ಮೊದಲ ಕಂತು.
ಹದಿಹರೆಯದವರ ಮನಸ್ಸು ಒದ್ದೆ ಮಣ್ಣಿನ ಗೋಡೆಯಂತೆ ಇರುತ್ತದೆ. ಯಾವುದೇ ವಿಚಾರವನ್ನು ಇವರಿಗೆ ತಿಳಿಹೇಳಿದರೆ ಅದನ್ನು ಟಪಕ್ಕೆಂದು ಒತ್ತಿಕೊಳ್ಳುತ್ತದೆ. ಒಳ್ಳೆಯ ಸದ್ವಿಚಾರಗಳನ್ನು, ಉತ್ತಮ ಸಂಗತಿಗಳನ್ನು ಹದಿಹರೆಯದಲ್ಲೇ ಬೆಳೆಸಿ ಕೊಳ್ಳುವಂತೆ ಪ್ರೇರೇಪಿಸಿದರೆ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆ ಸಿಗುತ್ತಾನೆ. ಅಂತೆಯೇ ಇದಕ್ಕೆ ವಿರುದ್ಧವಾದ, ವಿಪರೀತವಾದ ಸಂಗತಿ ನಡೆದರೆ ಒಬ್ಬಾತ ಸತ್ಪ್ರಜೆಯಾಗಿ ಬೆಳೆಯುವುದು ಡೌಟು. ನನ್ನ ಮಟ್ಟಿಗೆ ಹೇಳೂದಾದರೆ ನಾನು ಸಾಕಷ್ಟು ಭಾಗ್ಯಶಾಲಿ ಯೆಂದೇ ಹೇಳಬಹುದು.
ಹದಿಹರೆಯದ ನಿಜವಾದ ಅರ್ಥದಲ್ಲಿ ಅಂದರೆ ನನ್ನ ಹದಿಮೂರನೇ ವಯಸ್ಸಿನಲ್ಲೇ ನನಗೆ ಸಂಘದ ಸಂಪರ್ಕವಾಯಿತು. ಹಸೀಗೋಡೆ - ಆ ಹಸಿ ಗೋಡೆಯ ಮೇಲೆ ಸಂಘಮುಖೇನ ಅನೇಕ ಸಮಾಜಮುಖಿ ವಿಚಾರಗಳು, ದೇಶಕ್ಕಾಗಿ ಬದುಕು ನಡೆಸುವ ಇಚ್ಛಾಶಕ್ತಿ, ಉತ್ತಮ ನಡವಳಿಕೆ ಇತ್ಯಾದಿ ಇತ್ಯಾದಿ.. ಪ್ರಾಪ್ತವಾದವು. ನನ್ನಂತೆಯೇ ಇನ್ನೂ ಅನೇಕ ಹಸೀಗೋಡೆಗಳು ಅಂದಿನ ಕಾಲದಲ್ಲಿ ಸಂಘಸಂಪರ್ಕಕ್ಕೆ ಬಂದು ಇಂದು ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ಬದುಕು ಬಾಳುತ್ತಿದ್ದಾರೆ.
