Thursday, August 13, 2020

ಒಂದು ಭಾವುಕ ಹಾಗೂ ದಿವ್ಯ ನೆನಪು.

 



ಭಾವುಕ ಹಾಗೂ ಸುಖಕರ ನೆನಪು:

     1985ರ ಇಸವಿ ಇರಬೇಕು, ಸರಿಯಾಗಿ ನೆನಪಿಲ್ಲ. ತಪ್ಪಿದ್ದರೆ ಕ್ಷಮಿಸಿ. ಕರೋಲ್ ಬಾಗ್ ಸ್ಟಾಪ್ ನಲ್ಲಿ ಇಳಿದು ಕೇವಲ ಎಂಟು ನಿಮಿಷಗಳ ಕಾಲ್ನಡಿಗೆಯಲ್ಲಿ ನನ್ನ ಬ್ರಾಂಚು. ಝಂಡೇವಾಲನ್ ದೇವಿಯ ಮಂದಿರದ ಮುಂದಿನ ರಸ್ತೆಯ ಮೂಲಕ ನಮ್ಮ ಬ್ರಾಂಚಿಗೆ ಹೋಗುವ ಹತ್ತಿರದ ದಾರಿಯೂ ಇತ್ತು, ಹಾಗಾಗಿ ಹೆಚ್ಚಾಗಿ ಅದೇ ದಾರಿಯನ್ನು ಬಳಸುತ್ತಿದ್ದೆ. ಅದಕ್ಕೆ ಮೊದಲು ಸಂಘದ ಝಂಡೇವಾಲನ್ ಮುಖ್ಯ ಕಛೇರಿ ಸಿಗುತ್ತಿತ್ತು.

ನಮ್ಮ ಬ್ರಾಂಚಲ್ಲಿ ಸಂಘದ ಉಳಿತಾಯ ಖಾತೆಯೊಂದಿತ್ತು. ಒಬ್ಬ ಪ್ರಚಾರಕರು ಆ ಖಾತೆಯ ವ್ಯವಹಾರಗಳನ್ನು ನೋಡಿ ಕೊಳ್ಳು ತ್ತಿದ್ದರು. ಅವರ ಪರಿಚಯವಾಗಿತ್ತು. ಹೆಚ್ಚು ಮಾತಾಡುವ ಆಸಾಮಿ ಅಲ್ಲ, ಮಿತಭಾಷಿ. ಅವರು ಪ್ರತೀಸಲ ಬಂದಾಗ ನನಗೊಂದು ನಮಸ್ಕಾರ ಇತ್ತು, ಅಷ್ಟೆ. 'ನಾಯಕ್ ಜೀ ಆಜ್ ಕಲ್ ಝಂಡೇವಾಲಾ ಮೇ ಪ್ರಾಂತ ಪ್ರಚಾರಕೋಂ ಕೀ ಬೈಠಕ್ ಹೋ ರಹೀ ಹೈ. ಆಪ್ ಆಜಾವೋ ನಾ' ಎಂದು ಒಂದು ದಿನ ಅವರಿಂದ ಮಾಹಿತಿ ಸಿಕ್ಕಿತು.

ಮೆನೆಜರರಿಗೆ ತಿಳಿಸಿ ಕೊಂಚ ಬೇಗನೇ ಝಂಡೇವಾಲಾ ತಲಪಿದೆ. ಕೇಂದ್ರ ಕಛೇರಿಯಲ್ಲಿ ಹೆಚ್ಚಿನ ಗೌಜಿಯಿರಲಿಲ್ಲ. 'ಮೇಲೆ ಮಾನನೀಯ ಸರಸಂಘಚಾಲಕರೊಂದಿಗೆ ಬೈಠಕ್ ನಡೆಯುತ್ತಿದೆ. ಇನ್ನೇನು ಮುಗಿಯಲಿಕ್ಕಾಯಿತು. ಸ್ವಲ್ಪ ಸಮಯ ಕಾಯಬೇಕು.' ಎಂದು ತಿಳಿಸಲಾಯಿತು.

ಕೆಳಗೆ ಅಂಗಳದಲ್ಲಿ ಅಡ್ಡಾಡುತ್ತಿದ್ದೆ. ಅಷ್ಟರಲ್ಲಿ 3-4 ಮಂದಿ ಸ್ವಯಂಸೇವಕರು ದಡಬಡನೆ ಬಂದು ಓಡಾಡತೊಡಗಿದರು. ಏನಪ್ಪಾ ಎಂದು ತಿರುಗಿದರೆ ಮಾನ್ಯ ಅಟಲ ಬಿಹಾರಿಯವರು ಆಗಮಿಸಿದ್ಧರು. 'ಉಪರ್ ಬೈಠಕ್ ಚಲ್ ರಹೀ ಹೈ? ಮೇ ಡಿಸ್ಟರ್ಬ್ ನಂಹೀ ಕರೂಂಗಾ. ಯಂಹೀ ಪರ್ ಇಂತಝಾರ್ ಕರೂಂಗಾ. ಕುಛ್ ಚಾಯ್ ವಾಯ್ ಪಿಲಾವೊ ಭಾಯ್,' ತಮ್ಮದೇ ಶೈಲಿಯಲ್ಲಿ ಮಾತನಾಡಿ ಒಳಬಂದರು. ಕಛೋರಿಯೋ ಪಾಪಡಿಯೋ ಯಾವುದೋ ತಿಂಡಿಯೊಟ್ಟಿಗೆ ಚಹ ಸಪ್ಲೈ ಆಯಿತು, ನನಗೂ ಒಂದು ಪ್ಲೇಟು ತಿಂಡಿ ಸಿಕ್ಕಿತು. ಒಂದು ಕೋಣೆಯಲ್ಲಿ ವಾಜಪೇಯಿಯವರಿಗೆ ಕೂಡಲು ವ್ಯವಸ್ಥೆಯಾಯಿತು.

ಐದು ನಿಮಿಷಗಳಲ್ಲೇ ಬೈಠಕ್ ಮುಗಿದು ಎಲ್ಲಾ ಪ್ರಾಂತ ಪ್ರಚಾರಕರು ಹೊರಬಂದು ತಮ್ಮ ತಮ್ಮ ಪ್ರಾಂತ-ಕ್ಷೇತ್ರಕ್ಕೆ ನಿಯೋಜಿತವಾದ ಕೊಠಡಿಗಳತ್ತ ಹೊರಟರು. ಮಾನ್ಯ ನ.ಕೃಷ್ಣಪ್ಪನವರನ್ನು ಕಂಡು ತುಂಬ ಸಮಯವಾಗಿತ್ತು. ಹಾಗಾಗಿ ಅವರಿಗೆ ಕೈಮುಗಿದು 'ನಾನು ಕೇಶವ ನಾಯಕ್. ಹೆಬ್ರಿಯಿಂ......'

ಅಷ್ಟರಲ್ಲಿ ಅವರೇ ನನ್ನನ್ನು ತಡೆದರು 'ಅಲ್ಲೋ ಮಹರಾಯ! ಕೇಶವಾ, ನನ್ನ ಬಳಿ ಪರಿಚಯ ಹೇಳಿಕೊಳ್ಳುತ್ತೀಯಲ್ಲೋ, ನಿಮ್ಮನ್ನೆಲ್ಲ ಮರೆಯೂದಕ್ಕಾಗತ್ತೋ!! ಸ್ವಲ್ಪ ದಿನಗಳ ಹಿಂದೆ ನಿಮ್ಮ ವಿಶ್ವನಾಥ ಮಲ್ಯ ಅಶೋಕ ಮಲ್ಯ ಸಿಕ್ಕಿದ್ದರು ಬೆಂಗಳೂರಲ್ಲಿ. ಬಾ ಬಾ. ತುಂಬ ವಿಚಾರ ತಿಳಿಸಲಿಕ್ಕಿದೆ....' ನನ್ನ ಹೆಗಲ ಮೇಲೆ ಕೈ ಹಾಕಿ ಅಪ್ಪಿಕೊಂಡೇ ರೂಮಿಗೆ ಕರಕೊಂಡು ಹೋದರು.

ನಾನು ಸಂಘದ ಸ್ವಯಂಸೇವಕನಾದರೂ ಸಕ್ರಿಯ ಕಾರ್ಯಕರ್ತನಲ್ಲ. ವಿಶೇಷ ಸಂದರ್ಭಗಳಲ್ಲಿ, ಉತ್ಸವ ಕಾರ್ಯಕ್ರಮಗಳಲ್ಲಿ ಮಾತ್ರ ನನ್ನ ಹಾಜರಿ ಇರುತ್ತಿತ್ತು. ಸಂಘದಲ್ಲಿ ಕೃಷ್ಣಪ್ಪನವರದ್ದು ಉನ್ನತ ಶ್ರೇಣಿಯ ಜವಾಬುದಾರಿ. ಪ್ರಾಂತ ಪ್ರಚಾರಕರು, ಹೆಚ್ಚಿನ ಜವಾಬುದಾರಿ, ಪ್ರವಾಸ ಮತ್ತು ಸಂಘಟನಾ ಕಾರ್ಯಗಳಲ್ಲಿ ವ್ಯಸ್ತರು. ಆದರೂ ಮುಖ ಕಂಡ ಕೂಡಲೇ ಆತ್ಮೀಯವಾಗಿ ಬರಸೆಳೆದುಕೊಂಡ ಪರಿ ನನ್ನನ್ನು ಧನ್ಯನನ್ನಾಗಿಸಿತು..!!

ಕೃಷ್ಣಪ್ಪನವರ ವ್ಯಕ್ತಿತ್ವವೇ ಹಾಗೆ. ಯಾರನ್ನೂ ಸೋಲಿಸಿ ಬಿಡುತ್ತದೆ. ಆಕರ್ಷಿಸುತ್ತದೆ.....

Wednesday, August 5, 2020

ಅಯೋಧ್ಯಾ - ಒಂದು ಅವಿಸ್ಮರಣೀಯ ನೆನಪು


"ಪಡಿಯಾರ್‍ರೇ, ಅಯೋಧ್ಯೆಗೆ ಎಂತಕೇ ಮಣ್ಣು ಹೊರಲಿಕ್ಕೆ ಹೋದದ್ದಾ? ಅಂತ ಊರಲ್ಲಿ ಕೇಳಿದ್ರೆ ಎಂತ ಹೇಳೂದೇ?" ನನ್ನ ಎದುರಲ್ಲಿ ಕೂತಿದ್ದ ಗೆಳೆಯ ಪಡಿಯಾರರಲ್ಲಿ ಪ್ರಶ್ನಿಸಿದೆ, ಕೊಂಚ ಕುಹಕದ ಛಾಯೆಯಿದ್ದರೂ ಏನೋ ಗಹನವಾದ ಘಟನೆ ಆಗಬಹುದು ಎಂಬ ಆತಂಕವಿತ್ತು....

"ಹೌದು ಮಹರಾಯರೇ, ನೋಡುವ ಏನೇನೆಲ್ಲ ಆಗ್ತದೆ ಅಂತ." ಪಡಿಯಾರರ ಸಂಯಮದ ಸಮಾಧಾನ.

ದಶಂಬರ 06, 1992....

"ರಾಮಮಂದಿರವನ್ನು ಇಲ್ಲೇ ಜನ್ಮಸ್ಥಾನದಲ್ಲೇ ಕಟ್ಟುತ್ತೇವೆ ಅದು ಧೃಡಸಂಕಲ್ಪ ಹೊತ್ತು ಕರಸೇವೆಗೆಂದು ತಾವೆಲ್ಲ ರಾಮ ಭಕ್ತರು ಬಂದಿರುತ್ತೀರಿ. ಭವ್ಯ ರಾಮಮಂದಿರ ಕಟ್ಟುವ ಆಶೆ ಇದೆ. ನಮ್ಮ ಕಲ್ಪನೆಯ ದೇವಸ್ಥಾನವನ್ನು ಕಟ್ಟಲು ವರ್ಷಗಳೇ ತಗಲುತ್ತವೆ, ಮತ್ತದನ್ನು ನುರಿತ ಕಾರೀಗರರೇ ಕಟ್ಟಬೇಕು. ಆದರೆ ಶತಮಾನಗಳಿಂದ ರಾಮ ಮಂದಿರ ಪುನರ್ ನಿರ್ಮಾಣಕ್ಕಾಗಿ ಹೋರಾಟ ನಡೆಯುತ್ತಿದೆ. ಇದು ಭಾರತದ ಅಸ್ಮಿತೆಯ ಪ್ರಶ್ನೆ. ಅಯೋಧ್ಯೆಯಲ್ಲಿ ಜನ್ಮಸ್ಥಾನದಲ್ಲೇ ಕಟ್ಟಬೇಕೆಂಬ ಹೋರಾಟಕ್ಕೆ ಇಡೀ ದೇಶವೇ ಕಟಿಬದ್ಧವಾಗಿದೆ ಎಂದು ತಿಳಿಸಲು ಪ್ರಾಂತ ಪ್ರಾಂತಗಳಿಂದ ಸಾಂಕೇತಿಕವಾಗಿ ಬಂದು ಸೇರಿದ ಕರಸೇವಕರೆಲ್ಲರೂ ಸರಯೂ ನದೀ ತೀರದಿಂದ ಒಂದೊಂದು ಮುಷ್ಟಿ ಪವಿತ್ರ ಮೃತ್ತಿಕೆಯನ್ನು ತಂದು ಹಾಕಬೇಕು." ಎಂದು ಆದೇಶಿಸಲಾಗಿತ್ತು. ಅದರಂತೆ ನಾವೆಲ್ಲ ಕರಸೇವಕರು ಒಂದೊಂದು ಮುಷ್ಟಿ ಮಣ್ಣು ಹಿಡಕೊಂಡು ಸಾಲಾಗಿ ಕೂತಿದ್ದೆವು, ಮೇಲೆ ಚಳಿಗಾಲದ ಸೂರ್ಯ ಹಿತವಾದ ಬಿಸಿಯನ್ನು ಬೀರುತ್ತಿದ್ದ, ಅಷ್ಟರಲ್ಲಿ ಒಮ್ಮೆಲೇ ದೂರದಲ್ಲಿ ಗುಂಬಜಗಳ ಮೇಲೆ ರಾಮಭಕ್ತರು ಹತ್ತಿದ್ದೂ, ಆವೇಶಭರಿತರಾದದ್ದೂ ಕಂಡು ಬಂತು.......

1990 ರಲ್ಲಿ ರಾಮರಥ ಯಾತ್ರೆ ಶುರುವಾಗಿ ದೇಶಾದ್ಯಂತ ಸಂಚರಿಸಿತು. ದೇಶವಿಡೀ ಅಯೋಧ್ಯೆಯಲ್ಲೆ ಮಂದಿರ ಕಟ್ಟುವ ಘೋಷಣೆಗಳು ಮೊಳಗಿದವು. ಸಮಸ್ತ ರಾಮಭಕ್ತರಲ್ಲಿ, ಹಿಂದೂ ಬಾಂಧವರಲ್ಲಿ ಸಂಚಲನೆ ಮೂಡಿತ್ತು. ಊರೂರುಗಳಿಂದ ಕರಸೇವಕರು ಹೊರಟರು. ಹೆಬ್ರಿಯಿಂದಲೂ ಪಂಗಡ ಹೊರಟಿತ್ತು. ಆದರೆ ಮಧ್ಯಪ್ರದೇಶ ದಾಟಿ ಒಂದು ನುಸಿಯೂ ಉತ್ತರ ಪ್ರದೇಶದೊಳಗೆ ನುಗ್ಗದಂತೆ ಮುಲ್ಲಾ ಮುಲಾಂಸಿಂಗ ಭಾರೀ ಬಂದೋಬಸ್ತು ಮಾಡಿದ್ದರಿಂದ ಯಾತ್ರೆ ಮೊಟಕಾಗಿತ್ತು. ಆಂದೋಳನದ ಚರಿತ್ರೆಯ ಕರಾಳ ಪುಟಗಳಲ್ಲಿ ಮುಲ್ಲಾ ಮುಲಾಂ ಸಿಂಗ ನಡೆಸಿದ ದೌರ್ಜನ್ಯಗಳು ಲಿಖಿತವಾಗಿವೆ. ನೂರಾರು ಕರಸೇವಕರನ್ನು ನಿರ್ದಯವಾಗಿ ಗುಂಡಿಕ್ಕಿ ಕೊಲ್ಲಲಾಯಿತು.... ಸ್ವತಂತ್ರ ಭಾರತದಲ್ಲಿ ಜನರಿಂದಲೇ ಚುನಾಯಿಸಲ್ಪಟ್ಟ ಸರಕಾರದಿಂದ ಅದೇ ಜನತೆಯ ನಿರ್ಮಮ ಹತ್ಯೆಗಳಾದವು....!!

