Wednesday, June 17, 2020

ಇವನು ನನ್ನ ತಮ್ಮ...


     ಇವನು ನನ್ನ ತಮ್ಮ. ನಾವು ಹೈಸ್ಕೂಲಿಗೆ ಹೋಗುತ್ತಿರುವಾಗ, ಬಹುಶಃ ಫಾರೆಸ್ಟಿನವರೋ ಯಾರೋ ಸಾಲಾಗಿ ನೆಟ್ಟವರಲ್ಲಿ ಇವನೂ ಒಬ್ಬ. ಆಗ ಎದುರು ಇರುವ ರಸ್ತೆ ಈಗಿನಷ್ಟು ಅಗಲವಿರಲಿಲ್ಲ, ವನರಾಜಿ ರಾರಾಜಿಸುತ್ತಿದ್ದ ಸುಭಿಕ್ಷ ಕಾಲ! ನಾವು ಮಧ್ಯಾಹ್ನ ಊಟ ಮುಗಿಸಿ ಸರಭರನೆ ಹೊರಟು ಸಿಗುವ 25 ನಿಮಿಷಗಳಲ್ಲಿ ಈ ತಂಪಾದ ನೇರಾದ ಉಡುಪಿ ರಸ್ತೆಯಲ್ಲಿ ಆಟ, ಓಟ, ಸೈಕಲ್ ಓಡಿಸುವುದು ಮುಂತಾದವುಗಳಲ್ಲಿ ಬಿಜಿ಼ಯಾಗುತ್ತಿದ್ದೆವು. ಆಗಲೇ ಒಂದು ದಿನ ನನಗೆ ಇವನ ಮೇಲೆ ಮೋಹ ಹುಟ್ಟಿತ್ತು. ಸಪೂರ ನೇರ ಗಿಡವಾಗಿದ್ದ. 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ' ಎಂದು ಆಗ ಯಾರೋ ದೋಸ್ತಿ ಗಾದೆಮಾತು ಹೇಳಿ ತನ್ನ ಜ್ಞಾನವನ್ನು ಪ್ರದರ್ಶಿಸಿದ. 'ಇಂವ ಮರವಾಗಿ ಬಗ್ಗಲಿಕ್ಕಲ್ಲ, ಬದಲಿಗೆ ನೇರವಾಗಿ ಉನ್ನತಕ್ಕೇರುತ್ತಾನೆ ನೋಡು' ಎಂದಿದ್ದೆ.
 
ಹೈಸ್ಕೂಲಿನಲ್ಲಿ ವಿಜ್ಞಾನಕ್ಕೆ ಹಂದೆಮಾಸ್ಟ್ರು - ಸಾಯನ್ಸ್ ಮಾಸ್ಟರು ಎಂದು ಹೈಸ್ಕೂಲಲ್ಲಿ ಹಾಗೂ ಊರಲ್ಲೂ ಫೇಮಸ್ಸು. ಗಿಡ ಮರಗಳಿಗೆ ವಯಸ್ಸಾಗುವುದನ್ನು ಕಂಡುಹಿಡಿಯಲು ಸುಲಭೋಪಾಯವಿದೆ, ಪ್ರತಿ ವರ್ಷಕ್ಕೆ ಒಂದರಂತೆ ಕಾಂಡದಲ್ಲಿ ವರ್ತುಲಗಳು - ರಿಂಗ್ - ಬೆಳೆಯುತ್ತವೆ. ಎಷ್ಟು ರಿಂಗುಗಳು ಇವೆಯೋ ಆ ಮರಕ್ಕೆ ಅಷ್ಟು ವರ್ಷ ಪ್ರಾಯ ಆಯಿತು ಅಂತ ಲೆಕ್ಕ.
 
 ಮರುದಿನ ನಮ್ಮ ಗೆಳೆಯನೊಬ್ಬ ಕ್ಲಾಸಿಗೆ ಬರುವಾಗ ಕತ್ತಿಯೊಂದನ್ನು ತಂದಿದ್ದ.

”ಕತ್ತಿ ಯಾಕೆ ಮಾರಾಯ!”

”ಮಾಸ್ಟ್ರು ಹೇಳೀರಲೆ ಗಡೆ, ಮರದ ಪ್ರಾಯ ಎಷ್ಟು ಅಂತ ತನಿಖೆ ಮಾಡುವ ಅಂತ ಕತ್ತಿ ಹಿಡ್ಕಬಂದಿದೆ. ನೀವು ಸುಮ್ನೆ ಬನಿ.” ಅಂತೆಯೇ ಕಾಡಿನಲ್ಲಿ ಒಂದು ಮರ ಸಿಲೆಕ್ಟ್ ಮಾಡಿ ಇನ್ನೇನು ಕತ್ತಿ ಬೀಸಬೇಕು, ಒಂದು ಡೌಟು ಬಂತು. 