ನರಸಿಂಹ ಮಲ್ಯ:- ನಮ್ಮ ಮಾಮ (ಅಂಕಲ್) ನರಸಿಂಹ ಮಲ್ಯರನ್ನು ತಂಪು ಹೊತ್ತಿನಲ್ಲಿ ನೆನೆಯಬೇಕು. ನಮಗೆ ಮಾಮ ನಾದರೂ ನಮ್ಮ ಗೆಳೆಯನಂತೆ ಇದ್ದರು. ಯಾರೊಡನೆಯೂ ಜಗಳವಿಲ್ಲದೇ, ಎಲ್ಲರೊಡನೆ ಸ್ನೇಹದಿಂದ ಇರುವ ಕಲೆ ಅವರಿಂದ ಕಲಿಯಬೇಕು. ಸದಾ ಹಸನ್ಮುಖಿ. ಧಾರಾಳ ಮಾತು. ಒಮ್ಮೆ 'ಬಾ ಮಹರಾಯ, ವರಂಗಕ್ಕೆ ಹೋಗಿ ಬರೋಣ,' ಎಂದು ಕರಕೊಂಡು ಹೋದರು. ಅಲ್ಲಿ ನಮ್ಮ ಸಂಬಂಧಿಗಳ ಮನೆಯಲ್ಲಿ ಒಳಗೆ ಅಡಿಗೆ ಮನೆಯಲ್ಲಿ ಕೂತು ಮನೆಯ ಹೆಂಗಸರೊಡನೆ ಇವರ ಮಾತುಕತೆ ಮುಂದುವರೆಯಿತು. ನನಗೆ ಅವರಲ್ಲಿ ಹೆಚ್ಚಿನ ಹೊಕ್ಕುಬಳಕೆ ಇಲ್ಲದ ಕಾರಣ ಬೇಸರ ಹತ್ತಿತು. ಕೂತಲ್ಲೇ ತೂಕಡಿಕೆ ಬರಲಾರಂಭಿಸಿತು. ನನ್ನ ಸಮವಯಸ್ಕರಾರೂ ಇದ್ದ ನೆನಪಿಲ್ಲ. ಕೊನೆಗೂ ಅವರ ಮಾತುಕತೆ ಎಲ್ಲ ಮುಗಿದು 'ಇನ್ನು ಬರುತ್ತೇನೆ, ತುssoಬಾ ಮಾತಾಡ್ಲಿಕ್ಕೆ ಉಂಟು, ಇನ್ನೊಮ್ಮೆ ಸಿಗುತ್ತೇನೆ.. ಯೋರೆ ಉಟ್ರೆ' ಎಂದು ನನ್ನನ್ನೆಬ್ಬಿಸಿದರು. 'ಅದೆಲ್ಲ ಆಗೂದಿಲ್ಲ ನೀವಿಬ್ರೂ ಇವತ್ತು ಇಲ್ಲಿ ಊಟ ಮಾಡಿಯೇ ಹೋಗಬೇಕು. ಹೋ ಮುಕ್ತಾಲೋ ಮ್ಹಾಲ್ಗಡೊ ನ್ಹಂವೇ ಹ್ಞಾಂಣೆ ಎವಚೇ ಊಣೆ.' ಎಂದವರು ಪ್ರೀತಿಯಿಂದ ಒತ್ತಾಯ ಮಾಡಿ ಊಟದ ನಂತರವೇ ನಮ್ಮನ್ನು ಬೀಳ್ಕೊಟ್ಟರು. ಹೊರಬರುವಾಗ ಅವರ ಕಣ್ಣಲ್ಲಿ ಪ್ರೀತಿಯ ಹನಿಯೊಂದು ತುಳುಕಿದುದು ಕಂಡೆನೇ.... ಈಗ ನೆನಪಿಗೆ ಬರೂದಿಲ್ಲ.
'ಅಲ್ಲ ನರ್ಶಿಮ್ಮ ಮಾಮ, ನಿನಗೆ ಹೆಬ್ರಿಯಲ್ಲಿ ಕಂಡಾಪಟ್ಟೆ ಕೆಲಸ ಉಂಟು, ತುರಿಸಿಕೊಳ್ಳಲು ಪುರಸೋತಿಲ್ಲ ಎಂದು ಪಿರಿಪಿರಿ ಮಾಡಿದಂವ ಇಲ್ಲಿ ವರಂಗದವರಲ್ಲಿ ಅದು ಇದು ಚೈಂ ಚೈಂ ಎಂತದು ಪರಂಗಾವಣೆ ಮಾಡುತ್ತಿದ್ದೆ?' ಸಣ್ಣಗೆ ಆಕ್ಷೇಪಿಸಿದೆ.
