Monday, May 31, 2021

ದೊಡ್ಡಸ್ತಿಕೆ..

ಹುಬ್ಬಳ್ಳಿಯಲ್ಲಿ ನಮ್ಮ ಬೇಂಕಿನ ಜನತಾ ಬಜಾರ್ ಶಾಖೆಯಲ್ಲಿ ನನ್ನ ಡ್ಯೂಟಿ. ಮೆನೆಜರರು ಕರೆದರು "ನಾಯಕರೆ, ಈ ದಿನಗಳಲ್ಲಿ ನಮ್ಮ ಪೇಜಾವರ ಗುರುಗಳ ಚಾತುರ್ಮಾಸ್ಯ ಹುಬ್ಬಳ್ಯಾಗ ನಡದೈತಿ. ದಿನಾ ಸಂಜೀ ಮುಂದ ಭಗವದ್ಗೀತೆ ಬಗ್ಗೆ ಪ್ರವಚನಾ ನಡಸ್ಯಾರ, ನೀವು ಹೋಗಿಲ್ಲೇನು?"

"ಇಲ್ಲ ಸರ್, ಪೇಪರಿನಲ್ಲಿ ಓದಿದ್ದೆ, ಆದರೆ ಎಲ್ಲಿ ಅಂತ ಮರೆತು ಹೋಯಿತು. ಹಾಗಾಗಿ ಪ್ರವಚನ ಕೇಳಲಿಕ್ಕಾಗಲಿಲ್ಲ."

"ಅಲ್ಲೇ ನೀವು ಮನೀಗ್ ಹೋಗ್ತೀರಲ್ರೀ, ದಾರ್‍ಯಾಗ ಅಶೋಕನಗರ ರೇಲ್ವೇ ಕ್ರಾಸ್ ಅದಲ್ಲಾ, ಅದರ ಪಕ್ಕದಲ್ಲೇ ಐತೆ. ಒಮ್ಮೆ ಹೋಗಬರ್‍ರೀ. ಚಲೋ ಪ್ರವಚನಾ ಐತಿ. ತಪ್ಪಿಸ್ಕೋ ಬ್ಯಾಡ್ರೀ."

ಮನೆಜರ್ ಅಣ್ಣಿಗೇರಿಯವರು ನಾನು ಕಂಡ ಬೇಂಕು ಮನೆಜರರ ಪೈಕಿ ತುಂಬಾ ಒಳ್ಳೆಯ, ಸಭ್ಯ, ಸರಳ ಹಾಗೂ ಆತ್ಮೀಯರು. ನನ್ನ ಮೇಲೆ ಅವರಿಗೆ ವಿಶೇಷ ಪ್ರೀತಿ. ಅವರ ಸಲಹೆ ಮೇರೆಗೆ ಪೇಜಾವರ ಶ್ರೀಯವರು ಚಾತುರ್ಮಾಸ್ಯ ನಡೆಸುತ್ತಿರುವ 'ಕೃಷ್ಣಸದನ' ಯಾ 'ಕೃಷ್ಣ ಮಂದಿರ' ಸರಿಯಾಗಿ ನೆನಪಿಲ್ಲ, ತಲಪಿದೆ. ಅಲ್ಲಿ ಸುಮಾರು ಇಪ್ಪತ್ತು ಮಂದಿ ಭಕ್ತಾದಿಗಳು, ಅನುಯಾಯಿಗಳು ಇದ್ದರು. "ಗುರುಗಳ ಪ್ರವಚನ ಮುಗಿಯಿತೇ?" ಕೇಳಿದೆ.

"ಇಲ್ರೀ ಸರ, ಗುರುಗಳನ್ನು ಒಬ್ಬರು ಪಾದಪೂಜೆಗೆಂದು ಕರದಾರ, ಇನ್ನೇನ ಬರಲಿಕ್ಕಾತು, ತೊಗೋರಿ ಬಂದೇ ಬಿಟ್ರಲಾ." ಅಲ್ಲಿದ್ದವರೊಬ್ಬರು ಉತ್ತರಿಸಿದರು.

