೧೯೮೬ರ ದಶಂಬರ ತಿಂಗಳು. ದಿಲ್ಲಿಯಲ್ಲಿ ಆ ಸಲ ಅಗತ್ಯಕ್ಕಿಂತ ಸ್ವಲ್ಪ ಜಾಸ್ತಿಯೇ ಚಳಿ ಬಿದ್ದಿತ್ತು. ಬ್ರಾಂಚಿನಲ್ಲಿ ಹೆಚ್ಚಿನವರು ಕೆಲಸ ಮಾಡುವ ಬದಲು ಹೀಟರಿನ ಎದುರು ಕೂತು ಕೈ ಮೈ ಬಿಸಿಮಾಡಿ ಕೊಳ್ಳುವುದರಲ್ಲೇ ಮಗ್ನರಾಗಿದ್ದರು. ಗ್ರಾಹಕರೂ ವಿರಳವಾಗಿದ್ದರು. ಆಪ್ ಕಾ ಟ್ರಂಕಾಲ್ ಹೈ, ಜಲ್ದಿ ಆಯಿಯೇ ಎಂದು ಬುಲಾವು ಬಂತು. ಯಾರ ಫೋನಿರಬಹುದು ಎಂದು ಯೋಚಿಸುತ್ತ ಹಲೋ ಅಂದೆ.
'ಹರಿ ಓಮ್, ಚಂಡೀಗಡದಿಂದ ಪಾಂಡುರಂಗ ಮಾತಾಡುತ್ತ ಇದ್ದೇನೆ ಭಾವಜಿ.' ಅತ್ತಕಡೆಯಿಂದ ಪಾಂಡರಂಗನ ಆವಾಜು ಕೇಳಿ ಬಂತು. ಬಹಳ ಖುಷಿಯಾಯ್ತು.
'ಹರಿ ಓಂ, ದಿಲ್ಲಿಗೆ ಬರುವ ಕಾರ್ಯಕ್ರಮ ಉಂಟಾ?'
'ನನ್ನ ಪ್ರೋಗ್ರಾಮ್ ಯಾವುದೂ ಸಧ್ಯಕ್ಕಿಲ್ಲ. ಇಲ್ಲಿ ಹೆಬ್ರಿಯ ಸುಬ್ರಾಯ ಓಕುಡ ಮಾಸ್ಟ್ರು ಬಂದಿದ್ದಾರೆ. ಅವರು ಅಮೃತಸರಕ್ಕೆ ಯಾವುದೋ ಕಾರ್ಯ ನಿಮಿತ್ತ ಹೋದವರು ವಾಪಸು ಹೆಬ್ರಿಗೆ ಹೊರಟಿದ್ದಾರೆ. ಇವತ್ತು ನಮ್ಮಲ್ಲಿ ಉಳಕೊಂಡಿದ್ದಾರೆ. ಅವರ ರೈಲು ನಾಳೆ ಬೆಳಗ್ಗೆ ದಿಲ್ಲಿ ತಲಪುತ್ತದೆ. ಎರಡು ದಿನ ಬಿಟ್ಟು ಊರಿಗೆ ಬೆಂಗಳೂರು ಮೂಲಕ ವಾಪಸಾಗುತ್ತಾರೆ. ಎರಡು ದಿನ ಅವರ ವ್ಯವಸ್ಠೆ ನೋಡಬೇಕು.'
'ಆದೀತು. ಈ ದಿನಗಳಲ್ಲಿ ದಿಲ್ಲಿಯಲ್ಲಿ ಆಟೋರಿಕ್ಷಾಗಳ ಹರತಾಳ ನಡೆಯುತ್ತಿದೆ. ಯಾವಾಗ ಮುಗೀತದೆ ಎಂದು ಸರಿಯಾಗಿ ಗೊತ್ತಿಲ್ಲ. ಹಾಗಾಗಿ ನಾನು ರೇಲ್ವೆ ಸ್ಟೇಷನ್ ತಲಪುವಾಗ ತಡವಾದೀತು. ನಾನು ಬರುವ ವರೆಗೆ ಅವರು ಅಲ್ಲಿ ಇಲ್ಲಿ ಹೊರಗೆ ಅಡ್ಡಾಡಲು ಹೋಗಬಾರದು. ಈ ಮಾತನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿ ಹೇಳು.'
'ಅದೆಲ್ಲ ನಾನು ವಿವರಿಸಿ ಹೇಳುತ್ತೇನೆ. ನೀವು ನಾಳೆ ನೆನಪಿಟ್ಟು ಬಂದು ಅವರನ್ನು ಕರಕೊಂಡು ಹೋಗಿ.'
'ಆಗಬಹುದು. ಗೋವಿಂದಮಾಮು ಮತ್ತು ಉಳಿದವರೆಲ್ಲ ಕ್ಷೇಮವೇ?'