1992 ರ ಕರಸೇವೆಗೆಂದು ಕುಂದಾಪುರದಿಂದ ಹೊರಟ ಬ್ಯಾಚಿನಲ್ಲಿ ನನ್ನದೂ ಸಹಭಾಗಿತ್ವವಿತ್ತು. ರೈಲಿನಲ್ಲಿ ಪಯಣ. ಎಲ್ಲರೂ ಬಹಳ ಉತ್ಸಾಹದಲ್ಲಿದ್ದರು. ನವಂಬರ ತಿಂಗಳ ಕೊನೆಯ ವಾರದಲ್ಲಿ ಪಯಣ. ಎಲ್ಲ ಜೋಷ್ ಮಧ್ಯ ಪ್ರದೇಶದ ಯಾವುದೋ ನಗರಕ್ಕೆ ನಡುರಾತ್ರಿ ಬಳಿಕ ಬಂದಿಳಿದಾಗ ಬಹುಮಟ್ಟಿಗೆ ಶಾಂತವಾಗಿತ್ತು. ಛಳಿಯೂ ಬೇರೆ, ಊಟವಾಗಿರಲಿಲ್ಲ. ರೈಲಿಳಿದು ಹೊರಟೆವು. "ಕಲ್ಯಾಣ್ ಸಿಂಗ್ ಆಗೇ ಬಢೋ, ಹಮ್ ತೇರೇ ಸಾಥ್ ಹೈಂ" ಒಬ್ಬರು ಜೋರಾಗಿ ಘೋಷಣೆ ಹಾಕಿದರು. ಹೆಚ್ಚಿನ ಪ್ರತಿಕ್ರಿಯೆ ಬರಲಿಲ್ಲ, "ಮಂದಿರ್ ವಹೀಂ ಬನಾಯೇಂಗೇ ಮ್ಹಣಾರೇ" ಎಂದು ಯಾರೋ ಮಣಮಣಿಸಿದರು. "ಇಲ್ಲಿ ಹೊಟ್ಟೆ ಯೊಳಗೆ ಇಲಿಗಳು ಓಡಾಡ್ತಾ ಇದ್ದಾವೆ, ಇವರು ಕಲ್ಯಾಣ್ ಸಿಂಗರನ್ನು ಕರೀತಿದ್ದಾರೆ!!" ನಾನೆಂದೆ. ಯಾರೂ ನಗಲಿಲ್ಲ, ನಾನೂ ಸುಮ್ಮನಾದೆ.

ಸಾಕಷ್ಟು ವಿಶಾಲವಾದ ಹಾಲ್ ನಲ್ಲಿ ನಮಗೆ ಊಟದ ವ್ಯವಸ್ಥೆಯಾಗಿತ್ತು. ಅಲ್ಲಿನ ಪ್ರಬಂಧಕರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಬಿಸಿಬಿಸಿಯಾದ ಊಟ ನೀಡಿದರು. ಹೊಟ್ಟೆ ತುಂಬಿದಾಗ ಎಲ್ಲರೂ ಗೆಲುವಾದರು. ಊಟ ನೀಡಿದ ಮಹಾನುಭಾವರ ಧನ್ಯವಾದ ಹೇಳಿದೆವು. ಯಾವುದೋ ಊರು, ಎಲ್ಲೆಲ್ಲಿಂದಲೋ ಬರುವ ಅಪರಿಚಿತರು ಎಲ್ಲರೂ "ಜೈ ಶ್ರೀರಾಮ್" ಎಂಬ ಮಂತ್ರದಿಂದ ಬಂಧಿತರಾಗಿದ್ದೆವು, ಹಳೆಯ ಗೆಳೆಯರಂತೆ ಸಂಭಾಷಿಸತೊಡಗಿದೆವು.

ರೈಲಿನಲ್ಲಿ ಕಂಡಾಪಟ್ಟೆ ರಶ್ಶು, ಒಬ್ಬ ಸಜ್ಜನರು ಪ್ರೀತಿಯಿಂದ ಕರೆದು ಕೂಡಲು ಜಾಗ ಕೊಟ್ಟರು. ಎಲ್ಲರ ಬಾಯಲ್ಲೂ ಕರಸೇವೆ ಯದ್ದೇ ಸುದ್ದಿ. "ತುಮ್ ಲೋಗೋಂ ಕಾ ಖರ್ಚಾ ಕೌನ್ ಉಠಾತಾ ಹೈ?" ಅವರ ಜಿಜ್ಞಾಸೆ.

"ನಮ್ಮ ನಮ್ಮ ಖರ್ಚುಗಳನ್ನು ನಾವು ನಾವೇ ನೋಡಿಕೊಳ್ಳಬೇಕು, ಯಾವುದೇ ಟೀ ಏ ಡೀ ಏ ಇಲ್ಲ."

ಆತನಿಗೆ ನಂಬಲು ಕಷ್ಟವಾಯಿತು. "ದಕ್ಷಿಣದ ಕರ್ನಾಟಕದಿಂದ ಬರುತ್ತಾ ಇದ್ದೀರಿ. ನಿಮ್ಮ ಶೃದ್ಧೆಗೆ ಮೆಚ್ಚುತ್ತೇನೆ."

ಭಗವಾನ್ ರಾಮನು ಇಡೀ ರಾಷ್ಟ್ರದ ಆತ್ಮ. ಇಷ್ಟು ಕಾಲ ಪ್ರತೀಕ್ಷೆ ಮಾಡಿದ್ದಾಯಿತು, ಇನ್ನು ನಮ್ಮ ಆಂದೋಲನ ತೀವ್ರ ವಾಗುತ್ತದೆ, ಮಂದಿರ್ ವಂಹೀ ಬನಾಯೇಂಗೆ." ಆತನಿಗೂ ಖುಷಿಯಾಯಿತು. ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಆಕೆ ಆರ್ತನಾದ ಮಾಡುವ ಸಮಯದಲ್ಲಿ ಹರಿದ ಕಣ್ಣೀರಿನ ಒಂದೆರಡು ಹನಿಗಳು ನಮ್ಮೂರ ಬಳಿ ಬಿದ್ದು ಮುಂದೆ ನದಿಯಾಗಿ ಹರಿದು ಅರಬೀ ಸಮುದ್ರವನ್ನು ಸೇರುತ್ತದೆ. ಅದರ ಹೆಸರು ಸೀತಾನದಿ. ಬಳಿಯಲ್ಲೇ ಇರುವ ಊರ ಹೆಸರೂ ಸೀತಾನದಿ. ಕೆಹನೆ ಕ ಮತಲಬ್ ಕೀ... ರಾಮನು ಇಡೀ ದೇಶಕ್ಕೆ ಸೇರಿದವನು ಎಂಬುದಕ್ಕೊಂದು ಇಂತಹ ಹಲವಾರು ಉದಾಹರಣೆಗಳು ಊರೂರುಗಳಲ್ಲಿ ದೊರಕುತ್ತವೆ." ನನ್ನ ಮಾತುಗಳಿಂದ ಆ ಸಜ್ಜನರೂ ಪ್ರಭಾವಿತರಾದರು. ಆತ ಕೂಡ ಸಾಕಷ್ಟು ವಿದ್ವಾನರೇ. ಉದ್ದಾನುದ್ದಕ್ಕೆ ಭಕ್ತ ಕಬೀರನ ದೋಹೆಗಳನ್ನು ಉದ್ಧರಿಸುತ್ತ ರಾಮಕಥೆಯನ್ನೇ ನಡೆಸಿದರು. ನನಗೂ ಆನಂದವಾಯಿತು. ಐದಾರು ದೋಹೆಗಳನ್ನು ಡೈರಿಯಲ್ಲಿ ಬರಕೊಂಡೆ.

ದಶಂಬರ ಆರರ ಘಟನೆಯ ಬಗ್ಗೆ ಹಚ್ಚೇನೂ ಬರೆಯಬೇಕಿಲ್ಲ, ಎಲ್ಲರಿಗೂ ತಿಳಿದೇ ಇದೆ... ರಾತ್ರಿ ಹನ್ನೆರಡು ಘಂಟೆಯ ವೇಳೆ ಗುಂಬಜ ಬಿದ್ದ ಜಾಗಕ್ಕೆ ಹೋದೆ. ಗುಂಬಜಗಳೆಲ್ಲ ಕ್ಲಿಯರ್ ಆಗಿ ಭಾರಿ ಉಮೇದಿನಲ್ಲಿ ಕೆಲಸ ನಡೀತಿತ್ತು, "ಭಾಯಿ ಸಾಬ್, ಹಾರೆ ಕೊಂಚ ನನಗೂ ಕೊಡು, ನನ್ನ ಪಾಲಿನ ಕರಸೇವೆ ಮಾಡ್ತೇನೆ." ಕರಸೇವಕನೊಬ್ಬನ ಬಳಿ ಕೇಳಿದೆ. ಆತನೋ ಬಹಳ ಆವೇಶ ದಲ್ಲಿದ್ದ. "ಕಾಮ್ ಕರನೇ ದೇ, ಕಾಮ್ ಕರನೇ ದೇ, ಬಾಜೂ ಹಟೋ, ಹವಾ ಆನೇ ದೇ,...." ಆ ಚಳಿಯಲ್ಲೂ ಆತ ಬೆವರಿದ್ದ...

ಇಪ್ಪತ್ತೆಂಟು ದೀರ್ಘ ವರ್ಷಗಳು ಕಳೆದವು. ಆಂದೋಲನಗಳ, ನ್ಯಾಯ ಪ್ರಕ್ರಿಯೆಗಳ ಸರಣಿ ನಡೆದೂ ನಡೆದೂ ಕೊನೆಗೆ ಸರ್ವೋಚ್ಛ ನ್ಯಾಯಾಲಯದಿಂದ ಬಹುಮಾನ್ಯದ ತೀರ್ಪು ಹೊರಬಿದ್ದಿದೆ. ಬಹಳ ಸಂತಸದ ವಿಚಾರ.

ಆಗಾಗ ಖಯಾಲು ಬರುತ್ತಿರುತ್ತದೆ... ಐವತ್ತರ ದಶಕದಲ್ಲಿ ಹುಟ್ಟಿದ ನಾವು ಭಾಗ್ಯವಂತರು. ಸ್ವತಂತ್ರ ಭಾರತದಲ್ಲಿ ಜನ್ಮ ತಳೆದ ಪುಣ್ಯವಂತರು. ಗುಲಾಮೀ ಜೀವನದ ಬವಣೆ ಅನುಭವಿಸಿದವರಿಗೇ ಗೊತ್ತು. ಬಹುತೇಕ ಜನತೆ ಬಡತನದಲ್ಲೇ ಇದ್ದರು, ವಿದ್ಯೆ, ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಪರಿಸ್ಥಿತಿ ಎಲ್ಲವೂ ನಿಕೃಷ್ಠವಾಗಿದ್ದವು. ಮೇಲಾಗಿ ಎರಡನೇ ಜಾಗತಿಕ ಯುದ್ಧದ ದುಷ್ಪರಿಣಾಮ..! 'ಅದನ್ನೆಲ್ಲ ವಿವರಿಸಲಾಗೂದಿಲ್ಲ, ವಿವರಿಸಿದರೂ ನಿಮಗರ್ಥವಾಗೂದಿಲ್ಲ ಎಂದು ನಮ್ಮ ತಂದೆಯವರು ಆಗಾಗ ಹೇಳಿ ಮೌನಕ್ಕೆ ಜಾರುತ್ತಿದ್ದರು..

ಸರ್ವಾಧಿಕಾರದ ನೋವು ಯಾವ ತೆರದಲ್ಲಿರುತ್ತದೆ ಎಂಬುದರ ಕಿರು ಪರಿಚಯವನ್ನು ಇಂದಿರಾಗಾಂಧಿಯವರು ದೇಶದ ಜನತೆಗೆ ತೋರಿಸಿದರು.

ಭಾರತವು ಒಂದು ಕಾಲದಲ್ಲಿ ವಿಶ್ವಗುರುವಾಗಿತ್ತು. ಕ್ರಮೇಣ ಪರಕೀಯರ ದುರಾಕ್ರಮಣಗಳಿಗೆ ತುತ್ತಾಗಿ ಪರತಂತ್ರವಾಗಿತ್ತು. ಆದರೆ ಸ್ವಾತಂತ್ರ್ಯದ ದಿನಗಳ ನಂತರ ಚೇತರಿಸಿಕೊಂಡು ಅಭಿವೃದ್ಧಿ ಹೊಂದಿದೆ. ದೇಶಕ್ಕೆ ಮಾನನೀಯರಾದ ಹೆಡಗೇವಾರರ, ಗುರೂಜಿ ಗೋಲವಲ್ ಕರ್ ಅವರ, ದೀನದಯಾಳ ಉಪಾಧ್ಯಾಯರ, ಅಟಲ ಬಿಹಾರೀ ವಾಜಪೇಯಿಯವರ ಸಮರ್ಥ ನಾಯಕತ್ವ  ಸಿಕ್ಕಿದೆ. ಅಂಧಕಾರ ಕಳೆದು ಸಮೃದ್ಧಿಯ ಬೆಳಕು ಮೂಡಿದೆ. ಇಂದು ಪುನಃ ಒಬ್ಬ ಸಮರ್ಥ ಮುತ್ಸದ್ದಿ ನಾಯಕನ ನೇತೃತ್ವವೂ ದೊರಕಿದೆ. ಭಾರತಮಾತೆ ಪುನಃ ವಿಶ್ವ ವಂದನೀಯಳಾಗಿದ್ದಾಳೆ.

ಒಂದು ತಾತ್ಕಾಲಿಕ ರಾಮ ಮಂದಿರ ಅಂದು ನಿರ್ಮಿಸಿ ವಾಪಸಾಗಿದ್ದೆವು. ಕಾಯುತ್ತಾ ಕಾಯುತ್ತಾ ವರ್ಷಗಳು ಉರುಳುತ್ತಿದ್ದರೂ ಕನಸು ಕನಸಾಗಿಯೇ ಉಳಿಯುತ್ತದೋ ಎಂಬ ಶಂಕೆ ಬಲವಾಗಹತ್ತಿತು.

ಪ್ರತಿಯೊಂದಕ್ಕೂ ಅದರದ್ದೇ ಸಮಯವೆಂದಿದೆ, ಆ ಸುಸಮಯವೊದಗುವ ತನಕ ಕಾಯಲೇ ಬೇಕು. ಇಂದು ಒಬ್ಬ ಧೀರ ನೇತಾರ 'ಸಬಕೇ ಸಾಥ್ ಸಬಕಾ ವಿಕಾಸ್' ಎಂಬ ತತ್ವದೊಂದಿಗೆ ನೂರಾ ಮುವತ್ತು ಕೋಟಿ ಪ್ರಜೆಗಳ ನಾಯಕರಾಗಿ ಸಿಕ್ಕಿದ್ದಾರೆ!!