”ಅಲ್ಲ, ಈಗ ಪ್ರಾಯ ತಿಳಿಯುವ ಗಡಿಬಿಡಿಯಲ್ಲಿ ಮರ ಕಡಿದರೆ ಅದು ಸಾಯುತ್ತದಲ್ಲ!! ನಾವದರ ಪ್ರಾಯ ಕಂಡುಹಿಡಿದು ಏನು ಸಾರ್ಥಕವಾಯಿತು?”

”ಹೌದಲ್ಲ! ಕಾಂಡದ ಬದಲು ಗೆಲ್ಲು ಕಡಿದರೆ ಹೇಗೆ?”

”ಕಾಂಡ ಮೊದಲೇ ಇರುತ್ತದೆ, ಗೆಲ್ಲುಗಳು ಬರೂದು ನಂತರದ ದಿನಗಳಲ್ಲಿ ತಾನೇ?” ಇನ್ನೊಬ್ಬನ ಸಂಶಯ. ಕತ್ತಿ ತಂದ ವಿಜ್ಞಾನಿಗೆ ಬೇಸರ ಸಿಟ್ಟು ಬಂದು ಕತ್ತಿಯನ್ನು ಬಿಸಾಡಿದ. 

”ಇರಲಿ ಇವನೇ, ವನಮಹೋಸ್ತವ ಮಾಡೂದು ನಾವೆ, ಈಗ ನಾವೇ ಗಿಡ ಕಡಿಯೂದೇಕೆ?” ಮತ್ತೊಬ್ಬ ಸಮಾಧಾನ ಮಾಡಿದ. ಒಂದು ಮರ ಆದಿನ ಉಳಿಯಿತು.
 
     ನಂತರದ ಯವ್ವನದ ದಿನಗಳಲ್ಲಿ ಹೆಬ್ರಿಯಲ್ಲೇ ನೌಕರಿಯಿದ್ದು, ಬೇಂಕು ಮುಗಿದ ನಂತರ ಸಂಜೆಯ ವಾಕಿಂಗಿಗೆ ಗೆಳೆಯ ರೊಡನೆ ಹೋಗುತ್ತಿದ್ದಾಗ ಇವನೂ ಕೊಂಚ ದಪ್ಪಗಾಗಿದ್ದು ಎತ್ತರಕ್ಕೇರಿದ್ದುದನ್ನು ಕಂಡು ನನ್ನೊಳಗೇ ಖುಷಿಪಡುತ್ತಿದ್ದೆ. ಎದುರಿನ ರಸ್ತೆಯು ಕಾಲಾಂತರದಲ್ಲಿ ಅವಶ್ಯಕತೆಗಳಿಗನುಸಾರ ಅಗಲವಾಗುತ್ತಿದ್ದುದು ಸಣ್ಣಗೇ ಕಿರಿಕಿರಿಯೆನಿಸುತ್ತಿತ್ತು. ರಸ್ತೆಯ ಅಗಲೀಕರಣವೆಂಬ ಡೆಮೊಕ್ಲೀಸನ ಖಡ್ಗವನ್ನು ಎಂಭತ್ತರ ದಶಕದಲ್ಲಿ ಮೊತ್ತಮೊದಲು ಇವನ ಮೇಲೆ ನೇತಾಡಿಸಿದರು.... ಈ ನಡುವೆ ನಿಂತ ನೀರಿನಂತಹ ಊರ ಜೀವನದ ಸಾಕ್ಷಿಯಾಗಿ ಇವನು ಬೆಳೆಯಲಾರಂಭಿಸಿದ....
 