ಅಲ್ಲಿದ್ದವರು ನಿರೀಕ್ಷಿಸುತ್ತಿದ್ದಂತೆ ಎರಡು ಮಾರುತಿ ಓಮ್ನಿಗಳು ಬಂದು ಹಾಲ್ ನ ಎದುರು ನಿಂತವು. ಮೊದಲ ವಾಹನದಲ್ಲಿ ಪಾದಪೂಜೆ ಮಾಡಿದ ಗೃಹಸ್ಥರ ಮನೆಯವರು, ಎರಡನೆ ವಾಹನದಿಂದ ಗುರುಗಳು ಇಳಿದರು. ಗುರುಗಳ ವ್ಯಕ್ತಿತ್ವ ಮತ್ತು ಕೀರ್ತಿ ಬಹುದೊಡ್ಡದು, ಆದರೆ ಆಕಾರ ಸಣ್ಣದು. ಅವರ ಆಗಮನದ ಸಮಯದಲ್ಲಿ ಆಗ ಅಲ್ಲಿ ಯಾವುದೇ ಡೌಲು ಡವಾಲಾಗಲೀ, ಬಾಜಾ ಬಜಂತ್ರಿಯಾಗಲೀ, ಶಂಖ ಜಾಗಟೆ ವಾದ್ಯಗಳಾಗಲೀ, ಭಕ್ತಜನರ ಹಿಂಬಾಲಕರ ಜಯಜಯಕಾರವಾಗಲೀ ನಡೆಯಲಿಲ್ಲ. ಓಮ್ನಿಯಿಂದ ಪುಟುಪುಟು ಇಳಿದವರೇ ಸಟಸಟನೆ ಹೆಜ್ಜೆ ಹಾಕಿ ಬಾಗಿಲಲ್ಲಿ ಕೈ ಮುಗಿದು ನಿಂತಿದ್ದ ಭಕ್ತಾದಿಗಳಿಗೆ ಅಭಿವಂದಿಸಿ ತನಗಾಗಿ ಇರಿಸಿದ ಮರದ ಮಣೆಯ ಮೇಲೆ ಕುಳಿತವರೇ ಹಿಂದಿನ ದಿನದ ಪ್ರವಚನವನ್ನು ಮುಂದುವರೆಸಿದರು "ಕೃಷ್ಣಪರಮಾತ್ಮನು ಏನು ಹೇಳಿದ್ದನೆಂದರೆ.............."

ಪೇಜಾವರ ಶ್ರೀಗಳು ಭಾರತದ ಅತ್ಯಂತ ಪ್ರಭಾವೀ ಗುರುಗಳಲ್ಲಿ ಪ್ರಮುಖರು. ವಿಶ್ವಹಿಂದೂ ಪರಿಷತ್ತಿನ ಉಪಾಧ್ಯಕ್ಷರು, ಕೃಷ್ಣಮಠದ ಯತಿವರ್ಯರು, ಸಮಾಜಮುಖೀ ವ್ಯಕ್ತಿತ್ವವುಳ್ಳವರು. ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಆರಂಭಿಸಿ ಕಾರ್ಯಗತ ಮಾಡಿದವರು. ತಮ್ಮ ಜೀವನವನ್ನು ಕೇವಲ ಶ್ರೀಕೃಷ್ಣನ ಪೂಜೆಗೆ ಮಾತ್ರ ಸೀಮಿತಗೊಳಿಸದೇ ಅನೇಕ ಕ್ರಾಂತಿಕಾರೀ ಸುಧಾರಣೆಗಳನ್ನು ತಂದವರು. ಇದು ಎಲ್ಲರಿಗೂ ತಿಳಿದ ವಿಚಾರ.