ಭವ್ಯ ರಾಮ ಮಂದಿರ ನಿರ್ಮಾಣದ ಶುಭಾರಂಭವಾಗಿ ಇಂದು ನಮ್ಮ ಪ್ರಧಾನಿಯವರ ದಿವ್ಯ ಹಸ್ತಗಳಿಂದ ಭೂಮಿ ಪೂಜನಾ ಕಾರ್ಯಕ್ರಮ ನಡೆಯುತ್ತಿದೆ..!👌👌👌

ನಾವು ಭಾಗ್ಯವಂತರೆಂಬುದು ಸಾಬೀತಾಯಿತು.

ಭಾರತ್ ಮಾತಾಕೀ ಜೈ.

ಜೈ ಶ್ರೀ ರಾಮ್.👌👌💐💐



Saturday, July 25, 2020

ಭಕ್ತಿ ಶೃದ್ಧೆ ಮತ್ತು ನಂಬಿಕೆ.💐💐💐

ಭಕ್ತಿ, ನಂಬಿಕೆ ಮತ್ತು ಶರಣಾಗತಿ-

     ಒಂದು ಊರಲ್ಲಿ ಭಯಂಕರ ಕ್ಷಾಮದ ಸಂಕಟ ಬಿತ್ತು. ವರುಷಗಳಿಂದ ಮಳೆ ಬಾರದೇ ಜನರು ನಾನಾ ಕಷ್ಟ ಕೋಟಲೆಗಳಿಗೀಡಾದರು. ಅನೇಕರು ತಮ್ಮ ಗದ್ದೆ ಬೇಸಾಯಗಳನ್ನು ತೊರೆದು ಇತರ ಊರುಗಳಿಗೆ ಗುಳೇ ಹೋದರು. ಊರಲ್ಲಿ ಇನ್ನೂ ಯಾವುದೋ ಆಸೆಯ ಆಧಾರದಲ್ಲಿ ಉಳಕೊಂಡವರೂ ತಲೆಯ ಮೇಲೆ ಕೈಯಿಟ್ಟು ಆಕಾಶದತ್ತ ಕುತ್ತಿಗೆ ಉದ್ದ ಮಾಡಿ ನೋಡುತ್ತ ನಿಟ್ಟುಸಿರು ಬಿಡತೊಡಗಿದರು. ಕೊನೆಯಲ್ಲಿ ಎಲ್ಲರೂ ಸಮಾಲೋಚನೆ ಮಾಡಿ ಊರ ಹೊರಗಿನ ಗುಡ್ಡದ ಮೇಲೆ ಅಖಂಡ ಭಜನಾ ಕಾರ್ಯಕ್ರಮ ಮಾಡುವುದು, ದೇವರು ಭಕ್ತವತ್ಸಲ, ದಯಾಮಯಿ ತನ್ನ ಭಕ್ತರ ಅಭೀಷ್ಟೆಯನ್ನು ತಪ್ಪದೇ ನೆರವೇರಿಸುತ್ತಾನೆ ಎಂಬ ಮಹನೀಯರೊಬ್ಬರ ಸಲಹೆಯನ್ನು ಒಪ್ಪಿ ಗುಡ್ಡ ಏರಲು ಹೊರಟರು.

ಎಲ್ಲರೊಡನೆ ಆ ಊರಿನ ವಿಧವೆಯೋರ್ವಳ ಚಿಕ್ಕ ಮಗನೂ ಹೊರಟ. ಅವನು ಮತ್ತು ತಾಯಿ ಇಬ್ಬರೂ ತೀರ ಬಡವರಾಗಿದ್ದು ಅವಿದ್ಯಾವಂತರಾಗಿದ್ದು ಊರವರ ತಾತ್ಸಾರಕ್ಕೊಳಪಟ್ಟಿದ್ದರು. ಈ ಹುಡುಗನು ಈ ಬುದ್ಧಿವಂತ ಮಹನೀಯರ ಮಾತುಗಳನ್ನು ನೂರಕ್ಕೆ ನೂರೂ ನಂಬಿ ಭಜನಾಕಾರ್ಯಕ್ರಮಕ್ಕೆ ಹೊರಟ. ಮೇಲ್ಗಡೆ ಝಗಝಗನೆ ಝಳಪಿಸುವ ಸೂರ್ಯ. ಈ ಹುಡುಗ ತನ್ನೊಡನೆ ಒಂದು ಹಳೇ ಕೊಡೆಯನ್ನೂ ಹಿಡಿದುಕೊಂಡು ಹೊರಟಿದ್ದ. ಅವನ ಈ ಚರ್ಯೆಯನ್ನು  ನೋಡಿ ಎಲ್ಲರೂ ಗಹಗಹಿಸಿ ನಕ್ಕರು. ಏಕೆ ನಗುತ್ತೀರಿ? ಎಂದು ಮಹನೀಯರು ಕೇಳಿದರು...

'ಅಲ್ಲ ಸ್ವಾಮೀ, ಮೇಲೆ ಈ ನಮೂನೆ ಬಿಸಿಲುಂಟು, ಈ ಹುಂಬ ಹುಡುಗ ಕೊಡೆ ಹಿಡಕೊಂಡು ಬಂದಿದ್ದಾನೆ. ಹ್ಹ ಹ್ಹ' ಎಂದು ಉತ್ತರ ಬಂತು.

'ನಿಜವಾದ ಹುಂಬರು ಯಾರು? ಖಂಡಿತ ಮಳೆ ಬರೂದಿಲ್ಲ ಎಂದು ತಿಳಿದೂ ಭಜನೆಗೆಂದು ಹೊರಟ ನಾವೋ, ನನ್ನ ಮಾತಿನ ಮೇಲೆ ಅಚಲ ವಿಶ್ವಾಸವಿಟ್ಟು ಭಜನೆ ಮಾಡಿದರೆ ಮಳೆ ಖಂಡಿತಾ ಬರುತ್ತದೆ, ಬಂದಾಗ ನೆನೆಯಬಾರದಲ್ಲ ಎಂಬ ಮುಂದಾಲೋಚನೆಯ ಈ ಹುಡುಗನೋ?'

ಕ್ಷಣಕಾಲ ಊರವರು ಸಂದಿಗ್ಧಕ್ಕೊಳಗಾದರು...

ನಮ್ಮ ಅಮ್ಮ ಹೇಳಿದ ಕತೆ. ಅವರ ನೆನಪಿನ ಖಜಾನೆಯಲ್ಲಿ ಇಂತಹ ನೂರಾರು ರತ್ನಗಳಿದ್ದವು. ನನ್ನ ನಿರೂಪಣೆ ಅಷ್ಟು ಸ್ವಾರಸ್ಯವಾಗಿಲ್ಲ. ಆದರೆ ಕತೆಯ ಭಾವ ಮನದಟ್ಟು ಮಾಡಿಸಲು ಶಕ್ತನಾಗಿದ್ದೇನೆಂಬ ನಂಬಿಕೆ ಇದೆ.

Thursday, July 23, 2020

ಕೋಪ ತಾಪ, ಸಿಟ್ಟು ಸೆಡವು, ರಾಗ ದ್ವೇಷ...

ದೋಸ್ತಿ ಹಾಗೂ ವ್ಯವಹಾರಗಳಲ್ಲಿ ಸಹನೆ * ಅಸಹನೆ
 
     01: ದಿಲ್ಲಿಯ ಕರೋಲ್ ಬಾಗ್ ಏರಿಯಾದಲ್ಲಿ ನಮ್ಮ ಬ್ರಾಂಚು-'ರಾಣೀ ಝಾನ್ಸೀ ರೋಡ್ ಬ್ರಾಂಚ್'- ಬಹಳ ಫೇಮಸ್ಸು. ಪ್ರತಿಯೊಬ್ಬ ಸ್ಟಾಫೂ ಒಬ್ಬನಿಗಿಂತ ಒಬ್ಬ ಮಾಹೇರು! ಯಾವುದರಲ್ಲಿ! ಅಧಿಕ ಪ್ರಸಂಗ ಹರಕತ್ತುಗಳಲ್ಲಿ.. ಇವರ ಕೂಟಕ್ಕೆ ಗುಪ್ತಾ ಲೀಡರು. ಚಾತುರ್ಕಾಯಿ-ಬುದ್ಧಿವಂತಿಕೆ-ಮಾತು! ಇತರರ ಲೇವಡಿ ಮಾಡುವವರ ಟ್ರೇನಿಂಗ್ ಸ್ಕೂಲಿಗೆ ಈತ ಪ್ರಿನ್ಸಿಪಾಲು! ಎಲ್ಲರ ಬಳಿಯೂ ಮಾತನಾಡುವಾಗ ಒಂದಲ್ಲ ಒಂದು ಚಾಟೂಕ್ತಿ, ಸಣ್ಣ ವ್ಯಂಗ್ಯ ಇವೆಲ್ಲ ಇದ್ದದ್ದೇ. ಅನೇಕ ಸಲ ಸಣ್ಣಪುಟ್ಟ ರಸಕಸಿಗಳೂ ಆದದ್ದಿದೆ. ಇಂತಹ ಗ್ರೂಪಲ್ಲಿ ನಾನೊಬ್ಬ ಸಜ್ಜನ! ಸೇರಿಕೊಂಡೆ. ಎಲ್ಲಾ ಪ್ರಸಂಗಗಳಲ್ಲೂ ಕುಟುಕು ಮಾತಾಡಿ ನಗುವ ಪ್ರವೃತ್ತಿ ನನ್ನದಿರಲಿಲ್ಲ. ಒಂದೆರಡು ಬಾರಿ ಆಕ್ಷೇಪಿಸಿದ್ದೂ ಆಗಿತ್ತು. "ಜಿ಼ಂದಗೀ ಮೇ ಮಜೇ಼ ಸೇ ರೆಹನಾ ಭೇಣ್....ದ್" ಎಂದು ತೇಲಿಸಿಬಿಟ್ಟಿದ್ದ....

      "ಗುಪ್ತಾಜೀ, ಮೆನೆಜರ್ ಸಾಬ್ ನೇ ಏಕ್ ಸ್ಟೇಟ್ ಮೆಂಟ್ ಮಂಗ್ವಾಯಾ ಥಾ, ಹೋಗಯಾ ಕ್ಯಾ? ಪೂಛ್ ರಹೇ ಹೈಂ" ಅವನ ಟೇಬಲ್ ಬಳಿ ಹೋಗಿ ಕೇಳಿದೆ.

     "ತೂ ಕ್ಯಾ ಯಹಾಂ ಕಾ ಗವರ್ನರ್ ಲಗತಾ ಹೈ? ಬಡಾ ಆಯಾ ಸ್ಟೇಟ್ ಮೆಂಟ್ ಪೂಛನೇ..." ತೆಗೆದ ಮಾತಿಗೆ ಘಟ್ಟಿಯಾಗಿ ವದರಿದ, ಎಡಗೈ ತನ್ನ ಮೀಸೆಯನ್ನು ತಿರುವುತ್ತಿತ್ತು. ಇಡೀ ಬ್ರಾಂಚು ಅವನ ಬೊಬ್ಬೆಗೆ ಚಕಿತವಾಯಿತು, ಸ್ತಬ್ಧವಾಯಿತು. ಪಿನ್ ಡ್ರಾಪ್ ಸೈಲೆನ್ಸ್!!.

     "ಮೇ ಯಹಾಂ ಕಾ ಗವರ್ನರ್ ಲಗತಾ ಹೂಂ, ತೂ ಉಸಕಾ ಚಪರಾಸೀ ಲಗತಾ ಹೈ ಕ್ಯಾ?" ಅವನಿಗಿಂತ ಒಂದು ಮುಷ್ಟಿ ಹೆಚ್ಚು ಗರಮ್ ಹಾಗೂ ಸಿಟ್ಟಿನಲ್ಲಿ ನಾನೂ ವದರಿದೆ. ನನಗೆ ಆ ದಿನ ಕೊಂಚ ಕಿರಿಕಿರಿಯೂ ಇತ್ತು.

     "ಹೋ" ಎಂದು ಬ್ರಾಂಚಲ್ಲಿ ಬೊಬ್ಬೆ ಎದ್ದಿತು. 'ನಾಯಕ್ ಸಾಬ್ ಗುಸ್ಸೇ ಸೇ ಲಾಲ್ ಪೀಲಾ ಹೋಗಯೇ, ಮಜಾ಼ ಆಗಯಾ" ಎಲ್ಲರೂ ಗದ್ದಲ ಮಾಡಹತ್ತಿದರು.

     "ಕ್ಯಾ ಬೋಲಾ ಭೇಂ...." ಎಂದು ಕುರ್ಚಿಯಿಂದ ಎದ್ದ ಗುಪ್ತಾ...

     "ಜ್ಯಾದಾ ಶಾಣ್ ಪತ್ತೀ ದಿಖಾನಾ ಜರೂರೀ ನ್ಹಂಹೀ ಅಪನೇ ಓಕಾದ್ ಮೈ ರಹೋ." ಎಂದು ಹೇಳಿ ನನ್ನ ಟೇಬಲ್ಲಿಗೆ ಬಂದು ಕೂತೆ. ಮನಸ್ಸು ಬಹುವಾಗಿ ವ್ಯಗ್ರಗೊಂಡಿತ್ತು.

     ದಿಲ್ಲಿಯಲ್ಲಿ ಒಂದು ನಿಯಮವಿತ್ತು. ಯಾವುದೇ ಜಗಳ ಕೂಗಾಟಗಳಿರಲಿ ಹೆಚ್ಚೆಂದರೆ 2 - 3 ಘಂಟೆ. ನಂತರ ಸರಿಹೋಗುತ್ತಿತ್ತು. ಆದರೆ ನಮ್ಮಿಬ್ಬರ ಜಗಳ ಮಾತ್ರ ಸೀರಿಯಸ್ ಆಯಿತು. ಈ ಪಾಪದ ನಾಯಕ ತನಗೆ ಎದುರು ಮಾತಾಡಿದನಲ್ಲಾ ಎಂಬ ಖತಿ ಜಾಸ್ತಿಯಾಯಿತವನಿಗೆ. ನನ್ನ ಬಳಿ ಮಾತು ಬಿಟ್ಟ. ಒಳ್ಳೇದೇ ಆಯಿತು, ಸ್ವಲ್ಪ ಬುದ್ಧಿ ಬರಲಿ ಎಂದು ನಾನೂ ಮೌನ ವಹಿಸಿದೆ. ನನಗೆ ಆತನ ಸಡಿಲ ಮಾತುಗಳ ಕಿರಿಕಿರಿ ತಪ್ಪಿತು. ಸುಮಾರು ಒಂದು ವಾರವಾಯಿತು. ನನ್ನ ಬಳಿ ಮಾತು ಬಿಟ್ಟದ್ದಲ್ಲದೇ ಇತರ ಸ್ಟಾಫಿನ ಬಳಿ ಒಂದೆರಡು ದಿನ ಏನೇನೋ ವೀರಾವೇಷ ಆಡಿದ ಕಾರಣ ಹೆಚ್ಚಿನವರು ಆತನ ಹತ್ತಿರ ಮಾತು ಬಿಟ್ಟರು. 'ರೆಹತೆ ರೆಹತೇ ನಾಯಕ್ ಜೈಸೆ ಭಲೇ ಆದ್ಮೀ ಸೇ ಪಂಗಾ ಲೇ ಬೈಠಾ ಹೈ, ಉಲ್ಲೂ ಕ ಪಠ್ಠಾ' ಎಂದು ಅನೇಕರಿಗೆ ಬೇಸರವಿತ್ತು. ನಾಲ್ಕನೇ ದಿನದಿಂದ ಪೂರ್ತಿ ಮೌನವಾಗಿಬಿಟ್ಟ. ತಾನಾಯಿತು ತನ್ನ ಕೆಲಸವಾಯಿತು. ಊಟದ ಸಮಯ ಜತೆಯಾಗಿರುತ್ತಿದ್ದ, ಅದನ್ನೂ ನಿಲ್ಲಿಸಿ ತನ್ನ ಟೇಬಲ್ಲಿನಲ್ಲೇ ಉಣತೊಡಗಿದ. ಯಾವಾಗಲೂ ಮೀಸೆಯ ಮೇಲೇ ಕೈಯಿರುತ್ತಿತ್ತು, ಈಗದು ನಿಂತು ಹೋಯಿತು.