1971ರಲ್ಲಿ ನನಗೆ ಸಿಂಡಿಕೇಟಿನಲ್ಲಿ ಜಾಬ್ ಆಯಿತು. ಕಲಿತದ್ದು ಮೆಕಾನಿಕಲ್ ನಲ್ಲಿ ಡಿಪ್ಲೋಮಾ, ಕೇ ಪಿ ಟಿ ಮಂಗಳೂರಲ್ಲಿ. ಆದರೆ ನಮ್ಮ ಅದೃಷ್ಟದ ಬಾಗಿಲು ಪೂರ್ತಿ ತೆರೆದಿರಲಿಲ್ಲ. ಕಲಿತ ವಿದ್ಯೆಯ ಲೈನಲ್ಲಿ ಯಾವುದೇ ನೌಕರಿಯಾಗಲಿಲ್ಲ. ಬಹಳ ಬೇಸರ ದು:ಖದಲ್ಲಿರುವ ಸಮಯದಲ್ಲಿ ನನ್ನ ಗೆಳೆಯ ವೆಂಕಟೇಶ ಕಾಮತನಿಗೆ ನೌಕರಿಯಾಯಿತು. ತನಗೆ ಜಾಬ್ ಸಿಕ್ಕಿದ ಸಂತಸದ ಜತೆಗೆ ನನ್ನ ನಿರುದ್ಯೋಗ ಪರ್ವ ಮುಂದುವರೆದ ಖತಿ ಎರಡನ್ನೂ ಹೊತ್ತುಕೊಂಡು ಆತ ಕೆ ಜಿ ಎಫ್ ನತ್ತ ಹೊರಟು ಬಿ ಇ ಎಮ್ ಎಲ್ ನಲ್ಲಿ ನೌಕರಿ ಸೇರಿಕೊಂಡ. ಸಂಜೆ ನಮ್ಮ ಗೆಳೆಯರ ಗುಂಪಿನೊಡನೆ ವಾಕಿಂಗ್ ಹೋಗುವಾಗ ಈ ನನ್ನ ತಮ್ಮ ಸಹ ನಮ್ಮೆಲ್ಲರ ಕುರಿತು ಸಹಾನುಭೂತಿ ತೋರುತ್ತಿದ್ದ. ತಾನೂ ನಿಂತಲ್ಲೇ ತನ್ನ ಬಳಗದವರೊಡನೆ ಗಾಳಿಯಲ್ಲಿ ತೂಗುತ್ತಿದ್ದ. 

ಹೌದನಾ ನಿನ್ನ ಕೆಲಸದ ವಿಚಾರ ಎಲ್ಲಿಯವರೆಗೆ ಬಂತು?’’ ನಮ್ಮ ಗಿಂಡಮಾಮ-ಪುರುಷೋತ್ತಮ ಮಲ್ಯರು- ವಿಚಾರಿಸಿದರು.

”ಸಧ್ಯಕ್ಕೆ ಎಂತದೂ ಆಗಿಲ್ಲ.”

”ಒಂದು ಕೆಲಸ ಮಾಡುವಾ. ಈಗ ಸಿಂಡಿಕೇಟಿನಲ್ಲಿ ಭಾರೀ ಡಿಮಾಂಡು ಉಂಟು. ಇವತ್ತು ಕಸ್ಟೋಡಿಯನ್ ಕೆ ಕೆ ಪೈ ಯವರೊಡನೆ ಮಾತಾಡಿ ಬರುವಾ. ನನಗೆ ಅವರ ಒಳ್ಳೇ ಗುರ್ತ ಉಂಟು. ದೇವರು ಕಣ್ಣು ಬಿಟ್ಟರೆ ಏನಾದರೂ ಆಗಬಹುದು.” 

1970ರ ಮೇ ತಿಂಗಳ ಕಡುಬೇಸಿಗೆಯ ಒಂದು ಮಧ್ಯರಾತ್ರಿ ಸುಮಾರು ಮೂರು ಘಂಟೆಯ ಹೊತ್ತಿನಲ್ಲಿ ಮನೆಯವರೆಲ್ಲರೂ ಗಾಢ ನಿದ್ದೆಯಲ್ಲಿರುವಾಗ ನಮ್ಮ ಮುಳಿಮಾಡಿನ ಮನೆಯು ಭಗ್ಗನೆ ಬೆಂಕಿಗಾಹುತಿಯಾಯಿತು. ಬ್ರಹ್ಮಾವರದಿಂದ ಬರುತ್ತಿದ್ದ ಒಬ್ಬ ಲಾರಿ ಡ್ರೈವರನಿಗೆ ದೂರದಿಂದ ಈ ಬೆಂಕಿಯ ರೌದ್ರಾವತಾರ ಕಂಡು ಜೀವದ ಹಂಗು ತೊರೆದು ಲಾರಿ ಓಡಿಸಿ ಬಂದು ಉರಿಯುತ್ತಿದ್ದ ಮನೆಯಲ್ಲಿ ಮೈಮೇಲೆ ಜ್ಞಾನವಿಲ್ಲದಂತೆ ಮಲಗಿದ್ದ ನಮ್ಮನ್ನೆಲ್ಲ ಎಬ್ಬಿಸಿ ಬದುಕಿಸಿದ. ಪುಣ್ಯಾತ್ಮನವನು. ’ದೇವರು ಆಪತ್ತಿನಲ್ಲಿರುವವರ ಕೈ ಹಿಡಿದು ಪೊರೆಯುತ್ತಾನೆ ನೋಡು. ಯಾವ ಯಾವ ರೂಪಗಳಲ್ಲಿ ಬಂದು ಒದಗುತ್ತಾನೆ ನೋಡು!’ ಎಂದು ನಮ್ಮಮ್ಮ ಆಗಾಗ ನೆನಪಿಸಿಕೊಳ್ಳುತ್ತಿದ್ದರು.
 