ದೇಶದ ಪ್ರತಿಷ್ಠಿತ ದೇವಳದ ಯತಿಗಳಾದ ಇವರ ಆಗಮನದ ಸಮಯದಲ್ಲಿ ಭಾರೀ ಗೌಜಿ ಗದ್ದಲ, ಭಕ್ತರ ಮತ್ತು ಹಿಂಬಾಲಕರ ಡೌಲು ಡಂಬಾಚಾರ, ಆನೆ ಕುದುರೆಗಳ ಹೇಷಾರವ ಇವುಗಳನ್ನೆಲ್ಲ ಎಕ್ಸ್ ಪೆಕ್ಟ್ ಮಾಡುತ್ತಿದ್ದ ನನಗೆ ಇವರ ಸರಳ, ಸಿಂಪಲ್ ನಡೆವಳಿಕೆ ಮೊದಲ ಐದು ನಿಮಿಷ ನಂಬಲಾಗಲಿಲ್ಲ.

ಒಂದೆರಡು ವರ್ಷಗಳ ಹಿಂದೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಗೆಳೆಯರೊಡನೆ ಹೋಗಿದ್ದೆ. ಸಿದ್ಧಗಂಗಾ ಮಠಾಧೀಶರಿಗೆ ಆಗ ಪ್ರಾಯಶಃ 108 ವರ್ಷ ಪ್ರಾಯ. ಗುರುಗಳ ಭೇಟಿ ಮಾಡಬೇಕಿತ್ತಲ್ಲಾ ಎಂದು ಕೇಳಿಕೊಂಡಾಗ "ಸ್ವಲ್ಪ ತಡೀರಿ ಸ್ವಾಮೀ, ಈಗ ಗುರುಗಳು ಎಸೆಂಬ್ಲಿ ಉದ್ದೇಶಿಸಿ ಮಾತಾಡ್ತಾ ಇದ್ದಾರೆ. ಹುಡುಗರ ಎಸೆಂಬ್ಲಿ ಮುಗಿದ ಕೂಡಲೇ ಅಲ್ಲೇ ಎದುರು ಇರುವ ಆಫೀಸು ರೂಮಲ್ಲಿ ಸಿಗುತ್ತಾರೆ. ಏನಾದರೂ ಕೇಳಲಿಕ್ಕಿತ್ತೇನು?"

"ಇಲ್ಲ, ಕೇವಲ ಅವರ ದರ್ಶನ ಭಾಗ್ಯ ಸಿಕ್ಕರೆ ಸಾಕು. ಪ್ರಣಾಮ ಮಾಡಿ ಆಶೀರ್ವಾದ ಪಡೆಯೂದು ಮಾತ್ರ". ಅಂದೆ.

"ಅಗೋ ನೋಡಿ, ಎಸೆಂಬ್ಲಿ ಮುಗೀತು, ಹೋಗಿ ಸರ್." ಎಂದರು ಅಲ್ಲಿನ ಅಧಿಕಾರಿಗಳು. ಆಫೀಸು ಕೋಣೆಯಲ್ಲಿ ಸಿದ್ಧಗಂಗಾ ಮಠಾಧೀಶರು ಕುಳಿತು ಒಬ್ಬರೊಡನೆ ಏನೋ ಡಿಸ್ಕಷನ್ ನಡೆಸುತ್ತಿದ್ದರು. ನಾವು ಹೋಗಿ ಪ್ರಣಾಮ ಮಾಡಿ ಹೊರಬಂದೆವು. ಏನೂ ಮಾತನಾಡುವ ಅವಶ್ಯಕತೆ ನಮಗಿರಲಿಲ್ಲ. ಅಲ್ಲಿನ ಆಫೀಸು ತೀರಾ ಸರಳ, ಯಾವುದೇ ಅನಗತ್ಯ ಆಡಂಬರದ ಫರ್ನಿಚರು ನನಗೆ ನೋಡಲು ಸಿಗಲಿಲ್ಲ, ಜವಾನ, ಬಾಡಿಗಾರ್ಡು, ಸೆಕ್ಯೂರಿಟಿ ಮೇನ್ ಯಾರೂ ಇಲ್ಲ. ದೇಶದ ಪ್ರಧಾನಿಗಳು ಬಂದು ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಹೋಗುತ್ತಿರುವ ಸಿದ್ಧಗಂಗಾ ಸಂಸ್ಥಾನದ ಮಠಾಧೀಶರವರು. ದಿನಕ್ಕೆ ನನಗೆ ನೆನಪಿರುವಂತೆ 3500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನ್ನದಾನ ಮತ್ತು ವಿದ್ಯಾದಾನ ಮಾಡುತ್ತಿರುವ ಮಠ ಅದು. ಅದರ 108 ವರ್ಷ ಪ್ರಾಯದ ಮಠಾಧೀಶರು ಯಾವುದೇ ಆಡಂಬರ ಅಹಂಕಾರವಿಲ್ಲದೇ ಮಕ್ಕಳ ಎಸೆಂಬ್ಲಿ ಉದ್ದೇಶಿಸಿ ಮಾತಾಡುವುದನ್ನು ಕಂಡು ಮನ ತುಂಬಿ ಬಂತು.

