನನ್ನ ವಿನಂತಿಯನ್ನು ತಿರಸ್ಕರಿಸದೇ ಖುಷಿಯಿಂದ ಮಾಡಿ ಕೊಟ್ಟಿದ್ದಾರೆ, ಬೇಂಕಿನ ನನ್ನ ಅನುಭವದಲ್ಲಿ ಇದು ತುಂಬ ಅಪರೂಪ. ತನ್ನ ಸೆಕ್ಷನ್ ಅಲ್ಲ, ತಾನೇಕೆ ಮಾಡಬೇಕು ಎಂಬ ಧೋರಣೆ ಜಾಸ್ತಿ ಇದ್ದ ಕಾಲವದು....

                                 ೦೦೦೦೦

"ವಿದ್ಯಾ, ಒಂದು ರಿಕ್ವೆಸ್ಟ್ ಉಂಟು, ದಯವಿಟ್ಟು ಒಪ್ಪಿಕೊಳ್ಳಬೇಕು, ನೀವು ಹಾಂ ಎನ್ನುತ್ತೀರಾ ಎಂಬ ಭರವಸೆಯಿಂದಲೇ ಕೇಳುತ್ತಿದ್ದೇನೆ..."

"ಏನು ಹೇಳಿ ಮಹರಾಯರೇ, ಬರೀ ಪೀಠಿಕೆಯಲ್ಲೇ ಇದೀರಾ."

"ಆಯಿತು, ನೇರ ವಿಷಯಕ್ಕೆ ಬರುತ್ತೇನೆ, ಗೋಲು ಗೋಲು ತಿರುಗಿಸುವುದಿಲ್ಲ. ನಾಡಿದು ಆದಿತ್ಯವಾರ ಮಧ್ಯಾಹ್ನ A L P M ನಲ್ಲಿ ಎಕೌಂಟ್ ಫೀಡಿಂಗ್ ಮಾಡಲು ಬರುತ್ತೀರಾ? ಏನಾದರೂ ಪ್ರಯರ್ ಫಂಕ್ಷನ್ ಇದ್ದರೆ ಬೇಡ."

"ಆಯಿತು ಮಹರಾಯರೇ ಅಷ್ಟೇ ತಾನೇ.."

"ಮತ್ತೆ ನಾಳೆ ಶನಿವಾರ ಮಧ್ಯಾಹ್ನ ಸ್ವಲ್ಪ ಹೊತ್ತು ವರ್ಕ್ ಮಾಡೋಣವೇ."

"ಬೆರಳು ತೋರಿಸಿದರೆ ಹಸ್ತ ನುಂಗುವ ಗಾದೆ ಆಯ್ತಲ್ಲ.!"

"ಬೇಸರ ಮಾಡಬಾರದು ನೀವು."

"ಆಗಲಿ ನಾಯಕರೇ, ನಿಮ್ಮ ಮಾತು ತಳ್ಳಿ ಹಾಕಲಾಗುತ್ತದೆಯೇ."

ಅಂತೆಯೇ ಶನಿವಾರ ಹಾಗೂ ನೆಕ್ಸ್ಟ್ ಆದಿತ್ಯವಾರ ಮಧ್ಯಾಹ್ನ ವಿದ್ಯಾಧರಿ ಎಕೌಂಟ್ ಫೀಡಿಂಗ್ ಕೆಲಸ ಮಾಡಲು ಬಂದರು. ನಾನು ಡೀಟೇಲ್ಸ್ ಓದಿ ಹೇಳೂದು, ಆಕೆ ಸರಸರನೇ ಟಂಕಿಸುವುದು... ಕೆಲಸ ಸಾಗಿತು...

"ವಿದ್ಯಾ, ನಮ್ಮ ಗುರುಗಳ ಬಳಿ ಕೇಳಿಕೊಂಡು ನಿಮ್ಮನ್ನು ನಮ್ಮ ಜಾತಿಗೆ ಸೇರಿಸಿಕೊಳ್ಳುವಾ ಎಂಬ ಖಯಾಲು ಬರುತಾ ಇದೆ ನನಗೆ."