ಇದೇ ಸಮಯದ ಒಂದು ದಿನ -ಜುಲೈ ತಿಂಗಳಿರಬೇಕು- ಗಿಂಡಮಾಮನವರು ನನ್ನನ್ನು ಕರಕೊಂಡು ಉಡುಪಿಗೆ ಬಂದರು. ”ನೋಡು ಕೆ ಕೆ ಪೈ ಯವರ ಮನೆಯಲ್ಲಿ ಮಾತಾಡಬೇಕು. ಆಫೀಸಿನಲ್ಲಿ ನಮ್ಮ ಕಷ್ಟ ಸುಖ ವಿಚಾರಿಸಲು ಅವರಿಗೆ ವ್ಯವಧಾನವಿರುವುದಿಲ್ಲ. 

     1975ರಲ್ಲಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಹೇರಿದರು, ಹೆಚ್ಚಿನ ಊರವರು ಇದನ್ನು ವಿರೋಧಿಸಿ ಕ್ಷೋಭೆಗೆ ಒಳಗಾದರು, 1977ರಲ್ಲಿ ಅದೇ ಇಂದಿರಾಗಾಂಧಿಯವರು ಸ್ವತಃ ಸೋತರು. ಎಲ್ಲರಿಗೂ ಸಂತಸ, ಮೂರು ವರುಷಗಳ ವರೆಗೆ ಜನತಾಪಕ್ಷದವರ ನಾಟಕಮಂಡಳಿಯಿತ್ತು, ಪುನಾ ಇಂದಿರಾಗಾಂಧಿಯವರ ಅಬ್ಬರ ಶುರುವಾಯಿತು. ಎಲ್ಲ ಘಟನಾವಳಿಗಳಿಗೆ ಸಾಕ್ಷಿಯಾಗಿ ಇವನು ಬೆಳೆಯುತ್ತಲಿದ್ದ.
 
     ನನ್ನ ನೌಕರಿಯ ದೌಡು ಎಂಭತ್ತನಾಲಕ್ಕರಿಂದ ದೆಹಲಿಗೆ ವರ್ಗವಾದಂತೆ ಆರಂಭವಾಗಿ ದೇಶದ ರಾಜ್ಯದ ಅನೇಕ ನಗರ ಊರುಗಳಲ್ಲಿ ಸುರುವಾದಂತೆ ಈತನ ಸಂಗ ವಿರಳವಾಯಿತು. ರಜಾಕಾಲಗಳಲ್ಲಿ ಮಕ್ಕಳನ್ನು ಕಟ್ಟಿಕೊಂಡು ಬಂದಾಗ ಊರಲ್ಲಿ ಇವನನ್ನು ಭೆಟ್ಟಿಯಾಗಿ ಖುಷಿಪಡುತ್ತಿದ್ದೆ. 'ಏನು ನಾಯಕರೇ, ರಜದಲ್ಲಿ ಬಂದದ್ದಾ? ಅಂದ ಹಾಗೆ ಈಗ ನೀವು ದಿಲ್ಲಿಯಲ್ಲಿ ಇರೂದಲ್ವಾ? ಮೊನ್ನೆ ನಮ್ಮ ಓಕುಡ ಮಾಸ್ಟ್ರು ಹೇಳುತ್ತಿದ್ರು. ನಿಮ್ಮಲ್ಲಿ ಅವರಿಗೆ ಭಾರೀ ಗಮ್ಮತ್ತಾಯಿತಂತೆ. ಇಲ್ಲಿ ರಸ್ತೆ ಬದಿಯಲ್ಲಿ ಒಬ್ಬರೇ ಏನು ಮಾಡ್ತಾ ಇದ್ದೀರಿ?' ಪರಿಚಿತರೊಬ್ಬರು ಒಮ್ಮೆ ಸಂಜೆ ವಿಚಾರಿಸಿದರು. 'ನನ್ನ ತಮ್ಮ , ಗೆಳೆಯ ಹಾಗೂ ಆತ್ಮೀಯನೊಡನೆ ಸ್ವಗತದಲ್ಲಿದ್ದೇನೆ, ಇವರಿಗೆ ಹೇಗೆ ಹೇಳಲೀ' ಎಂಬ ಗೊಂದಲದಲ್ಲಿ ನಾನು ಬಿದ್ದೆ. ಪುಣ್ಯಕ್ಕೆ ಅವರು ಹೆಚ್ಚು ಹೊತ್ತು ನಿಲ್ಲಲಿಲ್ಲ.....
 