ನನ್ನ ಅನುಭವದಂತೆ ಹೆಚ್ಚಿನ ಮಠ ಮಾನ್ಯಗಳ ಗುರುಗಳ ಆಗಮನ, ನಿರ್ಗಮನ ಹಾಗೂ ವಾಸ್ತವ್ಯಗಳ ವೈಭವವೇ ಬೇರೆ. ಗುರುಗಳ ವಾಸ್ತವ್ಯ ಎಂದರೆ ಅದೊಂದು ಹಬ್ಬ. ಪೂಜೆಗೆ ಬರುವ ಹೂಗಳೇನು! ಆರತಿ ಮಾಡುವ ಸ್ಟೈಲ್ ಏನು! ಊರೂರು ಗಳಿಂದ ಬರುವ ಭಜನಾ ಮಂಡಲಿಗಳೇನು! ಪ್ರತೀದಿನ ಭೂರಿ ಭೋಜನಗಳ ವ್ಯವಸ್ಥೆ ಏನು!

ಅಂತಿರುವಾಗ ಒಂದು ಸಾದಾ ಓಮ್ನಿಯಿಂದ ಬಂದಿಳಿದು ಪ್ರವಚನ ನೀಡುವ ಯತಿ, 108 ರ ಪ್ರಾಯದಲ್ಲೂ ತನ್ನ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಚಿಂತಿಸುವ ಮಠಾಧೀಶರನ್ನು ನೋಡಿದಾಗ ಅಚ್ಚರಿಯಾಗುತ್ತದೆ.......

ಶಾಪ ವಿಮೋಚನೆ

 ಭಾಗವತದಲ್ಲಿ ಒಂದು ಎಪಿಸೋಡು ಬರುತ್ತದೆ...

     ಬಾಲ್ಯದಲ್ಲಿ ಶ್ರೀಕೃಷ್ಣನ ಬಾಲಲೀಲೆಗಳು-ಮುಖ್ಯವಾಗಿ  ಉಪಟಳಗಳು-ಊರ ಗೋಪಿಕಾ ಸ್ತ್ರೀಯರ ಮೇಲೆ ಬಹಳವಿತ್ತು. ನಮ್ಮ ಮನೆಯ ಬೆಣ್ಣೆ ಕದ್ದ, ನಮ್ಮ ಮೊಸರಿನ ಗಡಿಗೆ ಒಡೆದು ಹಾಕಿದ, ನಮ್ಮ ಅಡಿಗೆ ಮನೆಯೆಲ್ಲಾ ಹಾಲು ಬೀಳಿಸಿ ರಂಭಾಲೂಟಿ ನಡೆಸಿದ ಹಾಗೆ ಹೀಗೆ ಎಂದು ಹತ್ತು ಹಲವಾರು ತಗಾದೆಗಳನ್ನು ತಗಲಿ ಹಾಕಿಕೊಂಡು ತಾಯಿ ಯಶೋಧೆಯ ಬಳಿ ದೂರು ತರುತ್ತಿದ್ದರು. ಕೃಷ್ಣನನ್ನು ನೋಡಿ ಮುದ್ದಾಡಲೆಂಬ ಮೂಲ ಉದ್ದೇಶದಿಂದಲೇ ಇವರು ಬರುತ್ತಿದ್ದರು. ಒಮ್ಮೆಯಂತೂ ಸೀರಿಯಸ್ ಕಂಪ್ಲೇಂಟು ಹೋಯಿತು-'ಮಥುರೆಯ ಸಂತೆಗೆ ಹೋಗುವಾಗ ನಮ್ಮನ್ನು ಓಡಿಸಿಕೊಂಡು ಬಂದ, ಒಬ್ಬಳ ಸೆರಗು ಹಿಡಿದೆಳೆದ ತುಂಬಾ ತುಂಟನಾಗಿದ್ದಾನೆ ನೀನು ಇವನನ್ನು ಕಂಟ್ರೋಲು ಮಾಡಬೇಕು.'