'ಎಲ್ಲರೂ ಆರಾಮವಾಗಿದ್ದಾರೆ. ಜೈ ಶ್ರೀರಾಮ್'
'ಜೈ ಶ್ರೀರಾಮ್.' ನಾನು ಫೊನು ಕೆಳಗಿಟ್ಟೆ.
'ದಿಲ್ಲಿ ಪೇಟೆಯಲ್ಲಿ ಆಟೋಸ್ಟ್ರೈಕ್ ಇರುವಾಗ ಇಂತದ್ದೆಲ್ಲ ಪಂಚಾತಿಕೆ ಏಕೆ ವಹಿಸಿಕೊಳ್ಳುತ್ತೀರಿ? ಈ ಚಳಿಗಾಲದಲ್ಲಿ ಬೆಳಬೆಳಗ್ಗೆ ಅಷ್ಟು ದೂರ ಹೇಗೆ ಹೋಗುವಿರಿ?'
'ಅಂದರೆ?'
'ಅಂದರೆ ಚಂಡೀಗಡದ ರೈಲು ಬರುವುದು ದಿಲ್ಲೀ ನಿಲ್ದಾಣಕ್ಕೆ ಮತ್ತು ಅದು ಇರುವುದು ಕೆಂಪುಕೋಟೆ ಹತ್ತಿರ ತಿಳಿಯಿತೇ?'
ವಹಿಸಿಕೊಂಡ ಕೆಲಸದ ಗಹನತೆ ಅರ್ಥವಾಗಲಾರಂಭಿಸಿತು. ಆ ಸಮಯದಲ್ಲಿ ದಿಲ್ಲಿಯಲ್ಲಿ ಅತ್ಯಂತ ಕಠಿಣವಾದ ಚಳಿ ಬಿದ್ದಿತ್ತು. ಅಲ್ಲದೇ ಆಟೋರಿಕ್ಷಾ ಡ್ರೈವರುಗಳ ಅನಿರ್ದಿಷ್ಟ ಹರತಾಳ ಜಾರಿಯಲ್ಲಿತ್ತು. ಯಾವಾಗ ಮುಗಿಯುತ್ತದೆ ಎಂಬ ನಿಗದಿ ಸೂಚನೆ ಇರಲಿಲ್ಲ. ನಮ್ಮ ಮನೆಯಿಂದ ರೇಲ್ವೇ ಸ್ಟೇಷನ್ನು ಸುಮಾರು ೧೫ ಕಿ.ಮೀಟರುಗಳಷ್ಟು ದೂರವಿತ್ತು. ನನ್ನ ಬಳಿ ಯಾವುದೇ ವಾಹನವಿಲ್ಲ. ಇದ್ದರೂ ಆ ಚಳಿ ಮತ್ತು ಮಂಜುಮುಸುಕಿದ ಬೆಳಂಜಾವದಲ್ಲಿ ಹೋಗುವುದೂ ದೂರದ ಮಾತು. ಏನು ಮಾಡುವುದು? ಹೊರಗಡೆ ಚಳಿ ಇದ್ದರೂ ತಲೆ ಮಾತ್ರ ಬಿಸಿ ಆಗತೊಡಗಿತು... ..
ನನ್ನ ಗೆಳೆಯ ಹಾಗೂ ಗುರು ಮಲ್ಯರ ಕತೆ ನೆನಪಾಯಿತು.....
ಮಂಗಳೂರಿನಿಂದ ದಿಲ್ಲಿಗೆ ಪರಿಚಯದವರು ಯಾರೇ ಹೊರಡಲಿ 'ಅಲ್ಲಿ ನಮ್ಮ ಭಾವ ಇದ್ದಾರೆ, ಅವರು ಬಂದು ನಿಮ್ಮನ್ನು ಕರ ಕೊಂಡು ಎಲ್ಲ ವ್ಯವಸ್ಥೆ ಮಾಡುತ್ತಾರೆ. ನೀವೇನೂ ಚಿಂತೆ ಮಾಡೂದು ಬೇಡ' ಎಂದು ಇವರ ಭಾವನೆಂಟ ಅವರಿಗೆಲ್ಲ ಧೈರ್ಯ ಭರವಸೆ ಹೇಳಿ ಕಳುಹಿಸುವುದೂ.,ಇವರು ಇಲ್ಲಿ ಅವರನ್ನು ಸ್ಟೇಷನ್ನಿನಿಂದ ಮನೆಗೆ ಕರಕೊಂಡು ಬಂದು ಒಂದೆರಡು ದಿನ ತಮ್ಮಲ್ಲಿ ಸೂಕ್ತ ಆತಿಥ್ಯ ಖಾತಿರದಾನಿ ಮಾಡಿಸಿ ಕಳುಹಿಸುವುದೂ ನಡಕೊಂಡು ಬಂದಿತ್ತು. ಇವರೂ ಸಹ ಖುಷಿಯಿಂದಲೇ ಈ ಕಾರ್ಯಕ್ರಮ, ವ್ಯವಸ್ಥೆ ನಡೆಸಿಕೊಂಡು ಬಂದಿದ್ದರು ಎಲ್ಲಿಯವರೆಗೆಂದರೆ....
