Thursday, September 21, 2023

ವಿಕ್ರಮ ನಾಯಕ್

1966ರಲ್ಲಿ ಮಂಗಳೂರು ಕೇ ಪೀ ಟೀ ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಗೆ ಸೇರಿದೆ. ಹದಿನಾರರ ಹುಡುಗು ಪ್ರಾಯ, ಹೆಚ್ಚಿನ ಲೋಕಾನುಭವ ಇಲ್ಲ. ಕನಸು ಕಾಣುವ ಮನಸು ಹಾಗೂ ವಯಸ್ಸು. ಕಲಿಯುತ್ತಿರುವುದು ಡಿಪ್ಲೊಮಾ, ಆದರೆ ದೇಶದ ದೋಡ್ಡ ಇಂಜಿನಿಯರ್ ಆಗಬೇಕು, ದೇಶಸೇವೆ ಮಾಡಬೇಕು, ಸರ್ ಎಮ್. ವಿಶ್ವೇಶ್ವರಯ್ಯ ಆಗಬೇಕು... ಹೀಗೆ ಬೇಕುಗಳ ಪಟ್ಟಿ ಉದ್ದವಿತ್ತು. ಅದಕ್ಕೆ ಸರಿಯಾಗಿ ನಮ್ಮ ವಿದ್ಯಾಭ್ಯಾಸದ ಕ್ರಮವಿದ್ದಿತು. ಹಾಸ್ಟೆಲ್ ನಲ್ಲಿ ವಾಸ, ಅರುವತ್ತರ ದಶಕ, ಓದು+ಬರೆಹ ಬಿಟ್ಟು ಬೇರೆ ಹವ್ಯಾಸವೇ ಇರಲಿಲ್ಲ. 
ನಮ್ಮ ಆಶೋತ್ತರಗಳು ಏನೇ ಇರಲಿ, ನಮ್ಮ ಭವಿಷ್ಯ ನಮ್ಮ ಹಿಡಿತದಲ್ಲಿರಲಿಲ್ಲ. ನಾನು ಬೇಂಕು ಸೇರಿದೆ. ಇಂಜಿನಿಯರ್ ಆಗಿ ದೇಶಸೇವೆ ಮಾಡುವ ಖಯಾಲು ತುಂಬ ಸಮಯ ಕಾಡುತ್ತಿತ್ತು.

ನಮ್ಮ ವಿಕ್ರಮನ M I T ಮಣಿಪಾಲದಲ್ಲಿ ಇಂಜಿನಿಯರಿಂಗ್ ಎಡ್ಮಿಷನ್ ಗಾಗಿ ಅವನಿಗಿಂತ ನನ್ನ ಆತುರ, ತರಾತುರಿ ಅಥವಾ ಉದ್ವೇಗಗಳೇ ಅಧಿಕವಾಗಿದ್ದು. ಕಾಲೇಜಿಗೆ ನಾನೇ ದಾಖಲಾಗುತ್ತಿದ್ದೇನೋ ಎಂಬ ಸಂಭ್ರಮ.! ನಮ್ಮ ಎಲ್ಲಾ ಆಶೆ, ಆಕಾಂಕ್ಷೆಗಳನ್ನು ಪೂರ್ಣಗೊಳಿಸಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಫಲಪ್ರದ ಜೀವನ ನಡೆಸುತ್ತಿರುವ ಕುರಿತು ಬಹಳ ಗರ್ವವಾಗುತ್ತಿದೆ. ವಿದ್ಯಾರ್ಜನೆ ವಿಚಾರದಲ್ಲಿ ಹೆಬ್ರಿ ದೇವಣ್ಣ ನಾಯಕರ ಮಕ್ಕಳು ಮೊಮ್ಮಕ್ಕಳು ಒಬ್ಬರಿಗಿಂತ ಒಬ್ಬರು ಮೇಲು. ವಿದ್ಯೆ ಎಂಬ ಶಾಶ್ವತ ಸಂಪತ್ತನ್ನು ನಾವು ನಾವೇ ಕಷ್ಟಪಟ್ಟು ಗಳಿಸಬೇಕು ಎಂಬ ಹಿತೋಪದೇಶವನ್ನು ನಮ್ಮಮ್ಮ ಆಗಾಗ ನೀಡುತ್ತಿದ್ದರು.ಅವರ ಆಶಯದಂತೆ ಎಲ್ಲರೂ ಇಂದು ವಿದ್ಯಾ ವಿನಯಸಂಪನ್ನರಾಗಿ ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳು ನಡೆಸುತ್ತಿದ್ದಾರೆ..

ಇಂದು ವಿಕ್ರಮನ ಹುಟ್ಟುಹಬ್ಬ, ಅವನಿಗೆ ಶುಭ ಆಶೀರ್ವಾದಗಳು.

ಸೆಪ್ಟೆಂಬರ್ 19, 2023

No comments:

Post a Comment