     ಈ ಸಲ ಯಶೋಧೆಗೆ ತಡಕೊಳ್ಳಲಾಗಲಿಲ್ಲ. 'ನಿನ್ನ ತಂಟೆ ತುಂಬಾ ಮಿತಿ ಮೀರಿತು, ತಡೀ, ತಕ್ಕ ಶಾಸ್ತಿ ಮಾಡುತ್ತೇನೆ.' ಎಂದು ಒಂದು ಒರಳು ಕಲ್ಲನ್ನು ಕೃಷ್ಣನ ಸೊಂಟಕ್ಕೆ ಕಟ್ಟಿ ಎಲ್ಲೂ ಹೋಗದಂತೆ ಮಾಡಿ ತಾನು ತನ್ನ ಕೆಲಸಗಳಲ್ಲಿ ಮಗ್ನಳಾದಳು. ಅಮ್ಮ ಕಟ್ಟಿದ್ದು ಅಮ್ಮನೇ ಬಿಚ್ಚಬೇಕು ಎಂದು ಕೃಷ್ಣನ ಬಯಕೆ, ಎಷ್ಟೇ ನಾಟಕ ಮಾಡಿದರೂ ಅಮ್ಮನ ಕೋಪ ಇಳಿಯಲಿಲ್ಲ, ಕೊನೆಗೆ ಅಮ್ಮ ಮರೆತೇ ಬಿಟ್ಟಳು. ಆದ್ದರಿಂದ ಬಾಲಕೃಷ್ಣನು ಮೆಲ್ಲನೇ ಆ ಒರಳು ಕಲ್ಲನ್ನು ಎಳಕೊಂಡು ಮನೆಯ ಹಿಂದಿನ ತೋಟಕ್ಕೆ ಬಂದ. ಅಲ್ಲಿ ಎರಡು ಬೃಹತ್ ಮರಗಳು ಒಂದರ ಹತ್ತಿರ ಒಂದು ಒತ್ತಿ ಕೊಂಡಂತೆ ಬೆಳೆದು ನಿಂತಿದ್ದವು. ಹುಡುಗ ಈ ವೃಕ್ಷಗಳ ನಡುವೆ ತೂರಿ ಹೋದರೂ ಒರಳು ಕಲ್ಲು ದಾಟಿ ಬರಲಿಲ್ಲ. ಇವನು ಎಳೆದಾಡಿದ ರಭಸಕ್ಕೆ ಆ ಎರಡೂ ಮರಗಳು ಭಯಂಕರ ಶಬ್ಧದೊಡನೆ ಧಡಾರನೇ ಬೇರು ಸಹಿತ ಮುರಿದು ಬಿದ್ದವು.

