Wednesday, October 25, 2023

ಯಕ್ಷ ಪ್ರಶ್ನೆ ಸಂವಾದ

 

ಯಕ್ಷಪ್ರಶ್ನೆ ಇದು ಒಂದು ಸಂವಾದ. ಜೀವನದ ಹೆಚ್ಚಿನ ತತ್ವಗಳು ಇದರಲ್ಲಿ ಸಮಾಹಿತವಾಗಿವೆ. ಆದರೂ ನಾವು ಅನೇಕ ವಿಚಾರಗಳನ್ನು ಆಯಾ ಕಾಲಮಾನ ಪರಿಪೇಕ್ಷಗಳಲ್ಲಿ ಗ್ರಹಿಸಬೇಕು. ಈ ಪ್ರಶ್ನೋತ್ತರದ ಕಾಲವು ಸುಮಾರು ಐದು ಸಾವಿರ ವರ್ಷಗಳ ಹಿಂದಿನದು. ಆಗಿನ ಭಾರತೀಯ ಜ್ಞಾನದ ಗಹನತೆ ಎಷ್ಟಿತ್ತು ಎಂದು ನಾವು ಈಗಿನ ದಿನಗಳಲ್ಲಿ ನಮ್ಮ ಪರಿಮಿತ! ತಿಳುವಳಿಕೆಯ ಆಧಾರದಲ್ಲಿ ವಿಶ್ಲೇಷಿಸಲು ಹೋದರೆ ಅದು ಅನುಚಿತವಾಗುತ್ತದೆಯೋ ಏನೋ! ಈಗಿನ ಜ್ಞಾನ, ವಿಜ್ಞಾನ, ನಂಬಿಕೆಗಳು, ಜೀವನಕ್ರಮ ಇತ್ಯಾದಿ ಅಂದಿನ ಕಾಲದ ಜ್ಞಾನ ವಿಜ್ಞಾನ ನಂಬಿಕೆಗಳಿಗಿಂತ ಶ್ರೇಷ್ಠವೋ ಕನಿಷ್ಠವೋ ಎಂದು ಹೇಗೆ ತುಲನೆ ಮಾಡುವುದು!?

ಗೀತೆಯಲ್ಲಿ ಭಗವಂತನು ಅರ್ಜುನನಿಗೆ ಬೋಧಿಸಿದಂತೆ ನರ ನಾರಾಯಣರಿಗೆ ಲೆಕ್ಕವಿಲ್ಲದಷ್ಟು ಜನ್ಮ, ಜೀವನ ಹಾಗೂ ಅವಸಾನಗಳಾಗಿವೆ, ಇನ್ನೂ ಅಸಂಖ್ಯಾತ ಜನನ ಮರಣಗಳ ಚಕ್ರಗಳು ಆಗಲಿವೆ. ನರನಾದ ಅರ್ಜುನನಿಗೆ (ಜೀವ ಮಾತ್ರನಿಗೆ) ಈ ಹಿಂದೆ ಆಗಿರುವ ಮತ್ತು ಮುಂದೆ ಆಗಲಿರುವ ಜೀವನಚಕ್ರಗಳ ಅನುಭವಗಳ ನೆನಪು ಇಲ್ಲ. ಗೀತೆಯ ಸಾರ ಬಲು ಶ್ರೇಷ್ಠವಾದುದು, ವೇದಗಳು ಬ್ರಹ್ಮನ ಮುಖದಿಂದ ಆದೇಶಿಸಲ್ಪಟ್ಟವು ಎಂಬ ವಿಚಾರವಿದೆ. ಯುಗಯುಗಾದಿಗಳಿಂದ ಈ ಜ್ಞಾನ ಪ್ರಸರಿಸಲ್ಪಡುತ್ತಿದೆ, ಇದಕ್ಕೆ ಕಾಲಕಾಲಕ್ಕೆ ಋಷಿ, ಮುನಿ ಮತ್ತು ವಿದ್ವತ್ ಜನರಿಂದ ಉಕ್ತಿಗಳು, ವೈದ್ಯಕೀಯ, ಜ್ಞಾನ ವಿಜ್ಞಾನಗಳ ಭಂಡಾರ ಸೇರುತ್ತಲೇ ಇದೆ. ವೇದಗಳ ಉಗಮ ಯಾವಾಗ ಸುರುವಾಯಿತು ಎಂಬುದರ ಕುರಿತು ಖಚಿತತೆ ಇಲ್ಲದ ಕಾರಣ ಈ ನಂಬಿಕೆ. ಒಬ್ಬ ಮಹಾತ್ಮರ ಪ್ರಕಾರ ಭರತಖಂಡದಲ್ಲಿ ಸುಮಾರು ಹದಿನೈದು ಸಾವಿರ ವರ್ಷಗಳ ಹಿಂದಿನಿಂದ  ಕಾಲಕಾಲಕ್ಕೆ ಇಂತಹ ಮಹತ್ತರವಾದ ಅನೇಕ ಸದ್ವಿಚಾರಗಳು ನಮ್ಮ ಸನಾತನ, ಪೌರಾಣಿಕ, ಮಧ್ಯಯುಗದ ಸಮಯದಲ್ಲಿ ಹೇಳಲ್ಪಟ್ಟಿವೆ. ಬಹುಮಟ್ಟಿನ ವಿಚಾರಗಳು ಸಾರ್ವಕಾಲಿಕವಾದವು.