     ಎಂಟನೇ ದಿನ ಆತನ ಟೇಬಲ್ ಬಳಿ ಹೋದೆ. "ಭಾಯಿ ಗುಪ್ತಾ, ಜಿಂದಗೀ ಭರ್ ಐಸೇ ಹೀ ಮುಹ್ ಮೋಡಕೇ ರಹೋಗೆ ಕ್ಯಾ? ಗಲೇ ನ್ಹಂಹೀ ಲಗಾವೋಗೇ?"

     "ಅರೇ ನಾಯಕ್, ಯಾರ್ ಮೇರೇ ಬಡೇ ಭಾಯೀ, ಮುಝೆ ಮಾಫ್ ಕರೋ ಯಾರ್...." ಗೋಳೋ ಎಂದು ಅಳುತ್ತಾ ಖುರ್ಚಿಯಿಂದೆದ್ದು ಅಪ್ಪಿಕೊಂಡ. "ಮೇರೀ ಮತ್ ಮಾರೀ ಗಯಿ ಥೀ, ಆಪ್ ಸೇ ಝಗಡಾ ಕರಕೆ ಆಠ್ ದಿನ್ ಸೇ ಪಾಗಲ್ ಸಾ ಹುವಾ ಹೂಂ" ತಬ್ಬಿಕೊಂಡೇ ಇದ್ದ.

     "ಲೇಕಿನ್ ತೇರಾ ಅಹಮ್ ಕಾ ಕೀಡಾ ತೋ ಮರಾ ನಂಹಿ ನಾ, ಹಾಥ್ ಬಡಾಕರ್ ಮೇಂ ಹೀ ಆಯಾ, ಎನಿಹೌ ಛೋಡೋ ಇನ್ ಬಾತೋಂ ಕೋ." ನಂತರದ ದಿನಗಳಲ್ಲಿ ಅವನ ವರ್ತನೆ ತುಂಬ ಸುಧಾರಣೆ ಹೊಂದಿತು.......

     ನಾವೇಕೆ ಸಿಟ್ಟುಗೊಳ್ಳುತ್ತೇವೆ? ನಾವೇ ಬುದ್ಧಿವಂತರು, ಇತರರು ನಮ್ಮ ಮಾತು ಕೇಳಲೇ ಬೇಕು ಎಂಬಿತ್ಯಾದಿ ಹಠ ಏಕೆ ನಮ್ಮಲ್ಲಿ ಹುಟ್ಟುತ್ತದೆ? ಅದು ಒಂದು ದೌರ್ಬಲ್ಯವೇ ರೋಗವೇ?.....

     02: ಆದ್ಯತಾ ರಂಗದ ಕೆಟಗರಿಯಲ್ಲಿ ಬೇಂಕುಗಳು ನೀಡುವ ಸಾಲಗಳಿಗೆ DICGC ಯವರಿಂದ ಭದ್ರತೆ ಇತ್ತು. ಸಿಕ್ಕಾಪಟ್ಟೆ ಕಟ್ಟುಬಾಕಿಯಾದ, ವಾಪಸು ಬರುವ ಯಾವುದೇ ಸಾಧ್ಯತೆಗಳಿಲ್ಲದ ಇಂಥಾ ಸಾಲಗಳಿಗೆ ಈ ಕೊರ್ಪೋರೇಷನ್ನಿನಿಂದ ಗ್ಯಾರಂಟಿ ಲಭ್ಯವಿತ್ತು. ನನಗೆ ನೆನಪಿರುವಂತೆ 1976 ರ ಸಮಯ, ಅನ್ಯಾನ್ಯ ಕಾರಣಗಳಿಂದ ಕಟ್ಟುಬಾಕಿಯಾಗಿ - ಬೇಕೆಂತಲೇ ಓವರ್ ಡ್ಯೂ ಮಾಡಿಕೊಂಡ ಸಾಲ ಹೊರತುಪಡಿಸಿ - ಎಲ್ಲಾ ರಿಕವರಿ ಕ್ರಮಗಳ ನಂತರವೂ ವಸೂಲಾಗದ ಇಂತಹ ಸಾಲಗಳ ಬಾಬ್ತು ನಮ್ಮ ನಮ್ಮ ಬ್ರಾಂಚುಗಳ ಕ್ಲೇಮು ಕಳಿಸಬೇಕಿತ್ತು. ಎಲ್ಲಾ ಶಾಖೆಗಳ ಕ್ಲೈಮುಗಳನ್ನು ಸಂಬಂಧಪಟ್ಟ ರೀಜನಲ್ ಆಫೀಸುಗಳು ಕ್ರೋಢೀಕರಿಸಿ ಕೊರ್ಪೋರೇಷನ್ನಿಗೆ ಕಳಿಸಬೇಕಿತ್ತು. ಈ ಕ್ಲೇಮ್ ತರಿಸಿಕೊಳ್ಳುವ ಪ್ರೊಸೀಜರು ಮಾತ್ರ ಬರೀ ಕಿರಿಕಿರಿಯದ್ದಾಗಿತ್ತು. ದಿನಕ್ಕೊಂದು ಸರ್ಕುಲರ್, ಹಿಂದಿನ ಸರ್ಕುಲರ್ ಮೇಲಿನ ಪ್ರಶ್ನೆಗಳ ಸಮಜಾಯಿಷಿಗೆ ಇನ್ನಷ್ಟು ಸರ್ಕುಲರುಗಳು, ಕಳಿಸಿಕೊಟ್ಟ ಫಾರ್ಮೆಟ್ಟು ತಪ್ಪಾಗಿದೆ, ಮೂರು ಕಾಪಿ ಅಲ್ಲ ಆರು ಕಾಪಿ ಕಳಿಸಿ... ಒಂದೇ ಎರಡೇ !!!
     
     ಹೆಬ್ರಿ ಬ್ರಾಂಚಿನ ಮೆನೆಜರು ಶೆಣೈಮಾಮರು. ಬಹಳ ಒಳ್ಳೆಯ ಮನುಷ್ಯ, ಸದಾ ಚಟುವಟಿಕೆಯಿಂದ, ನಿರರ್ಗಳ ಮಾತಾಡುತ್ತ, ನಗುತ್ತ ಇರುತ್ತಿದ್ದರು. ಸ್ವಲ್ಪ ಗಡಿಬಿಡಿ ಸ್ವಭಾವ. ಅಲ್ಲದೇ ಸುರುಕ್ಕೆಂದು ಸಿಟ್ಟು ಏರುತ್ತಿತ್ತು, ಪುಸುಕ್ಕೆಂದು ಇಳಿಯುತ್ತಿತ್ತು. ನನ್ನ ಹಾಗೂ ಅವರ ಭೂತ ಒಂದೇ ಇದ್ದಿತ್ತೋ ಏನೋ, ನನಗೂ ಅವರಿಗೂ ಪದೇ ಪದೇ ಮಾತಿನ ಚಕಮಕಿ ನಡೆಯುತ್ತಿತ್ತು. ...
     
     ಅನೇಕ ಪ್ರಯತ್ನಗಳು, ಐದಾರು ಸಲ ರೀಜನಲ್ ಆಫೀಸು ಭೇಟಿ ಮತ್ತು ಲೆಕ್ಕವಿಲ್ಲದಷ್ಟು ಫೋನ್ ಕಾಲ್ ಗಳು ನಡೆದವು. 'ಈ ಸೀ ಜಿ ಸೀ ಕ್ಲೇಮಿನ ಸುದ್ದಿಯೇ ಬೇಡವಿತ್ತು ಮಾರಾಯ!! ಎಂಥಾ ಪಿರಿಪಿರಿ! ನಮ್ಮದೇ ದುಡ್ಡು ನಮಗೆ ಕೊಡೂದು, ಎಷ್ಟು ಕಷ್ಟ ಕೊಡ್ತಾರೆ ನೋಡು!' ನಾನೂ 'ಹೂಂ' ಗುಟ್ಟಿದೆ. ಆದರೆ ಒಂದು ಹೊಸಾ ನಿಯಮ ವ್ಯವಸ್ಥೆ ಶುರುವಾದರೆ ಅದು ಸರಿಯಾಗಿ ನೆಲೆಗೊಳ್ಳಬೇಕಾದರೆ ಸಾಕಷ್ಟು ಸಮಯ ತಕ್ಕೊಳ್ಳುತ್ತದೆ. ಆಗ ತಾನೇ ಋಣ ವಿಭಾಗದಲ್ಲಿ ಕೂತ ನನಗೆ ಇದರ ಅನುಭವವಿತ್ತು. 'ಅಡ್ವಾನ್ಸಸ್' ಸೆಕ್ಷನ್ ನ ಕೆಲಸಗಳ ವ್ಯಾಪ್ತಿ ವಿಸ್ತಾರ, ನನಗರ್ಥವಾಗಲು ಎರಡು ವರ್ಷ ತಗಲಿತ್ತು. ಇರಲಿ.....
     
     ಒಂದು ದಿನ-ಬುಧವಾರವಿರಬೇಕು-ರೀಜನಲ್ ಆಫೀಸಿನಿಂದ ಕ್ರೆಡಿಟ್ ವೋಚರ್-ನಾವು ಕ್ರೆಡಿಟ್ ಐಬಿಏ ಅನ್ನುತ್ತೇವೆ- ಬಂತು. ಐದೋ ಹತ್ತೋ ಸಾಲಗಳ ಕ್ಲೇಮ್ ಮಾನ್ಯ ಆದ ಬಗ್ಗೆ ಇತ್ತದು. 'ಬಂತೋ ಬಂತು ಬಂತು.' ಮೆನೆಜರರ ಸಂತಸಕ್ಕೆ ಪಾರವೇ ಇರಲಿಲ್ಲ. ಬ್ರಾಂಚಿನಲ್ಲಿ ಕುಣಿಯೂದೊಂದು ಬಾಕಿ. ಕ್ಯಾಷಿನಲ್ಲಿದ್ದ ಪ್ರಭು ಎದ್ದು ಓಡಿ ಬಂದರು. ಎಂಥದು ಬಂದದ್ದು?..
     
     'ಎಷ್ಟು ಟೈಮು ಆಯ್ತು ಮಾರಾಯಾ? ಅದು ಸರಿಯಿಲ್ಲ, ಇದು ಸರಿಯಿಲ್ಲ, ಅಲ್ಲಿ ದಸ್ಕತ್ತು ಹಾಕಿಲ್ಲ, ಇಲ್ಲಿ ಎಕೌಂಟು ಸ್ಟೇಟ್ ಮೆಂಟು ಕೊಟ್ಟಿಲ್ಲ ಅಬಬಬಬ! ಒಂದಾ ಎರಡಾ!! ಇರಲಿ ಒಂದು ಬ್ಯಾಚು ಸಾಲದ್ದು ದುಡ್ಡು ಬಂತಲ್ಲಾ!! ದೇವರೆ ದೇವರೇ...' ಅವರ ಖುಷಿಗೇ ಎಲ್ಲೆಯೇ ಇರಲಿಲ್ಲ..
     
     'ಆ ಕ್ರೆಡಿಟ್ ಐ ಬಿ ಏ ಕೊಡಿ, ಅದಕ್ಕೇನೋ ಪ್ರೊಸೀಜರ್ ಉಂಟು, ಅದರ ಪ್ರಕಾರ ಎಂಟ್ರೀ ಮಾಡಬೇಕು.' ನಾನು ಕೂತಲ್ಲಿಂದ ಎದ್ದು ಅವರ ಟೇಬಲ್ ಬಳಿ ಹೋದೆ.
     
     'ಪ್ರೊಸೀಜರ್ ಎಂತದು? ದುಡ್ಡು ಬಂದಿದೆ, ಸಾಲಕ್ಕೆ ಜಮಾ ಮಾಡೂದು, ಇಗೊಳ್ಳಿ ಇವರೇ ಈ ಎಮೌಂಟು ಸಾಲಕ್ಕೆ ಕ್ರೆಡಿಟ್ ಕೊಟ್ಟು ಕೂಡಲೇ ಚೆಕಿಂಗಿಗೆ ನನ್ಹತ್ತಿರಾನೇ ಕಳಿಸಿ.' ಅವರಿಗೆ ನಾನು ಎದ್ದು ಮಧ್ಯ ಪ್ರವೇಶಿಸಿದ್ದು ಸರಿಕಾಣಲಿಲ್ಲವೋ ಏನೋ, ವೋಚರನ್ನು ಇನ್ನೊಬ್ಬ ಕ್ಲಾರ್ಕ್ ಬಳಿ ಕೊಟ್ಟರು.
     
     'ಹೆಡ್ಡಾಫೀಸು ಸರ್ಕುಲರ್ ಹೇಗೆ ಹೇಳ್ತದೋ ಹಾಗೆ ಮಾಡಬೇಕು, ನೀವು ಹೇಳಿದಿರಿ ಅಂತ ಸಾಲಕ್ಕೆ ಕ್ರೆಡಿಟ್ ಮಾಡಿಬಿಡುದಾ?'
     
     'ಹೆಡ್ಡಾಫೀಸು ಸರ್ಕುಲರ್ ನೀನೊಬ್ಬ ಮಾತ್ರ ಓದೂದಲ್ಲ, ಹೆಡ್ಡಾಫೀಸಿನಲ್ಲಿ ನನಗೂ ತುಂಬ ಗುರ್ತ ಇದ್ದಾರೆ. ಅದೇನಾದ್ರೂ ನಾನು ನೋಡ್ಕೊಳ್ತೇನೆ, ನಿನಗೆ ಮಂಡೆಬಿಸಿ ಬೇಡ.' ಬಿಸಿಯಾದದ್ದು ಅವರಿಗೇ. ನಾನು ಮೊದಲೇ ಹೇಳಿದ್ದೇನೆ- ಸುರಕ್ಕನೇ ಏರುತ್ತದೆ ಅಂತ.
     
     ಆದರೆ ಆ ದಿನ ನನ್ನದೂ ಮಂಡೆ ಏಕೋ ಬಿಸಿ ಇತ್ತು. 'ಹೆಡ್ಡಾಫೀಸಿನವರ ಸುದ್ದಿ ತೆಗೆದದ್ದು ನಾನಲ್ಲ, ನೀವೇ. ಪ್ರೊಸೀಜರ್ ಸ್ವಲ್ಪ ಓದಲು ಟೈಮ್ ಕೊಡಿ ಅಂತ ನಾನು ಕೇಳಿದ್ದು ಅಷ್ಟೇ. ಅಷ್ಟಕ್ಕೆಲ್ಲ ಹೆಡ್ಡಾಫೀಸು, ದೋಸ್ತಿ, ಗುರ್ತ ಅಂತೆಲ್ಲ ಹೇಳಿದರೆ ಯಾರೂ ಹೆದರೂದಿಲ್ಲ, ಹೆಡ್ಡಾಫೀಸಿನಲ್ಲಿ ನನಗೂ ಮಸ್ತು ಮಂದಿ ದೋಸ್ತಿ ಇದ್ದಾರೆ....' ನನ್ನದು ಕೊಂಚ ಅಧಿಕಪ್ರಸಂಗದ ಮಾತಾಯಿತು.
     
     'ಹೋ' ಅವರ ಸಿಟ್ಟು ತಾರಕಕ್ಕೇರಿತು. 'ನಿಮ್ಮ ಎಂಟ್ರೀ ಆಯಿತಾ? ಹೇಳಿದಷ್ಟು ಕೆಲಸ ಮಾಡಲು ಏನು ಧಾಡಿ ನಿಮಗೆ?' ಲೇಡೀ ಸ್ಟಾಫ್ ಮೇಲೆ ಹರಿಹಾಯ್ದರು. ಆಕೆಗೆ ಕಕ್ಕಾಬಿಕ್ಕಿಯಾಯಿತು.
     