"ಏಕೋ!"

"ನಿಮ್ಮನ್ನು ತಂಗಿ ಎಂದು ಒಪ್ಪಿಕೊಂಡಾಗಿದೆ ತಾನೆ, ಹಾಗಾಗಿ ನಮ್ಮ ಜಾತಿ ಸೇರಿಬಿಡಿ."

"........"

"ಇರಲಿ ಬಿಡಿ, ನಮಗೆ ಒಡಹುಟ್ಟಿದ ತಂಗಿ ಒಬ್ಬಳೇ, ನೀವು ಇನ್ನು ನನ್ನ ಹೊಸಾ ತಂಗಿ, ಹೇಗೆ?''

"ಅದಾದರೆ ಮಾತು.!"

"ನಾಯಕರೇ, ಮೆನೆಜರು ಬಂದಿದಾರೆ.!" ಅದುವರೆಗೆ ಆಕೆಗೆ ಮೆನೆಜರು ಒಳಗೆ ಕೇಬಿನ್ ನಲ್ಲಿ ಕೂತಿರುವುದು ಗಮನಕ್ಕೆ ಬಂದಿರಲಿಲ್ಲ.

"ಹೌದು, ನಾನೇ ಬರಬೇಕೆಂದು ರಿಕ್ವೆಸ್ಟ್ ಮಾಡಿದ್ದೆ."

"ಸುಮ್ಮನೆ ಅವರಿಗೆ ತೊಂದರೆ ಕೊಟ್ಟಿರಿ."

"ಇರಲಿ ಬಿಡಿ, ಬೇಂಕಿನಲ್ಲಿ ನಿಷ್ಠೆಯಿಂದ ಡ್ಯೂಟಿ ಮಾಡುವವರಲ್ಲಿ ನೀವು ಮೊದಲಿಗರು ಎಂದು ಅವರಿಗೂ ತಿಳೀಲಿ."

"ಓಹೋಹೋ, ಬೆಣ್ಣೆ ಚೆನ್ನಾಗಿಯೇ ಹಚ್ಚತೀರಿ, ಶಾಣ್ಯಾ ಇದೀರಿ. ಮುಂದಿನ ಡೀಟೇಲ್ಸ್ ಹೇಳಿ ಮತ್ತೆ..." ಕೆಲಸ ಮುಂದುವರೆಯಿತು....

                                 oooOooo

"ನಾಯಕ್ ಮಾಮ್, ನಿಮ್ಮ ಬ್ರಾಂಚಲ್ಲಿ ಎಕೌಂಟ್ ಫೀಡಿಂಗ್, ಟ್ಯಾಲಿ, ಡೋರ್ಮೆಂಟ್-ನಾನ್ ಆಪರೇಟಿವ್ ಎಕೌಂಟ್ ಶಿಫ್ಟಿಂಗ್ ಎಲ್ಲ ಮುಗಿಯಿತಾ?" ದುರ್ಗದ ಬೈಲ್ ಬ್ರಾಂಚಿನ ನನ್ನ ಗೆಳೆಯ ವಿಚಾರಿಸಿದರು.

"ಮುಗಿಯಿತಾ ಅಂದರೆ ಎಂತದು ಮಹರಾಯ, ನಮ್ಮಲ್ಲಿ A L P M ಲೈವ್ ಮಾಡಿಯಾಯಿತು. ಈಗ ಸ್ವಲ್ಪ ದಿನ ಪ್ಯಾರಲಲ್ ಎಂಟ್ರಿ ಮಾಡುತ್ತಿದ್ದೇವೆ. ನಾಡಿದ್ದು ಸೋಮವಾರದಿಂದ A L P M only."

"ಹೌದಾ? ಇದೆಲ್ಲ ಹೇಗೆ ಮಾಡಿಸಿದಿರಿ? ಓವರ್ ಟೈಮ್ ಏನಾದರೂ ಕೊಟ್ಟಿದೀರಾ ಹೇಗೆ?"