ಈ ವಿಚಾರಗಳ ಉಲ್ಲೇಖ ಏಕಿವೆ? ಮಾನವನು ಸಾಮಾಜಿಕ ಜೀವಿ. ಸಮಾಜದಲ್ಲಿ ಹೇಗೆ ಯಾವ ರೀತಿಯಲ್ಲಿ ಜೀವಿಸಬೇಕು, ಬದುಕಬೇಕು. ಜಗತ್ತಿನಲ್ಲಿ ಹುಟ್ಟಿರುವ ಸಕಲ ಪಶುಪಕ್ಷಿಗಳು ನಿಸರ್ಗವು ವಿಧಿಸಿದ ನಿಯಮಗಳಿಗನುಗುಣವಾಗಿಯೇ ಬದುಕ ಬೇಕು. ಪ್ರಕೃತಿಯು ಹಾಕಿದ ಗೆರೆಯನ್ನು ಕೊಂಚವೂ ಮೀರಲಾಗದು. ಆದರೆ ಮಾನವನಿಗೆ ಈ ನಿಯಮದ ಕಟ್ಟುಪಾಡು ಇಲ್ಲ. ಮನುಷ್ಯನು ಮಾತನಾಡಬಲ್ಲ, ಯೋಚಿಸಬಲ್ಲ ಮತ್ತು ತಲೆಯೆತ್ತಿ ನೇರವಾಗಿ ನಡೆಯಬಲ್ಲ. ಪ್ರಕೃತಿಯು ಮಾನವನ ಬಗ್ಗೆ ಬಹಳವೇ ಉದಾರವಾಗಿದೆ. ಆದ್ದರಿಂದ ನಮಗೆ ಸಮಾಜಮುಖಿಯಾಗಿ ಉನ್ನತ ವಿಚಾರಪೂರ್ವಕವಾಗಿ ಜೀವಿಸುವ ಬಾಧ್ಯತೆಯಿದೆ. ಪ್ರಕೃತಿ, ಪರಿಸರ, ಇತರೇ ಪ್ರಾಣಿವರ್ಗಗಳ ಏಳಿಗೆಗೆ ಪೂರಕವಾಗಿ ಬಾಳುವ ಜವಾಬುದಾರಿ ನಮ್ಮದಾಗಿದೆ. ಈ ವ್ಯವಸ್ಥೆ ಥಟ್ಟೆಂದು ಬರುವುದಿಲ್ಲ, ಅದೊಂದು ಜೀವನ ಕ್ರಮವಾಗಿ ಬರಬೇಕು. ನಮ್ಮ ಧರ್ಮವು ಒಂದು ಉನ್ನತ ಮಟ್ಟದ ಡೆಮೊಕ್ರೆಟಿಕ್ ವ್ಯವಸ್ಥೆಯನ್ನು ಹೊಂದಿದೆ. ನಮ್ಮ ಸನಾತನ ಧರ್ಮದಲ್ಲಿ ಏನೇ ನಿಯಮಗಳಿದ್ದರೂ ಇದರಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ, ತಿದ್ದುಪಡಿಗಳಿಗೆ ಅವಕಾಶಗಳಿವೆ.