     'ಅವರು ಹೇಳಿದರೂ ಅಂತ ರಾಂಗ್ ಸ್ಲಿಪ್ಪು ಮಾಡಿ ಎಂಟ್ರೀ ಮಾಡಿದ್ರೇ ನೀನೇ ಜಬಾದಾರಿ, ಮತ್ತೆ ನನ್ನ ಹತ್ರ ಎಂತದೂ ಕೇಳಬೇಡ.' ನಾನೂ ಗರಮ್ಮಾಗಿ ಡೈಲಾಗು ಹೊಡೆದು ಊಟದ ಸಮಯವೆಂದು ಮನೆಗೆ ಹೊರಟೆ. ಊಟ ಆದ ಮೇಲೆ ಹೊಟ್ಟೆ ತುಂಬಿದ ನಂತರ ಮನವೂ ತಂಪಾಯಿತು. 'ಅರೇ ನಾನು ಏನು ಮಾತಾಡಿ ಬಂದೆ! ಮೆನೇಜರು ತಿಂದ ಉಪ್ಪಿನಷ್ಟು ನಾನು ಅನ್ನ ಉಣ್ಣಲಿಲ್ಲ, ಅಲ್ಲದೇ ವಯಸ್ಸಿನಲ್ಲಿ, ಲೋಕಾನುಭವಗಳಲ್ಲಿ ನನಗಿಂತ ಎಷ್ಟೋ ಹಿರಿಯರು! ಮೇಲಾಗಿ ಬಹಳ ಒಳ್ಳೆಯವರು, ನನ್ನ ಮೇಲಂತೂ ಅವರಿಗೆ ವಿಶೇಷ ಅಭಿಮಾನವಿತ್ತು! ಮೆನೆಜರು ಅಂದಾಕ್ಷಣ ಬೇಂಕಿನ ಎಲ್ಲಾ ರೂಲ್ಸು ರೆಗುಲೇಷನ್ಸು ಬಾಯಿಪಾಠ ಗೊತ್ತಿರಲೇ ಬೇಕೆಂಬ ಕಾನೂನೇನೂ ಇಲ್ಲ. ಛೇ! ಈಗ ಅವರಿಗೆ ಮುಖ ತೋರಿಸುವುದು ಹೇಗೆ?' ಚಿಂತೆ ಹತ್ತಿತು.
     
     ಮೆಲ್ಲನೇ ಮೆಟ್ಟಿಲು ಹತ್ತಿ ಬ್ರಾಂಚಿನ ಒಳ ಹೋದೆ. ಐದು ನಿಮಿಷ ಲೇಟು ಬೇರೆ. 'ಶೆಣೈ ಮಾಮು, ಹಾಂವೆ ತಾವಳಿ ಉಲ್ಲಯಿಲೇ ಮಸ್ತ ಚsಡ ಜಾಲ್ಲೆ, ಮೆಗೆಲೇ ಚೂಕಿ ಜಾಲ್ಲಿ, ಬೇಜಾರು ಕೊರೂಂ ನಜ್ಜ, ಆನಿ ಮುಕಾರೀ ಅಶ್ಶಿಂ ಉಲ್ಲಯಿನಾ....' ಇಷ್ಟು ಹೇಳುವಾಗ ಬಾಯಿ ಕಟ್ಟಿ ಹೋಯಿತು, ಇನ್ನೇನು ಕಣ್ಣಿಂದ ಒಂದು ಮಣಿ ನೀರು ಬೀಳುತ್ತದೋ ಎನ್ನುವಾಗ ಮುಖ ತಿರುಗಿಸಿ ಸುಧಾರಿಸಿಕೊಂಡೆ.
     
     'ಅರೇ, ನೀನು ಹೇಳಿದ್ದೇ ಕರೆಕ್ಟು ಮಾರಾಯಾ, ನಿನ್ನದೆಂತದೂ ಮಿಸ್ಟೀಕು ಇಲ್ಲ, ನಂದೇ ತಪ್ಪು, ಇದಕ್ಕೆಲ್ಲ ಮಾಫಿ ಗೀಫಿ ಎಂತದು! ಸರಿಯಾಗಿ ನೋಡಿ ಎಂಟ್ರೀ ಮಾಡಲು ಹೇಳಿದ್ದೇನೆ. ಅವಳು ಬೇಡ, ನೀನೇ ಆ ಎಕೌಂಟಿಂಗ್ ಮಾಡು.' ಶೆಣೈಮಾಮು ಎದ್ದು ಬೆನ್ನು ತಟ್ಟಿದರು. ಕೋಪತಾಪಗಳೆಲ್ಲಾ ಯಾವಾಗಲೋ ಠಂಡಾ ಆಗಿದ್ದವು.
     
     'ಆದರೆ ನಾನು ಮಾತಾಡಿದ್ದು ಭಾರೀ ತಪ್ಪು, ಎಲ್ಲರೆದುರು ದೊಡ್ಡ ಬುದ್ಧಿವಂತನ ಹಾಗೆ ನಿಮಗೆ ಏನೇನೋ ಹೇಳಿದೆ. ನೀವು ಬೇಜಾರು ಮಾ....'
     
     'ಬೇಜಾರೂ ಇಲ್ಲ ಈಜಾರೂ ಇಲ್ಲ..... ಎಲ್ಲಾ ಸರೀ ಉಂಟು, ನಾನು ಊಟ ಮಾಡಿ ಬರ್ತೇನೆ, ಜೋರು ಹಸಿವೆಯಾಗಿದೆ...' ಪಟಪಟನೆ ಮೆಟ್ಟಿಲಿಳಿದು ಊಟಕ್ಕೆ ನಡೆದೇಬಿಟ್ಟರು.
     
     ದೊಡ್ಡ ಯುದ್ಧ ನಡೆಯಬಹುದು ಎಂದು ಹೆದರಿದ ನನಗೆ ಅಯ್ಯಮ್ಮ ಆಯಿತು. ಶೆಣೈಮಾಮನವರ ವ್ಯಕ್ತಿತ್ವವೇ ಹಾಗೇ. ಕೂಡಲೇ ಮನ್ನಿಸಿ ಬಿಡುತ್ತಿದ್ದರು. ಪೋಸ್ಟುಮಾಸ್ಟರ್ ಸಂಜೀವಮಾಮನವರು - ನಮ್ಮ ತಂದೆಯವರ ಫ್ರೆಂಡು - ಹಿರಿಯರು ಆಗಾಗ ಸಲಹೆ, ಹಿತವಚನ ನೀಡುತ್ತಿದ್ದರು.. 'ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀ. ಮುಂದೆ ಪ್ರೊಮೋಷನ್ನು ಸಿಕ್ಕಿ ಮೆನೆಜರೂ ಆಗಬಹುದು. ಬುದ್ಧಿ ನಾಲಿಗೆಗಳ ಮೇಲೆ ಹಿಡಿತವಿಟ್ಟು ಡ್ಯೂಟಿ ಮಾಡಲು ಕಲಿ.....
     
     ಅವರ-ಸಂಜೀವಮಾಮನ-ಮಾತುಗಳನ್ನು ಆದಷ್ಟು ಮಟ್ಟಿಗೆ ಪಾಲಿಸಿಕೊಂಡು ಬಂದಿರುತ್ತೇನೆ..🙏🙏
    







Wednesday, July 15, 2020

ಪ್ರೀತಿ, ಪ್ರೇಮ, ಮುದ್ದು ಮತ್ತು ದೊಡ್ಡಮ್ಮ


     ಹಿಂದಿನ - ಸುಮಾರು ಎಪ್ಪತ್ತು ವರ್ಷಗಳಿಗಿಂತಲೂ ಹಿಂದೆ - ಕಾಲದಲ್ಲಿ ಹೆಣ್ಣು ಮಕ್ಕಳ ಮದುವೆಗಳನ್ನು ಹದಿಹರೆಯದಲ್ಲೇ ಮಾಡಿ ಪೂರಯಿಸಿ ತಂದೆ ತಾಯಿಗಳು ಧನ್ಯರಾಗುತ್ತಿದ್ದರು! 'ಅಬ್ಬಾ ಒಂದು ಹೊರೆ ಕಳಚಿತು' ಎಂಬ ಬಿಸಿಯಾದ ನಿಟ್ಟುಸಿರೂ ಬಿಡುತ್ತಿದ್ದರು! ಇರಲಿ, ಇಲ್ಲಿ ಈ ಬಾಲ್ಯವಿವಾಹದ ಕುರಿತ ಚರ್ಚೆಯಲ್ಲ.

     ನಮ್ಮ ದೊಡ್ಡಮ್ಮ-ಆಕೆ ಪುಣ್ಯವಂತೆ-ಇದೇ ಸಂಪ್ರದಾಯ - ಕ್ರಮದಂತೆ  ತನ್ನ ಹದಿಹರೆಯದಲ್ಲೇ ಮದುವೆಯಾಗಿ ಬಂದಳು. ನನ್ನ ಬಳಿ ಅನೇಕ ಸಲ ಹೇಳಿಕೊಂಡಿದ್ದಳು. 'ಅಲ್ಲ ಮಾರಾಯ! ಶಾಲೆಗೆ ಹೋಗಿ ಆಟ ಆಡಿಕೊಂಡು ಇದ್ದವಳಿಗೆ ಲಗ್ನ ಗಂಟು ಹಾಕಿ ಕಳಿಸಿಬಿಡೂದಾ? ನಂಗೆ ಎಂತ ಅಂತ ಗೊತ್ತಿಲ್ಲ , ಇಲ್ಲಿ ಕಳಿಸಿ ಬಿಟ್ರು, ಹುಡೂಗಿ ನಾನು! ಮಂಕು ಅಂದ್ರೆ ಮಂಕು! ಆದರೆ ತಲೆಯಲ್ಲಿ ಬುದ್ಧಿವಾದ ಎಲ್ಲ ತುಂಬಿ ತುಂಬಿ ಕಳಿಸಿದ್ರು ನೋಡು! ನಾನೂ ಸಹ ಹಿರಿಯರು ಹೇಳಿದ ಹಾಗೆ ನಡಕೊಳ್ತಿದ್ದೆ!!' ಮನಸ್ಸು ಆಹ್ಲಾದಕರವಾಗಿದ್ದಾಗ ಆಕೆ ತನ್ನ ರಸಮಯ ನೆನಪಿನ ಪಿಠಾರೆಯನ್ನು ಓಪನ್ ಮಾಡುತ್ತಿದ್ದಳು.

     ನನಗೆ ನೆನಪಿರುವಂತೆ ಆಕೆ ತನ್ನ ಹದಿನೈದನೇ ವಯಸ್ಸಿಗೆ ಮದುವೆಯಾಗಿ ಹೆಬ್ರಿಗೆ ಬಂದಳು. ಆಕೆಯೇ ಹೇಳಿದಂತೆ ಮಂಕು ಅಂದ್ರೆ ಮಂಕು. ಬಂದ ಎರಡು ದಿನಗಳಲ್ಲಿ ಅತ್ತೆಗೆ-ನಮ್ಮ ಅಜ್ಜಿಗೆ - ಇವಳ ಬಂಡವಾಳ ಗೊತ್ತಾಯ್ತು. ನಮ್ಮ ಅಜ್ಜಿಯನ್ನು ನಾನು ನೋಡಿಲ್ಲ, ಆಕೆ ಸಾಕ್ಷಾತ್ ದೇವತಾ ಸ್ತ್ರೀ. ಈ ಪೆದ್ದು ಹುಡುಗಿಯನ್ನು ಹೇಗೆ ಸುಧಾರಿಸೂದು ಎಂದು ಅತ್ತೆಯ ಚಿಂತೆ.

     ನಮ್ಮ ದೊಡ್ಡಮ್ಮನ ತವರು ಶೃಂಗೇರಿಯ ಹೆಸರಾಂತ ಮನೆತನ. ಸಂಪ್ರದಾಯಸ್ಥ ಮತ್ತು ದೈವಭೀರು ಮಂದಿ. ಊರಿನ ಆಢ್ಯ ವ್ಯಾಪಾರಸ್ಥ ಕುಟುಂಬ. ಮನೆಯ ಮಗಳು ಒಳ್ಳೆಯ ಘರಾಣೆಯಲ್ಲೇ ಲಗ್ನವಾಗಿ ಹೋಗಿದ್ದಾಳೆ ಎಂಬ ಸಂತೋಷವೂ ಇತ್ತು. ದೊಡ್ಡಮ್ಮ ಸಹ ಮನೆಯಲ್ಲಿ ಒಳ್ಳೆಯ ಸುಸಂಸ್ಕೃತ ನಡೆನುಡಿಗಳನ್ನು ಕಲಿತು ಬಂದವಳು, ಆದರೇನು ಮಾಡೂದು? ಸ್ವಲ್ಪ ಪೆದ್ದು. ಹುಡೂಗಿ ತಾನೇ! ಗುರುಹಿರಿಯರಿಗೆ, ಗಂಡನಿಗೆ ತಗ್ಗಿ ಬಗ್ಗಿ ನಡೆಯಬೇಕು, ಎದುರುತ್ತರ ಕೊಡಬಾರದು, ಮಾತಾಡು ದಿದ್ದರೂ ಆದಷ್ಟು ವಿನಯದಿಂದ ಮೆಲ್ಲಗೇ ಆಡಬೇಕು....... ಇತ್ಯಾದಿ ಸದ್ಗೃಹಿಣಿ ಪತಿವೃತಾ ಸ್ತ್ರೀಗೆ ಅನ್ವಯವಾಗುವ ಎಲ್ಲ ಪಾಠಗಳನ್ನು ಬಾಯಿಪಾಠ ಮಾಡಿಕೊಂಡು ಬಂದಿದ್ದಳು.