'ನಮ್ಮ ಜನ್ನಿಮಾಯಿ ದಿಲ್ಲಿಗೆ ಹೊರಟಿದ್ದಾರೆ. ಇಂತಹಾ ತಾರೀಕಿಗೆ ದಿಲ್ಲಿ ತಲುಪುತ್ತಾರೆ. ಅವರಿಗೆ ಸಹಾಯ ಮಾಡುವುದು.' ಎಂದು ಮಲ್ಯರಿಗೆ ವಿನಂತಿ ಬಂತು. ಇವರಿಗೋ ಆ ದಿನಗಳಲ್ಲಿ ಕಂಡಾಪಟ್ಟೆ ಕೆಲಸ, ಪುಕುಳಿ ತುರಿಸಿಕೊಳ್ಳಲೂ ಪುರುಸತ್ತಿಲ್ಲ. ಯಾವುದೋ ಪ್ರಮುಖ ಬ್ರಾಂಚಿನ ಸ್ಥಳಾಂತರ ಮತ್ತದರ ಆರಂಭೋತ್ಸವಕ್ಕೆ ಸ್ವಯಂ ಛೆಯರ್ ಮೇನ್ ಬರುವವರಿದ್ದರು. ಇವರ ಮೇಲೆ ಹೆಚ್ಚಿನ ಜವಾಬ್ದಾರಿ ಇತ್ತು. ಡಿ.ಜಿ.ಎಮ್ ಸಾಹೇಬರು ಪ್ರತಿಯೊಂದಕ್ಕೂ ಮಲ್ಯರೇ ಮಲ್ಯರೇ ಎಂದು ತಲೆಮೇಲೇ ಕೂತು ಕೆಲಸ ಮಾಡಿಸುತ್ತಿದ್ದರು.ಇವರ ತಲೆ ಬಾರಾ ಆಣೆ ಆಗಿತ್ತು.ಹೀಗಿರುವಾಗ ಮಂಗಳೂರಿನ ಜನ್ನಿಮಾಯಿಗೆ ದಿಲ್ಲಿ ತಿರುಗುವ ಆಶೆ ಆಗಿತ್ತು.
'ರಜೆ ಬೇಕು ಅಂತ ಕ್ಯಾಬಿನ್ ಒಳಗೆ ಕಾಲಿಟ್ಟರೆ ಕಾಲುಗಂಟು ಮುರಿದು ಕೈಯ್ಯಲ್ಲಿ ಕೊಡುತ್ತೇನೆ, ಹುಶ್ಶಾರ್!' ಎಂದು ಆಶೀರ್ವದಿಸಿದ್ದ ಡಿ ಜಿ ಎಂ ಅವರನ್ನು ಹೇಗೆ ಮಣಿಸುವುದು ಎಂದು ಇವರ ಚಡಪಡ ಜಾಸ್ತಿಯಾಯಿತು. ಕೊನೆಗೆ ರೈಲು ಬರುವ ಸಮಯಕ್ಕೆ ಸರಿಯಾಗಿ ಹೋಗಿ ಬನ್ನಿ ರಜೆ ಕೊಡಲು ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲ ಎಂದು ಪರ್ಮಿಶನ್ ಕೊಟ್ಟರು.