"ಓವರ್ ಟೈಮ್ ಗೀವರ್ ಟೈಮ್ ಏನೂ ಇಲ್ಲ, ಎಲ್ಲ ರೆಗ್ಯುಲರ್ ಟೈಮ್."

"ಹೌದಾ, ನಮ್ಮಲ್ಲಿ ಮಾರ್ರೇ ದೊಡ್ಡ ಗಲಾಟೆ ಆಗಿದೆ, ಯೂನಿಯನ್ ಇಶ್ಶೂ ಆಗಿ ರಣ ರಂಪಾಟ ಆಗಿದೆ. ನೀವು ಹೇಗೆ ಮಾಡಿಸಿದಿರಿ..!" ಅವರಿಗೆ ಅಚ್ಚರಿ.

"ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡಿಸ್ತೇವೆ ಎಂಬ ಅಹಂ ತೋರಿಸಿ ನಡೆದರೆ ಕಷ್ಟ ಮಾರಾಯ್ರೆ. ದೋ ಪ್ಯಾರ್ ಭರೀ ಬಾತೇಂ ಬೋಲೋ ಭಾಯೀ......."

ಅವರು ಒಪ್ಪಿ ಮೆಚ್ಚುಗೆ ಸೂಚಿಸಿದರು...

ಹುಬ್ಬಳ್ಳಿಯ ಸ್ನೇಹಿತರಲ್ಲಿ ವಿದ್ಯಾ ನನ್ನ ಅಚ್ಚುಮೆಚ್ಚಿನವರು. ತೊಂಭತ್ತರ ದಶಕದ ಸ್ನೇಹ. ಅದನ್ನು ನೆನಪಿನಲ್ಲಿಟ್ಟುಕೊಂಡು ಮಗನ ಮದುವೆಗೆ ಆಮಂತ್ರಣ ಕಳಿಸಿದರು. ಇತ್ತೀಚೆಗೆ ಮುವ್ವತ್ತು ವರ್ಷಗಳ ನಂತರ ನಾವು ದಂಪತಿಗಳು ಮೈಸೂರಿನ ಅವರ ಮನೆಗೆ ಭೇಟಿ ಕೊಟ್ಟಾಗ ಅವರು ಮಾಡಿದ ಸಂಭ್ರಮದ, ಪ್ರೀತಿ ಭರಿತ ಸತ್ಕಾರ ಮರೆಯಲುಂಟೇ..... 🙏🙏🙏🙏🙏

Sunday, April 14, 2024

ಸ್ಮರಣೆ-ನರಸಿಂಹ ಮಲ್ಯರು..

 

ಮೊದಲ ಕಂತು.

ಹದಿಹರೆಯದವರ ಮನಸ್ಸು ಒದ್ದೆ ಮಣ್ಣಿನ ಗೋಡೆಯಂತೆ ಇರುತ್ತದೆ. ಯಾವುದೇ ವಿಚಾರವನ್ನು ಇವರಿಗೆ ತಿಳಿಹೇಳಿದರೆ ಅದನ್ನು ಟಪಕ್ಕೆಂದು ಒತ್ತಿಕೊಳ್ಳುತ್ತದೆ. ಒಳ್ಳೆಯ ಸದ್ವಿಚಾರಗಳನ್ನು, ಉತ್ತಮ ಸಂಗತಿಗಳನ್ನು ಹದಿಹರೆಯದಲ್ಲೇ ಬೆಳೆಸಿ ಕೊಳ್ಳುವಂತೆ ಪ್ರೇರೇಪಿಸಿದರೆ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆ ಸಿಗುತ್ತಾನೆ. ಅಂತೆಯೇ ಇದಕ್ಕೆ ವಿರುದ್ಧವಾದ, ವಿಪರೀತವಾದ ಸಂಗತಿ ನಡೆದರೆ ಒಬ್ಬಾತ ಸತ್ಪ್ರಜೆಯಾಗಿ ಬೆಳೆಯುವುದು ಡೌಟು. ನನ್ನ ಮಟ್ಟಿಗೆ ಹೇಳೂದಾದರೆ ನಾನು ಸಾಕಷ್ಟು ಭಾಗ್ಯಶಾಲಿ ಯೆಂದೇ ಹೇಳಬಹುದು.