     ಹಿಂದೆ ಯಾವುದೋ ಕಾಲದಲ್ಲಿ ಅಪ್ಸರೆ ರಂಭೆಯು ತನ್ನ ಪ್ರಿಯಕರನಲ್ಲಿಗೆ ಸಾಗುತ್ತಿದ್ದಳು, ತನ್ನದೇ ಭಾವಾವೇಶದಲ್ಲಿದ್ದಾಕೆಗೆ ತನ್ನನ್ನು ಕಾಮಿಸಿ ಹಿಂಬಾಲಿಸಿಕೊಂಡು ಬರುತ್ತಿರುವ ನಳ-ಕೂಬರರೆಂಬ ದೇವತೆಗಳಿಬ್ಬರ ಖಬರು ಇರಲಿಲ್ಲ. ಅವರು ಅಡ್ಡ ಹಾಕಿ ಎಷ್ಟೇ ಬೇಡಿಕೊಂಡರೂ ಅವಳನ್ನು ಅಪಹರಿಸಿಕೊಂಡು ಹೋದರು. ಭಯಂಕರ ಸಿಟ್ಟಿನಿಂದ ಭೂಲೋಕದಲ್ಲಿ ಬಿದ್ದುಕೊಂಡಿರಿ ಎಂದು ಶಪಿಸಿದಳಾಕೆ. ಭೂಲೋಕಕ್ಕೆ ಬಂದು ಬೀಳುವುದೆಂದರೆ ಅದೊಂದು ದೊಡ್ಡ ಅವಮಾನಭರಿತ ಶಿಕ್ಷೆ. ಫ್ರಾಡ್ ಮಾಡಿ ಸಿಕ್ಕಿ ಬಿದ್ದು ಡಿಸ್ ಮಿಸ್ ಆದ ನೌಕರನ ತರಹ!! ನೀನು ಕೊಟ್ಟ ಶಾಪಕ್ಕೆ ಏನಾದರೂ ಉಪಶಮನ ಹೇಳು ಎಂದು ಪರಿಪರಿಯಾಗಿ ಬೇಡಿಕೊಂಡಾಗ ಮುಂದೆ ದ್ವಾಪರಯುಗದಲ್ಲಿ ಪರಮಾತ್ಮನೇ ನಿಮ್ಮನ್ನು ಉದ್ಧರಿಸುತ್ತಾನೆಂದು ಶಾಪ ಪರಿಹಾರ ತಿಳಿಸಿದಳಾಕೆ. ಬುಡಸಹಿತ ಬಿದ್ದ ಆ ಎರಡು ಮರಗಳೇ ನಳ-ಕೂಬರರು. ಅವರು ಶಾಪವಿಮೋಚಿತರಾಗಿ ಪರಮಾತ್ಮನಿಗೆ ನಮಿಸಿ ಅಂತರ್ಧಾನರಾದರು, ತಮ್ಮ ಲೋಕಕ್ಕೆ ಮರಳಿದರು...

     ನಮ್ಮ ಮನೆಯ ವಠಾರದಲ್ಲಿ ಇಬ್ಬರು ನಳ ಕೂಬರರು ಇದ್ದರು, ಇವರು ಯಾವ ಅಪ್ಸರೆಯ ಹಿಂದೆ ಬಿದ್ದಿದ್ದರೆಂಬ ಇತಿಹಾಸ ಗೊತ್ತಿಲ್ಲ , ಆದರೆ ಪರಸ್ಪರ ಪ್ರೀತಿಯಿಂದೆಂಬಂತೆ ಒಬ್ಬರನ್ನೊಬ್ಬರು ತಗಲಿ ಹಾಕಿಕೊಂಡು ನೇರಾನೇರ ಬೆಳೆದು ಮನೆಯ ಶೋಭೆಯನ್ನು ಹೆಚ್ಚಿಸಿದ್ದರು. ಪ್ರತೀ ಮೇ ತಿಂಗಳ ಉತ್ತರಾರ್ಧದಲ್ಲಿ ಕರಾರುವಾಕ್ಕಾಗಿ ಇಬ್ಬರೂ ಮೈ ಪೂರ್ತಿ ಕೆಂಪು ಕೆಂಪು ಹೂಗಳಿಂದಾವೃತರಾಗಿ ಹಿಂದಿನ ಯುಗದಲ್ಲಿ ಯಾವ ಅಪ್ಸರೆಯ ಹಿಂದೆ ಬಿದ್ದಿದ್ದರೋ ಅವಳಿಗಿಂತ ದುಪ್ಪಟ್ಟು ಸೌಂದರ್ಯ ದಿಂದ ತಾವು ಕಂಗೊಳಿಸುವುದೂ ಅಲ್ಲದೇ ಇಡೀ ಪ್ರದೇಶದ ಹೆಮ್ಮೆಯಾಗಿದ್ದರು. ನಿಸರ್ಗದ ಈ ಸೌಂದರ್ಯದ ವೈಭವವನ್ನು ನೋಡುತ್ತಾ ವಿಸ್ಮಯ ಆನಂದಗಳನ್ನು ಹೊಂದುತ್ತಿದ್ದ ಕ್ಷಣಗಳೆಷ್ಟೋ!! 'ನಿಮ್ಮನಿ ಎದ್ರ್ ಇದ್ದ ಮರ ಭಾರೀ ಚಂದ ಮಾರ್‍ರೇ' ಎಂಬುದಾಗಿ ಅನೇಕರ ಪ್ರಶಂಸೆಗಳಿಗೂ ಇವುಗಳು ಪಾತ್ರವಾಗಿದ್ದವು. ಹೂಗಳು ದಿನ ಕಳೆದಂತೆ ಕೆಳಗೆ ನೆಲದ ಮೇಲೆ ಬಣ್ಣ ಬಣ್ಣದ ರಂಗೋಲಿಯ ತೆರ ಚಿತ್ತಾರಗಳನ್ನು ಚಿತ್ರಿಸುವುದೂ, ಮೇಲೆ ಮರಗಳಲ್ಲಿ ಹೊಸ ಹೊಸ ಹೂಗಳ ಆಗಮನವೂ ಚಿತ್ತಾಕರ್ಷಕ...!!

