ಭಾವುಕ ಹಾಗೂ ಸುಖಕರ ನೆನಪು:
1985ರ ಇಸವಿ ಇರಬೇಕು, ಸರಿಯಾಗಿ ನೆನಪಿಲ್ಲ. ತಪ್ಪಿದ್ದರೆ ಕ್ಷಮಿಸಿ. ಕರೋಲ್ ಬಾಗ್ ಸ್ಟಾಪ್ ನಲ್ಲಿ ಇಳಿದು ಕೇವಲ ಎಂಟು ನಿಮಿಷಗಳ ಕಾಲ್ನಡಿಗೆಯಲ್ಲಿ ನನ್ನ ಬ್ರಾಂಚು. ಝಂಡೇವಾಲನ್ ದೇವಿಯ ಮಂದಿರದ ಮುಂದಿನ ರಸ್ತೆಯ ಮೂಲಕ ನಮ್ಮ ಬ್ರಾಂಚಿಗೆ ಹೋಗುವ ಹತ್ತಿರದ ದಾರಿಯೂ ಇತ್ತು, ಹಾಗಾಗಿ ಹೆಚ್ಚಾಗಿ ಅದೇ ದಾರಿಯನ್ನು ಬಳಸುತ್ತಿದ್ದೆ. ಅದಕ್ಕೆ ಮೊದಲು ಸಂಘದ ಝಂಡೇವಾಲನ್ ಮುಖ್ಯ ಕಛೇರಿ ಸಿಗುತ್ತಿತ್ತು.
ನಮ್ಮ ಬ್ರಾಂಚಲ್ಲಿ ಸಂಘದ ಉಳಿತಾಯ ಖಾತೆಯೊಂದಿತ್ತು. ಒಬ್ಬ ಪ್ರಚಾರಕರು ಆ ಖಾತೆಯ ವ್ಯವಹಾರಗಳನ್ನು ನೋಡಿ ಕೊಳ್ಳು ತ್ತಿದ್ದರು. ಅವರ ಪರಿಚಯವಾಗಿತ್ತು. ಹೆಚ್ಚು ಮಾತಾಡುವ ಆಸಾಮಿ ಅಲ್ಲ, ಮಿತಭಾಷಿ. ಅವರು ಪ್ರತೀಸಲ ಬಂದಾಗ ನನಗೊಂದು ನಮಸ್ಕಾರ ಇತ್ತು, ಅಷ್ಟೆ. 'ನಾಯಕ್ ಜೀ ಆಜ್ ಕಲ್ ಝಂಡೇವಾಲಾ ಮೇ ಪ್ರಾಂತ ಪ್ರಚಾರಕೋಂ ಕೀ ಬೈಠಕ್ ಹೋ ರಹೀ ಹೈ. ಆಪ್ ಆಜಾವೋ ನಾ' ಎಂದು ಒಂದು ದಿನ ಅವರಿಂದ ಮಾಹಿತಿ ಸಿಕ್ಕಿತು.
ಮೆನೆಜರರಿಗೆ ತಿಳಿಸಿ ಕೊಂಚ ಬೇಗನೇ ಝಂಡೇವಾಲಾ ತಲಪಿದೆ. ಕೇಂದ್ರ ಕಛೇರಿಯಲ್ಲಿ ಹೆಚ್ಚಿನ ಗೌಜಿಯಿರಲಿಲ್ಲ. 'ಮೇಲೆ ಮಾನನೀಯ ಸರಸಂಘಚಾಲಕರೊಂದಿಗೆ ಬೈಠಕ್ ನಡೆಯುತ್ತಿದೆ. ಇನ್ನೇನು ಮುಗಿಯಲಿಕ್ಕಾಯಿತು. ಸ್ವಲ್ಪ ಸಮಯ ಕಾಯಬೇಕು.' ಎಂದು ತಿಳಿಸಲಾಯಿತು.
ಕೆಳಗೆ ಅಂಗಳದಲ್ಲಿ ಅಡ್ಡಾಡುತ್ತಿದ್ದೆ. ಅಷ್ಟರಲ್ಲಿ 3-4 ಮಂದಿ ಸ್ವಯಂಸೇವಕರು ದಡಬಡನೆ ಬಂದು ಓಡಾಡತೊಡಗಿದರು. ಏನಪ್ಪಾ ಎಂದು ತಿರುಗಿದರೆ ಮಾನ್ಯ ಅಟಲ ಬಿಹಾರಿಯವರು ಆಗಮಿಸಿದ್ಧರು. 'ಉಪರ್ ಬೈಠಕ್ ಚಲ್ ರಹೀ ಹೈ? ಮೇ ಡಿಸ್ಟರ್ಬ್ ನಂಹೀ ಕರೂಂಗಾ. ಯಂಹೀ ಪರ್ ಇಂತಝಾರ್ ಕರೂಂಗಾ. ಕುಛ್ ಚಾಯ್ ವಾಯ್ ಪಿಲಾವೊ ಭಾಯ್,' ತಮ್ಮದೇ ಶೈಲಿಯಲ್ಲಿ ಮಾತನಾಡಿ ಒಳಬಂದರು. ಕಛೋರಿಯೋ ಪಾಪಡಿಯೋ ಯಾವುದೋ ತಿಂಡಿಯೊಟ್ಟಿಗೆ ಚಹ ಸಪ್ಲೈ ಆಯಿತು, ನನಗೂ ಒಂದು ಪ್ಲೇಟು ತಿಂಡಿ ಸಿಕ್ಕಿತು. ಒಂದು ಕೋಣೆಯಲ್ಲಿ ವಾಜಪೇಯಿಯವರಿಗೆ ಕೂಡಲು ವ್ಯವಸ್ಥೆಯಾಯಿತು.