ಹೊಸದಿಲ್ಲಿ ರೇಲ್ವೇ ನಿಲ್ದಾಣದಲ್ಲಿ ಕೂತು 'ಹೀ ಜನ್ನಿಮಾಯಿ ಮ್ಹಳ್ಹೆರಿ ಕೋಣಬಾ!' ಎಂದು ಮನಸ್ಸಿನ ಕೋಣೆಗಳನ್ನು ತಡಕಾಡುತ್ತ ಮಲ್ಯರು ರೈಲಿನ ಆಗಮನದ ನಿರೀಕ್ಷೆಯಲ್ಲಿದ್ದರು. ಪುಣ್ಯಕ್ಕೆ ರೈಲು ಸಮಯಕ್ಕೆ ಸರಿಯಾಗಿ ಬಂತು. ಜನ್ನಿಮಾಯಿ ಕಾಣಲಿಲ್ಲ. ಇವರು ಕೊಂಚ ಕಾತರದಿಂದ ರೈಲಿನ ಉದ್ದಕ್ಕೂ ಹೋಗಿ ಎಲ್ಲಾ ಬೋಗಿಗಳನ್ನು ಪರಿಶೀಲಿಸಿದರು. ಇಲ್ಲ ಜನ ಪತ್ತೆ ಇಲ್ಲ.! ತಾನೆಲ್ಲಾದರೂ ತಪ್ಪಿದೆನೋ ಎಂದು ಆತಂಕಗೊಂಡರು. ಇಲ್ಲ ಸರಿಯಾದ ದಿನವೇ. ಹಾಗಾದರೆ ಈ ಜನ್ನಿಮಾಯಿ ಎಲ್ಲಿ? ಪಾಪ ಈ ಬಡಮುದುಕಿ ಎಲ್ಲಾದರೂ ಹೊರಗೆ ಹೋಗಿ ತನ್ನ ನಿರೀಕ್ಷೆ ಮಾಡುತ್ತಿದ್ದಾರೋ? ಎಂದು ಪ್ಲಾಟ್ ಫಾರಮ್ಮಿನ ಹೊರಗೆ ಬಂದು ಹುಡುಕಿದರು. ಊಂಹೂಂ ಇಲ್ಲ. ಆತಂಕವು ಗಾಬರಿಗೆ ತಿರುಗಿತು. ಪುನಃ ಒಳಗೆ ಹೋಗಿ ಸ್ಟೇಷನ್ನಿನ ಎಲ್ಲ ಪ್ಲಾಟ್ ಫಾರಮ್ಮುಗಳ ತಲಾಷು ಶುರು ಹಚ್ಚಿದರು. ಜನ್ನಿಮಾಯಿ ಸಿಗಲಿಲ್ಲ. ಛೆ! ಎಂಥಾ ಕೆಲಸವಾಯ್ತು! ಪಾಪ ಆ ಹೆಂಗಸು ಈಗ ಈ ದಿಲ್ಲಿ ಎಂಬ ಕಾಡಿನಲ್ಲಿ ಕಣ್ಣುಕತ್ತಲೆ ಬಂದು ಎಲ್ಲಿ ಸಿಕ್ಕಿಬಿದ್ದಿದ್ದಾರೋ? ಎಂದು ಮಂಡೆಬಿಸಿ ಮಾಡಿಕೊಂಡು ವಾಪಸು ಬೇಂಕಿಗೆ ಬಂದರು. ಇಡೀ ದಿನ ಮನಸ್ಸು ವ್ಯಗ್ರವಾಗಿಯೇ ಇತ್ತು.. ಹೀ ಜನ್ನಿಮಾಯಿ ಖೈಯಿಂ ಗೆಲ್ಲೀ?
ಜನ್ನಿಮಾಯಿ ರೈಲು ಹತ್ತುವುದೇ ಫಸ್ಟ್ ಟೈಮ್. ಹಾಗಾಗಿ ಸ್ವಲ್ಪ ಟೆನ್ ಶನ್ ನಲ್ಲಿದ್ದರು. ದೇವರ ಹಾಗೆ ಮಲ್ಯರ ಭಾವನೆಂಟ ಸಿಕ್ಕಿದ. ಅವನು ಧೈರ್ಯ ಕೊಟ್ಟನಂತರ ಅಲ್ಲವೇ ತಾನು ದಿಲ್ಲಿ ಟ್ರಿಪ್ಪು ಪಕ್ಕಾ ಮಾಡಿದ್ದು? ಇಲ್ಲದಿದ್ದರೆ ಈ ಪ್ರಾಯದಲ್ಲಿ ಎಂತದು ತಿರುಗಾಟ? ಆ ಮಲ್ಯರೂ ಸಹ ಭಾರೀ ಒಳ್ಳೇ ಜನ ಅಂತೆ! 'ಭಾರೀ ಮಾಯಸ್ತು ಜನ ಖೈಂ ಸಕ್ಕಡ ಮ್ಹಣ್ತಾತಿ' ಎಂದು ದೇವರ ಮತ್ತು ಮಲ್ಯರ ಜಪ ಮಾಡುತ್ತ ಜನ್ನಿಮಾಯಿ ಸೀಟುಮೇಲೆ ಕಣ್ಣುಮುಚ್ಚಿ ಕುಳಿತರು.