     "ಅಲ್ಲ ಮಾರಾಯ! ಪತಿಯೇ ಪರಮೇಶ್ವರ ಅಂದರೆ ಗಂಡನೇ ದೇವರು, ದಿನಾ ಅವರ ಕಾಲು ತೊಳೆದು ನೀರು ಕುಡೀಬೇಕು ಅಂತ ನನಗೆ ಹೇಳಿದ್ರು. ನಾನು ಹೇಳಿಕೊಟ್ಟ ಹಾಗೆ ಸುಮಾರು ತಿಂಗಳೊಂದೆರಡು ತಿಂಗಳಿರಬಹುದು, ಬೆಳಗ್ಗೆ ಇವರ ಕಾಲು ತೊಳೆದು ನೀರು ಕುಡಿತಿದ್ದೆ. ನಂತರ ಅತ್ತೆಯವರಿಗೆ ಈ ಸಂಗತಿ ಗೊತ್ತಾಯಿತು. ಅದು ಹಾಗಲ್ಲ ಮಗಾ, ಕಾಲು ತೊಳೆದು ನೀರು ಕುಡಿಯೂದು ಅಂದರೆ ಅದೊಂದು ಹೇಳುವ ಕ್ರಮ, ಗಂಡನ ಮೇಲೆ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಬೇಕು. ನಾಳೆಯಿಂದ ನೀರು ಕುಡಿಯೂದು ಕೈದು ಮಾಡು ಅಂತ ನಿಲ್ಸಿದ್ರು ನೋಡು, ಹಿ ಹ್ಹಿ ಹ್ಹಿ' ಎಂದು ನಕ್ಕಿದ್ದಳು.😂😂

     ಮನೆಯ ಕೆಲಸಕಾರ್ಯಗಳ ಜಬಾದಾರಿ ಅತ್ತೆಯದು, ಅವರಿಗೆ ಸಹಕಾರ ಇವಳದು. "ಒಂದು ದಿನ ಅಂಬಡೆ ಗೊಜ್ಜು ಮಾಡಲು ಅಮಟೆಕಾಯಿ ನಾಲ್ಕನ್ನು ಕಡೆಯಲು ಹೇಳಿದ್ರು ಅಂತ ಕೂತೆ ನೋಡು, ಕಡೆಯುವ ಕಲ್ಲಲ್ಲಿ ಅವು ನಿಲ್ತಾವಾ! ಗಡ ಬಡಾ ಕಟಾ ಪಟಾ ಅಂತಾ ಕಾಯಿಗಳು ಕಡೆಯುವ ಕಲ್ಲಿಂದ ಉದುರುದುರಿ ಹೊರಬೀಳೂದು ನಾನು ಪುನಾ ಅವನ್ನು ಹೆಕ್ಕಿ ಕಡೆಯಲು ಉರುಡಾಟ ಮಾಡೂದು! ಏನು ಮಾಡಿದರೂ ಅಮಟೇಕಾಯಿ ನಂಯಾ ಆಗೂದಿಲ್ಲ, ನನಗೆ ಕೇಳಲು ಹೆದರಿಕೆ. 'ಕಸ್ಸನೆ ಪುತಾ! ಆಂಬಾಡೋ ವಾಟ್ಟೀ ಮ್ಹಳೇರೀ ಬದ್ದs ವಾಟ್ಟಿತಾ ಆಸ್ಸಕೀ?' ಅತ್ತೆ ಕೇಳಿದಾಗ ಮೆಲ್ಲನೇ ಹೌದು ಅಂದೆ. 'ಹೇ ದೇವಾ! ಹೇ ಚೆಲ್ಯೇಲೆ ಜಾವ್ಚೇ ನ್ಹಂಯೀ! ಆಂಬಾಡೋ ವಾಟ್ಟೀ ಮ್ಹಳೇರೀ ಧಾಡ್ಡೋನು ಸೋಲ ಕಾಣು ಸೋಯಿ ಮಿರ್ಸಾಂಗ ಒಟ್ಟು ವಾಟ್ಟೂಚೇ, ಆಸ್ಸೊಂ ಹೆಕಡೇ ಯೋ ಹಾಂವ ಕರತಾಂ' ನನಗೆ ಆಗ ಗೊತ್ತಾದದ್ದು ನೋಡು ಅಂಬಡೇ ಗೊರಟು ನಂಯ ಆಗೂದಿಲ್ಲ ಅಂತ." ಪುನಃ ತನ್ನ ಬುದ್ಧಿವಂತಿಕೆಯ! ಎಪಿಸೋಡು ಹೇಳಿ ಕಿಸಿಕಿಸಿ ನಕ್ಕಳು.😊😀😁😂

     "ಆನೇಕ ಪಟೀ ಕಸ್ಸಲೆಂ ಜಾಲ್ಲೆಂ ಗೊತ್ತಸ್ವೇ.... ಯಾವುದೋ ಗೊಜ್ಜು ಮಾಡಲಿಕ್ಕಿತ್ತು, 'ವೈಗೋ ಹಾಂವ ನ್ಹಾವ್ಚೆ ವತ್ತಾ, ತೇ ಗೊಜ್ಜಾ ಏಕು ಲೊಸಣೇ ಕಾಂದೊ ಉಡಯಿ, ರೂಚೇಕ, ಇತೇಂ' ಅತ್ತೆಯೇನೋ ಹೇಳಿ ಹೋದರು ನನಗೆ ಸಮಸ್ಯೆಗೇ ಬಿತ್ತು. ಬೆಳ್ಳುಳ್ಳಿ ಗಡ್ಡೆ ಎಷ್ಟು ದೊಡ್ಡದು ಅಂತ ಹೇಳಲಿಲ್ಲ ಮತ್ತು ಎಷ್ಟು ದೂರ ನಿಂತು ಬಿಸಾಡಬೇಕು ಅದೂ ಹೇಳಲಿಲ್ಲ. ಆದರೂ ಅಜಮಾಯಿಷು ನೋಡಿಕೊಂಡು ಒಂದು ಬೆಳ್ಳುಳ್ಳಿ ಗಡ್ಡೆಯನ್ನು ಗೊಜ್ಜು ಮಾಡಿಟ್ಟ ಪಾತ್ರೆಯಲ್ಲಿ ಬಿಸಾಡಿದೆ.

     "ಮಧ್ಯಾಹ್ನ ಗಂಡಸರು ಊಟಕ್ಕೆ ಬಂದವರು, ಯಾವುದೇ ಕಮಕ್ ಕಿಮಕ್ ಅನ್ನದೇ ಬಾಯಿ ಮುಚ್ಚಿಕೊಂಡು ತಿಂದು ಹೋದರು! ಆದರೆ ದೇವು ಮಾತ್ರ (ನಮ್ಮ ತಂದೆ) ಒಂದು ರೀತಿ ಮುಖ ಮಾಡಿದ, ಅವನೂ ಏನೂ ಹೇಳಲಿಲ್ಲ. ಕೊನೆಗೆ ಅತ್ತೆಯವರಿಗೆ ಬಡಿಸುವಾಗ ಆ ಇಡೀ ಬೆಳ್ಳುಳ್ಳಿ ಗಡ್ಡೆ ಅವರಿಗೇ ಸಿಗಬೇಕೆ! ಒಂದು ಸಲ ನನ್ನ ಮುಖ ನೋಡಿದರು, ಏನೂ ಹೇಳಲಿಲ್ಲ ಆದರೆ ಅವರ ಮೌನವು ನೂರೆಂಟು ಮಾತುಗಳನ್ನು ಹೇಳಿದವು!" ಮುಂದಿನ ದಿನಗಳಲ್ಲಿ ಅವರೆಷ್ಟು ವಿಧಗಳಲ್ಲಿ ನನ್ನನ್ನು ಪ್ರೀತಿ ಪ್ರೇಮಗಳಿಂದ ತಿದ್ದಿದರು! ಅವರ ಸೇವೆ ಹೆಚ್ಚು ಮಾಡುವ ಯೋಗ ನನ್ನದಾಗಲಿಲ್ಲ......''

     ಮೇಲಿನವು ನಮ್ಮ ದೊಡ್ಡಮ್ಮನ ಮುಗ್ಧತೆಯ ಉದಾಹರಣೆ. ಸ್ವಲ್ಪ ನಗು ಬರುತ್ತದೆ, ಆದರೆ ನಮ್ಮ ದೊಡ್ಡಮ್ಮನಂತಹ ಮಹಿಳಾಮಣಿ, ಗೌರವಾನ್ವಿತ ಪತಿವೃತಾ ಸ್ತ್ರೀಯರು ನಾಡಲ್ಲಿ ಬಹು ವಿರಳವಾಗಿ ಸಿಗುತ್ತಾರೆ! ಹಿರಿಯರ ಮೇಲೆ ಭಕ್ತಿ ಗೌರವ, ಕಿರಿಯರಲ್ಲಿ ಪ್ರೀತಿ, ಓರಗಿತ್ತಿಯವರಲ್ಲಿ ಪ್ರೇಮ ವಾತ್ಸಲ್ಯ ಇವೆಲ್ಲವನ್ನು ಅವರಿಂದ ಕಲಿಯಬೇಕು.

      ಆಕೆ ಮತ್ತು ಅಂದಿನ ಹಿರಿಯರು ಶಾಲಾ ಶಿಕ್ಷಣ ಹೆಚ್ಚು ಹೊಂದಿರದಿದ್ದರೂ ಅವರ ಜ್ಞಾನ ಇಂದಿನ ಶಿಕ್ಷಿತ! ಜನಾಂಗಕ್ಕಿಂತ ಎಷ್ಟೋ ಪಾಲು ಹೆಚ್ಚಿನದು. ನನಗೆ ಅನೇಕ ವೇಳೆ ದೊಡ್ಡಮ್ಮನೊಡನೆ ಮಾತುಕತೆಗಳಿಗಿಂತ ಅವಳ ಸಾನ್ನಿಧ್ಯದ ಮೌನವೇ ಹೆಚ್ಚು ಪ್ರಿಯವಾಗುತ್ತಿತ್ತು ........

Sunday, July 12, 2020

ಟಾಕೂ ಟೂಕೂ, ಟಾಕೂ ಟುಕೂ, ಟಾಕೂ ಟುಕೂ


     ಸಾವಿರದ ಒಂಭೈನೂರ ಎಂಭತ್ತನಾಲ್ಕರ ಮೇ ತಿಂಗಳಲ್ಲಿ ದೆಹಲಿಗೆ ಹೊರಟೆ. ಆ ವರ್ಷ ಅತ್ಯಧಿಕ ಸೆಕೆ ಇತ್ತು ಎಂಬ ನೆನಪು, ತೀಕ್ಣವೋ ಸಾಮಾನ್ಯವೋ ಹೊಸಬನಾದ ನನಗೆ ಸಹಿಸಲಾಗದ ಶಾಖ....!!!  ಹಾಗಾಗಿ ಒಬ್ಬನೇ ಹೊರಟಿದ್ದೆ, ನಂತರ ಜುಲೈ ತಿಂಗಳ ಕೊನೆಯ ವಾರದಲ್ಲಿ ರಜ ಹಾಕಿ ಫ್ಯಾಮಿಲಿ ಶಿಫ್ಟ್ ಮಾಡಿದೆ. ಶೆಖೆಯ ರಾಪು ಕೊಂಚ ಕಡಿಮೆ ಇತ್ತು. ನಂತರದ ದಿನಗಳು ಆರಾಮದಾಯಕವಾಗಿದ್ದವು, ಕ್ರಮೇಣ ಚಳಿಯ ದಿನಗಳು.. ನಮಗೆ ಚಳಿಯ ಅನುಭವವಿಲ್ಲ, 'ಐಸೀ ಕಡಾಕೇ ಕೀ ಸರ್ದೀ ಪಡೇಗಿ ನಾಯಕ್! ತೇರೆ ಸೇ ಹೋ ನ್ಹಂಹೀ ಪಾಯೇಗಾ!' ಎಂದು ಬ್ರಾಂಚಿನ ಫ್ರೆಂಡ್ಸು ಹೆದರಿಸತೊಡಗಿದರು. ...

     ಚಳಿಗಾಲದಲ್ಲಿ ದಿನ ಚಿಕ್ಕದು, ರಾತ್ರಿ ಉದ್ದ. ಬೇಗನೆ ಕತ್ತಲಾಗುತ್ತಿತ್ತು. ಬೇಗನೇ ಊಟ ಮುಗಿಸಿ ಬೆಚ್ಚನೇ ಮಲಗುವ ಆತುರ. ಹುಡುಗನಿಗೆ ಐದೂವರೆ ಮಗಳು ಎರಡು ವರ್ಷದವಳು. ರಾತ್ರಿ ಒಂಭತ್ತರ ಸೀರಿಯಲ್ ಮುಗಿಯುತ್ತಲೇಬೆಚ್ಚಗೇ ರಜಾ಼ಯೀ ಹೊದ್ದುಕೊಂಡು ಕಥೆ ಕೇಳುತ್ತಾ ನಿದ್ರೆಗೆ ಜಾರುವ ಕ್ರಮ.....

     "ಏಕ್ ಗಾಂವಾಂತು ಏಕ ರಾನ್ ಆಸ್ಸೀಲೇ... ಆ ಕಾಡಿನಲ್ಲಿ ಅನೇಕ ಮೃಗ ಪಕ್ಷಿಗಳಿದ್ದವು. ಅವುಗಳ ರಾಜ ಸಿಂಹ..."

     "ಸಿಂವು ಮತಲಬ್?"

     "ಸಿಂಹ ಅಂದರೆ ಎಲ್ಲಾ ಪ್ರಾಣಿಗಳಿಗಿಂತ ಸ್ರ್ಟಾಂಗು, ಘ್ರಾಂ ಘ್ರಾಂ ಹಾಗಾಗಿ ಅದು ಪ್ರಾಣಿಗಳ ಲೀಡರ್, ಕಿಂಗ್.. ಒಂದು ಸಲ ಕಾಡಿನಲ್ಲಿ ವರ್ಷಾವಧಿ ಎಥ್ಲೆಟಿಕ್ಸ್ ಸುರುವಾಯಿತು. ರೇಸಿಂಗ್ ಐಟಮ್ಮಿನ ಪಾರ್ಟಿಸಿಪೆಂಟ್ಸ್ ಮೊಲ, ಆಮೆ ಅಲ್ಲದೇ ಮತ್ತು ಕೆಲವರು..

     "ಟರ್ಟಲ್ ಅಂದರೆ ಆಮೆ ನಡಿಯೂದು ಮೆಲ್ಲ ಮೆಲ್ಲಗೆ, ಅಂದರೆ ಟಾಕೂ ಟೂಕೂ, ಟಾಕೂ ಟೂಕೂ, ಟಾಕೂ ಟುಕೂ....... ಆದರೆ ರೇಬಿಟ್ ಜೋರಾಗಿ ಓಡೂದು, ಅಂದರೆ ರೊಂಯ್ ರೋಂಯ್, ರೊಂಯ್ ರೋಂಯ್......

     1960 ರ ಸಮಯ. ನಮ್ಮ ಅಜ್ಜಿ ಭವಾನಿಮಾಯಿ. ನಾವು ಅವಳ ಮಗಳ ಮಕ್ಕಳು, ನಮ್ಮ ಮೇಲೆ ಅವಳು ಹರಿಸುತ್ತಿದ್ದ ಪ್ರೀತಿ ಒಂದು ತೂಕ ಜಾಸ್ತಿ. ಅವಳು ಮೊಮ್ಮಕ್ಕಳನ್ನು ಕೂಡಿಕೊಂಡು ಹೇಳುತ್ತಿದ್ದ ಕಥೆಗಳಲ್ಲಿ 'ಆಮೆಯೂ ಮೊಲವೂ' ಕಥೆ ಸಹ ಪ್ರಮುಖವಿತ್ತು.

     ಎರಡು ಸಾವಿರದ ಹನ್ನೆರಡರ ನಂತರದ ದಿನಗಳು. ಈಗ ಹೆಬ್ರಿ ಕೇಶವ ನಾಯಕ ಅಜ್ಜ. ಇಬ್ಬರು ಪುಳ್ಳಿಗಳಿಗೆ ದಿನಾ ಕತೆ ಹೇಳುವ ಸಂಭ್ರಮ. ಕತೆ ಯಾವುದು? ಅದೇ 'ಆಮೆಯೂ ಮೊಲವೂ' ......

     "ಆಜ್ಜಾ ಟೊರ್ಟೋಯಿಸಾನ ಕಶ್ಶೀ ವಚ್ಚೆಂ? ಟಾಕೂ ಟೂಕೂ, ಟಾಕು ಟೂಕೂ, ಟಾಕು ಟುಕೂ...."

     ಇನ್ನು ಇಪ್ಪತ್ತು ವರ್ಷಗಳ ಬಳಿಕವೂ ನಮ್ಮ ಮೊಮ್ಮಕ್ಕಳೂ ಸಹ ಅವರವರ ಮಕ್ಕಳಿಗೆ ಹೇಳುವ ಕಥೆಗಳಲ್ಲಿನ ಪ್ರಾಮಿನೆಂಟ್ ಕಥೆ ಯಾವುದು! .... "ಆಮೆಯೂ ಮೊಲವೂ." ಆಮೆ ಹೇಗೆ ಚಲಿಸುತ್ತದೆ? ಟಾಕೂ ಟುಕೂ, ಟಾಕೂ ಟೂಕೂ, ಟಾಕೂ ಟುಕೂ....‌‌

     ಈ ಆಮೆ ಮತ್ತು ಮೊಲದ ಜೋಡಿಯ ವಯಸ್ಸು ಎಷ್ಟಾಗಿರಬಹುದು!!? ಕಮ್ಮಿ ಕಮ್ಮಿ ಐನೂರಕ್ಕಿಂತ ಜಾಸ್ತಿಯೇ ಇರ ಬಹುದು, ಅಥವಾ ಇನ್ನೂ ಹಿಂದಕ್ಕೆ ಹೋಗಬೇಕೋ? ನಮ್ಮ ಅಜ್ಜಿ ನಮಗೆ ಹೇಳಿದ್ದರು, ಅವರಿಗೆ ಅವರಜ್ಜಿ ಹೇಳಿರಬಹುದು, ಅವರಿಗೆ ಅವರಜ್ಜಿ....