ಐದು ನಿಮಿಷಗಳಲ್ಲೇ ಬೈಠಕ್ ಮುಗಿದು ಎಲ್ಲಾ ಪ್ರಾಂತ ಪ್ರಚಾರಕರು ಹೊರಬಂದು ತಮ್ಮ ತಮ್ಮ ಪ್ರಾಂತ-ಕ್ಷೇತ್ರಕ್ಕೆ ನಿಯೋಜಿತವಾದ ಕೊಠಡಿಗಳತ್ತ ಹೊರಟರು. ಮಾನ್ಯ ನ.ಕೃಷ್ಣಪ್ಪನವರನ್ನು ಕಂಡು ತುಂಬ ಸಮಯವಾಗಿತ್ತು. ಹಾಗಾಗಿ ಅವರಿಗೆ ಕೈಮುಗಿದು 'ನಾನು ಕೇಶವ ನಾಯಕ್. ಹೆಬ್ರಿಯಿಂ......'
ಅಷ್ಟರಲ್ಲಿ ಅವರೇ ನನ್ನನ್ನು ತಡೆದರು 'ಅಲ್ಲೋ ಮಹರಾಯ! ಕೇಶವಾ, ನನ್ನ ಬಳಿ ಪರಿಚಯ ಹೇಳಿಕೊಳ್ಳುತ್ತೀಯಲ್ಲೋ, ನಿಮ್ಮನ್ನೆಲ್ಲ ಮರೆಯೂದಕ್ಕಾಗತ್ತೋ!! ಸ್ವಲ್ಪ ದಿನಗಳ ಹಿಂದೆ ನಿಮ್ಮ ವಿಶ್ವನಾಥ ಮಲ್ಯ ಅಶೋಕ ಮಲ್ಯ ಸಿಕ್ಕಿದ್ದರು ಬೆಂಗಳೂರಲ್ಲಿ. ಬಾ ಬಾ. ತುಂಬ ವಿಚಾರ ತಿಳಿಸಲಿಕ್ಕಿದೆ....' ನನ್ನ ಹೆಗಲ ಮೇಲೆ ಕೈ ಹಾಕಿ ಅಪ್ಪಿಕೊಂಡೇ ರೂಮಿಗೆ ಕರಕೊಂಡು ಹೋದರು.
ನಾನು ಸಂಘದ ಸ್ವಯಂಸೇವಕನಾದರೂ ಸಕ್ರಿಯ ಕಾರ್ಯಕರ್ತನಲ್ಲ. ವಿಶೇಷ ಸಂದರ್ಭಗಳಲ್ಲಿ, ಉತ್ಸವ ಕಾರ್ಯಕ್ರಮಗಳಲ್ಲಿ ಮಾತ್ರ ನನ್ನ ಹಾಜರಿ ಇರುತ್ತಿತ್ತು. ಸಂಘದಲ್ಲಿ ಕೃಷ್ಣಪ್ಪನವರದ್ದು ಉನ್ನತ ಶ್ರೇಣಿಯ ಜವಾಬುದಾರಿ. ಪ್ರಾಂತ ಪ್ರಚಾರಕರು, ಹೆಚ್ಚಿನ ಜವಾಬುದಾರಿ, ಪ್ರವಾಸ ಮತ್ತು ಸಂಘಟನಾ ಕಾರ್ಯಗಳಲ್ಲಿ ವ್ಯಸ್ತರು. ಆದರೂ ಮುಖ ಕಂಡ ಕೂಡಲೇ ಆತ್ಮೀಯವಾಗಿ ಬರಸೆಳೆದುಕೊಂಡ ಪರಿ ನನ್ನನ್ನು ಧನ್ಯನನ್ನಾಗಿಸಿತು..!!
ಕೃಷ್ಣಪ್ಪನವರ ವ್ಯಕ್ತಿತ್ವವೇ ಹಾಗೆ. ಯಾರನ್ನೂ ಸೋಲಿಸಿ ಬಿಡುತ್ತದೆ. ಆಕರ್ಷಿಸುತ್ತದೆ.....

No comments:
Post a Comment