ಕಣ್ಣು ತೆರೆದಾಗ ಎದುರಿಗೆ ಕೂತ ಮನುಷ್ಯ ತನ್ನನ್ನೇ ಗುರುಗುರು ನೋಡುತ್ತ ಇದ್ದಾರೆ! ಇವರನ್ನು ಎಲ್ಲಿ ನೋಡಿದ್ದೇನೆ ತಾನು! ನೆನಪಿನ ಬಟನ್ ಒತ್ತುತ್ತಿದ್ದಂತೆ 'ಜನ್ನಿಮಾಯಿ ಅಲ್ಲವೇ? ನನ್ನ ಗುರುತು ಸಿಗಲಿಲ್ಲವೇ?' ಎಂದು ಎದುರು ಕೂತಿದ್ದವರು ನಗುತ್ತ ತನ್ನ ಪರಿಚಯ ಹೇಳಿಕೊಂಡರು. ತನ್ನ ದೂರದ ಸಂಬಂಧಿಯೊಬ್ಬರ ಮಗ. ಹೌದು ಈತ ಈಗ ದಿಲ್ಲಿಯಲ್ಲಿ ಕೆನರಾಬೇಂಕಿನಲ್ಲಿ ಮೆನೆಜರು. ಯಾವುದೋ ಶುಭಕಾರ್ಯಕ್ಕೆಂದು ಊರಿಗೆ ಬಂದವರು ರಜೆ ಮುಗಿಸಿ ಫ್ಯಾಮಿಲಿ ಸಹಿತ ದಿಲ್ಲಿಗೆ ಹೋಗುತ್ತಿದ್ದಾರೆ ಅವರ ಹೆಂಡತಿ ಸಹಿತ ಗುರುತಿನವರೇ. ತುಂಬ ಒಳ್ಳೆಯ ಕುಟುಂಬ. ಜನ್ನಿಮಾಯಿಗೆ ಈಗ ಪ್ರಯಾಣ ಏಕ್ ದಮ್ ಗಮ್ಮತ್ತಾಯಿತು.
'ದಿಲ್ಲಿಯಲ್ಲಿ ಯಾರಲ್ಲಿ ಉಳಕೊಂಡಿದ್ದೀರಿ?'
'ನಾನು ಮಲ್ಯರ ಮನೆಗೆ ಹೋಗುತ್ತೇನೆ. ಅವರು ಸ್ಟೇಷನ್ನಿಗೆ ಬರುತ್ತಾರೆ.'
'ಹೌದಾ, ಮಲ್ಯರ ಗುರುತು ನನಗೆ ಉಂಟು. ತುಂಬಾ ಒಳ್ಳೆಯ ಮನುಷ್ಯ. ಆದರೆ ಈಗ ವೀಕ್ ಡೇಸ್ ನಲ್ಲಿ ಅವರು ಪಾಪ ರಜೆ ಮಾಡಿ ಬರಬೇಕು. ಅವರಿಗೂ ಕಷ್ಟ. ಒಂದು ಕೆಲಸ ಮಾಡುವ.ಈಗ ನೀವು ನಮ್ಮ ಮನೆಗೆ ಬನ್ನಿ. ಎರಡು ದಿನ ನಮ್ಮಲ್ಲಿ ಉಳಕೊಳ್ಳಿ. ನಾಡದು ಆದಿತ್ಯವಾರ ನಿಮ್ಮನ್ನು ಅವರಲ್ಲಿ ಬಿಟ್ಟು ಬರುತ್ತೇನೆ. ನಮ್ಮ ಮನೆ ಅವರ ಏರಿಯಾದಲ್ಲೇ ಇದೆ.' ರಾಯರು ಆಮಂತ್ರಿಸಿದರು.
'ನಿಮಗೆಲ್ಲ ಸುಮ್ಮನೆ ತೊಂದರೆ. ಯಾರಿಗೆಲ್ಲ ಎಂದು ರಗಳೆ ಮಾಡುವುದು?' ಜನ್ನಿಮಾಯಿಗೆ ಸಂಕೋಚ.
'ತೊಂದರೆ ಏನು ಬಂತು ಅದರಲ್ಲಿ? ನೀವು ಬಂದರೆ ನಮಗೆ ತುಂಬ ಸಂತೋಷ. ಎಷ್ಟು ಸಮಯದ ನಂತರ ಸಿಕ್ಕಿದ್ದೀರಿ! ನಿಮ್ಮ ಹತ್ತಿರ ತುಂಬಾ ಮಾತಾಡಬೇಕು.'
ಅವರ ಪ್ರೀತಿ ವಿಶ್ವಾಸಗಳಿಗೆ ಜನ್ನಿಮಾಯಿ ಮಾರುಹೋದರು.
ಹೊಸದಿಲ್ಲಿ ಸ್ಟೇಷನ್ನಿನಲ್ಲಿ ಮಲ್ಯರು ಗಾಬರಿಯಿಂದ ಇವರನ್ನು ಹುಡುಕಾಡುತ್ತಿರುವ ವೇಳೆಯಲ್ಲಿ ಜನ್ನಿಮಾಯಿ ತನ್ನ ಹೊಸ ಗೆಳೆಯರೊಂದಿಗೆ ಹಿಂದಿನ ನಿಜಾ಼ಮುದ್ದೀನ್ ಸ್ಟೇಷನ್ನಿನಲ್ಲಿ ಇಳಿಯುತ್ತಿದ್ದರು.