ಹದಿಹರೆಯದ ನಿಜವಾದ ಅರ್ಥದಲ್ಲಿ ಅಂದರೆ ನನ್ನ ಹದಿಮೂರನೇ ವಯಸ್ಸಿನಲ್ಲೇ ನನಗೆ ಸಂಘದ ಸಂಪರ್ಕವಾಯಿತು. ಹಸೀಗೋಡೆ - ಹಸಿ ಗೋಡೆಯ ಮೇಲೆ ಸಂಘಮುಖೇನ ಅನೇಕ ಸಮಾಜಮುಖಿ ವಿಚಾರಗಳು, ದೇಶಕ್ಕಾಗಿ ಬದುಕು ನಡೆಸುವ ಇಚ್ಛಾಶಕ್ತಿ, ಉತ್ತಮ ನಡವಳಿಕೆ ಇತ್ಯಾದಿ ಇತ್ಯಾದಿ.. ಪ್ರಾಪ್ತವಾದವು. ನನ್ನಂತೆಯೇ ಇನ್ನೂ ಅನೇಕ ಹಸೀಗೋಡೆಗಳು ಅಂದಿನ ಕಾಲದಲ್ಲಿ ಸಂಘಸಂಪರ್ಕಕ್ಕೆ ಬಂದು ಇಂದು ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ಬದುಕು ಬಾಳುತ್ತಿದ್ದಾರೆ.

ನರಸಿಂಹ ಮಲ್ಯ:- ನಮ್ಮ ಮಾಮ (ಅಂಕಲ್) ನರಸಿಂಹ ಮಲ್ಯರನ್ನು ತಂಪು ಹೊತ್ತಿನಲ್ಲಿ ನೆನೆಯಬೇಕು. ನಮಗೆ ಮಾಮ ನಾದರೂ ನಮ್ಮ ಗೆಳೆಯನಂತೆ ಇದ್ದರು. ಯಾರೊಡನೆಯೂ ಜಗಳವಿಲ್ಲದೇ, ಎಲ್ಲರೊಡನೆ ಸ್ನೇಹದಿಂದ ಇರುವ ಕಲೆ ಅವರಿಂದ ಕಲಿಯಬೇಕು. ಸದಾ ಹಸನ್ಮುಖಿ. ಧಾರಾಳ ಮಾತು. ಒಮ್ಮೆ 'ಬಾ ಮಹರಾಯ, ವರಂಗಕ್ಕೆ ಹೋಗಿ ಬರೋಣ,' ಎಂದು ಕರಕೊಂಡು ಹೋದರು. ಅಲ್ಲಿ ನಮ್ಮ ಸಂಬಂಧಿಗಳ ಮನೆಯಲ್ಲಿ ಒಳಗೆ ಅಡಿಗೆ ಮನೆಯಲ್ಲಿ ಕೂತು ಮನೆಯ   ಹೆಂಗಸರೊಡನೆ ಇವರ ಮಾತುಕತೆ ಮುಂದುವರೆಯಿತು. ನನಗೆ ಅವರಲ್ಲಿ ಹೆಚ್ಚಿನ ಹೊಕ್ಕುಬಳಕೆ ಇಲ್ಲದ ಕಾರಣ ಬೇಸರ ಹತ್ತಿತು. ಕೂತಲ್ಲೇ ತೂಕಡಿಕೆ ಬರಲಾರಂಭಿಸಿತು. ನನ್ನ ಸಮವಯಸ್ಕರಾರೂ ಇದ್ದ ನೆನಪಿಲ್ಲ. ಕೊನೆಗೂ ಅವರ ಮಾತುಕತೆ ಎಲ್ಲ ಮುಗಿದು 'ಇನ್ನು ಬರುತ್ತೇನೆ, ತುssoಬಾ ಮಾತಾಡ್ಲಿಕ್ಕೆ ಉಂಟು, ಇನ್ನೊಮ್ಮೆ ಸಿಗುತ್ತೇನೆ.. ಯೋರೆ ಉಟ್ರೆ' ಎಂದು ನನ್ನನ್ನೆಬ್ಬಿಸಿದರು. 'ಅದೆಲ್ಲ ಆಗೂದಿಲ್ಲ ನೀವಿಬ್ರೂ ಇವತ್ತು ಇಲ್ಲಿ ಊಟ ಮಾಡಿಯೇ ಹೋಗಬೇಕು. ಹೋ ಮುಕ್ತಾಲೋ ಮ್ಹಾಲ್ಗಡೊ ನ್ಹಂವೇ ಹ್ಞಾಂಣೆ ಎವಚೇ ಊಣೆ.' ಎಂದವರು ಪ್ರೀತಿಯಿಂದ ಒತ್ತಾಯ ಮಾಡಿ ಊಟದ ನಂತರವೇ ನಮ್ಮನ್ನು ಬೀಳ್ಕೊಟ್ಟರು. ಹೊರಬರುವಾಗ ಅವರ ಕಣ್ಣಲ್ಲಿ ಪ್ರೀತಿಯ ಹನಿಯೊಂದು ತುಳುಕಿದುದು ಕಂಡೆನೇ.... ಈಗ ನೆನಪಿಗೆ ಬರೂದಿಲ್ಲ.