'ನೋಡು ಇವನೇ, ನಿನಗೆ ಕೆಲವು ಸೂಕ್ಷ್ಮ ತಿಳಿಸುತ್ತೇನೆ. ಅವರು ನಮ್ಮ ತೀರಾ ಹತ್ತಿರದ ಬಳಗ. ನಾವು ಹೆಬ್ರಿ - ಶೀಮೋಗಾ ಅಂತ ದೊಡ್ಡ ಊರುಗಳಲ್ಲಿರುವವರು. ನಮ್ಮನಮ್ಮ ತಲೆಬಿಸಿ ನಮಗೆ, ಅವರಿಗೆ ಅದೆಲ್ಲ ತಿಳಿಯೂದಿಲ್ಲ. ನಾವು ಸಮಯ ಮಾಡಿ ಕೊಂಡು ಅವರಲ್ಲಿ ಹೋದ್ರಿಂದ ಅವರಿಗೆ ಎಷ್ಟು ಖುಷಿಯಾಯ್ತು ನೀನೇ ನೋಡಿದಿಯಲ್ಲ! ಮನೆಯ ಎಲ್ಲ ಮಂದಿ ಬಂದು ಕಷ್ಟ ಸುಖ ಹಳೇ ನೆನಪುಗಳನ್ನೆಲ್ಲ ಕೆದಕಿ ಕೆದಕಿ ಸಂತೋಷಪಟ್ಟರು ಹೌದೋ ಅಲ್ವೋ ... 'ಅಂವ ಶಿಮೋಗ ಅಂತ ದೊಡ್ಡ ಪೇಟೆಯಲ್ಲಿ ದೊಡ್ಡ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದಾನೆ! ಅಷ್ಟೆಲ್ಲ ಗಡಿಬಿಡಿ ಇದ್ದರೂ ನೆನssಪಿನಲ್ಲಿ ನಮ್ಮಲ್ಲಿ ಬಂದು ಎಷ್ಟೆಲ್ಲ ಮಾತನಾಡಿ ಹೋದ ನೋಡಿ, ಒಂಚೂರೂ ಜಂಬ ಇಲ್ಲ , ಹಾಂಕಾರ ಇಲ್ಲ. ಆ ಮುಕ್ತಾಳ ಹಿರಿಯಂವ ಸಹ ಕಲಿಯಲು ಭಾರೀ ಬುದ್ಧಿವಂತ ಎಂದು ಕೇಳಿದ್ದೇವೆ.' ಎಂದು ಇನ್ನವರು ಆರು ತಿಂಗಳ ವರೆಗೆ ಮೆಲಕು ಹಾಕಿಕೊಂಡು ಖುಷಿಪಡುತ್ತಾರೆ. ನಮ್ಮಿಂದ ಪಾವಾಣೆ ಖರ್ಚಿಲ್ಲದೆ ಒಬ್ಬರಿಗೆ ಕಿಂಚಿತ್ ಆದರೂ ಸಂತೋಷ ಆದರೆ ನಮಗೇ ಒಳ್ಳೇದು, ಏನಂತೀ?' ಸಣ್ಣ ಲೆಕ್ಚರ್ ಆದರೂ ತುಂಬ ಮೌಲ್ಯಯುತ ಮಾತು ಹೇಳಿದರು. ಆದಿನ ಅವರ ಮಾತಿನ ಮಹತ್ವ ತಿಳಿದಿರಲಿಲ್ಲ, ಮುಂದಿನ ದಿನಗಳಲ್ಲಿ ಅರ್ಥವಾಗಲಾರಂಭಿಸಿತು. ಆದಷ್ಟು ಮಟ್ಟಿಗೆ ನಯವಿನಯದ ನುಡಿಗಳು, ಸಕಾರಾತ್ಮಕ ಮಾತುಗಳು, ಬೇಂಕಿನಲ್ಲಿ ನಗುಮುಖದ ಸೇವೆ, ಇತರರನ್ನು ಗೌರವಿಸುವ ಪರಿ ಇವೆಲ್ಲವನ್ನು ನಾನು ನಮ್ಮ ನರ್ಶಿಮ್ಮಮಾಮನ ಸಂಗದಿಂದಲೇ ಕಲಿತದ್ದು. ಗೆಳೆಯ ಪರಿಚಿತರೊಡನೆ ಹಾಸ್ಯ ಕುಷಾಲು ಮಾಡುವುದಿದ್ದರೂ ಆದಷ್ಟು ಮಟ್ಟಿಗೆ ಮನ ನೋಯಿಸದ ಹಿತಕರ ಆರೋಗ್ಯಕರ ತಮಾಷೆಗಳನ್ನೆಲ್ಲ ನಾನು ಅವರಿಂದಲೇ ಕಲಿತದ್ದು...