ನಾಲಕ್ಕು ದಿನಗಳ ವರೆಗೆ ಮಲ್ಯರ ತಳಮಳ ಕಷ್ಟ ಅವರಿಗೇ ಗೊತ್ತು. ಆದಿತ್ಯವಾರದಂದು ಜನ್ನಿಮಾಯಿ ಬಂದರು. ಒಂದು ಭರಣಿ ಮಾವಿನಕಾಯಿ ಉಪ್ಪಿನಕಾಯಿ ತಂದಿದ್ದರು. ಮಲ್ಯರಿಗೆ ಒಮ್ಮೆ ಹೋದ ಜೀವ ಬಂದಂತಾಯಿತು. ಒಟ್ಟಿಗೆ ಸಿಟ್ಟೂ ಬಂದಿತ್ತು. ಆದರೆ ಅವರು ಸಜ್ಜನ ಮನುಷ್ಯ. ಬಂದವರ ಆತಿಥ್ಯವನ್ನು ಚನ್ನಾಗಿ ಮಾಡಿ ಕಳುಹಿಸಿಕೊಟ್ಟರು.....
ನನಗೆ ಮಲ್ಯರ ರೀತಿಯ ಸಮಸ್ಯೆಯಲ್ಲ.ಓಕುಡರು ನಮ್ಮಲ್ಲಿಗೇ ಬರಬೇಕು. ಅವರನ್ನು ರಿಸೀವ್ ಮಾಡುವುದೇ ನನ್ನ ಸಮಸ್ಯೆ. ನಡುರಾತ್ರಿಯ ನಂತರ ಅರ್ಧ ಘಂಟೆಗೊಂದರಂತೆ ನೈಟ್ ಸ್ಪೆಷಲ್ ಬಸ್ಸುಗಳು ಸಂಚರಿಸುತ್ತವೆ. ಇವು ಬಸ್ಸು ಮತ್ತು ರೈಲುನಿಲ್ದಾಣಗಳಿಗೆ ಓಡಾಡುತ್ತವೆ. ನಾಲ್ಕು ಘಂಟೆಗೆ ಎದ್ದು ಬಸ್ಸು ಹಿಡಿದು ರೇಲು ನಿಲ್ದಾಣವನ್ನು ನಾನು ತಲಪುವಾಗುವಾಗ ಐದೂ ಹತ್ತು. ರೈಲು ಸಮಯಕ್ಕೆ ಸರಿಯಾಗಿ ಬಂತು ಓಕುಡರೂ ಇಳಿದರು.
'ನಮಸ್ಕಾರ ಓಕುಡ ಮಾಸ್ಟ್ರಿಗೆ, ದಿಲ್ಲಿಗೆ ಸ್ವಾಗತ. ಬನ್ನಿ ಮನೆಗೆ ಹೋಗೋಣ'.
'ನಮಸ್ಕಾರ. ನೀವು ದೇವುರಾಯರ ಹಿರೀಮಗ ಅಲ್ವಾ. ಈಗ ದಿಲ್ಲಿಯಲ್ಲಿ ಕೆಲಸವೋ? ನೀವಿದ್ದದ್ದು ಬಹಳ ಒಳ್ಳೇದಾಯ್ತು ಇಲ್ಲದೇ ಹೋದರೆ ಈ ಭಾಷೆ ಬಾರದ ಊರಲ್ಲಿ ಸ್ವಲ್ಪ ಕಷ್ಟ ಮಾರಾಯರೇ'.
'ಈಗ ಇಲ್ಲಿ ಆಟೋ ಸಿಗುವುದಿಲ್ಲ. ನಮ್ಮ ಮನೆಯ ದಾರಿಯ ಬಸ್ಸಿನಲ್ಲಿ ಹೋಗಬೇಕು ಆಗಬಹುದಲ್ಲ.. '
'ಆದೀತು.'
ಮನೆಗೆ ಬಂದೆವು.'ಕೊಂಕಣೇರ ಊಟ ನಡಿತದಲ್ಲ ಮಾಸ್ಟ್ರೇ.'
’ಓಹೋ' ಬಿಸಿಬಿಸಿ ದೋಸೆಗಳನ್ನು ಒಂದಾದ ಮೇಲೆ ಒಂದರಂತೆ ಪಟ್ಟಾಗಿ ಹೊಡೆದರು.
ಮನೆಯವಳ ಮುಖ ಅರಳಿತು.
ದಿಲ್ಲೀ ಸೈಟ್ ಸೀಯಿಂಗ್ ಬಸ್ಸಿನಲ್ಲಿ ಕೂರಿಸಿದೆ. 'ಇಡೀ ದಿನ ದಿಲ್ಲಿ ಆಗ್ರಾ ಮತ್ತು ಮಥುರಾ ಎಲ್ಲ ನೋಡಿ ಬನ್ನಿ. ಸಂಜೆ ಕೆಂಪು ಕೋಟೆ ಬಳಿ ಇಳಿಸುತ್ತಾರೆ. ನಾನಲ್ಲಿ ಬರುತ್ತೇನೆ. ನನ್ನನ್ನು ಕಾಯುತ್ತಿರಿ.' ಮಾಸ್ಟ್ರಿಗೆ ಖುಷಿಯಾಯ್ತು.
'ನನ್ನ ಅಣ್ಣನ ಮಗಳಿಗೆ ಡಿಫೆನ್ಸ್ ನಲ್ಲಿರುವ ಹುಡುಗನಿಗೆ ಕೊಟ್ಟಿದೆ. ಅವನಿಗೆ ಅಮೃತಸರದಲ್ಲಿ ಕೆಲಸ. ಊರಿಗೆ ಬಂದವಳನ್ನು ಪುನಃ ಅಮೃತಸರಕ್ಕೆ ಬಿಟ್ಟುಬರಲು ಅವರಿಗೆ ಪ್ರಾಯ ಆಯ್ತು ನೋಡಿ ಅದಕ್ಕೆ ನಾನು ಹೋಗಿ ಬರತೇನೆ ಎಂದು ಬಂದೆ. ಇಲ್ಲಿ ನಿಮ್ಮ ಗೋವಿಂದರಾಯರ ಮಗನ ಗುರ್ತ ಪರಿಚಯ ಚಂಡೀಗಡದಲ್ಲಾಯಿತು. ಗೋವಿಂದರಾಯರದ್ದು ಮತ್ತು ನಮ್ಮದು ಬಹಳ ಹಿಂದಿನ ಪರಿಚಯ ಭಾರೀ ಒಳ್ಳೆಯ ಜನ.ಅವರ ಮಗ ಸಹ ಒಳ್ಳೆಯ ಹುಡುಗ, ಏನು ವಿನಯ! ಎಷ್ಟು ಆದರ! ಸಂಸ್ಕಾರ ಅಂದರೆ ಅದು! ರಕ್ತದಲ್ಲೇ ಇದೆ....' ಓಕುಡರ ಮಾತು ಸಾಗುತ್ತಲೇ ಇತ್ತು.
ನೆಕ್ಸ್ಟ್ ಡೇ ಬೆಳಗ್ಗೆ 'ಈ ದಿನ ಸ್ವಲ್ಪ ರೆಸ್ಟ್ ತೆಕ್ಕೊಳ್ಳಿ ಸರ್, ಸಂಜೆ ಬೇಗ ಬರತೇನೆ, ಇಲ್ಲೇ ಹತ್ತಿರ ಕರೋಲ್ ಬಾಗ್ ಅಜಮಲ್ ಖಾನ್ ರಸ್ತೆಯ ಸಂತೆ ಎಲ್ಲ ತಿರುಗುವ. ನಿಮಗೇನಾದರೂ ಪರ್ಚೇಸ್ ಇದ್ದರೆ ಮಾಡ ಬಹುದು. ನನಗೂ ಸಹ ದಿಲ್ಲಿಯ ಹೆಚ್ಚಿನ ಪರಿಚಯ ಆಗಿಲ್ಲ. ಅಲ್ಲದೆ ನಾನು ರಜೆ ಸಹ ಹಾಕಿಲ್ಲ. ಆಗಬಹುದಲ್ಲ.'ಎಂದು ಆಫೀಸಿಗೆ ಬಂದೆ. ಸಂಜೆಯ ತಿರುಗಾಟ ಆಯಿತು. ರಾತ್ರಿ ಸ್ವಲ್ಪ ಸಿಹಿ ಮಾಡಿದ್ದಳು.
'ಇದೆಲ್ಲ ಏಕೆ ಮಾಡಹೊರಟಿರಮ್ಮ! ಸಿಂಪಲ್ ಅಡುಗೆ ಸಾಕಿತ್ತು. ನಿಮ್ಮ ತಂದೆಯವರ ಹೆಸರು ತುಂಬ ಕೇಳಿದ್ದೇನೆ. ಅವರು ಹೆಬ್ರಿಯಲ್ಲಿ ಹೆಡ್ ಮಾಸ್ಟರ್ ಆಗಿದ್ದರಂತೆ. ಕಿಣಿ ಮಾಸ್ಟರು ಅಂದರೆ ಅಷ್ಟು ಫೇಮಸ್ಸು. ನಮ್ಮ ಅಣ್ಣ ಹೇಳುತ್ತ ಇರ್ತಾರೆ. ನಿಮ್ಮ ಅಣ್ಣ ಕಿಣಿಯವರೂ ನಾನೂ ಒಳ್ಳೇ ದೋಸ್ತಿ' ಓಕುಡಮಾಸ್ಟರು ಪ್ರೀತಿಯಿಂದ ಮಾತಾಡಿದರು.