     ಊರು ಬೆಳೆಯಿತು. ಗ್ರಾಮವಾಗಿದ್ದ ಹೆಬ್ರಿಯು ಪೇಟೆಯಾಗಿ, ಪಟ್ಟಣವಾಗಿ ಈಗ ತಾಲೋಕು ಕೇಂದ್ರವಾಗಿದೆ. ಹೈಸ್ಕೂಲು ಕಲಿಯುತ್ತಿದ್ದ ಕೇಶವ, ಸಿಂಡಿಕೇಟು ಬೇಂಕಿನ ಸದಸ್ಯನಾಗಿ, ಸಂಸಾರಿಗನಾಗಿ ಏಗುತ್ತ ಇಂದು ತಕ್ಕಮಟ್ಟಿನ ಗೌರವಯುತನಾಗಿರುತ್ತೇನೆ. ಈ ನನ್ನ ಸಹೋದರನೂ ಹೆಬ್ರಿ ಊರಿನ ಎಲ್ಲಾ ಪ್ರಗತಿ, ಉನ್ನತಿ ಅವನತಿಗಳಿಗೂ, ಊರಜನರ ಕಷ್ಟ ಸುಖಗಳಿಗೂ ಸಾಕ್ಷಿಯಾಗಿ ತಾನೂ ಸಹ ಸಾಕಷ್ಟು ಬೆಳೆದಿದ್ದಾನೆ. ಸಾಕಷ್ಟು ದಪ್ಪವೂ ಆಗಿದ್ದಾನೆ. ಜ್ಞಾನಿಯೂ ಆಗಿದ್ದಾನೆ. ಮನುಷ್ಯರ ಬುದ್ಧಿ/ದುರ್ಬುದ್ಧಿ , ಪ್ರೀತಿ/ದ್ವೇಷ , ಆಶೆ/ನಿರಾಶೆ ಮೋಹ, ಮದ, ಮತ್ಸರ, ಕಾಮ ವೈರಾಗ್ಯಗಳಿಗೆ ತತ್ವಜ್ಞಾನಿಯ ತೆರದಲ್ಲಿ ಸಾಕ್ಷೀಭೂತನಾಗಿದ್ದಾನೆ! ಇವನು ನನ್ನ ತಮ್ಮನೆಂದು ಕಂಡು ಪ್ರೀತಿಸಿದ ನಾನು ನಿಜವಾಗಿ ನೋಡಿದರೆ ಇವನೆದುರು ತೀರಾ ಕುಬ್ಜ. ರಾಗ ದ್ವೇಷ ಪ್ರೀತಿ ಕಾಮ ಹಮ್ಮು ಬಿಮ್ಮುಗಳಿಂದ ಆವೃತನಾದ ನಾನು ಅಣ್ಣ ಹೇಗಾದೇನು!! ಕೊಂಚ ಆತ್ಮ ವಿಶ್ಲೇಷಣೆಗೆ ಒಳಗಾದೆ....
 
     ಇವನನ್ನು ಈಗ ಕಂಡಾಗ ಅನೇಕ ಭಾವಗಳು ಹುಟ್ಟುತ್ತವೆ. ಆದರೆ ದೇಶವು ಪ್ರಗತಿಪಥದಲ್ಲಿ ದೌಡಾಯಿಸುತ್ತಿದೆ. ದೇಶಕ್ಕೆ ಒಬ್ಬ ಉನ್ನತ ವ್ಯಕ್ತಿತ್ವದ ಸಮರ್ಥ ನೇತಾರನ ನೇತೃತ್ವ ದೊರಕಿದೆ. ಪ್ರಗತಿಯ ಒಂದು ಭಾಗ ವಿಶಾಲವಾದ ಅಗಲವಾದ ರಸ್ತೆಗಳ ಜಾಲ. ಎಂಭತ್ತರ ದಶಕದಲ್ಲಿ ತೂಗಹಾಕಿದ ಡೆಮೊಕ್ಲೀಸನ ಖಡ್ಗವು ಈಗಲೂ ಇವನ ಮೇಲೆ ಇನ್ನೂ ಛಕಛಕ ಎಂದು ಝಳಪಿಸುತ್ತ ಇದೆ...!!!!


No comments:

Post a Comment