ಒಂದು ಎಪಿಸೋಡು:-ಊರಿಗೆ-ಹೆಬ್ರಿಗೆ-ಬಂದರೆ ಅವರ ಊಟ ತಿಂಡಿ ದಿನಚರಿ ಎಲ್ಲ ನಮ್ಮ ಮನೆಯಲ್ಲೇ, ಇದು ನಡಕೊಂಡು ಬಂದ ವ್ಯವಸ್ಥೆ. ಒಮ್ಮೆ ರಾತ್ರಿ ಎಲ್ಲರೂ ಊಟಕ್ಕೆ ಲೈನಾಗಿ ಕೂತಿದ್ದು, ಅಮ್ಮ ಬಡಿಸುತ್ತಿದ್ದರು. ನರಸಿಂಮ ಬಂದಿದ್ದಾನೆ, ಅವನಿಗೆ ಪ್ರೀತಿ ಅಂತ ಖಾರ ಉದ್ದಿನ ಹಪ್ಪಳ ಕರಿದು ಇಟ್ಟಿದ್ದರು. ಕಿರಿಯ ತಮ್ಮನ ಮೇಲೆ ಒಂದು ಮುಷ್ಟಿ ಮೋಕೆ ಜಾಸ್ತಿ...
'ಅಕ್ಕಾ , ಇವತ್ತು ಒಂದು ಕತೆ ಆಯ್ತಲ್ಲಾ..?' ಮಾಮ ಮಾತಿಗೆ ಸುರುವಿಟ್ಟರು.
'ಎಂಥದು?'
'ಬೆಳಗ್ಗೆ ಹೆಬ್ರಿಗೇ ಅಂತಾ ಮಿನಿಬಸ್ಸಲ್ಲಿ ಬರ್ತಿದ್ನಾ! ಎದೂರಿನ ಸೀಟು. ಆಗುಂಬೆ ಘಾಟಿಯ ಏಳನೇದ್ದೋ ಆರನೇದ್ದೋ ಕರ್ವಲ್ಲಿ ... ಎಂಥಾ ಹೇಳೂದು? ಈಷ್ಟುದ್ದ ಹೆಬ್ಬಾವು! ಅಬಬಬಬ!'
'ಈಷ್ಟುದ್ದ ಅಂದ್ರೆ ಎಷ್ಟುದ್ದ?'
'ಎಷ್ಟು ಉದ್ದವಾ!! ನೋಡು ಇಲ್ಲಿ ನಾನು ಕೂತಿದ್ದೇನಲ್ವಾ, ಇಲ್ಲಿಂದ ಓ ಅಲ್ಲಿ ನೀನು ಹಪ್ಪಳ ಸುಟ್ಟು ಇಟ್ಟಿದ್ದೀಯಲ್ಲಾ ಅಲ್ಲೀ ವರೆಗೆ ... ಅssಷ್ಟೂದ್ದ!!'
'ಅಯ್ಯೋ ದೇವರೇ! ನಿಮಗೆ ಹಪ್ಪಳ ಬಡಿಸಲೇ ಇಲ್ಲವಲ್ಲಾ! ನನ್ನ ನೆನಪಿಗಿಷ್ಟು ಬೆಂಕಿ ಹಾಕ! ಛೇ ಎಂತಾ ಕೆಲಸ ಆಯಿತು, ನಿಮ್ಮ ಊಟ ಮುಗೀಲಿಕ್ಕಾಯಿತು!!' ಅಮ್ಮ ತರಾತುರಿಯಿಂದ ಹಪ್ಪಳ ಬಡಿಸಿದರು.
'ಅಲ್ಲ ಮಹರಾಯ! ಹಪ್ಪಳ ಬಡಿಸು ಅಕ್ಕಾ , ಎಂದು ನೇರ ಹೇಳೂದು ಬಿಟ್ಟು ನಿಂದು ಇದೆಲ್ಲ ನಾಟಕ ಎಂಥದು?'
'ಅಲ್ಲ, ಹಪ್ಪಳ ಸುಟ್ಟು ಚಂದಕ್ಕೆ ಇಟ್ಟದ್ದಾ? ಬಡಿಸಬೇಕಂತ ಪುನಃ ಹೇಳ್ಬೇಕಾ? ಅದಕ್ಕೇ ಕತೆ ಕಟ್ಟಿದ್ದು.' ಇವರು ಕಣ್ಣು ಮಿಟುಕಿಸಿದರು. ಘೊಳ್ಳನೆಯ ನಗು ಅಡುಗೆ ಮನೆಯಲ್ಲಿ ಮೊಳಗಿತು.