ಮನೆಯ ಯಜಮಾಂತಿಗೆ ಆನಂದವಾಯಿತು. 'ಏನು ಗಮ್ಮತ್ತು ಮಾಡಿದ್ದೇನೆ ಸರ್? ನಮ್ಮ ಅಡುಗೆ ನಿಮಗೆ ಹಿಡಿಸಿತೋ ಇಲ್ಲವೋ., ನನಗೆ ತಿಳಿದಷ್ಟು ಮಾಡಿ ಬಡಿಸಿದ್ದೇನೆ. ಊರಲ್ಲಾದರೆ ಅತ್ತೆಯವರಿದ್ದರು. ಇಲ್ಲಿ ನನ್ನದೇ ಅಳತೆ ರುಚಿ... ಸರಿಯಾಗಿದೆಯೋ ಇಲ್ಲವೋ ನೀವೇ ಹೇಳಬೇಕು...!
'ಇವಳು ಅಡುಗೆ ಮಾಡುವಾಗ ಹಿಂದೆ ಬೆಂಬಲಕ್ಕೆ ನಳಮಹಾರಾಜ ನಿಲ್ಲುತ್ತಾನೆ ಸರ್. ನಳಪಾಕ ಅಂದರೆ ಹೇಗೆ ಅಂತ ಇವಳ ಅಡುಗೆ ಉಂಡ ನಂತರವೇ ನನಗೆ ಗೊತ್ತಾದದ್ದು'. ಇವಳ ಮುಖ ಇಷ್ಟಗಲ ಆಯಿತು.
'ಅವರದ್ದು ಹಾಗೇ ಸರ್, ಬಂದವರ ಎದುರಿಗೆ ಹೆಂಡತಿಯ ಫಾರ್ಸು ಮಾಡುವುದು' ನಗುತ್ತ ದೂರಿತ್ತಳು.
'ಇಲ್ಲಮ್ಮ ಅಡುಗೆ ಸತ್ಯಕ್ಕೂ ರುಚಿಯಾಗಿದೆ.. '
ಮರುದಿನ ಬೆಳಗ್ಗೆ ಆರೂಹತ್ತಕ್ಕೆ ರೈಲು. ನನಗೆ ಇಡೀ ರಾತ್ರಿ ನಿದ್ದೆ ಇಲ್ಲ.. ಬೆಳಗ್ಗೆ ನಾಲಕ್ಕು ಘಂಟೆಗೆ ಎದ್ದು ಹೊರಟೆವು. ಸ್ನಾನದ್ದೊಂದು ಕಾರ್ಯಕ್ರಮ ಮುಗಿಸಿಯೇ ಬಿಡ್ತೇನೆ ಆಗಬಹುದಲ್ಲವೇ ಎಂದು ಬಿಸಿನೀರು ಮಾಡುತ್ತೇವೆಂದರೂ ಆ ಚಳಿಯಲ್ಲೂ ತಣ್ಣೀರು ಸ್ನಾನ ಮಾಡಿ ಹೊರಟರು. ಪುಣ್ಯಕ್ಕೆ ಆದಿನ ಆಟೋಸ್ಟ್ರೈಕು ಹಿಂತೆಗೆಯಲ್ಪಟ್ಟಿತ್ತು. ಸಮಯಕ್ಕೆ ಸರಿ ಯಾಗಿ ರೈಲು ನಿಲ್ದಾಣ ತಲುಪಿದೆವು.
'ನೀನು ಆ ಓಕುಡ ಮಾಸ್ಟ್ರಿಗೆ ಏನು ಮಾಯಕ ಮಾಡಿದ್ದೀ ಮಹರಾಯ! ಇಲ್ಲಿ ಊರಲ್ಲಿ ನಿಂದು ಭಾರೀ ಭಾರಿ ಎಡ್ವಟೈಸ್ ಮೆಂಟು ಮಾಡುತ್ತಿದ್ದಾರೆ...! ದೇವುರಾಯರ ಮಗ ಅಂದರೆ ಹಾಗೆ ಹೀಗೆ ಲಕ್ಷಕ್ಕೆ ಒಬ್ಬರು ಅಂತವರು ಸಿಕ್ಕುವುದು ಕಷ್ಟ...... ' ಊರಿನಿಂದ ಉಲ್ಲಾಸನ ಕಾಗದ ಬಂತು.
ಮನಸ್ಸಿಗೆ ಆದ ಖುಷಿ ಸಮಾಧಾನ ನನಗೇ ಗೊತ್ತು...