'ಅಲ್ಲ ನರ್ಶಿಮ್ಮ ಮಾಮ, ನಿನಗೆ ಹೆಬ್ರಿಯಲ್ಲಿ ಕಂಡಾಪಟ್ಟೆ ಕೆಲಸ ಉಂಟು, ತುರಿಸಿಕೊಳ್ಳಲು ಪುರಸೋತಿಲ್ಲ ಎಂದು ಪಿರಿಪಿರಿ ಮಾಡಿದಂವ ಇಲ್ಲಿ ವರಂಗದವರಲ್ಲಿ ಅದು ಇದು ಚೈಂ ಚೈಂ ಎಂತದು ಪರಂಗಾವಣೆ ಮಾಡುತ್ತಿದ್ದೆ?' ಸಣ್ಣಗೆ ಆಕ್ಷೇಪಿಸಿದೆ.

'ನೋಡು ಇವನೇ, ನಿನಗೆ ಕೆಲವು ಸೂಕ್ಷ್ಮ ತಿಳಿಸುತ್ತೇನೆ. ಅವರು ನಮ್ಮ ತೀರಾ ಹತ್ತಿರದ ಬಳಗ. ನಾವು ಹೆಬ್ರಿ - ಶೀಮೋಗಾ ಅಂತ ದೊಡ್ಡ ಊರುಗಳಲ್ಲಿರುವವರು. ನಮ್ಮನಮ್ಮ ತಲೆಬಿಸಿ ನಮಗೆ, ಅವರಿಗೆ ಅದೆಲ್ಲ ತಿಳಿಯೂದಿಲ್ಲ. ನಾವು ಸಮಯ ಮಾಡಿ ಕೊಂಡು ಅವರಲ್ಲಿ ಹೋದ್ರಿಂದ ಅವರಿಗೆ ಎಷ್ಟು ಖುಷಿಯಾಯ್ತು ನೀನೇ ನೋಡಿದಿಯಲ್ಲ! ಮನೆಯ ಎಲ್ಲ ಮಂದಿ ಬಂದು ಕಷ್ಟ ಸುಖ ಹಳೇ ನೆನಪುಗಳನ್ನೆಲ್ಲ ಕೆದಕಿ ಕೆದಕಿ ಸಂತೋಷಪಟ್ಟರು ಹೌದೋ ಅಲ್ವೋ ... 'ಅಂವ ಶಿಮೋಗ ಅಂತ ದೊಡ್ಡ ಪೇಟೆಯಲ್ಲಿ ದೊಡ್ಡ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದಾನೆ! ಅಷ್ಟೆಲ್ಲ ಗಡಿಬಿಡಿ ಇದ್ದರೂ ನೆನssಪಿನಲ್ಲಿ ನಮ್ಮಲ್ಲಿ ಬಂದು ಎಷ್ಟೆಲ್ಲ ಮಾತನಾಡಿ ಹೋದ ನೋಡಿ, ಒಂಚೂರೂ ಜಂಬ ಇಲ್ಲ , ಹಾಂಕಾರ ಇಲ್ಲ. ಮುಕ್ತಾಳ ಹಿರಿಯಂವ ಸಹ ಕಲಿಯಲು ಭಾರೀ ಬುದ್ಧಿವಂತ ಎಂದು ಕೇಳಿದ್ದೇವೆ.' ಎಂದು ಇನ್ನವರು ಆರು ತಿಂಗಳ ವರೆಗೆ ಮೆಲಕು ಹಾಕಿಕೊಂಡು ಖುಷಿಪಡುತ್ತಾರೆ. ನಮ್ಮಿಂದ ಪಾವಾಣೆ ಖರ್ಚಿಲ್ಲದೆ ಒಬ್ಬರಿಗೆ ಕಿಂಚಿತ್ ಆದರೂ ಸಂತೋಷ ಆದರೆ ನಮಗೇ ಒಳ್ಳೇದು, ಏನಂತೀ?' ಸಣ್ಣ ಲೆಕ್ಚರ್ ಆದರೂ ತುಂಬ ಮೌಲ್ಯಯುತ ಮಾತು ಹೇಳಿದರು. ಆದಿನ ಅವರ ಮಾತಿನ ಮಹತ್ವ ತಿಳಿದಿರಲಿಲ್ಲ, ಮುಂದಿನ ದಿನಗಳಲ್ಲಿ ಅರ್ಥವಾಗಲಾರಂಭಿಸಿತು. ಆದಷ್ಟು ಮಟ್ಟಿಗೆ ನಯವಿನಯದ ನುಡಿಗಳು, ಸಕಾರಾತ್ಮಕ ಮಾತುಗಳು, ಬೇಂಕಿನಲ್ಲಿ ನಗುಮುಖದ ಸೇವೆ, ಇತರರನ್ನು ಗೌರವಿಸುವ ಪರಿ ಇವೆಲ್ಲವನ್ನು ನಾನು ನಮ್ಮ ನರ್ಶಿಮ್ಮಮಾಮನ ಸಂಗದಿಂದಲೇ ಕಲಿತದ್ದು. ಗೆಳೆಯ ಪರಿಚಿತರೊಡನೆ ಹಾಸ್ಯ ಕುಷಾಲು ಮಾಡುವುದಿದ್ದರೂ ಆದಷ್ಟು ಮಟ್ಟಿಗೆ ಮನ ನೋಯಿಸದ ಹಿತಕರ ಆರೋಗ್ಯಕರ ತಮಾಷೆಗಳನ್ನೆಲ್ಲ ನಾನು ಅವರಿಂದಲೇ ಕಲಿತದ್ದು...