     ಆಮೆಯು ನೂರಾರು ವರ್ಷಗಳ ತನಕ ಜೀವಿಸುತ್ತವೆ. ಹಿಂದೂ ಮಹಾಸಾಗರದಲ್ಲಿ ನಾನೂರೈವತ್ತು ವರ್ಷಗಳಿಗಿಂತ ಹಿರಿಯ ಕೂರ್ಮವೊಂದನ್ನು ಪತ್ತೆ ಹಚ್ಚಿದ್ದಾರಂತೆ.. ಆ ಆಮೆಯೇ ಮೊತ್ತ ಮೊದಲ ರೇಸಿನಲ್ಲಿ ಪಾರ್ಟಿಸಿಪೇಟ್ ಮಾಡಿ ಗೆದ್ದ ಅಭ್ಯರ್ಥಿಯಾಗಿರಬೇಕು....

     ಇಂತಹ ಸಾರ್ವಕಾಲಿಕ ಕಥೆಗಳು ಅನೇಕವಿವೆ. ಅವುಗಳು ನಿತ್ಯ ನೂತನ, ನಮ್ಮ ಅಜ್ಜಿ ಎಷ್ಟು ಚಂದವಾಗಿ ಹೇಳುತ್ತಿದ್ದರೋ ಮತ್ತೆಷ್ಟು ಆಸಕ್ತಿಯಿಂದ ನಾವು ಕೇಳುತ್ತಿದ್ದೆವೋ, ಆದೇ ತೆರದಲ್ಲಿ ನನ್ನ ಮಕ್ಕಳೂ ಕೇಳಿದ್ದರು ಮುಂದಿನ-ಈಗಿನ ಪ್ರಸಕ್ತ-ದಿನಗಳಲ್ಲಿ ಮೊಮ್ಮಕ್ಕಳೂ ಅಷ್ಟೇ ತನ್ಮಯತೆಯಿಂದ ಆಲಿಸಿದ್ದಾರೆ ಖುಷಿ ಪಟ್ಟಿದ್ದಾರೆ ಮತ್ತು ಮೆಲಕು ಹಾಕುತ್ತಿರುತ್ತಾರೆ....ಈ ಖುಷಿಯು ಅವರ ಮೊಮ್ಮಕ್ಕಳ ಸಮಯದಲ್ಲಿ ಒಂದು ಮುಷ್ಟಿ ಜಾಸ್ತಿಯೇ ಇರಬಹುದು!!

     ಆ ಕೂರ್ಮವು ಹಿಂದೂ ಮಹಾಸಾಗರದಲ್ಲಿ ಹಾಗೂ ಜಗತ್ತಿನ ಎಲ್ಲ ಜನಮಾನಸದಲ್ಲೂ ಅಮರವಾಗಿರುತ್ತದೆ ಎಂದು ನನ್ನ ಧೃಡ ವಿಶ್ವಾಸ..

Thursday, July 9, 2020

ಇಂದಿನ ದಿನ ಸುದಿನ


     ಇಂದಿನ ದಿನ ಸುದಿನ......

     ಹೆಬ್ರಿ ಕೇಶವ ನಾಯಕನಿಗೆ ದೇವರು ಹಾಗೂ ಕೆ ಕೆ ಪೈಯವರು ದಯತೋರಿಸಿದ್ದರ ಫಲವಾಗಿ ಸಿಂಡಿಕೇಟಿನಲ್ಲಿ ನೌಕರಿ ಲಭ್ಯವಾಯಿತು. ಸಾವಿರದಾ ಒಂಭೈನೂರ ಎಪ್ಪತ್ತನೇ ಇಸವಿಯ ಮಧ್ಯಭಾಗದಲ್ಲಿ ಕ್ಲೆರಿಕಲ್ ಟೆಸ್ಟ್ ನಡೆದು ಪಾಸಾಗಿ ಮುಂದೆ ಎರಡು ತಿಂಗಳ ಟ್ರೈನಿಂಗು ಎಟೆಂಡ್ ಮಾಡಿ ಊರಲ್ಲಿ ಆರ್ಡರ್ ಗಾಗಿ ಕಾಯುತ್ತಿದ್ದೆ. ಕಲಿತದ್ದು ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಕೋರ್ಸು. ಆದರೆ ಎಲ್ಲದಕ್ಕೂ ಕಾಲ, ಯೋಗ ಕೂಡಿ ಬರಬೇಕು, ದೇವರ ಕೃಪೆಯಾಗಬೇಕು ಎಂದು ಹಿರಿಯರು ಹೇಳಿರುತ್ತಿದ್ದು, ಆ ಯೋಗ ಮತ್ತು ದೇವರ ಕೃಪೆಗಾಗಿ ಕಾತರದಿಂದ ಕಾಯುತ್ತಿದ್ದೆ. ನಮ್ಮ ಬಾಬು-ವೆಂಕಟೇಶ ಕಮ್ತಿಯ ಯೋಗ ಚೆನ್ನಾಗಿತ್ತು. ನನಗಿಂತ ಬೇಗ ದೇವರ ಕೃಪಾಕಟಾಕ್ಷ ಅವನ ಮೇಲೆ ಬಿತ್ತು. ನಾನು ಅವನಿಗಿಂತ ಮೂರು ದಿನಕ್ಕೆ ಸೀನಿಯರ್, ನನಗೆ ಅವನಿಗಿಂತ ಮಾರ್ಕು ಜಾಸ್ತಿ. ಹಾಗಿದ್ದಾಗ ದೇವರ ಫೈಲಲ್ಲಿ ಅವನ ನಂಬ್ರ ಹೇಗೆ ಮೊದಲು ಬಂತು!!?? ಇರಲಿ, ಕಲಿತ ವಿದ್ಯೆಯ ದಿಕ್ಕಿನಲ್ಲೇ ಅವನಿಗೆ ಉದ್ಯೋಗ ಲಭ್ಯವಾದದ್ದು ಖುಷಿಯ ವಿಚಾರ, ನಾನು ಕಾಯುತ್ತಲೇ ಇದ್ದೆ...

     ಎಪ್ಪತ್ತೊಂದನೇ ಇಸವಿಯ ಫೆಬ್ರವರಿಯ ಒಂದು ದಿನ ಪೋಸ್ಟು ತರಲು ಪೋಸ್ಟಾಫೀಸಿಗೆ ಹೋಗಿದ್ದೆ. ದಿನಕ್ಕೆ ಕಮ್ಮಿಯೆಂದರೆ ಎಂಟು-ಹತ್ತು ಪತ್ರಗಳಾದರೂ ನಮ್ಮ ಅಂಗಡಿಯ ಹೆಸರಲ್ಲಿ ಇರುತ್ತಿದ್ದವು-ಕೊಂಚಾಡಿ ಅಪ್ಪಯ್ಯ ಶಾನುಭಾಗ್, ಪಂಚಮಾಲ್ ವಾಸು ಮಾಮ, ರೇಟು ಲಿಸ್ಟು ಇತ್ಯಾದಿ ಇತ್ತಾದಿ... ಹಾಗಾಗಿ "ವಸರೇ ಪೋಸ್ಟ್ ಹಾಡಿ" ಎಂದು ಚಿಕ್ಕಪ್ಪ ಓಡಿಸುತ್ತಿದ್ದರು. ನಮಗೂ ಸಂಜೀವ ಮಾಮರ ಮನೆಯಲ್ಲಿನ ಅಂಚೆಕಛೇರಿಗೆ ಹೋಗೂದೆಂದರೆ ಭಾರೀ ಖುಷಿ. ಯಾವುದಾದರೂ ಅಪರೂಪದ ಸ್ಟಾಂಪು ಇದ್ದರೆ ಅವುಗಳನ್ನು ತೆಗೆದಿಟ್ಟು ನಮಗೆ ಕೊಡುತ್ತಿದ್ದರು. ಆ ಸ್ಟಾಂಪುಗಳ ಆಸೆಯಿಂದಾಗಿ ಹೆಚ್ಚಾಗಿ ಪೋಸ್ಟು ತರಲು ಕೇಶವ ನಾಯಕನೇ ಓಡುತ್ತಿದ್ದ...

     ಸಂಜೀವ ಮಾಮರ ಪೋಸ್ಟು ಆಫೀಸಿನ ಕಾರ್ಯವೈಖರಿಯು ನೋಡಲು ಬಲು ಚಂದ. ಸಂಜೀವ ಮಾಮ ಪೋಸ್ಟುಮಾಸ್ಟರು, ಹಸನ್ ಸಾಹೇಬ ಪೋಸ್ಟ್ ಮೇನ್-ಸೆಂಟ್ರಲ್ ಗೋರ್ಮೆಂಟ್ ಎಂಪ್ಲೋಯೀ!- ಮತ್ತು ಇ ಡಿ ಡಿ ಏ ಮರ್ತಪ್ಪ ಇವರೆಲ್ಲ ಸ್ಟಾಫು.. ಮೇಲ್ ಬಸ್ಸಿನಲ್ಲಿ ಬರುವ ಪೋಸ್ಟ್ ಬೇಗನ್ನು ತಂದು ಸಂಜೀವ ಮಾಮರ ಸಮಕ್ಷಮ ಸೀಲು ಒಡೆದು ವಿಂಗಡಿಸಬೇಕು.
    
     ವಿಂಗಡಿಸುವುದು ಹಸನ್ ಸಾಹೇಬನ ಕೆಲಸ. ವಿಂಗಡಿಸಿದ ಪೋಸ್ಟಿನ ಮೇಲೆ ಅ ದಿನದ ಸೀಲು ಗುದ್ದುವ ಸ್ಟೈಲೇ ಬೇರೆ, ಅದೇ ಒಂದು ಚಂದ!! ತಾನು ಸೆಂಟ್ರಲ್ ಗೋರ್ಮೆಂಟು ಎಂಪ್ಲೋಯೀ ಎಂಬ ಧಿಮಾಕು ಹಸನ್ ಸಾಹೇಬನದ್ದು. ಈ ಸೆಂಟ್ರಲ್ ಗವರ್ನಮೆಂಟ್ ಜಾಬ್ ಒಂದು ದೊಡ್ಡ ಕುಂಬಳಕಾಯಿ ಅಂತ ನಾವು ಮಕ್ಕಳು ನಂಬಿ ಅವನಿಗೆ ಸಣ್ಣಗೆ ಹೆದರಿ ಮರ್ಯಾದೆ ಕೊಡುತ್ತಿದ್ದೆವು. ಅವನು ಸೀಲು ಗುದ್ದುವ ತನ್ಮಯತೆ, ಗತ್ತು ಆಹಾ ಅದರ ಚಂದವೇ ಚಂದ! ಅದರ ಸೌಂಡು ನಮಗೆ ಸಂಗೀತದಂತೆ ಕೇಳುತ್ತಿತ್ತು. ಅದರ ಮುಂದೆ ಆರ್ ಡಿ ಬರ್ಮನ್ನರ ಡ್ರಮ್ ಬೀಟ್ಸ್ ಸಹ ಏನೂ ಅಲ್ಲ, ಅವನು ಸೀಲು ಗುದ್ದುವಾಗ ಪೋಸ್ಟಾಫೀಸಿನಲ್ಲಿ ಲೈಬ್ರೇರಿಯ ಮೌನವಿರುತ್ತಿತ್ತು. ಮಧ್ಯೆ ಮಧ್ಯೆ ಯಾರಾದರೂ ಪೋಕರಿಹುಡುಗರು ಕೀಟಲೆ ಮಾಡಿದರೆ ಅವರನ್ನು ಹೊರಕಳಿಸಲಾಗುತ್ತಿತ್ತು. ಆದ್ದರಿಂದ ನಾವು ಹುಡುಗರು ಆದಷ್ಟು ಶಿಸ್ತನ್ನು ಮೇಂಟೈನ್ ಮಾಡುತ್ತಿದ್ದೆವು. ಸೀಲು ಗುದ್ದಿ ತಯಾರಾದ ಪತ್ರಗಳು ಶಿಸ್ತಾಗಿ ಜೋಡಿಸಲ್ಪಟ್ಟು ಪೋಸ್ಟುಮಾಸ್ಟರ ಟೇಬಲ್ ಮೇಲೆ ಭಕ್ತಿಯಿಂದ ಇಡಲ್ಪಡುತ್ತಿದ್ದವು. ನಾವು ಮೊದಲೇ ನಿರ್ಧರಿಸಿದ, ನಿಗದಿತಗೊಂಡ ಸರತಿ ಕ್ರಮದಲ್ಲಿ ನಿಲ್ಲುತ್ತಿದ್ದೆವು. ಮೊದಲು ಸಿಂಡಿಕೇಟು ಬೇಂಕು, ಸೀ ಏ ಬೇಂಕು, ಹೈಸ್ಕೂಲುಗಳಿಗೆ ಪ್ರಾಶಸ್ತ್ಯ. ನಂತರ ಶ್ರೀನಿವಾಸ ಮುಕುಂದ ನಾಯಕ್ ಎಂಡ್ ಬ್ರದರ್, ಪಾಂಡರಂಗ ರಮಣ ನಾಯಕ್, ನರಸಿಂಹ ನಾಗಪ್ಪ ಶೆಣೈ, ಭಟ್ ಬ್ರದರ್ಸ್, ಹರಿದಾಸ ಪೈ....ಹೀಗೆ ರೇಂಕಿಂಗ್ ಇರುತ್ತಿದ್ದವು. ಬಂದ ಪೋಸ್ಟುಗಳ ಬಟವಾಡೆಯೂ ತನ್ನದೇ ಆದ ಗಾಂಭೀರ್ಯದಿಂದ ಆಗುತ್ತಿತ್ತು.

     ಆದಿನ ಶ್ರೀನಿವಾಸ ಮುಕುಂದ ನಾಯಕ್ ಎಂಡ್ ಬ್ರದರ್ ವಿಳಾಸಕ್ಕೆ ಬಂದ ಒಂಭತ್ತು ಪತ್ರಗಳನ್ನು ಪಡಕೊಂಡು ಹೊರಡುವಾಗ "ಕೇಶವ ನಾಯಕ ಸ್ವಲ್ಪ ತಾಳು" ಎಂದು ಸಂಜೀವಮಾಮರು ಆದೇಶಿಸಿದರು. ಏನಪ್ಪಾ ಎಂದುಕೊಂಡು ನಿಂತೆ. ಅಲ್ಲಿ ಬಂದ ಎಲ್ಲರ ಪತ್ರಗಳ ಬಟವಾಡೆ ಆದ ಬಳಿಕ "ಎಚ್ ಕೇಶವ ನಾಯಕ್ ಸನ್ ಆಫ್ ಎಚ್ ದೇವಣ್ಣ ನಾಯಕ್, ಹೆಬ್ರಿ, ತಗೋ" ಎಂದು ಒಂದು ಪತ್ರವನ್ನು ಪ್ರೀತಿಯಿಂದ ಸವರಿ ನನಗೆ ಕೊಟ್ಟರು. "ದೇವರು ನಿನಗೆ ಒಳ್ಳೇದು ಮಾಡಲಿ" ಎಂದು ಹರಸಿದರು. ಪತ್ರ ತೆರೆದು ನೋಡಿದೆ. ಸಿಂಡಿಕೇಟ್ ಬೇಂಕ್ ಮಣಿಪಾಲದ ಕೇಂದ್ರ ಕಛೇರಿಯ ಪ್ರಿಮೈಸಸ್ ಡಿಪಾರ್ಟ್ ಮೆಂಟಿನಲ್ಲಿ ಕ್ಲರ್ಕ್ ಕೆಲಸ ನೀಡಿ, ಪತ್ರ ಸಿಕ್ಕಿದ ಏಳು ದಿನಗಳ ಒಳಗೆ ಹಾಜರಾಗಬೇಕು ಎಂಬ ಆದೇಶ ಹೊತ್ತ ಪತ್ರವಾಗಿತ್ತು.