ಮಹಾಭಾರತದ ಯಕ್ಷಪ್ರಶ್ನೆಯಲ್ಲಿ ಧರ್ಮರಾಯನು ಅಂದಿನ ಕಾಲದಲ್ಲಿ ಮಾನ್ಯತೆ ಹೊಂದಿದ, ಅನೇಕ ಪ್ರಶ್ನೆಗಳಿಗೆ ಸಮರ್ಥ ವಾಗಿ ಸಮಾಧಾನದಿಂದ ಉತ್ತರ ನೀಡಿದ್ದಾನೆ. ಇದರಲ್ಲಿ ಬಹುಪಾಲು ವಿಚಾರಗಳು ಸಾರ್ವಕಾಲಿಕವಾಗಿವೆ. ಧರ್ಮರಾಯನು ಒಬ್ಬ ಸಮರ್ಥ ರಾಜನಾಗಿದ್ದು ಭೀಷ್ಮನ ಬಳಿ ರಾಜಧರ್ಮ, ಆಡಳಿತ, ಪ್ರಜಾಪಾಲನೆ, ಕ್ಷತ್ರಿಯ ಧರ್ಮ ಮುಂತಾದವುಗಳ ಬಗ್ಗೆ ಪರಿಪೂರ್ಣ ಶಿಕ್ಷಣವನ್ನು ಪಡೆದಿದ್ದ. ಒಂದು ತೆರದಲ್ಲಿ ಈ ಸಂವಾದವು ಸಮಾಜಕ್ಕೆ ಪಾಠವೆಂದೂ ಹೇಳಬಹುದು. ನಮ್ಮ ಪೌರಾಣಿಕ ಕಥಾನಕಗಳಲ್ಲಿ, ಭಾಗವತದಲ್ಲಿ, ಗೀತೆಯಲ್ಲಿ ಮತ್ತಿತರೇ ಸೂಕ್ತಿ ಸುಭಾಷಿತಗಳಲ್ಲಿ ಇಂತಹ ಬಹಳ ಉದಾಹರಣೆ ಗಳನ್ನು ನಾವು ಕಾಣಬಹುದು. ಆದರೂ ಈ ಪ್ರಸಂಗಗಳಿಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಪ್ರಕೃತಿಯು ಚಲನಶೀಲ, ಹಾಗಾಗಿ ಜೀವನಶೈಲಿ, ವಿಚಾರಧಾರೆ, ಮನೋವ್ಯಾಪಾರ ಮುಂತಾದವುಗಳೂ ಬದಲಾವಣೆಗೆ, ನವ್ಯತನಕ್ಕೆ ಒಳಪಡುವುದು ಸ್ವಾಭಾವಿಕ. ಅನೇಕ ಮಾನ್ಯತೆಗಳು ಕಾಲಧರ್ಮಕ್ಕನುಗುಣವಾಗಿ ಬದಲಾಗುವುದು ಸಹಜ. ಹಿಂದಿನ ಧಾರಣೆಗಳು ಕಾನೂನುಗಳು ಇಂದು ಅಪ್ರಸ್ತುತ ಎನಿಸಬಹುದು. ನಮ್ಮ ಧರ್ಮದಲ್ಲಿ ಪರಿಷ್ಕರಣೆಗಳಿಗೆ ಅವಕಾಶವಿದೆ. ಐದು ಸಾವಿರ ವರ್ಷಗಳ ಹಿಂದಿನ ಆಲೋಚನಾಕ್ರಮ, ಆದೇಶಗಳು ಇಂದಿನ ದಿನಗಳ ವ್ಯವಹಾರಗಳಿಗೆ ಸೂಕ್ತವೆನಿಸುವುದೇ!?

ಯೋಚಿಸಬೇಕಾದ ವಿಚಾರ.

ಉಳಿದಂತೆ ಧರ್ಮರಾಯನು ಯಕ್ಷನ ಎಲ್ಲಾ ಪ್ರಶ್ನೆಗಳಿಗೆ ಸಮರ್ಥವಾಗಿಯೇ ಸಮಾಧಾನ ನೀಡಿರುತ್ತಾನೆ.