ಒಂದು ಎಪಿಸೋಡು:-ಊರಿಗೆ-ಹೆಬ್ರಿಗೆ-ಬಂದರೆ ಅವರ ಊಟ ತಿಂಡಿ ದಿನಚರಿ ಎಲ್ಲ ನಮ್ಮ ಮನೆಯಲ್ಲೇ, ಇದು ನಡಕೊಂಡು ಬಂದ ವ್ಯವಸ್ಥೆ. ಒಮ್ಮೆ ರಾತ್ರಿ ಎಲ್ಲರೂ ಊಟಕ್ಕೆ ಲೈನಾಗಿ ಕೂತಿದ್ದು, ಅಮ್ಮ ಬಡಿಸುತ್ತಿದ್ದರು. ನರಸಿಂಮ ಬಂದಿದ್ದಾನೆ, ಅವನಿಗೆ ಪ್ರೀತಿ  ಅಂತ ಖಾರ ಉದ್ದಿನ ಹಪ್ಪಳ ಕರಿದು ಇಟ್ಟಿದ್ದರು. ಕಿರಿಯ ತಮ್ಮನ ಮೇಲೆ ಒಂದು ಮುಷ್ಟಿ ಮೋಕೆ ಜಾಸ್ತಿ...

'ಅಕ್ಕಾ , ಇವತ್ತು ಒಂದು ಕತೆ ಆಯ್ತಲ್ಲಾ..?' ಮಾಮ ಮಾತಿಗೆ ಸುರುವಿಟ್ಟರು.

'ಎಂಥದು?'

'ಬೆಳಗ್ಗೆ ಹೆಬ್ರಿಗೇ ಅಂತಾ ಮಿನಿಬಸ್ಸಲ್ಲಿ ಬರ್ತಿದ್ನಾ! ಎದೂರಿನ ಸೀಟು. ಆಗುಂಬೆ ಘಾಟಿಯ ಏಳನೇದ್ದೋ ಆರನೇದ್ದೋ ಕರ್ವಲ್ಲಿ ... ಎಂಥಾ ಹೇಳೂದು? ಈಷ್ಟುದ್ದ ಹೆಬ್ಬಾವು!  ಅಬಬಬಬ!'

'ಈಷ್ಟುದ್ದ ಅಂದ್ರೆ ಎಷ್ಟುದ್ದ?'

'ಎಷ್ಟು ಉದ್ದವಾ!! ನೋಡು ಇಲ್ಲಿ ನಾನು ಕೂತಿದ್ದೇನಲ್ವಾ, ಇಲ್ಲಿಂದ ಅಲ್ಲಿ ನೀನು ಹಪ್ಪಳ ಸುಟ್ಟು ಇಟ್ಟಿದ್ದೀಯಲ್ಲಾ ಅಲ್ಲೀ ವರೆಗೆ ... ssಷ್ಟೂದ್ದ!!'

'ಅಯ್ಯೋ ದೇವರೇ! ನಿಮಗೆ ಹಪ್ಪಳ ಬಡಿಸಲೇ ಇಲ್ಲವಲ್ಲಾ! ನನ್ನ ನೆನಪಿಗಿಷ್ಟು ಬೆಂಕಿ ಹಾಕ! ಛೇ ಎಂತಾ ಕೆಲಸ ಆಯಿತು, ನಿಮ್ಮ ಊಟ ಮುಗೀಲಿಕ್ಕಾಯಿತು!!' ಅಮ್ಮ ತರಾತುರಿಯಿಂದ ಹಪ್ಪಳ ಬಡಿಸಿದರು.

'ಅಲ್ಲ ಮಹರಾಯ! ಹಪ್ಪಳ ಬಡಿಸು ಅಕ್ಕಾ , ಎಂದು ನೇರ ಹೇಳೂದು ಬಿಟ್ಟು ನಿಂದು ಇದೆಲ್ಲ ನಾಟಕ ಎಂಥದು?'

'ಅಲ್ಲ, ಹಪ್ಪಳ ಸುಟ್ಟು ಚಂದಕ್ಕೆ ಇಟ್ಟದ್ದಾ? ಬಡಿಸಬೇಕಂತ ಪುನಃ ಹೇಳ್ಬೇಕಾ? ಅದಕ್ಕೇ ಕತೆ ಕಟ್ಟಿದ್ದು.' ಇವರು ಕಣ್ಣು ಮಿಟುಕಿಸಿದರು. ಘೊಳ್ಳನೆಯ ನಗು ಅಡುಗೆ ಮನೆಯಲ್ಲಿ ಮೊಳಗಿತು.