     ಆ ಸಮಯದಲ್ಲಿ ಹೆಬ್ರಿ ಸಣ್ಣ ಊರಾಗಿತ್ತು. ಬಹುತೇಕ ಮಂದಿ ಬಡವರಾಗಿದ್ದರು. ಆದರೆ ಯಾರೂ ಪ್ರೀತಿಯಲ್ಲಿ ಸಣ್ಣವ ರಾಗಿರಲಿಲ್ಲ, ಹೃದಯವಂತಿಕೆಯಲ್ಲಿ ಎಲ್ಲರೂ ಶ್ರೀಮಂತರಾಗಿದ್ದರು. ಯಾರಿಗೋ ಕಷ್ಟವೊದಗಿತು ಅಂದರೆ ನಾಲ್ಕು ಜನ ಹೋಗಿ ಸಾಂತ್ವನ ಹೇಳಿ ಬರುತ್ತಿದ್ದರು. ಅವರ ಕಷ್ಟ ಪರಿಹಾರ ಮಾಡುತ್ತಿದ್ದರು ಎಂದೇನೂ ಅಲ್ಲ. ಆದರೂ ಪರರ ಕಷ್ಟಕ್ಕೆ ಸ್ಪಂದಿಸು ತ್ತಿದ್ದರು. ಒಬ್ಬನಿಗೆ ವ್ಯಾಪಾರದಲ್ಲಿ ನಾಲಕ್ಕು ರುಪಾಯಿ ಲಾಭವಾಯ್ತು ಅಂದರೆ ಉಳಿದ ವರ್ತಕರಿಗೆ ಆನಂದವಾಗುತ್ತಿತ್ತೇ ವಿನಃ ಮತ್ಸರವಿರುತ್ತಿದ್ದಿಲ್ಲ. ತನಗೂ ವ್ಯವಹಾರದಲ್ಲಿ ವೃದ್ಧಿಯಾಗಲೀ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರೇ ವಿನಃ ಹೊಟ್ಟೆಕಿಚ್ಚು ಪಡುತ್ತಿರಲಿಲ್ಲ. ಇದು ನಮ್ಮ ಊರಿನ ಸ್ಪೆಷಾಲಿಟಿ. ಈ ಬಾಂಧವ್ಯವನ್ನು ಇಂದಿಗೂ ಕಾಯ್ದುಕೊಂಡು ಬಂದಿದ್ದೇವೆ.

     "ಸಾನ್ ದೇವೂಲೆ ಪುತ್ತಾಕ ಕಾಮ ದಾಲ್ಲೆ ಖೈಂ" ಶುಭಸುದ್ದಿ ಅರ್ಧ ಘಂಟೆಯೊಳಗೆ ಊರೆಲ್ಲ ಹಬ್ಬಿತು. ಎಲ್ಲರಿಗೂ ಸಂತಸ. "ಆಗಲಿ, ದೇವರು ದೇವರಾಯರ ಮೇಲೆ ಕಣ್ಣು ತೆರೆದ, ಇನ್ನು ಅವರ ಒಳ್ಳೆಯ ಕಾಲ ಸುರುವಾಯ್ತು." ಅನೇಕರು ಖುಷಿಗೊಂಡರು. ನನಗೂ ತಂದೆಯವರಿಗೂ ಅಭಿನಂದನೆಗಳಾದವು.

     ಮೂರುಘಂಟೆಯ ಹೊತ್ತಿಗೆ ನರಸಿಂಹ ಶೆಣೈಯವರು ಕರೆದರು. "ಹೌದನಾ ನಿನಗೆ ಸಿಂಡಿಕೇಟಿನಲ್ಲಿ ಜೋಬ್ ಆಯ್ತಂತಲ್ಲಾ. ಸುದ್ದಿ ಕೇಳಿದೆ, ಒಳ್ಳೇದಾಯ್ತು."

     "ಹೌದು."

     "ಯಾವಾಗ ಜೊಯಿನ್ ಆಗುತ್ತೀ?"

     "ಒಂದು ವಾರದೊಳಗೆ ಜೊಯಿನ್ ಆಗಬೇಕು ಅಂತ ಆರ್ಡರ್ ಉಂಟು. ಒಳ್ಳೇ ದಿನ ನೋಡಿ ರಿಪೋರ್ಟ್ ಮಾಡು ಅಂತ ಹೇಳಿದ್ದಾರೆ."

     "ಇನ್ನೂ ಒಳ್ಳೇ ದಿನ ಎಂತ ನೋಡೂದು? ನಿನಗೆ ಆರ್ಡರ್ ಬಂದ ದಿನವೇ ಒಳ್ಳೇದು. ಇದಕ್ಕಿಂತ ಒಳ್ಳೇ ದಿನ ಉಂಟಾ? ಆದ್ರಿಂದ ನೀನು ನಾಳೆಯೇ ಮಣಿಪಾಲಕ್ಕೆ ಹೋಗಿ ಕೆಲಸಕ್ಕೆ ಸೇರು. ನಿನ್ನ ಹತ್ತಿರ ಸರಿಯಾದ ಪ್ಯಾಂಟು ಷರ್ಟು ಉಂಟಾ? ಇಲ್ಲದಿದ್ದರೆ ಒಂದು ಜತೆ ಡ್ರೆಸ್ಸು ಹೊಲಿಸಿಕೋ. ನನ್ನ ಮಾತು ಕೇಳು. ಇವತ್ತು ಹೇಗೂ ಮಧ್ಯಾಹ್ನ ಆಯಿತು, ಆದ್ದರಿಂದ ನಾಳೆಯೇ ಜೊಯಿನ್ ಆಗು. ಈಗ ಸಿಕ್ಕಾಪಟ್ಟೆ ಎಪೊಯಿಂಟ್ ಮೆಂಟ್ ಆಗುತ್ತಾ ಉಂಟು. ಬೇಗ ಸೇರಿದಷ್ಟು ನಿನಗೇ ಒಳ್ಳೇದು. ಅಷ್ಟರಮಟ್ಟಿಗೆ ನಿನಗೆ ಸೀನಿಯಾರಿಟಿ ಸಿಗುತ್ತದೆ."

     "ಆಯ್ತು, ನೀವು ಹೇಳಿದ ಮಾತು ಸಮ. ನಾಳೆಯೇ ಕೆಲಸಕ್ಕೆ ಸೇರ್ತೇನೆ. ನಿಮ್ಮ ಆಶೀರ್ವಾದ ಬೇಕು."

     "ನಮ್ಮ ಎಲ್ಲರ ಆಶೀರ್ವಾದ ಉಂಟು. ಈಗ ನೀನು ನಾಳೆ ಮಣಿಪಾಲಕ್ಕೆ ಹೋಗುವ ವ್ಯವಸ್ಥೆ ಮಾಡು, ನಡಿ."

     ಶೆಣೈಯವರು ಆದಿನ ಹುರಿದುಂಬಿಸಿದುದರಿಂದ ನಾನು ಅದೇ ಮರುದಿನ ಬೇಂಕಿಗೆ ಹೋಗಿ ಸೇರಿದೆ. 'ಇಂದಿನ ದಿನ ಸುದಿನ ನಾಳೆಗೆ ಎಂದರೆ ಅದು ಕಠಿಣ.' ಎಂಬ ಗಾದೆಯನ್ನೂ ಅವರು ಉದಾಹರಿಸಿದ್ದರು....

     "ಗಾದೆಯ ಮಾತು ಸುಳ್ಳಲ್ಲ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಇನ್ನೊಂದು ಗಾದೆ ಇದೆ. ಮೇಲಿನ ಗಾದೆಗೆ ಸಂಬಂಧಿಸಿ ಒಂದು ಚಂದದ ಕತೆ ಉಂಟು...." ಖಾಯಿಲೆ ಬಿದ್ದು ರೆಸ್ಟು ಪಡೆಯುತ್ತಿರುವ ಸಮಯದಲ್ಲಿ ಅಮ್ಮ ಹೇಳಿದ ಕತೆ....

     'ಶ್ರೀರಾಮಚಂದ್ರ ರಾವಣಾಸುರನನ್ನು ಸಂಹರಿಸಿ ವಿಭೀಷಣಾದಿ ವಾನರಸೇನೆಯೊಡಗೂಡಿ ಅಯೋಧ್ಯೆಗೆ ಮರಳಿ ರಾಜ್ಯಭಾರವನ್ನು ಕೈಗೆತ್ತಿಕೊಳ್ಳುತ್ತಾನೆ. ಒಂದು ಶುಭದಿನದ ಶುಭಮುಹೂರ್ತದಲ್ಲಿ ಶ್ರೀರಾಮನ ಪಟ್ಟಾಭಿಷೇಕವಾಗಬೇಕಾಗಿದೆ. ಆ ಪ್ರಯುಕ್ತ ಮಹಾ ಮಹಾ ಪಂಡಿತೋತ್ತಮರಲ್ಲಿ ಶುಭಮುಹೂರ್ತ ನಿರ್ಧರಿಸಲು ಕೋರಲಾಯಿತು. ಸರಿ, ಪ್ರಭು ರಾಮಚಂದ್ರನ ಪಟ್ಟಾಭಿಷೇಕ ಎಂದರೆ ಸುಮ್ಮನಾಯಿತೇ! ಪಂಡಿತೋತ್ತಮರೆಲ್ಲ ಸೇರಿ, ಕೂಡಿ ಕಳೆದು ಏನು ಮಾಡಿದರೂ ಒಂದು ಶುಭಗಳಿಗೆಯನ್ನು ನಿರ್ಧರಿಸಲಾರದಾದರು. ಯಾವ ಘಳಿಗೆ ಸೂಚಿಸಿದರೂ ಒಂದಲ್ಲ ಒಂದು ಅಡ್ಡಿ, ಅಶುಭ, ವಿಘ್ನಗಳು ಕಾಣಲಾರಂಭಿಸಿದವು. ಪಂಡಿತರು ಒಮ್ಮತಕ್ಕೆ ಬರಲಾರದಾದರು. ಜನರೆಲ್ಲ ಚಿಂತಿತರಾದರು. ಏನು ಮಾಡಲಿ? ಯಾರಲ್ಲಿ ಕೇಳಲೀ? ಲಾಸ್ಟಿಗೆ ಯಾವುದೇ ಚ್ಯುತಿ ನ್ಯೂನತೆಗಳಿಲ್ಲದ ಮುಹೂರ್ತವನ್ನು ಸೂಚಿಸಿದವರಿಗೆ ಸೂಕ್ತ ಬಹುಮಾನ ಉಂಟು ಎಂಬ ಘೋಷಣೆಯನ್ನು ಸಾರಲಾಯಿತು. ಆ ಸಮಯದಲ್ಲಿ ಒಬ್ಬ ಕೊಂಕಣಿ-ಗೌಡ ಸಾರಸ್ವತ ಬ್ರಾಹ್ಮಣ-ಜಿ ಎಸ್ ಬಿ- ಅಲ್ಲಿಗೆ ಬಂದಿದ್ದವನು 'ನೀವೆಲ್ಲ ಏಕೆ ಚಿಂತಿತರಾಗಿದ್ದೀರಿ? ಏನು ಸಮಸ್ಯೆ?' ಎಂದು ವಿಚಾರಿಸಲಾಗಿ "ಇಂತಿಂತಾ ಪ್ರೋಬ್ಲೆಮ್ ಬಂದಿದೆ ಮಹರಾಯ! ರಾಮನ ಪಟ್ಟಾಭಿಷೇಕ ಮಾಡಬೇಕಾಗಿದೆ, ಶುಭಮುಹೂರ್ತ ಯಾವುದೆಂದು ಇನ್ನೂ ನಿಘಂಟಾಗಲಿಲ್ಲ. ನಿನ್ನ ಬಳಿ ಪರಿಹಾರವೇನಾದರೂ ಇದ್ದರೆ ಹೇಳು, ಬಹಳ ಉಪಕಾರವಾಗುತ್ತದೆ." ಎಂಬ ಬಿನ್ನಹ ಬಂತು.

     "ಹೌದೇ! ಶ್ರೀ ರಾಮಚಂದ್ರನ ಪಟ್ಟಾಭಿಷೇಕದ ಶುಭಮುಹೂರ್ತವೇ, ಈಗಲೇ, ಇದೇ ಉತ್ತಮ ಘಳಿಗೆ. ಪಟ್ಟಾಭಿಷೇಕವನ್ನು ನೆರವೇರಿಸಿಬಿಡಿ. ತಡಮಾಡಬೇಡಿ. ಕಾರ್ಯಕ್ರಮಗಳನ್ನು ಸುರು ಮಾಡಿಬಿಡಿ." ಎಂದು ಆ ಪೈಮಾಮ-ಕಿಣಿಮಾಮ-ಮಾಲ್ಲೋ-ನಾಯಕಮಾಮು-ಶೆಣೈಮಾಮು-ಯಾರೋ ಒಬ್ಬ ಮಾಮ ಆದೇಶಿಸಿದರು.

     "ನೀವು ಯಾವ ಗ್ರಂಥದ ಆಧಾರದಿಂದ ಶುಭಘಳಿಗೆಯನ್ನು ನಿರ್ಧರಿಸಿದಿರಿ?" ಪಂಡಿತರಿಗೆ ಸಂಶಯ.

     "ನೀವು ಮೊದಲು ಪಟ್ಟಾಭಿಷೇಕವನ್ನು ಆರಂಭ ಮಾಡಿ.  ಶುಭಘಳಿಗೆ ಮೀರಿ ಹೋಗುತ್ತಿದೆ. ಉಳಿದ ವಿಚಾರ ಆ ಮೇಲೆ." ಇವರು ಅವಸರಿಸಿದರು.

     ನಂತರ ಪುರುಸತ್ತಾದಾಗ ಇವರು ವಿವರಿಸಿದರು "ನೋಡಿ, ಶ್ರೀರಾಮಚಂದ್ರ ಯಾರು? ಸ್ವಯಂ ದೇವರು, ದೇವರ ಕಾರ್ಯಗಳಿಗೆ ಎಲ್ಲಾ ಕಾಲವೂ ಶುಭಘಳಿಗೆಯೇ. ಅದಕ್ಕೆ ನಾವು ಗ್ರಂಥಗಳ ಪುಟ ತಿರುಗಿಸಬೇಕಿಲ್ಲ. ಪ್ರೇರಣೆ ಆದಾಗ ಸುರುಮಾಡೂದೇ. ಒಳ್ಳೇ ಘಳಿಗೆ ಹುಡುಕಬೇಕಾದದ್ದು ಮನುಷ್ಯಮಾತ್ರದವನ ಕಾರ್ಯಕ್ರಮಗಳಿಗೆ, ತಿಳಿಯಿತೇ?"

     ಶ್ರೀ ರಾಮಚಂದ್ರನ ಪಟ್ಟಾಭಿಷೇಕಕ್ಕೂ ಹೆಬ್ರಿ ಕೇಶವ ನಾಯಕನ ಜಾಯಿನಿಂಗ್ ರಿಪೋರ್ಟಿಗೂ ಯಾವುದೇ ತಾಳೆಯಿಲ್ಲ. ಆದರೆ 'ಇಂದಿನ ದಿನ ಸುದಿನ ನಾಳೆಗೆ ಎಂದರೆ ಅದು ಕಠಿಣ....'