     ಎರಡು ವರ್ಷಗಳ ಹಿಂದೆ ಭಾರೀ ಗಾಳಿ ಮಳೆಯ ಅವಾಂತರದ ಒಂದು ದಿನ ಒಬ್ಬನ ಶಾಪ ವಿಮೋಚನೆ ಆಯಿತೋ ಏನೋ, ಒಂದು ಮರವು ಧರಾಶಾಯಿಯಾಯಿತು. ಮನಸ್ಸಿಗೆ ಬಹಳ ಬೇಸರವಾಯಿತು. ಒಂದೆರಡು ದಿನಗಳ ತನಕ ಸಣ್ಣ ಮಟ್ಟಿನ ಖಿನ್ನತೆಯೂ ಇತ್ತು.

     ಈಗ ಮೇ ತಿಂಗಳ ಉತ್ತರಾರ್ಧ, ತನ್ನ ಸ್ವಭಾವಕ್ಕೆ ಅನುಗುಣವಾಗಿ ಮರವು ಖುಷಿಯಿಂದ ಕೆಂಪು ತೋರಣವನ್ನು ಹರಡಿದೆ. ಹಿಂದಿನಷ್ಟು ವೈಭವವಿಲ್ಲ, ಆದರೂ ತನ್ನ ನಿಯಮದಂತೆ ಸೌಂದರ್ಯವನ್ನು ಪ್ರಕಟಿಸುತ್ತಿದೆ. ಗೆಳೆಯನ ಅಗಲಿಕೆಯ ಕ್ಷಣಗಳು ಮುಗಿದವು. ಇನ್ನು ಮುಂದಿನ ಯೋಚನೆ ಎಂಬಂತೆ ತನ್ನ ಕಂಪನ್ನು ಬೀರುತ್ತದೆ...👌👌👌👌

     ಹೆಚ್ಚಿನ ವ್ಯಾಖ್ಯಾನ ಅಥವಾ ವೇದಾಂತ ಬರೀಲಿಕ್ಕೆ ಹೋಗುವುದಿಲ್ಲ, ಆದರೂ ಯಾರೊಬ್ಬರ ಅಗಲಿಕೆಯಾಗಲೀ, ಅತ್ಯಂತ ದುಃಖದ ಗಳಿಗೆಗಳಾಗಲೀ ಕ್ರಮೇಣ ಅವುಗಳನ್ನು ಮರೆತು ನಮ್ಮ ನಮ್ಮ ಸಹಜ ಗುಣಗಳತ್ತ ಮರಳಬೇಕು, ಜೀವನವು ನಿಂತ ನೀರಾಗಬಾರದು, ಈಗ ಇರುವ ಮರವನ್ನು ನೋಡಿ, ಗೆಳೆಯನ ಅಗಲಿಕೆಯ ನಡುವೆಯೂ ನಳನಳಿಸುತ್ತಿದೆ..🙏🙏🙏